Advertisement

UV Fusion: ಕಮರಿದ ಕನಸು ಮತ್ತೆ ಚಿಗುರಿದಾಗ

01:07 PM Jul 15, 2024 | Team Udayavani |

ಪಿ.ಯು.ಸಿಯ ತನಕ ಕೇರಳದಲ್ಲೇ ವಿದ್ಯಾಭ್ಯಾಸ ಪೂರೈಸಿ ಉನ್ನತ ಶಿಕ್ಷಣಕ್ಕಾಗಿ ಹಾತೊರೆಯುವ ಅನೇಕ ಗಡಿನಾಡಿನ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಮಂಗಳೂರೆಂಬ ಮಾಯಾಬಜಾರ್‌, ಇದು ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ನಿಧಿಯಿದ್ದಂತೆ. ಪಟ್ಟಣದ ವಾತಾವರಣ, ವಾಹನ ದಟ್ಟಣೆ, ಎಲ್ಲೆಲ್ಲೂ ಜನಸಮೂಹ, ಪ್ರತಿಯೊಬ್ಬರ ಮೊಗದಲ್ಲೂ ತಮ್ಮ ಕನಸನ್ನು ನನಸಾಗಿಸುವ ಕಾತುರ… ಹೌದು, ಪ್ರಾಥಮಿಕ ಕಲಿಕೆಯನ್ನು ನನ್ನ ಊರಲ್ಲೇ ಮುಗಿಸಿ ಮುಂದಿನ ಶಿಕ್ಷಣಕ್ಕೆಂದು ಮಂಗಳೂರಿಗೆ ಬಂದವರಲ್ಲಿ ನಾನೂ ಒಬ್ಬ.

Advertisement

ಶಿಕ್ಷಣಕ್ಕಾಗಿ ಕುಡ್ಲಕ್ಕೆ ಕಾಲಿರಿಸಿದೆ. ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರವೇಶಾತಿಯನ್ನೂ ಪಡೆದೆ. ಅನುದಿನವೂ ಉಪನ್ಯಾಸಕರ ಪ್ರೋತ್ಸಾಹ ಹಾಗೂ  ಮಾರ್ಗದರ್ಶನದಿಂದ ನನ್ನಂತ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ
ಲವಲವಿಕೆಯಿಂದ ಇರುತ್ತಿದ್ದರು. ಕಲಿಕೆ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ನನಗೆ ವಿಪರೀತ ಆಸಕ್ತಿ ಇತ್ತು. ಹಲವಾರು
ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ನನಗೆ, ಸಣ್ಣ ಅವಧಿಯ ವಿರಾಮ ದೊರೆತದ್ದು 2018 ರಲ್ಲಿ. ಅಪಘಾತದಿಂದಾಗಿ ನನ್ನ ಕಲಿಕೆಗೆ ಬ್ರೇಕ್‌ ಬಿತ್ತು.

ಈ ಸಂದರ್ಭದಲ್ಲಿ ಅಲ್ಲಿನ ಪ್ರಾಂಶುಪಾಲರು, ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರು ನನ್ನ ಮಾನಸಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಂಡರು. ಮೊಬೈಲ್‌ನಲ್ಲಿ ಗೆಳೆಯರೊಡನೆ ಪಟ್ಟಾಂಗ, ಕ್ಲಾಸ್‌ ಬಗ್ಗೆ ವಿಚಾರಣೆ ನನ್ನ ದಿನಚರಿಯಾಯಿತು. ರಜೆಯಲ್ಲಿ ಸ್ನೇಹಿತರು, ಉಪನ್ಯಾಸಕರು ಮನೆಗೆ ಆಗಮಿಸುತ್ತಿದ್ದರು. ಹಾಗಾಗಿ ರಜೆ ಸಿಕ್ಕಿತೆಂದರೆ ನನಗೆ ಖುಷಿಯೋ ಖುಷಿ…!

ಆರೋಗ್ಯದಲ್ಲಿ ಒಂದಷ್ಟು ಚೇತರಿಕೆ ಕಂಡಾಗ 2019ರಲ್ಲಿ ಮತ್ತೆ ಕಾಲೇಜಿಗೆ ಬರಲಾರಂಭಿಸಿದೆ. ಆಗ ಹೊಸ ಸ್ನೇಹಿತರು, ಹೊಸ ತರಗತಿಗಳು ಆದರೆ ಅದೇ ಕಾಲೇಜು, ಅದೇ ನೆಚ್ಚಿನ ಶಿಕ್ಷಕರು. ಹಿಂದೆಲ್ಲಾ ರೈಲಿನಲ್ಲಿ ಸ್ನೇಹಿತರೊಡನೆ ಪಟ್ಟಾಂಗ ಮಾಡುತ್ತಾ, ಗೇಲಿ ಮಾಡುತ್ತಾ ಕಾಲೇಜಿಗೆ ಬರುತ್ತಿದ್ದ ನನ್ನನ್ನು ಈ ಬಾರಿ ಕಾರಿನಲ್ಲಿ ಸ್ನೇಹಿತರು ಕರೆದುಕೊಂಡು ಬರುತ್ತಿದ್ದರು. ಕಾಲೇಜಿನಲ್ಲೂ ಸ್ನೇಹಿತರ ಮಹಾಪೂರ.

