Advertisement

She: ಎಲ್ಲರಂತಲ್ಲ ಅವಳು…

10:07 AM May 31, 2024 | Team Udayavani |

“ದಕ್ಷಿಣ ಭಾರತದಲ್ಲಿ ಒಂದಿಷ್ಟು ಬಿರುಸಿನ ಬಿಸಿ ಗಾಳಿ’, “ಉಷ್ಣಾಂಶ 42 ಡಿಗ್ರಿ, ಹೊರಗಡೆ ಹೋಗಲೇ ಬ್ಯಾಡಿ’, “ಇನ್ನು ನಾಲ್ಕು ದಿನ ಉರಿತಾಪ’

Advertisement

ಉಫ್ ಈ ಬೇಸಗೆ ನಿಜಕ್ಕೂ ನಮ್ಮೆಲ್ಲರನ್ನು ಸುಸ್ತಾಗಿಸಿಬಿಟ್ಟಿದೆ. ಬಿಸಿಲಿನಿಂದ ರಕ್ಷಣೆಗೆ ಹಿಡಿದಿರುವ ಛತ್ರಿ ಕಾದ ಹಪ್ಪಳದಂತಾಗುತ್ತಿದೆ. ಕುಡಿದ ನೀರು ಅರೆಕ್ಷಣದಲ್ಲಿ ಜೀರ್ಣವಾಗುತ್ತಿದೆ. ಅದರ ನಡುವೆ “ಫ್ರಿಡ್ಜ್ ನ ತಂಪು ನೀರು ಸೇವಿಸಲೇಬೇಡಿ’ ಎಂದು ಬಿತ್ತರವಾಗುತ್ತಿರುವ ಒಂದಷ್ಟು ಸುಳ್ಳು ಸುದ್ದಿಗಳು. ಅಂತೂ ಬೇಸಗೆಯಲ್ಲಿ ಜನರನ್ನು ಕುಳಿತಲ್ಲಿ ತಲೆದೂಗಲು ಬಿಡುತ್ತಿಲ್ಲ.

ಕಾಲೇಜಿನಲ್ಲಿ ತರಗತಿಗೆ ಪ್ರವೇಶವಾದ ತತ್‌ಕ್ಷಣ ನನ್ನದೊಂದು ಹಳೇ ಚಾಳಿ. ಸುತ್ತಲಿನ ಕಿಟಕಿಯನ್ನು ತೆರೆಯುವುದು ಹಾಗೂ ನನಗೆ ಅನುಕೂಲವಾಗಿ ಗಾಳಿ ಬೀಸುವ ಫ್ಯಾನಿಗೆ ಜೀವ ತುಂಬುವುದು. ಇದನ್ನೆರಡನ್ನು ಮಾಡದೆ ಹೋದರೆ ಖಂಡಿತ ನನಗೆ ತೃಪ್ತಿ ಎನಿಸದು. ಅಷ್ಟಕ್ಕೂ ಇಂದು ಎಲೆಕ್ಟಿವ್‌ ತರಗತಿ. ನಮ್ಮದಲ್ಲದ ವಿಭಾಗದ ತರಗತಿಯಲ್ಲಿ, ನಮ್ಮದಲ್ಲದ ವಿಭಾಗದ ಪಠ್ಯವನ್ನು ಅವಲೋಕಿಸುವುದು ಇದರ ರೂಢಿ. ತರಗತಿ ಬೇರೆಯಾದರೇನು?

ನಿತ್ಯದ ಚಾಳಿಯನ್ನು ಮರೆಯಲುಂಟೇ ! ಮೂರ್ನಾಲ್ಕು ವಿದ್ಯಾರ್ಥಿಗಳು ಮೊದಲೇ ಬಂದು ಕುಳಿತಿದ್ದರು. ತರಗತಿ ಆರಂಭವಾಗಲು ಇನ್ನೂ ಹದಿನೈದು ನಿಮಿಷಗಳು ಬಾಕಿ ಉಳಿದಿದೆ. ನಿಧಾನವಾಗಿ ತರಗತಿ ಒಳಗೆ ಹೊಕ್ಕಿದವನು ರೂಮಿನ ಸ್ವಿಚ್‌ ಆನ್‌ ಮಾಡಿ, ನೇರವಾಗಿ ಆ ತರಗತಿ ಮೂಲೆಯಲ್ಲಿದ್ದ ಕಿಟಕಿಯ ಕಡೆ ಧಾವಿಸಿದೆ. ಬಹುಶಃ ತೆರೆಯದ ಕಿಟಕಿ ಆಗಿದ್ದಿರಬೇಕು. ನನ್ನ ಸಂಪೂರ್ಣ ಶಕ್ತಿ ಉಪಯೋಗಿಸಿ ಆ ಜಾರಿಸುವ ಕಿಟಕಿಯ ಬಾಗಿಲುಗಳನ್ನು ಒಂದಿಷ್ಟು ಪ್ರಯತ್ನದಿಂದ ತೆರೆದೆ; ಅಬ್ಟಾ ಮಹಾನ್‌ ಸಾಧನೆಯೇ ಸರಿ.

