Advertisement

ವಿದೇಶಕ್ಕೆ ಹೋಗುವ ಕನ್ನಡಿಗರಿಗೆ ವ್ಯಾಕ್ಸಿನ್ ವ್ಯವಸ್ಥೆ : ಎಲ್ಲವೂ ಅಚ್ಚುಕಟ್ಟು, ನಿರಾತಂಕ

09:11 PM Jun 02, 2021 | Team Udayavani |

ಬೆಂಗಳೂರು : ವ್ಯಾಕ್ಸಿನ್ ಗಾಗಿ ಇಲ್ಲಿ ತಳ್ಳಾಟವಿಲ್ಲ, ನುಗ್ಗಾಟವಿಲ್ಲ. ದೈಹಿಕ ಅಂತರವಿಲ್ಲ ಎಂಬ ಆತಂಕವಿಲ್ಲ. ಮಾಸ್ಕ್ ಧರಿಸದವರು ಬರುತ್ತಾರೆಂಬ ಭಯವೂ ಇಲ್ಲ. ಮಿಗಿಲಾಗಿ ಲಸಿಕೆ ಖಾಲಿಯಾಗಿಬಿಡುತ್ತದೆ ಎನ್ನುವ ಅನುಮಾನವೂ ಇಲ್ಲ. ಇಷ್ಟಕ್ಕೂ ಇಷ್ಟು ವ್ಯವಸ್ಥಿತವಾಗಿ ವ್ಯಾಕ್ಸಿನೇಷನ್ ನಡೆಯುತ್ತಿರುವ ಜಾಗವಾದರೂ ಎಲ್ಲಿ ಎನ್ನುತ್ತೀರಾ? ಸ್ಥಳ: ಬೆಂಗಳೂರು ನಗರ ವಿಶ್ವವಿದ್ಯಾಲಯದ, ಸೆಂಟ್ರಲ್ ಕಾಲೇಜು ಆವರಣ.

Advertisement

ಇಲ್ಲಿ ವಿದೇಶಗಳಲ್ಲಿ ವ್ಯಾಸಂಗ ಹಾಗೂ ಉದ್ಯೋಗ ಮಾಡುತ್ತಿರುವ ಬೆಂಗಳೂರಿಗರಿಗಾಗಿ ಮಂಗಳವಾರದಿಂದ  ವಿಶೇಷ ಲಸಿಕೆ ಅಭಿಯಾನವನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಇಲ್ಲಿ ಎಲ್ಲವೂ ವ್ಯವಸ್ಥಿತ:

ಸಾಮಾನ್ಯವಾಗಿ ಲಸಿಕೆ ಕೇಂದ್ರಗಳ ಮುಂದೆ ತಾಸುಗಟ್ಟಲೆ ಕ್ಯೂ ನಿಲ್ಲುವ ಅಗತ್ಯ ಇಲ್ಲಿಲ್ಲ. ಜತೆಗೆ, ಬಿಸಿಲಿನಲ್ಲಿ ನಿಂತು ಬಸವಳಿಯುವ ಪ್ರಮೇಯವೂ ಇಲ್ಲ. ಅಚ್ಚುಕಟ್ಟಾಗಿ ಸಾಲುಸಾಲು ಕುರ್ಚಿಗಳನ್ನು ಹಾಕಲಾಗಿದೆ. ಅದೃಷ್ಟಕ್ಕೆ ಮೈ ತುಂಬಾ ಹಸಿರು ಹೊದ್ದುಕೊಂಡ ಮರಗಳಿವೆ. ತಂಪಾದ ನೆರಳಿದೆ. ಲಸಿಕಾಂಕ್ಷಿಗಳಿಗೆ ಕೂರಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರು ತಾಳ್ಮೆಯಿಂದ ಸರದಿ ಸಾಲಿನಲ್ಲಿ ಬಂದು ಲಸಿಕೆ ಹಾಕಿಸಿಕೊಂಡು ಮನೆಗಳಿಗೆ ತರಳುತ್ತಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರಿಗೆ ಮಾತ್ರ ಲಸಿಕೆ ಕೊಡಲಾಗುತ್ತಿದೆ. ವಿದೇಶಕ್ಕೆ ತೆರಳುವವರನ್ನು ಆದ್ಯತಾ ಗುಂಪಿಗೆ ಸೇರಿಸಲಾಗಿದೆ. ಇವೆಲ್ಲರೂ ಅತ್ಯಂತ ಶಿಸ್ತುಬದ್ಧರಾಗಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಲಸಿಕೆ ಪಡೆಯುತ್ತಿದ್ದಾರೆ.

Advertisement

“ಯಾವ ಸಣ್ಣ ಸಮಸ್ಯೆಯೂ ಇಲ್ಲದೆ ಇಲ್ಲಿ ಲಸಿಕೀಕರಣ ನಡೆಯುತ್ತಿದ್ದು, ವಿವಿ ಮತ್ತು ಪಾಲಿಕೆ ಸಿಬ್ಬಂದಿಯ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ನಮಗೆ ಆದಷ್ಟು ಬೇಗ ಲಸಿಕೆ ಕೊಡಿ ಎಂದು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿರುವವರು, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಬೇಡಿಕೆ ಇಡುತ್ತಿದ್ದರು. ಅವರ ಮನವಿಗೆ ಪುರಸ್ಕಾರ ಕೊಟ್ಟು ಈ ಶಿಬಿರವನ್ನು ನಡೆಸಲಾಗುತ್ತಿದೆ. ಮಂಗಳವಾರ 275 ಜನ ಲಸಿಕೆ ಪಡೆದಿದ್ದರು. ಇವತ್ತು ಕೂಡ 200ಕ್ಕೂ ಹೆಚ್ಚು ಜನರು ಪಡೆದಿದ್ದಾರೆ” ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಇವರಿಗೆ ಕೋವಿಶೀಲ್ಡ್:

ಲಸಿಕೆ ಪಡೆಯದೇ ಇವರು ವಿದೇಶಕ್ಕೆ ಹೋಗಲು ಆಗುವುದಿಲ್ಲ. ಹೀಗಾಗಿ ಇವರೆಲ್ಲರಿಗೂ ಆದ್ಯತಾ ಗುಂಪಿನ ಕೋಟಾದಲ್ಲಿ ಲಸಿಕೆ ಕೊಡಲಾಗುತ್ತಿದೆ. ಆರು ವಾರಗಳ ಅಂತರದಲ್ಲಿ ಇವರಿಗೆ ಎರಡನೇ ಡೋಸ್ ನೀಡಿ, ವ್ಯಾಕ್ಸಿನ್ ಪಡೆದ ಬಗ್ಗೆ ಅಧಿಕೃತ ʼಸರ್ಟಿಫಿಕೇಟ್ʼ ನೀಡಲಾಗುವುದು. ಎಲ್ಲರಿಗೂ ವಿಶ್ವ ಆರೋಗ್ಯ ಸಂಸ್ಥೆ (WHO) ಮಾನ್ಯತೆ ನೀಡಿರುವ ʼಕೋವಿಶೀಲ್ಡ್ʼ ಲಸಿಕೆ ಕೊಡಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next