Advertisement

“ವೈಷ್ಣವ ಜನ ತೋ’ಹಾಡು ಏನನ್ನು ಸಾರುತ್ತಿದೆ?

01:18 AM Jan 30, 2021 | Team Udayavani |

ಗಾಂಧೀಜಿ ಪುಣ್ಯತಿಥಿ ಸಂದರ್ಭ (ಜ. 30) ಅವರಿಗೆ ಪ್ರಿಯವಾದ “ವೈಷ್ಣವ ಜನ ತೋ…’ ಹಾಡಿನ ಉಗಮ,
ವಿಕಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರವನ್ನು ವಿಶ್ಲೇಷಿಸಲಾಗಿದೆ.

Advertisement

ಗಾಂಧೀ ಪುಣ್ಯತಿಥಿಯಂದು “ವೈಷ್ಣವ ಜನ ತೋ…’ ಹಾಡನ್ನು ರಾಗವಾಗಿ ಹಾಡುವುದು, ಕೇಳುವ ವರ್ಗ ಕಿವಿಯರಳಿಸಿ ಅಥವಾ ತಲೆ ಅಲ್ಲಾಡಿ ಸುತ್ತಾ ಕೇಳುವುದು, ಸಾಧ್ಯವಾದರೆ ಜತೆಗೆ ಗುನುಗು ನಿಸುವುದು ಸಾಮಾನ್ಯ. ಈ ಹಾಡನ್ನು ಯಾರು ರಚಿಸಿದ್ದು? ಎಷ್ಟು ವರ್ಷಗಳ ಇತಿಹಾಸವಿದೆ? ಈ ಹಾಡಿಗೂ ಗಾಂಧೀಜಿಗೂ ಏನು ಸಂಬಂಧ? ಕನಿಷ್ಠ ಇದರ ಅರ್ಥವಾದರೂ ಏನು? ಎಂದು ಕೇಳಿದರೆ ಬಹುವರ್ಗಕ್ಕೆ ತಿಳಿದಿರಲಾರದು.

ಗಾಂಧೀಜಿಯವರಿಗೆ ಪ್ರಿಯವಾದ ಈ ಗುಜರಾತಿ ಭಜನೆಯನ್ನು ರಚಿಸಿದವರು 15ನೇ ಶತಮಾನದ ಸಂತ ಕವಿ ನರಸಿಂಹ ಮೆಹ್ತಾ. ನರ್ಸಿ ಮೆಹ್ತಾ ಅಥವಾ ನರ್ಸಿ ಭಗತ್‌ ಎಂದೂ ಕರೆಯಲ್ಪಡುತ್ತಾರೆ. ಇವರನ್ನು ಕರ್ನಾಟಕದ ಹರಿದಾಸ ಪರಂಪರೆಗೆ ಹೋಲಿಸಬಹುದು ಮತ್ತು ಇವರ ಸಮಕಾಲೀನರೂ ಕೂಡ. ಗುಜರಾತಿನ ಆದಿಕವಿ ಎಂಬ ಶ್ರೇಷ್ಠತೆ ಇದೆ. ಹಾಡಿನ ಜಾತ್ಯತೀತ ತಿರುಳು ಅರಿತ ಗಾಂಧೀಜಿ ಅವರು ಆಶ್ರಮದಲ್ಲಿ ನಿತ್ಯ ಪಠಿಸುವ ಭಜನೆಗಳಲ್ಲಿ ಇದನ್ನು ಸೇರಿಸಿಕೊಂಡರು. ಕೇವಲ ಹಾಡಿದ್ದು ಮಾತ್ರವಲ್ಲದೆ ಜೀವನದಲ್ಲಿ ಅಳವಡಿಸಲೂ ಗಾಂಧೀಜಿ ಪ್ರಯತ್ನಿಸಿದರು. ಅವರು ವಿಶೇಷವಾಗಿ ಸಾಮಾಜಿಕ ಸುಧಾರಣೆಗಳ ಸಾರವನ್ನು ಭಾಷಣಗಳಲ್ಲಿ ಉಲ್ಲೇಖೀಸುತ್ತಿದ್ದರು. ಈಗ ಗಾಂಧೀ ಜಯಂತಿ, ಗಾಂಧೀ ಪುಣ್ಯತಿಥಿಗೆ ಮಾತ್ರ ಮೀಸಲಾದ ಈ ಹಾಡು 1920ರಿಂದ ಸ್ವಾತಂತ್ರ್ಯ ಹೊರಾಟಗಾರರು ಮತ್ತು ಜನಸಾಮಾನ್ಯರ ಹಾಡಾಗಿತ್ತು. 1930ರ ದಂಡೀ ಯಾತ್ರೆಯುದ್ದಕ್ಕೂ ಜನರ ಬಾಯಲ್ಲಿ ಹಾಡು ಸ್ಥಾನ ಪಡೆಯಿತು.