ಆಲಿಪ್ತವಾಗಿ ಬೀಸುವ ತಣ್ಣನೆಯ ಗಾಳಿ. ಕಿವಿಗಳಿಗೆ ತಂಪನೆ ಬಡಿಯುವ ನಯವಾದ ಗಾಳಿಯ ಸದ್ದು. ಅದರ ಜತೆಗೆ ಪ್ರಕಾಶಮಾನವಾಗಿ ಕಂಗೊಳಿಸುವ ಸೂರ್ಯ, ಬೇಸಗೆಯ ನೆನಪನ್ನು ಮತ್ತೆ ನೆನಪಿಸಿದ್ದಾನೆ. ಕಿಟಕಿಯ ಅತ್ತ ಕಡೆ ಗಡಸಾಗಿ ನಿಂತಿರುವ ಪ್ರತ್ಯೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗ‌ಳು. ಈ ಹೊತ್ತಿನಲ್ಲಿ ವಿದ್ಯಾರ್ಥಿಗಳು ಅವಸರವಾಗಿ ಕಾಲೇಜಿಗೆ ಹೊರಡಲು ತಯಾರಾಗೋದು ಇದ್ದೇ ಇರುತ್ತೆ. ಎಲ್ಲರಂತೆ ಅವಳೂ ತರಾತುರಿಯಲ್ಲಿ ಇದ್ದಾಳೆ.

Advertisement

ಹಾಸ್ಟೆಲಿನ ದಿವ್ಯಾಹ್ನ ಛತ್ರದಲ್ಲಿ ಬೆಳಗಿನ ಉಪಾಹಾರವನ್ನು ಮುಗಿಸಿ ಹೊಟ್ಟೆಯನ್ನು ತಣ್ಣಗಿರಿಸಿ, ಕೈಗಳನ್ನು- ತಟ್ಟೆಯನ್ನು ತೊಳೆದು ಎಲ್ಲರಂತೆ ಅವಳಿಗೂ ತನ್ನ ಕೆಲಸದತ್ತ ಮೋರೆ ಹಾಕಬಹುದಿತ್ತು. ಆದರೆ ಅವಳು ಎಲ್ಲರಂತೆ ಖಂಡಿತ ಅಲ್ಲ; ತಾನು ಉಂಡ ಆಹಾರದ ತಟ್ಟೆಯನ್ನು ಶುಭ್ರವಾಗಿ ತೊಳೆದು, ಆ ತಟ್ಟೆ ಪೂರ್ತಿ ಶುಭ್ರವಾದ ನೀರು ತುಂಬಿ ಉದ್ಯಾನವನದ ಮೂಲೆಯತ್ತ ಸಾಗುತ್ತಿದ್ದಾಳೆ.

ಅವಳು ಮುಂದೆ ನಿಧಾನವಾಗಿ ಸಾಗುತ್ತಿದ್ದಾಳೆ. ಆ ನೀರನ್ನು ಅವಳು ಎಲ್ಲಿಗೆ ಹಾಕಬಹುದು ಎಂದು ನಾನು ವೀಕ್ಷಿಸುತ್ತಲೇ ಇದ್ದೆ. ಅದು ಅವಳು ನೆಟ್ಟ ಗಿಡಗಳಿಗಾಗಿದ್ದಿರಬಹುದೇ ಇಲ್ಲ. ಧೂಳಿನಿಂದ ಲೇಪನವಾಗಿದ್ದ ಅವಳ ಚಪ್ಪಲಿಯನ್ನು ತೊಳೆಯಲು ಆಗಿದ್ದಿರಬಹುದೇ? ಅಥವಾ ಯಾವುದೋ ಗೋಡೆಗೆ ತಾಗಿದ ಮಣ್ಣು ಒರೆಸಲು ಆಗಿದ್ದಿರಬಹುದೇ ? ಅಥವಾ ತನ್ನ ಗೆಳತಿಗೆ ನೀರೆರೆಚಲು ಆಗಿದ್ದಿರಬಹುದೇ !