ನಡೆಯಲು ಕಷ್ಟಪಡುತ್ತಿದ್ದ ಸಮಯದಲ್ಲಿ ಆಪ್ತ ಸ್ನೇಹಿತರು ನನ್ನ ಸಹಾಯಕ್ಕೆ ಬಂದಿದ್ದರು. ಯಾವುದೇ ಸಂದರ್ಭದಲ್ಲಿ ನಾನು ನಿರಾಶನಾಗದಂತೆ ನೋಡಿಕೊಂಡರು. ಆದರೆ ಕಲಿಕೆ ಕಬ್ಬಿಣದ ಕಡಲೆಯಂತಾಯಿತು. ಮೊದಮೊದಲು ನನ್ನ ಅಂಕಗಳನ್ನು ನೋಡಿ ಅದೆಷ್ಟೋ ಬಾರಿ ಅತ್ತಿದ್ದೆ. ಹೇಗೋ ಶಿಕ್ಷಕರು, ಸ್ನೇಹಿತರು ನನ್ನನು ಮೇಲಕ್ಕೆತ್ತಿದರು. ಪದವಿಯೇನೋ ಮುಗಿಯಿತು.ನನ್ನ ಮನದಾಸೆಯಂತೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಅದೇ ಕಾಲೇಜಿನಲ್ಲಿ ಪಡೆದೆ.

Advertisement

ಗೆಳೆಯರ ಒಡನಾಟ, ಮಡಿಕೇರಿ ಪ್ರವಾಸ, ಕಾಲೇಜ್‌ ಡೇ ಗೆ ಹಾಡು, ಡಿಬೇಟ್‌ ಕಾಂಪಿಟೇಶನ್‌, ಹೀಗೆ ಹಲವಾರು ಸ್ಪರ್ಧೆಗಳಲ್ಲಿ
ಭಾಗವಹಿಸಿ ಹಳಿ ತಪ್ಪಿದ ಜೀವನ ಮತ್ತೆ ಹಳಿಗೆ ಬಂದಂತಾಯಿತು. ನನಗೆ ಪ್ರೇರಣೆ ದೊರೆತಿದ್ದು ಇಲ್ಲೇ. ಪ್ರಸ್ತುತ ಬಿ.ಎಡ್‌. ಪದವಿಯನ್ನು ಅಭ್ಯಾಸ ಮಾಡುತ್ತಿದ್ದು ಹೊಸ ವಾತಾವರಣ, ದೇಶದ ಮೂಲೆ ಮೂಲೆಗಳಿಂದ ಬರುವ ವಿದ್ಯಾರ್ಥಿಗಳ ಭೇಟಿ, ಗೆಳೆತನ ಮುಂದುವರಿಯಿತು.

ಶಿಕ್ಷಕರ ಪ್ರೋತ್ಸಾಹ, ಗೆಳೆಯರ ಒಡನಾಟ ನನಗೆ ಬಲ ತುಂಬಿದವು. ನನ್ನ ಬದುಕಿನ ಹಳಿ ತಪ್ಪಿದ ದಾರಿಯನ್ನು ಮತ್ತೆ ಹಳಿಯೆಡೆಗೆ
ತರುವಲ್ಲಿ ನನ್ನೆಲ್ಲಾ ಗುರುಗಳೂ ಮಹತ್ತರವಾದ ಪಾತ್ರವನ್ನಿಹಿಸಿದ್ದಾರೆ. ವಿಲಿಯಮ್‌ ರಾಬರ್ಟ್‌ ರವರು ಶಿಕ್ಷಕರ ಕುರಿತಾಗಿ ನುಡಿದಂತೆ ಬೋಧನೆ ನೀಡುವುದಕ್ಕಿಂತ ಹೆಚ್ಚು ಸ್ಫೂರ್ತಿದಾಯಕ ಬದಲಾವಣೆ. ಕಲಿಕೆ ಸತ್ಯಗಳನ್ನು ಹೀರಿಕೊಳ್ಳುವುದಕ್ಕಿಂತ ಹೆಚ್ಚು ಇದು ತಿಳುವಳಿಕೆಯನ್ನು ಪಡೆಯುವುದಾಗಿದೆ. ಅಂತಹ ನನ್ನೆಲ್ಲಾ ಶ್ರೇಷ್ಠ ಶಿಕ್ಷಕರಿಗೆ ಸಾವಿರ ಪ್ರಣಾಮಗಳು.

*ಶ್ರೀನಿವಾಸ ಪ್ರಸಾದ್ ಎಸ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next