Advertisement

UV Fusion: ದೇವರು ಎಲ್ಲಿರುವನು?

03:17 PM Aug 25, 2023 | Team Udayavani |

ಭಾರತ ದೇಶದಲ್ಲಿ ಜನಿಸಿರುವ ನಾವೆಲ್ಲರೂ ತಾಯಿ ಭಾರತಾಂಬೆಯ ಮಕ್ಕಳು. ಯಾವ ತಾಯಿಯೂ ತನ್ನ ಮಕ್ಕಳನ್ನು ತಾರತಮ್ಯದಿಂದ ನೋಡಲಾರಳು. ಆದರೆ ಮಕ್ಕಳಾದ ನಾವು ಇದನ್ನರಿಯದೆ ಕುಲ, ಮತ, ಜಾತಿ, ಧರ್ಮವೆಂದು ಹೊಡೆದಾಡಿಕೊಂಡು ಬದುಕುತ್ತಿರುವುದು ನ್ಯಾಯವೇ?

Advertisement

ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗದೆ ಹೊಟ್ಟೆಕಿಚ್ಚಿನಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಆ ಧರ್ಮ ನೀನು ಈ ಧರ್ಮ, ನಾನು ಮೇಲ್ಜಾತಿ ನೀನು ಕೆಳ ಜಾತಿ, ನಾನು ಶ್ರೀಮಂತ ನೀನು ಬಡವ ಎಂದು ಕೆಲಸಕ್ಕೆ ಬಾರದ ಆಲೋಚನೆಗಳಿಂದ ಬದುಕನ್ನು ಸಾಗಿಸುತ್ತಿರುವುದು ಸಾಮಾನ್ಯವಾಗಿದೆ.

ಇನ್ನು ದೇವರ ವಿಷಯಕ್ಕೆ ಬರುವುದಾದರೆ ಒಂದೊಂದು ಧರ್ಮವು ಒಂದೊಂದು ರೀತಿಯಲ್ಲಿ ಅವರ ನಂಬಿಕೆಗೆ ಅನುಗುಣವಾಗಿ ದೇವರ ಆಚರಣೆಯಲ್ಲಿ ತೊಡಗಿವೆ. ದೇವರಲ್ಲಿ ಭಕ್ತಿ ಇಟ್ಟರೆ ತಪ್ಪಲ್ಲ. ಆದರೆ ಮನುಷ್ಯ ಮನುಷ್ಯರ ನಡುವೆ ಪ್ರೀತಿ ಇಲ್ಲದೆ ಕಾಣದ ದೇವರ ಬಗ್ಗೆ ಅತಿಯಾದ ಭಕ್ತಿಯನ್ನು ತೋರಿಸಿದರೆ ಪ್ರಯೋಜನವಿಲ್ಲ.

ಹಾಗಾದರೆ ದೇವರು ಎಲ್ಲಿದ್ದಾನೆ ?

ಈ ಪ್ರಶ್ನೆಗೆ ನನ್ನ ಉತ್ತರ ಹೀಗಿದೆ: ದೇವರನ್ನು ಮೊದಲು ವ್ಯಕ್ತಿಯ ಒಳ್ಳೆತನದಲ್ಲಿ ಗುರುತಿಸಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ರಾಮ ಹಾಗೂ ರಾವಣ ಎರಡೂ ಲಕ್ಷಣಗಳಿರುತ್ತವೆ. ರಾಮನ ಗುಣವನ್ನು ಪ್ರೋತ್ಸಾಹಿಸಬೇಕು, ರಾವಣನ ಗುಣವನ್ನು ರಾಮನ ಗುಣವಾಗಿ ಬದಲಾಯಿಸಬೇಕು. ದೇವರನ್ನು ಪ್ರತಿಯೊಬ್ಬ ವ್ಯಕ್ತಿಯ ಒಳ್ಳೆಯ ಹೃದಯದಲ್ಲಿ ಗುರುತಿಸಬೇಕು. ಏನೇ ಕಷ್ಟಗಳು ಎದುರಾಗಿ ನಿಂತರೂ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಹಾಗೂ ಯುಕ್ತಿಯಲ್ಲಿ ದೇವನಿರುವನು.

Advertisement

ಜಾತಿ, ಮತವೆಂದು ಬದುಕದೇ ನಿಸ್ವಾರ್ಥದಿಂದ ಜೀವನವನ್ನು ಸಾಗಿಸಿದರೆ ದೇವರು ಸದಾ ನಮ್ಮೊಂದಿಗೆ ಇರುವನು. ಯಾವ ಜಾತಿಯೂ ಮೇಲಲ್ಲ ಯಾವ ಜಾತಿಯೂ ಕೀಳಲ್ಲ. ಇರುವುದೊಂದೇ ಜಾತಿ. ಅದುವೇ ಮನುಷ್ಯ ಜಾತಿ. ಅದನ್ನರಿತು ಬದುಕುವುದು ಉತ್ತಮ.