ನೇರವಾಗಿ ಉದ್ಯಾನವನದ ಮೂಲೆಗೆ ಧಾವಂತದಿಂದ ಧಾವಿಸಿದ ಅವಳು ತೆಂಗಿನ ಗೆರಟೆಯನ್ನು ಕೈಗೆತ್ತಿಕೊಂಡಳು. ಗೆರಟೆಯ ಕಸ ಕಡ್ಡಿ ಹೊರತೆಗೆದು ನಿಧಾನವಾಗಿ ತಟ್ಟೆಯ ಬಸುರಿನಿಂದ ಆ ಗೆರಟೆಗೆ ನೀರು ಸುರಿಸುತ್ತಿದ್ದಾಳೆ. ತಟ್ಟೆಯಿಂದ ಗೆರಟೆಗೆ ತರ್ಜುಮೆಗೊಳ್ಳುತ್ತಿರುವ ನೀರಿನ ಸದ್ದಿಗೆ, ಇನಿತು ದೂರದಲ್ಲಿದ್ದ ಎರಡು ಬೀದಿ ನಾಯಿಗಳು ಕಿವಿಯನ್ನು ಕಂಪಿಸುತ್ತಿವೆ. ಮೂಗು ಆಘ್ರಾಣಿಸುತ್ತಿದೆ. ಪಿಳಿ ಪಿಳಿ ಕಣ್ಣು ಅದೇ ಹೆಣ್ಣು ಮಗಳನ್ನು ದಿಟ್ಟಿಸಿ ಪ್ರೀತಿಯಿಂದ ನೋಡುತ್ತಿದೆ. ಮೆತ್ತಗೆ ಅವಳು ಹಿಂದಡಿ ಇಟ್ಟಳು.

ಒಮ್ಮೆ ಸುತ್ತಲೂ ತಿರುಗಿದಳು. ಬಹುಶಃ ಪಕ್ಷಿಗಳಿವೆಯೇ ಎಂದು ಆ ಜೀವ ಹುಡುಕಾಡಿತ್ತೇನೋ ? ಮೆತ್ತಗೆ ಹಿಂದಡಿ ಇಟ್ಟಳು. ಅವಳ ನಿತ್ಯದ ಕಾಯಕಗಳತ್ತ ಚಿತ್ತ ಹರಿಸುವ ಸಲುವಾಗಿ ಏನೋ. ದೂರದಿಂದಲೇ ಇಣುಕುತ್ತಿದ್ದ ನಾಯಿಗಳೆರಡು ನಾಲಿಗೆಯನ್ನು ಹೊರಚಾಚಿ ಸುಸ್ತಾದ ಮತಿಯಿಂದಲೇ ಗೆರಟೆಯ ಪಕ್ಕ ಬಂದಿದೆ. ಒಂದಾದ ಅನಂತರ ಮತ್ತೂಂದು ಎಂಬಂತೆ ಎರಡು ನಾಯಿ ಮರಿಗಳೂ ನೀರನ್ನು ಕುಡಿದು, ಲಟ ಲಟನೆ ಮೈಯನ್ನು ಅಲುಗಿಸಿ ನೀಳವಾಗಿ ನನ್ನತ್ತ ದೃಷ್ಟಿ ಹಾಯಿಸಿ ನಮಸ್ಕಾರ ಹಾಕಿತು.

ಎರಡೇ ಹೆಜ್ಜೆಯಲ್ಲಿ ಪಕ್ಕದ ಮರದ ಬುಡದಲ್ಲಿ ದೊಪ್ಪನೆ ಮಲಗಿಕೊಂಡಿತು. ಖಂಡಿತ ತೃಷೆ ನೀಗಿಸಿಕೊಂಡ ಆ ಶ್ವಾನಗಳೆರಡೂ ಅವಳನ್ನು ನೆನಪು ಮಾಡಿಕೊಳ್ಳುತ್ತಲೇ ನಿಧಾನವಾಗಿ ನಿದ್ರೆಗೆ ಜಾರಿದೆ. ಖಾಲಿಯಾದ ಗೆರಟೆ ಮತ್ತೆ ಯಾರಾದರೂ ನೀರು ಹಾಕಿಯಾರೇ ಎಂದು ಮರ್ಮರಿಸುತ್ತಿರಬಹುದು. ಹೌದು ಆ ಕಿಟಕಿಯ ಕಡೆ ಹೋದಾಗಲೆಲ್ಲಾ ಮೂಕ ಜೀವಿಗಳ ರೋಧನ ಎರಡನೇ ಮಹಡಿಯಿಂದಲೇ ನಿಂತಿರುವ ನನ್ನನ್ನು ಬಡಿಯುತ್ತಿದೆ. ಆದರೂ ಅವಳು ಎಲ್ಲರಂತಲ್ಲ. ಪರಿಸರದ ಸೂಕ್ಷ್ಮತೆಯನ್ನು ಅರಿತಿರುವ ಅವಳು ಮೂಕ ಜೀವಿಗೆ ಜೀವವಾಗಲು ಮುಂದಾಗಿದ್ದಾಳೆ. ಹೌದು ಅವಳು ನಮಗೆ ಮಾದರಿಯಾಗಿದ್ದಾಳೆ; ಇನ್ನೇನಿದ್ದರೂ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಬಿಸಿಲಿನ ಬಗೆಗೆ ತೃಷೆ ನೀಗಿಸಲು ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿ ಸಂಕುಲಗಳಿಗೆ ನಾವು ನೆರವಾಗಬೇಕಿದೆ.

-ಸಮ್ಯಕ್ತ್ ಜೈನ್‌ ಕಡಬ

ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next