ಆಗ ಭಕ್ತಿಗೀತೆಯಾಗಿ ಮಾತ್ರವಲ್ಲ ನೀತಿ ಗೀತೆಯೂ ಆಗಿತ್ತು. ಜನಪದ ಶೈಲಿಯಂತೆ ಏಕತಾಲಿ, ಗುಮಟೆ, ತಮಟೆ, ತಾಳ ವಾದ್ಯಗಳೊಂದಿಗೆ ಹಾಡು ತ್ತಿದ್ದರು. ಕರಾವಳಿ ಸಹಿತವಾಗಿ ನಾಡಿನೆಲ್ಲೆಡೆ ಶಿಕ್ಷಕರು ಅರ್ಥ ವಿವರಿಸಿ ಹಾಡಿಸುತ್ತಿದ್ದರು. ಪ್ರಭಾತ್‌ ಫೇರಿ, ಪಾದಯಾತ್ರೆ ಸಂದರ್ಭ, ಸೇವಾದಲದ ತರಬೇತಿ ಶಿಬಿರಗಳಲ್ಲಿ ಈ ಹಾಡು ಅಗ್ರಣಿಯಾಗಿತ್ತು ಎಂಬು ದನ್ನು ಆ ಕಾಲಘಟ್ಟಗಳನ್ನು ಕಂಡಿದ್ದ ಹಿರಿಯ ಪತ್ರಕರ್ತರಾಗಿದ್ದ ದಿ|ಎಂ.ವಿ.ಕಾಮತ್‌, ದಿ| ಬಂಟಕಲ್ಲು ಲಕ್ಷ್ಮೀನಾರಾಯಣ ಶರ್ಮ, ಕಲಾವಿದ ಹಿರಿಯಡಕ ಗೋಪಾಲರಾಯರು ಹೇಳುತ್ತಿದ್ದರು ಎಂದು ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು. ವಿನೀತ್‌ ರಾವ್‌ ಬೆಟ್ಟು ಮಾಡುತ್ತಾರೆ.

ವಿವಿಧ ಸಿನೆಮಾಗಳಲ್ಲಿ ಈ ಹಾಡು ಕೇಳಿಬಂದಿದೆ. ಗಂಗೂಬಾಯಿ ಹಾನ್‌ಗಲ್‌, ಪಂ| ಜಸ್‌ರಾಜ್‌, ಎಂ.ಎಸ್‌.ಸುಬ್ಬುಲಕ್ಷ್ಮೀ, ಅಮೀರ್‌ ಬಾಯಿ ಕರ್ನಾಟಕಿ, ಲತಾ ಮಂಗೇಶ್ಕರ್‌ ಅಂತಹ ಪ್ರಸಿದ್ಧ ಗಾಯಕರು ಹಾಡಿದ್ದಾರೆ. ಅಮ್ಜದ್‌ ಅಲಿ
ಖಾನ್‌ರ ಸರೋದ್‌, ಪಂ| ನಾರಾಯಣರ ಸಾರಂಗಿ, ಹರಿಪ್ರಸಾದ್‌ ಚೌರಾಸಿಯಾರ ಕೊಳಲು, ಪಂ| ಶಿವಕುಮಾರ ಶರ್ಮರ ಸಂತೂರ್‌ ವಾದ್ಯಗಳಲ್ಲಿಯೂ ಮೂಡಿಬಂದಿದೆ. 2018ರ ಅ. 2ರಂದು ಗಾಂಧೀಜಿ ಯವರ 150ನೇ ಜನ್ಮದಿನಾಚರಣೆ ಸಂದರ್ಭ 124 ದೇಶಗಳ ಸಂಗೀತಜ್ಞರು ಜತೆಗೂಡಿ ಹಾಡಿರುವುದು ಒಂದು ದಾಖಲೆ. ಈ ಹಾಡು ಸಂಸ್ಕೃತ, ಕನ್ನಡ ಮೊದಲಾದ ಅನೇಕ ಭಾಷೆಗಳಿಗೆ ಭಾಷಾಂತ ರಗೊಂಡಿದೆ.

