Advertisement

ಶೇ.50ರಷ್ಟು ಜನರು ಬಳಸಲ್ಲ ಶೌಚಾಲಯ

12:24 PM Mar 16, 2020 | Naveen |

ವಡಗೇರಾ: ಪ್ರಸ್ತುತ ಶೌಚಾಲಯ ಎಲ್ಲರಿಗೂ ಅತ್ಯಗತ್ಯ. ಇದನ್ನು ತಿಳಿದರೂ ಜನರು ಶೌಚಾಲಯ ಸುವ್ಯವಸ್ಥಿತ ನಿರ್ಮಾಣ ಹಾಗೂ ಬಳಕೆಗೆ ಮುಂದಾಗುತ್ತಿಲ್ಲ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಅದಕ್ಕೆ ಒಂದು ಪೈಸೆಯೂ ಸೇರಿಸಿ ನಿರ್ಮಿಸಿಕೊಳ್ಳದೇ ಪ್ರೋತ್ಸಾಹ ಧನದಲ್ಲಿಯೇ ಶೌಚಗೃಹ ನಿರ್ಮಾಣ ಮಾಡಿಕೊಳ್ಳುವ ಇರಾದೆ ಹೊಂದಿದ್ದಾರೆ.

Advertisement

ವಡಗೇರಾ ತಾಲೂಕು ಕೊಂಕಲ್‌ ಗ್ರಾಪಂ ವ್ಯಾಪ್ತಿಯ ಅನಕಸೂಗರ,  ರಿಹಾಳ, ಗೊಂದೆನೂರು, ಚನ್ನೂರು, ಕೂಂಕಲ್‌ ಗ್ರಾಮಗಳಲ್ಲಿ ಒಟ್ಟು 1400 ಕುಟುಂಬಗಳಿದ್ದು, 9 ಸಾವಿರದಷ್ಟು ಜನಸಂಖ್ಯೆ ಇದೆ. ಆದರೆ ಇಲ್ಲಿ ಒಟ್ಟು 845 ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿವೆ. ಇದರಲ್ಲಿ ಶೇ.50ರಷ್ಟು ಜನರು ಶೌಚಾಲಯ ಬಳಸುತ್ತಿಲ್ಲ ಎನ್ನುವುದು ದುರಾದೃಷ್ಟ.

ಇನ್ನೂ ಸ್ವಂತ ಜಾಗವಿಲ್ಲದ ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಅಂಥವರಿಗಾಗಿ ಸರ್ಕಾರ ಸಮುದಾಯ ಶೌಚಾಲಯ ಯೋಜನೆ ಜಾರಿಗೊಳಿಸಿದೆ. ಆದರೆ ಈ ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣ ಮಾಡಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಮಹಿಳೆಯರು ತೀವ್ರ ಮುಜುಗರ ಅನುಭವಿಸುವಂತಾಗಿದೆ.

ಶೌಚಾಲಯ ಇಲ್ಲದಿರುವುದು ಒಂದು ಕಡೆಯಾದರೆ, ನಿರ್ಮಾಣ ಗೊಂಡಿರುವ ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡದಿರುವುದರಿಂದ ಅವುಗಳು ಕೂಡ ಬಳಕೆಗೆ ಬಾರದಂತಾಗಿವೆ. ಕೆಲವು ಶೌಚಾಲಯಗಳು ಜಾನುವಾರುಗಳಿಗೆ ಮೇವು ಇಡುವುದಕ್ಕೆ ಮತ್ತು ಅಡುಗೆ ಮಾಡುವುದಕ್ಕೆ ಕಟ್ಟಿಗೆಗಳನ್ನು ಸಂಗ್ರಹಿಸುವ ಕೊಠಡಿಗಳಾಗಿ ಮಾರ್ಪಟ್ಟಿವೆ.

ಶೌಚಾಲಯಗಳಿದ್ದರೂ ಅವುಗಳ ಸದ್ಬಳಕೆಯಾಗುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಬಯಲನ್ನು ಮರೆತಿಲ್ಲ. ನೂತನ ಶೌಚಾಲಯಗಳು ಕೂಡ ಗಬ್ಬುನಾರುತ್ತಿವೆ. ರೆಡಿಮೇಡ್‌ ಶೌಚಾಲಯಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಗ್ರಾಪಂ ಅಧಿಕಾರಿಗಳು ಸ್ಥಳ ಪರಿಶೀಲಿಸದೇ ಬಿಲ್‌ ಪಾವತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೇವಲ ನಾಮಕೇ ವಾಸ್ತೆ ಎನ್ನುವಂತೆ ಶೌಚಾಲಯಗಳು ನಿರ್ಮಾಣವಾಗಿವೆ. ಆದರೆ ಬಳಕೆಗೆ ಬಾರದಂತಾಗಿವೆ. ಈ ಬಗ್ಗೆ ಸಾರ್ವಜನಿಕರು ವೈಯಕ್ತಿಕ ಶೌಚಾಲಯ ಬಳಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಜಾಗೃತಿ ಮೂಡಿಸಬೇಕಿದೆ.

Advertisement

ಗ್ರಾಮದಲ್ಲಿ ಮಹಿಳೆಯರು ನಿತ್ಯ ಬಯಲಿಗೆ ತೆರಳಬೇಕಿದೆ. ಯಾವಾಗ ಕತ್ತಲಾಗುತ್ತದೋ ಎನ್ನುವುದನ್ನು ಕಾಯಬೇಕಿದೆ. ಜಮೀನುಗಳಲ್ಲಿ ಹೋಗಲು ಸೋಲಾರ್‌ ವಿದ್ಯುತ್‌ ಉತ್ಪನ್ನ ಮಾಡುವ ಉಪಕರಣಗಳಿವೆ. ಮಹಿಳೆಯರು ಸಾಮೂಹಿಕ ಶೌಚಾಲಯವಿಲ್ಲದೇ ತೀವ್ರ ಮುಜುಗರ ಅನುಭವಿಸುವಂತಾಗಿದೆ. ಸಮುದಾಯ ಶೌಚಾಲಯ ನಿರ್ಮಿಸಿಕೊಡಬೇಕು.
ಮಲ್ಲಮ್ಮ ಅನಕಸೂಗೂರ,
ಗ್ರಾಮಸ್ಥೆ

ಬೇಸ್‌ ಲೈನ್‌ ಸರ್ವೆಯಿಂದ ಹೊರಗುಳಿದ ಕುಟುಂಬಗಳ 208 ಅರ್ಜಿ ಪಡೆಯಲಾಗಿದೆ. ನಿವೇಶನದ ಸಮಸ್ಯೆಯಿದೆ ಮತ್ತು ಹೊಸದಾಗಿ ಶೌಚಾಲಯ ನಿರ್ಮಿಸಿಕೊಳ್ಳುವವರಿಗೆ ಅರ್ಜಿ ಕರೆಯಲಾಗಿದೆ. ಬಯಲು ಮುಕ್ತ ಗ್ರಾಮ ಪಂಚಾಯಿತಿನ್ನಾಗಿಸಲು ಗುರಿ ಹೊಂದಿದ್ದೇವೆ.
ಪವೀಣಕುಮಾರ,
ಪಿಡಿಒ ಕೊಂಕಲ್‌

ನಿಂಗಣ್ಣ ಕುರಿ

Advertisement

Udayavani is now on Telegram. Click here to join our channel and stay updated with the latest news.

Next