Advertisement

ಡೆಲ್ಟಾ ಪ್ಲಸ್‌ಗೆ ಲಸಿಕಾಸ್ತ್ರ

12:23 AM Jun 24, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೊರೊನಾದ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿರುವಂತೆಯೇ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್‌ ಎಂಬ ರೂಪಾಂತರಿಯ ಹಾವಳಿ ಶುರುವಾಗಿದೆ. ಅದನ್ನು ನಿಯಂತ್ರಿಸುವ ಬಗ್ಗೆ ಚರ್ಚೆಗಳು ಶುರುವಾಗಿರುವಂತೆಯೇ ಆಸ್ಟ್ರಾಜೆನೆಕಾ ಮತ್ತು ಫೈಜರ್‌ ಬಯಾನ್‌ಟೆಕ್‌ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ ಪ್ರಬಲವಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದು ಹೇಳಿಕೊಂಡಿವೆ. ಅದಕ್ಕೆ ಆಕ್ಸ್‌ಫ‌ರ್ಡ್‌ ವಿವಿ ಇತ್ತೀಚೆಗೆ ನಡೆಸಿದ ಅಧ್ಯಯನದ ವಿವರವನ್ನು ಉಲ್ಲೇಖೀಸಲಾಗಿದೆ.

Advertisement

“ಸೆಲ್‌’ ಎಂಬ ನಿಯತಕಾಲಿಕದಲ್ಲಿ ಅದರ ವಿವರಗಳು ಪ್ರಕಟವಾಗಿವೆ. ಡೆಲ್ಟಾ ಮತ್ತು ಕಪ್ಪಾ ಎಂಬ ಎರಡು ರೂಪಾಂತರಿ ಸಮಸ್ಯೆ ಕಂಡುಬಂದಿರುವವರಿಗೆ ಆಸ್ಟ್ರಾಜೆನೆಕಾ ಲಸಿಕೆ ಹಾಕಲಾಯಿತು. ಅವರನ್ನು ಪರೀಕ್ಷೆಗೆ ಒಳ ಪಡಿಸಿದ ಬಳಿಕ ಎರಡೂ ರೂಪಾಂತರಿಗಳ ವಿರುದ್ಧ ಅವರ ದೇಹದ ಒಳಗೆ ಹೋರಾಡಲು ಪ್ರತಿಕಾಯಗಳು ಸೃಷ್ಟಿಯಾಗಿವೆ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಬಿ.1.617 ರೂಪಾಂತರಿಯಿಂದ  ಪೂರ್ಣ ಪ್ರಮಾಣದಲ್ಲಿ ಲಸಿಕೆಗಳು ರಕ್ಷಣೆ ನೀಡುತ್ತವೆ ಎಂದು ಹೇಳಲಾಗಿಲ್ಲ. ಆದರೆ ಎರಡು ಹೊಸ ರೂಪಾಂತರಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವ್ಯಕ್ತಿಗಳಿಂದ ಪಡೆಯಲಾಗಿರುವ ರಕ್ತದ ಮಾದರಿಗೆ ಆಸ್ಟ್ರಾಜೆನೆಕಾ ಲಸಿಕೆ ನೀಡಿದ ಬಳಿಕ ವೈರಸ್‌ನ ಅಂಶಗಳನ್ನು ನಿಯಂತ್ರಿಸಿದ ಅಂಶ ದೃಢಪಟ್ಟಿದೆ. ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ ನಡೆಸಿದ ಅಧ್ಯಯನದಲ್ಲಿ ಕೂಡ ಫೈಜರ್‌ ಮತ್ತು ಆಸ್ಟ್ರಾಜೆನೆಕಾ ಲಸಿಕೆಗಳನ್ನು ನೀಡಿದವರಲ್ಲಿ ಶೇ.90ರಷ್ಟು ಪರಿಣಾಮಕಾರಿಯಾಗಿದೆ. ಜತೆಗೆ ಸೋಂಕು ದೃಢಪಟ್ಟರೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಅದರಲ್ಲಿ ಕಂಡುಕೊಳ್ಳಲಾಗಿದೆ.

3 ಕೋಟಿ ದಾಟಿದ ಕೊರೊನಾ : ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ 3.32 ಕೋಟಿ ದಾಟಿದೆ. ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 50,848 ಹೊಸ ಸೋಂಕು ಪ್ರಕರಣ ಮತ್ತು 1,358 ಮಂದಿ ಸಾವಿಗೀಡಾಗಿದ್ದಾರೆ. 2020ರ ಡಿ.19ರಂದು ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ 1 ಕೋಟಿ ದಾಟಿತ್ತು. ಮೇ 4ರಂದು 2 ಕೋಟಿ ದಾಟಿತ್ತು. ದೇಶದಲ್ಲಿನ ಸಕ್ರಿಯ ಸೋಂಕು ಸಂಖ್ಯೆ 6,43,194ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.96.56ಕ್ಕೆ ಏರಿಕೆಯಾಗಿದೆ.