Advertisement

ಸಾತ್ವಿಕ ಗುಣಗಳನ್ನು ಹೊಂದಿರುವಾತ ವೈಷ್ಣವ. ಇಂತಹವರ ದರ್ಶನಕ್ಕೆ ನಾನು (ನಾರಸಿ) ಕಾದಿರುತ್ತಾನೆ, ಈ ಸಾತ್ವಿಕ ಗುಣವು ಕುಲವನ್ನೇ ಉದ್ಧರಿಸುತ್ತದೆ ಎಂದು ಹಾಡಿನಲ್ಲಿ ಮೆಹ್ತಾ (ಸ್ತೋತ್ರಗಳ ಕೊನೆಯ ಫ‌ಲಶ್ರುತಿಯಂತೆ) ವಿವರಿಸಿದ್ದಾರೆ. ಕನ್ನಡದಲ್ಲಿ ಇತ ರರು ಇದನ್ನು ಅನುವಾದ ಮಾಡಿದ್ದರೂ ಕವಿ, ಸಾಹಿತಿ ಜಯಂತ ಕಾಯ್ಕಿಣಿ ಬರೆದ “ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲ್ಲಿ…’ ಹಾಡು ಜನಪ್ರಿಯವಾಗಿದೆ. ಅನುವಾದದಲ್ಲಿ “ವೈಷ್ಣವ ಜನ’ ಶಬ್ದವಿಲ್ಲ, ಇದಕ್ಕೆ ಜಾತ್ಯತೀತ ಗುಣ ಮತ್ತು ಜೀವನದ ಉತ್ಕರ್ಷಕ್ಕೆ ಬೇಕಾಗುವ ಸಂದೇಶ ಇರುವುದರಿಂದ ಸರ್ವರಿಗೂ ಅನ್ವಯಗೊಳಿಸುವ ಕಾರಣವಿರಬಹುದು.

