ಬೆಂಗಳೂರು: ಮೈಸೂರು ದಸರಾಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ, ಮಾಜಿ ಸಚಿವ ಜಿ.ಟಿ.ದೇವೇಗೌಡ ಮತ್ತು ಸ್ವಾಗತ ಸಮಿತಿಯ ಶಾಸಕರು ಪದಾಧಿಕಾರಿಗಳು ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮೈಸೂರು ದಸರಾಕ್ಕೆ ಆಹ್ವಾನಿಸಿದರು.
ಸಿಎಂ ಭೇಟಿ ಬಳಿಕ ಮಾತನಾಡಿದ ವಿ.ಸೋಮಣ್ಣ, ಸೆ. 29 ರ ಬೆಳಿಗ್ಗೆ 9 ಗಂಟೆಯ ನಂತರ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಲಾಗುವುದು. ನಂತರ ಮೈಸೂರು ದಸರಾಗೆ ಚಾಲನೆ ನೀಡಲಾಗುವುದು. 8ನೇ ತಾರೀಖಿನವರೆಗೆ ದಸರಾದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಆ ಎಲ್ಲ ಕಾರ್ಯಕ್ರಮಕ್ಕೂ ಸಿಎಂರನ್ನು ಆಹ್ವಾನಿಸಿದ್ದೇವೆ. ರಾಜ್ಯಪಾಲರು , ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಆಹ್ವಾನಿಸಲಾಗಿದೆ ಎಂದರು.
ಪಿ ವಿ ಸಿಂಧು ಅವರ ಆಗಮನದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪಿ.ವಿ.ಸಿಂಧೂರವರಿಗೆ ಅಧಿಕೃತ ಪತ್ರವನ್ನು ಬರೆದಿದ್ದಾರೆ. ಪಿ.ವಿ.ಸಿಂಧೂರನ್ನು ಸರ್ಕಾರಿ ಅತಿಥಿಯಾಗಿ ಆಹ್ವಾನಿಸಿದ್ದಾರೆ ಎಂದರು.
ಮೈಸೂರು ಶಾಸಕ ರಾಮದಾಸ್ ದಸರಾದಿಂದ ದೂರವಿರುವ ವಿಚಾರವಾಗಿ ರಾಮದಾಸ್ ನಮ್ಮ ಜೊತೆಯಲ್ಲೇ ಇದ್ದಾರೆ. ದಸರಾ ಉಪಸಮಿತಿಗಳಲ್ಲಿ ಅವರ ಜವಾಬ್ದಾರಿಯಿದೆ. ಅದನ್ನು ಮೈಸೂರಿನಲ್ಲಿ ನಿಭಾಯಿಸುತ್ತಿದ್ದಾರೆ ಎಂದರು.
ಜಿ.ಟಿ.ದೇವೇಗೌಡರು ಹಿರಿಯರು. ಅವರಿಗೆ ಮೈಸೂರು ದಸರಾ ಬಗ್ಗೆ ಅನುಭವವಿದೆ. ಆದ್ದರಿಂದ ಅವರು ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಸೋಮಣ್ಣ ಹೇಳಿದರು.