ರಾಜ್ಯಗಳಿಗೆ 61 ಸಾವಿರ ಆ್ಯಂಫೋಟೆರಿಸಿನ್‌ ಸೀಸೆ ರವಾನೆ :

ಎಲ್ಲ ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಹಾಗೂ ಕೇಂದ್ರದ ಸಂಸ್ಥೆಗಳಿಗೆ, ಬ್ಲ್ಯಾಕ್‌ ಫ‌ಂಗಸ್‌ ಚಿಕಿತ್ಸೆಗಾಗಿ ಬಳಸುವ “ಆ್ಯಂಫೋಟೆರಿಸಿನ್‌-ಬಿ’ ಔಷಧವಿರುವ ಸುಮಾರು 61,120 ಸೀಸೆಗಳನ್ನು ರವಾನಿಸಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ 5,240 ಸೀಸೆಗಳನ್ನು ರವಾನಿಸಲಾಗಿದೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ಟ್ವೀಟ್‌ ಮಾಡಿದ್ದಾರೆ. “ಈಗ ಕಳುಹಿಸಲಾಗಿರುವ ಸೀಸೆಗಳು ಸೇರಿದಂತೆ ಸುಮಾರು 7.9 ಲಕ್ಷ ಔಷಧಗಳನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದಂತಾಗಿದ್ದು, ಬ್ಲಾಕ್‌ ಫ‌ಂಗಸ್‌ ಚಿಕಿತ್ಸೆಗೆ ಬೇಕಾದ ಔಷಧದ  ದಾಸ್ತಾನು ಇಡಲಾಗಿದೆ. ಆ್ಯಂಫೋಟೆರಿಸಿನ್‌-ಬಿ ಔಷಧದ  ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

Advertisement

ಮಕ್ಕಳಿಗೆ ನೀಡುವ ಕೊವ್ಯಾಕ್ಸಿನ್‌ಗೆ ಸೆಪ್ಟಂಬರ್‌ನಲ್ಲಿ ಅನುಮೋದನೆ?:

ಈ ವರ್ಷದ ಸೆಪ್ಟಂಬರ್‌ ವೇಳೆಗೆ ಮಕ್ಕಳಿಗೆ ನೀಡಲಾಗುವ ಲಸಿಕೆ, ಕೊವ್ಯಾಕ್ಸಿನ್‌ಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ| ರಣದೀಪ್‌ ಗುಲೇರಿಯಾ ಹೇಳಿದ್ದಾರೆ. ಎರಡನೇ ಮತ್ತು ಮೂರನೇ ಹಂತದ ಪ್ರಯೋಗದ ವರದಿಗಳನ್ನು ಲಭ್ಯವಾಗಿ, ಅದನ್ನು ಪರಿಶೀಲಿಸಿದ ಬಳಿಕ ಅನುಮೋದನೆ ನೀಡಲಾಗುತ್ತದೆ. ಇದರ ಜತೆಗೆ ಫೈಜರ್‌- ಬಯಾನ್‌ಟೆಕ್‌ ಲಸಿಕೆಗೆ ಕೂಡ ಅನುಮೋದನೆ ಸಿಕ್ಕಿದರೆ, ಮಕ್ಕಳಿಗೆ ನೀಡಲು ಒಟ್ಟು 2 ಲಸಿಕೆ ಸಿಕ್ಕಿದಂತಾಗುತ್ತದೆ ಎಂದರು. ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆಯನ್ನು ಹೊಸದಿಲ್ಲಿ ಮತ್ತು ಪಟ್ನಾದಲ್ಲಿನ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗುತ್ತಿದೆ.