ಕರ್ನಾಟಕದ ಕೋಗಿಲೆ ಹಾಡನ್ನು ಮೆಚ್ಚಿಕೊಂಡಿದ್ದ ಗಾಂಧಿ
“ವೈಷ್ಣವ ಜನ ತೋ’ ಹಾಡನ್ನು ಹಾಡಿದ ಪ್ರಮುಖ ರಲ್ಲಿ ಅಮೀರ್‌ ಬಾಯಿ ಕರ್ನಾಟಕಿ ಒಬ್ಬರು. ಇವರ ಹಾಡಿಗೆ ಗಾಂಧೀಜಿ ಮನಸೋತಿದ್ದರು. ಇವರು ಕರ್ನಾಟಕದವರೆಂಬುದು ಕನ್ನಡಿಗರಿಗೆ ಹೆಮ್ಮೆ. ಬೀಳಗಿ ಮೂಲದ ಅಮೀರ್‌ ಬಾಯಿ ಮುಂಬಯಿಗೆ ತೆರಳಿ ಹಿಂದಿ ಚಲನಚಿತ್ರಗಳಲ್ಲಿ ಹಾಡುನಟಿಯಾಗಿ ಮೂಡಿಬಂದಿದ್ದರೂ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧರಾದರು. 1940ರಲ್ಲಿ ನರಸಿ ಮೆಹ್ತಾ ಕುರಿತು ಸಿನೆಮಾವನ್ನು ವಿಜಯ ಭಟ್‌ ಗಾಂಧೀಜಿಯವರ ಅಪೇಕ್ಷೆ ಮೇರೆಗೆ ಹೊರತಂದಾಗ ಅಮೀರ್‌ ಬಾಯಿ ಹಾಡಿದ್ದರು. ಸಿನೆಮಾ, ಹಾಡು ಯೂ ಟ್ಯೂಬ್‌ನಲ್ಲಿ ಲಭ್ಯವಿದೆ. ಅಮೀರ್‌ ಬಾಯಿ 1965ರ ಮಾರ್ಚ್‌ 3ರಂದು ಕೊನೆಯುಸಿರೆಳೆದಾಗ ವಿಜಯಪುರದ ಇಬ್ರಾಹಿಂ ರೋಜಾದ ಖಬರಸ್ಥಾನದಲ್ಲಿ ದಫ‌ನ ಮಾಡಲಾಯಿತು. ಕರ್ನಾಟಕದ ಹೆಸರನ್ನು ಉತ್ತರ ಭಾರತದಲ್ಲಿ ಪಸರಿಸಿದ ಇವರ ಸಮಾಧಿ ನೂರಾರು ಸಮಾಧಿಗಳ ನಡುವೆ ಹುಡುಕುವುದೇ ದುಸ್ತರ. ಇವರ ಸಮಗ್ರ ಜೀವನ ಚರಿತ್ರೆಯನ್ನು ಹಂಪಿ ವಿ.ವಿ. ಪ್ರಾಧ್ಯಾಪಕ ಡಾ| ರೆಹಮತ್‌ ತರಿಕೆರೆಯವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.

ಏನಿದರ ಅರ್ಥ? ಯಾರು ವೈಷ್ಣವರು?
– ಪರರ ನೋವು, ದುಃಖಗಳನ್ನು ಅರಿತು ಅವರಿಗೆ ಉಪಕಾರಿಯಾಗುವವ
– ಅಹಂಕಾರ ತೋರದವ
– ಇಡೀ ಲೋಕವನ್ನು ಗೌರವಿಸಿ ಎಲ್ಲರ ಜತೆ ಸಹನೆಯಿಂದ ವರ್ತಿಸುವವ
– ಮಾತು-ಕೃತಿ- ಯೋಚನೆಗಳನ್ನು ಶುದ್ಧವಾಗಿಟ್ಟುಕೊಂಡವ
– ನಡೆ ನುಡಿಗಳಲ್ಲಿ ಸಮಚಿತ್ತನಾಗಿ ವರ್ತಿಸುವವ
– ಎಲ್ಲರನ್ನೂ ಸಮದೃಷ್ಟಿಯಿಂದ ನೋಡುವವ
– ದಾಹವನ್ನು (ಬಯಕೆಯನ್ನು) ತೊರೆದವ
– ಪರಸ್ತ್ರೀಯರನ್ನು ತಾಯಿ ಎಂದು ಕಾಣುವವ
– ಸುಳ್ಳು ಹೇಳದವ
– ಪರರ ಸೊತ್ತುಗಳನ್ನು ಮುಟ್ಟದವ
– ಮೋಹಗಳಿಗೆ ಒಳಗಾಗದವ
– ದೃಢ ವೈರಾಗ್ಯ ಭಾವ ಹೊಂದಿದವ
– ದೇವರ (ರಾಮ) ನಾಮವೇ ಆತನಿಗೆ ಅಮೃತ
– ನೆನೆದಲ್ಲೇ ಪುಣ್ಯಧಾಮ ಆತನಿಗೆ
– ದುರಾಸೆಯ ಮಾಡದವ
– ಕಪಟವೆಂಬುದನ್ನು ಅರಿಯದವ
– ಕಾಮಕ್ರೋಧಾದಿಗಳನ್ನು ನಿವಾರಿಸಿಕೊಂಡವ

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next