Advertisement

ವಡಭಾಂಡ ಬಲರಾಮ ದೇವಸ್ಥಾನ; ಜೀರ್ಣೋದ್ಧಾರದಿಂದ ಭಕ್ತರ ಕನಸು ನನಸು: ಪಲಿಮಾರು ಶ್ರೀ

12:56 AM Mar 26, 2024 | Team Udayavani |

ಮಲ್ಪೆ: ಪ್ರಾಚೀನವಾದ ಹಾಗೂ ಮಧ್ವಾಚಾರ್ಯರಿಂದ ಪ್ರಾರಂಭಗೊಂಡ ಬಲರಾಮ ದೇವಸ್ಥಾನದ ಜೀರ್ಣೋದ್ಧಾರ ಭಕ್ತರ ಬಹುಕಾಲದ ಕನಸಾಗಿತ್ತು. ದೇವರು ಇಂದು ಆ ಭಕ್ತರ ಕನಸನ್ನು ನನಸು ಮಾಡಿದ್ದಾನೆ. ಒಳಗಿನಿಂದ ಬಲರಾಮನಿಗೆ ಆನಂದವಾದರೆ, ಹೊರಗಿನಿಂದ ಭಕ್ತರಿಗೆ ಆನಂದವಾಗುವ ಪರ್ವಕಾಲ ಇದಾಗಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.

Advertisement

ಸೋಮವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಹಳತು -ಹೊಸತುವಿನ ಸಮನ್ವಯ
ವಡಭಾಂಡ ದೇವಸ್ಥಾನ ಜೀಣೋದ್ಧಾರ ಆದರೂ ಇದು ಹಳತೋ ಹೊಸತೋ ಎಂಬ ಪ್ರಶ್ನೆ ಮೂಡುತ್ತದೆ. ನೋಡಿದರೆ ಹಳತು, ಆದರೆ ಇದು ಹೊಸತು. ಇದೀಗ ಹಳತು -ಹೊಸತನ್ನು ಸಮನ್ವಯ ಮಾಡಿದ ದೇವಸ್ಥಾನವಾಗಿದೆ. ಹಳೆಯ ಕಾಲದ ಕಲ್ಲುಗಳನ್ನು ಹಾಗೆಯೇ ಇರಿಸಿಕೊಂಡು ಸುಂದರವಾದ ದೇವಾಲಯವನ್ನು ಶಿಲ್ಪಿಗಳು ನಿರ್ಮಿಸಿ ಕೊಟ್ಟಿದ್ದಾರೆ. ಸಮುದ್ರದ ಅಲೆಗಳಂತೆ ದೇವಸ್ಥಾನಕ್ಕೆ ಜನರು ಅಲೆಗಳಂತೆ ನಿರಂತರವಾಗಿ ಬರುತ್ತಿರಲಿ. ಜನರ ಮನದಿಂಗಿತಗಳು ಈಡೇರುವಂತಾಗಲಿ ಎಂದು ಆಶಿಸಿದರು.

ಡಾ| ಉದಯ ಸರಳತ್ತಾಯ ಅವರು ಧಾರ್ಮಿಕ ಪ್ರವಚನ ನೀಡಿದರು.ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌, ಗೌರವಾಧ್ಯಕ್ಷ ಹರಿಯಪ್ಪ ಕೋಟ್ಯಾನ್‌, ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಕೃಷ್ಣನ್‌ ಎಚ್‌., ಎಜಿಎಂ ರಾಜಗೋಪಾಲ ಬಿ., ಬ್ಯಾಂಕಿನ ಪಿಆರ್‌ಒ ಮಾದವ, ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್‌ ಕಡೆಕಾರು, ಅಧ್ಯಕ್ಷ ನಾಗರಾಜ ಮೂಲಿಗಾರ್‌, ಗೌರವ ಸಲಹೆಗಾರ ವಿಜಯೇಂದ್ರ ರಾವ್‌ ಉಪಸ್ಥಿತರಿದ್ದರು. ಧನಂಜಯ ಕಾಂಚನ್‌ ಸ್ವಾಗತಿಸಿದರು, ಕೊರ್ಲಹಳ್ಳಿ ವೆಂಕಟೇಶ್‌ ಆಚಾರ್ಯ ನಿರೂಪಿಸಿ, ವಂದಿಸಿದರು.

ಬ್ರಹ್ಮ ಕಲಶೋತ್ಸವ ಸಂಪನ್ನ
ವಡಭಾಂಡೇಶ್ವರ ಬಲರಾಮ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ದೇಗುಲದ ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ಭಟ್‌ ಸಹಕಾರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರಗಿತು.ಬೆಳಗ್ಗೆ 6-45ಕ್ಕೆ ದೇವರಿಗೆ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಡೆಯಿತು. ಆ ಬಳಿಕ ನ್ಯಾಸಪೂಜೆ, ಪ್ರಸನ್ನಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆಯಾಯಿತು. ಮಧ್ಯಾಹ್ನ ಪಲ್ಲಪೂಜೆಯಾಗಿ ಮಹಾಅನ್ನಸಂತರ್ಪಣೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next