ಕೊರೊನಾದಿಂದ ಮಕ್ಕಳನ್ನು ರಕ್ಷಿಸುವ ದಡಾರ ಲಸಿಕೆ? :

ಹೊಸದಿಲ್ಲಿ: ದಡಾರ ಲಸಿಕೆ ಕೂಡ ಮಕ್ಕಳನ್ನು ಕೊರೊನಾದಿಂದ ರಕ್ಷಿಸಬಹುದು ಎಂದು ಪುಣೆಯ ಬಿಜೆ ಮೆಡಿಕಲ್‌ ಕಾಲೇಜು ನಡೆಸಿದ ಅಧ್ಯಯನವೊಂದು ತಿಳಿಸಿದೆ. ದಡಾರ ಲಸಿಕೆ ಹಾಕಿಸಿಕೊಂಡ ಮಕ್ಕಳಿಗೆ ಕೊರೊನಾ ಸೋಂಕು ತಗಲಿದರೂ ಅಲ್ಪ ಪ್ರಮಾಣದ ರೋಗಲಕ್ಷಣವಷ್ಟೇ ಇರುತ್ತದೆ. ಅಲ್ಲದೇ ಕೋವಿಡ್‌ ವೈರಸ್‌ ವಿರುದ್ಧ ದಡಾರ ಲಸಿಕೆಯು ಶೇ.87.5ರಷ್ಟು ಪರಿಣಾಮಕಾರಿ ಎಂದೂ ಅಧ್ಯಯನ ವರದಿ ತಿಳಿಸಿದೆ. ಆದರೆ ಈ ಕುರಿತು ಇನ್ನಷ್ಟು ಅಧ್ಯಯನ ನಡೆಸಬೇಕಾದ ಅಗತ್ಯವಿದೆ ಎಂದೂ ಸಂಶೋಧಕರು ಹೇಳಿದ್ದಾರೆ. ಜಗತ್ತಿನಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಅಧ್ಯಯನ ನಡೆಸಲಾಗಿದೆ. 1ರಿಂದ 17ರ ವಯೋಮಾನದ 548 ಮಕ್ಕಳನ್ನು ಈ ಅಧ್ಯಯನಕ್ಕೆ ಬಳಸಲಾಗಿದೆ. ಈ ಅಧ್ಯಯನವು ಭಾರತದ ಮಟ್ಟಿಗೆ ಒಳ್ಳೆಯ ಸುದ್ದಿಯೇ ಆಗಿದೆ. ಏಕೆಂದರೆ ಕಳೆದ 35 ವರ್ಷಗಳಿಂದಲೂ ದೇಶದ ಲಸಿಕಾ ಕಾರ್ಯಕ್ರಮದಲ್ಲಿ ದಡಾರ ಲಸಿಕೆಯೂ ಸೇರಿದೆ. 9-12 ತಿಂಗಳ ಮಗುವಿಗೆ ಮೊದಲ ಡೋಸ್‌ ಮತ್ತು 16-24 ತಿಂಗಳ ವೇಳೆಗೆ ಎರಡನೇ ಡೋಸ್‌ ದಡಾರ ಲಸಿಕೆಯನ್ನು ನೀಡಲಾಗುತ್ತಿದೆ.

ಲಸಿಕೆ ಹಾಕಿಸದಿದ್ದರೆ ಸಂಬಳ ಇಲ್ಲ :

“ಸರಕಾರಿ ನೌಕರರು ಲಸಿಕೆ ಹಾಕಿಸಿಕೊಳ್ಳದಿದ್ದರೆ ಮುಂದಿನ ತಿಂಗಳಿಂದ ವೇತನ ಸಿಗುವುದಿಲ್ಲ…’ ಇಂಥದ್ದೊಂದು ಆದೇಶವನ್ನು ಮಧ್ಯಪ್ರದೇಶದ ಉಜ್ಜೆ„ನ್‌ ಜಿಲ್ಲಾಡಳಿತ ಹೊರಡಿಸಿದೆ. ಲಸಿಕೆ ವಿತರಣೆಯ ಗುರಿಯನ್ನು ಶೇ.100ರಷ್ಟು  ಸಾಧಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಡಳಿತ ಹೇಳಿದೆ. ಜುಲೈ 31ರೊಳಗಾಗಿ ಲಸಿಕೆ ಸ್ವೀಕರಿಸದೇ ಇದ್ದಲ್ಲಿ, ಸರಕಾರಿ ನೌಕರರಿಗೆ ಸಂಬಳವನ್ನು ಜಮೆ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಆಶಿಷ್‌ ಸಿಂಗ್‌ ಹೇಳಿದ್ದಾರೆ. ವೇತನವನ್ನು ನೀಡುವ ವೇಳೆ ಲಸಿಕೆ ಪ್ರಮಾಣಪತ್ರವನ್ನು ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ದಿನಗೂಲಿ ಮತ್ತು ಗುತ್ತಿಗೆ ಕೆಲಸಗಾರರಿಗೆ ಲಸಿಕೆ ನೀಡಿರುವ ಕುರಿತು ಮಾಹಿತಿ ಒದಗಿಸುವಂತೆ ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರಿಗೂ ಸೂಚಿಸಲಾಗಿದೆ ಎಂದೂ ಸಿಂಗ್‌ ತಿಳಿಸಿದ್ದಾರೆ.