ತಂದೆ, ತಾಯಿ, ಗುರು – ಹಿರಿಯರಲ್ಲಿ ದೇವರನ್ನು ಕಾಣಬೇಕು. ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಮಕ್ಕಳಿಗೋಸ್ಕರ ಜೀವನದಲ್ಲಿ ತುಂಬಾ ಕಷ್ಟ ಪಟ್ಟಿರುತ್ತಾರೆ. ಹೀಗೊಂದು ಒಂದು ಮಾತಿದೆ, ಭೂಮಿ ಮೇಲೆ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ-ತಂದೆ ಇರುವುದಿಲ್ಲ. ಆದರೆ ಇಂದಿನ ಕಾಲದಲ್ಲಿ ಮಕ್ಕಳು ಹೆತ್ತವರ ಆಸೆ, ಆಕಾಂಕ್ಷೆ, ಪ್ರೀತಿ, ತ್ಯಾಗ ಇವುಗಳಾವುದನ್ನೂ ಅರಿಯದೆ ಆಕರ್ಷಣೆಯ ಬದುಕಿಗೆ ಮಾರುಹೋಗಿ ಹೆತ್ತವರ ಕಣ್ಣೀರಿಗೆ ಕಾರಣವಾಗಿರುವ ಬೇಸರದ ಸಂಗತಿ ಎದುರಾಗಿದೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಅತಿಯಾದರೆ ಅಮೃತವೂ ವಿಷವಾಗುವುದು. ನಮ್ಮ ಯೋಗ್ಯತೆಗೂ ಮೀರಿ ಬಯಸುವುದು ತಪ್ಪು. ಇರುವುದರಲ್ಲಿಯೇ ಸಂತೋಷವನ್ನು ಕಾಣುವುದು ಒಳ್ಳೆಯದು. ಹೆತ್ತವರ ನೋವಿಗೆ ಕಾರಣವಾಗದೆ ಅವರ ಆನಂದಕ್ಕೆ ಕಾರಣವಾಗಬೇಕು.

ಕೇವಲ ತಂದೆ- ತಾಯಿಯರಲ್ಲಿ ಮಾತ್ರ ದೇವರನ್ನು ಕಾಣುವುದಲ್ಲ, ವಿದ್ಯೆ ಎಂಬ ಬದುಕಿನ ಅಸ್ತ್ರವನ್ನು ಧಾರೆ ಎರೆಯುವ ಗುರುಗಳಲ್ಲಿ, ಬದುಕಿನ ಉತ್ತಮ ಮಾರ್ಗವನ್ನು ತಿಳಿಸಿ ಕೊಡುವ ಹಿರಿಯರಲ್ಲೂ ದೇವರನ್ನು ಕಾಣಬೇಕು. ಇತ್ತೀಚಿಗಂತೂ ಕಾಲೇಜುಗಳಲ್ಲಿ ಗುರುಗಳಿಗೆ ನೀಡುವ ಗೌರವದಲ್ಲೂ ಬದಲಾಗಿದೆ. ವಿದ್ಯಾರ್ಥಿಗಳ ಸ್ವಭಾವ ಗುರುಗಳಿಗೆ ಗೌರವವನ್ನು ನೀಡದೆ, ಯಾರು ಗುರುಗಳು ಯಾರು ವಿದ್ಯಾರ್ಥಿಗಳು ಎಂದು ಗುರುತಿಸಲು ಕಠಿನವಾಗುವಷ್ಟು ಬದಲಾಗಿದೆ.

ನಾವಿಲ್ಲಿ ನಾ ಮೇಲು ತಾ ಮೇಲು ಎಂದು ಹೊಡೆದಾಡಿಕೊಂಡು ಬದುಕುತ್ತಿದ್ದೇವೆ. ಆದರೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಹಗಲಿರುಳೆನ್ನದೆ ಕರ್ತವ್ಯದಲ್ಲಿ ನಿರತರಾಗಿ ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ದೇವರೆಂದರೆ ತಪ್ಪಿಲ್ಲ. ಅಂತಹ ಎಲ್ಲ ಸೈನಿಕರಿಗೂ ನನ್ನ ಕೋಟಿ ಕೋಟಿ ನಮನಗಳು.

“ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ

ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ಕೂಡಲಸಂಗಮ ದೇವನೊಲಿಸುವ ಪರಿ’ ಎಂಬ ಬಸವಣ್ಣನವರ ವಚನ ನೆನಪಿಗೆ ಬರುತ್ತದೆ. ಇದರ ಅರ್ಥ ಎಲ್ಲಿ ಮನಸ್ಸು ಶುದ್ಧವಾಗಿರುವುದೋ ಅಲ್ಲಿ ದೇವನೊಲಿಯುವನು. ನಿಷ್ಕಲ್ಮಶ ಬದುಕು ಸುಂದರ ಜೀವನಕ್ಕೆ ಸಹಕಾರ ಎಂಬುದು ಮನದಟ್ಟಾದರೆ ಉತ್ತಮ.

-ಪ್ರಿಯಾ ನಾಯ್ಕ

ಎಂ.ಇ.ಎಸ್.‌ ಮಹಾವಿದ್ಯಾಲಯ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next