ಡೆಲ್ಟಾ ಪ್ಲಸ್‌ ಹೆಚ್ಚು ಅಪಾಯಕಾರಿಯೇ? :

2ನೇ ಅಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಲು ಡೆಲ್ಟಾ ರೂಪಾಂತರಿ ಕಾರಣ ಎಂದು ಹೇಳಲಾಗಿದೆ. ಮುಂಬರುವ 3ನೇ ಅಲೆಯ ವೇಳೆ ಡೆಲ್ಟಾ ಪ್ಲಸ್‌ ರೂಪಾಂತರಿಯ ಪ್ರಭಾವ ಹೆಚ್ಚಿರುವ ಸಾಧ್ಯತೆಯಿದೆ ಎಂದೂ ಅಂದಾಜಿಸಲಾಗಿದೆ. ಇದು ಎಷ್ಟು ಅಪಾಯಕಾರಿ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಡೆಲ್ಟಾ ಪ್ಲಸ್‌ನ ವ್ಯಾಪಿಸುವಿಕೆಯ ವೇಗ ಹೆಚ್ಚಿರುವ ಕಾರಣ, 3ನೇ ಅಲೆಯು ನಿರೀಕ್ಷೆಗಿಂತಲೂ ಮುಂಚೆಯೇ ಅಪ್ಪಳಿಸುವ ಭೀತಿಯಿದೆ ಎನ್ನುತ್ತಾರೆ ತಜ್ಞರು.

ರೂಪ ಬದಲು :

ಕೋವಿಡ್‌-19 ವೈರಸ್‌ ನಿರಂತರವಾಗಿ ರೂಪ ಬದಲಿಸುತ್ತಿರುತ್ತದೆ. ಆ ರೀತಿ ಬದಲಾದ ವೈರಸ್‌ನ ರೂಪವನ್ನು “ರೂಪಾಂತರಿ’ ಎಂದು ಕರೆಯುತ್ತಾರೆ. ಡೆಲ್ಟಾ(ಬಿ.1.617.2) ರೂಪಾಂತರಿಯು ಮೊದಲು ಕಂಡುಬಂದಿದ್ದೇ ಭಾರತದಲ್ಲಿ. ಇದನ್ನು ಕಳವಳಕಾರಿ ರೂಪಾಂತರಿ ಎಂದು ಪರಿಗಣಿಸಲಾಗಿದೆ. ಇದು ಈಗ ಮತ್ತೂಂದು ಸ್ವರೂಪ ಪಡೆದಿದೆ. ಈ ಹೊಸ ಸ್ವರೂಪವೇ ಡೆಲ್ಟಾ ಪ್ಲಸ್‌ (ಬಿ.1.617.2.1). ಡೆಲ್ಟಾ ಮೊದಲು ಭಾರತದಲ್ಲಿ ಪತ್ತೆಯಾದರೆ, ಡೆಲ್ಟಾ ಪ್ಲಸ್‌ ಪತ್ತೆಯಾಗಿದ್ದು ಇಂಗ್ಲೆಂಡ್‌ನಲ್ಲಿ(ಜೂನ್‌ 11ರಂದು).

ಎಷ್ಟು ಪ್ರಕರಣಗಳಿವೆ? :

ಡೆಲ್ಟಾ ರೂಪಾಂತರಿಯು ಯು.ಕೆ.ಯಲ್ಲಿ ಕಾಲಗಿಚ್ಚಿನಂತೆ ಹಬ್ಬಿದೆ. ಅಲ್ಲಿನ ಒಟ್ಟು ಪ್ರಕರಣಗಳ ಪೈಕಿ ಶೇ.99ರಷ್ಟು ಕೇಸುಗಳು ಡೆಲ್ಟಾ ರೂಪಾಂತರಿಯದ್ದು. ಯುಕೆಯೊಂದರಲ್ಲೇ 33 ಸಾವಿರಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಗುರಿಯಾಗಿದ್ದಾರೆ.

ಡೆಲ್ಟಾ ಪ್ಲಸ್‌ ರೂಪಾಂತರಿಯ ಪ್ರಕರಣ ಜೂ.18ರವರೆಗೆ ಜಗತ್ತಿನಾದ್ಯಂತ 205 ಆಗಿತ್ತು.

9 ದೇಶಗಳಲ್ಲಿ ಇದು ವ್ಯಾಪಿಸುತ್ತಿದೆ. ಭಾರತದಲ್ಲೇ

40 ಪ್ರಕರಣಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next