Advertisement

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

03:43 PM Oct 04, 2024 | Team Udayavani |

ಭೂತವಾಗಿ ಹೋಗುತ್ತಿರುವ ಕ್ಷಣವನ್ನು ಭವಿಷ್ಯತ್ತಿನಿಂದ ಕಿತ್ತುಕೊಂಡು ಅದಕ್ಕೆ ವರ್ತಮಾನವೆಂದು ಹೆಸರಿಟ್ಟು ಅಲ್ಲಿ ಬದುಕಬೇಕಲ್ಲವೇ? ಅಪೇಕ್ಷೆಯಲ್ಲಿ ಮುರುಟದೆ, ವರ್ತಮಾನವನ್ನು ಸ್ವೀಕರಿಸುವ ಸ್ಥಿತಿಯನ್ನು ಜೀವ ಮುಟ್ಟಬೇಕು. ಯಾವ ನಿರ್ದಿಷ್ಟ ಗುರಿಯನ್ನೂ ಇಟ್ಟುಕೊಳ್ಳದೆ ತೆರೆದ ಮನಸ್ಸಿನಿಂದ ಗಮನಿಸಿ ನೋಡುವಲ್ಲಿಯೂ ಕಲ್ಪನೆಯ ಅಲೆಗಳು ಅಡ್ಡ ಬಂದುಬಿಡುತ್ತವೆ. ವಾಸ್ತವವನ್ನು ಅರಗಿಸಿಕೊಳ್ಳುವ ಮನಸ್ಥಿತಿ ಬೆಳೆಸುವುದು ತೀರಾ ಕಷ್ಟವೇನೋ!?

Advertisement

ಪರಿಚಿತವಲಯದಿಂದ, ರೂಢಿಯ ನಡವಳಿಕೆಯಿಂದ ದೂರವಾಗಿ ವರ್ತಮಾನವನ್ನು ಅರಗಿಸಿ, ಅರಿಯದ ಭವಿಷ್ಯತ್ತಿನತ್ತ ಮುಖಮಾಡಲು ಅಗಾಧವಾದ ಸಹನೆ ವಿಶಾಲವಾದ ವಿಚಕ್ಷಣೆಯಿಂದ ಮಾತ್ರ ಸಾಧ್ಯ.

ಶೋಕಸ್ಥಾನಸಹಪ್ರಾಣಿ ದುಃಖಸ್ಥಾನಶತಾನಿ ಚ| ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್‌||

ಅಂದರೆ ವ್ಯಥೆಪಡಲು ಸಾವಿರಾರು ವಿಷಯಗಳೂ ದುಃಖೀ ಸಲು ನೂರಾರು ಸಂದರ್ಭಗಳೂ ಪ್ರತಿದಿನವೂ ಒದಗುತ್ತವೆ. ಅವು ಮೂಢನಿಗೆ, ಪಂಡಿತನಿಗಲ್ಲ. ಅರ್ಥಾತ್‌ ವರ್ತಮಾನವನ್ನು ಹೊರತುಪಡಿಸಿ ಆಗಿಹೋದುದರ ಬಗೆಗೆ ಚಿಂತಿಸುವುದು, ಮುಂದೆ ಆಗಲಿರುವುದರ ಬಗೆಗೆ ತೀರಾ ಯೋಚಿಸಿ ತಲೆಕೆಡಿಸಿಕೊಳ್ಳುವುದು ಮೂಢನ ಒಂದು ಲಕ್ಷಣವಾಗಿಲ್ಲಿ ವ್ಯಕ್ತವಾಗುತ್ತದೆ. ವಿವೇಕಿಯು ಭೂತವನ್ನು ಸ್ವೀಕರಿಸಿ, ವರ್ತಮಾನವನ್ನು ಆನಂದಿಸಿ, ಭವಿಷ್ಯದಲ್ಲಿ ಭರವಸೆಯಲ್ಲಿ ಜೀವಿಸುತ್ತಲಿರುತ್ತಾನೆಯೇ ಹೊರತು ಉದ್ವೇಗದ ಉರುಳಿನೊಳಗೆ ಆತ ಬಲಿಪಶುವಾಗುವ ಸಂದರ್ಭವನ್ನೇ ಒದಗಿಸುವುದಿಲ್ಲ. ಸತ್ತು ಹೋದ ನಾಯಿಗೆ ಎಷ್ಟು ಕಣ್ಣಿತ್ತು? ಎಷ್ಟು ಹಲ್ಲಿತ್ತು? ಎಂದು ಲೆಕ್ಕ ಹಾಕುವುದರಿಂದಲೋ ಅಥವಾ ಜೀವತಳೆಯದ ಜಂತುವಿನ ಬಗೆಗೆ ತರ್ಕಿಸುವುದರಿಂದ ವರ್ತಮಾನದಲ್ಲೇನು ಪ್ರಯೋಜನ?

ವರ್ತಮಾನದ ಸಂದಿಗ್ಧತೆಯಿಂದ ಹೊರಬರುವುದು ತೀರಾ ಸುಲಭವೇನಲ್ಲ. ಮನಸ್ಸು ಸುಲಭವಾಗಿ ವರ್ತಮಾನದ ಸಂದರ್ಭಗಳಿಗೆ ಒಗ್ಗಿಕೊಳ್ಳಲು ಸಮ್ಮತಿಸುವುದೂ ಇಲ್ಲ. ಕ್ಲಿಷ್ಟ ಸಮಯದಲ್ಲಿ ಬುದ್ಧಿಗೊದಗುವ ಅಂಧತನದಿಂದ, ಬುದ್ಧಿಗೆ ಮನಸ್ಸು ದಾಸ್ಯನಾಗಿರುವುದೇ ಲೇಸು ಎನ್ನುವ ಭ್ರಮೆಯು ಬಲಿಯಲು ಬಿಡದೆ ವರ್ತಮಾನದ ವಾರ್ತೆಯನ್ನು ನಿಭಾಯಿಸುವ ಅರ್ಹತೆಯನ್ನು ಮನಸ್ಸು ಹೊಂದಬೇಕು. ಪ್ರತಿಯೊಂದನ್ನು ಊಹಾಕಾರದಲ್ಲಿರಿಸಿ ವರ್ತಮಾನವನ್ನು ಹಾಹಾಕಾರದಲ್ಲಿ ಸ್ವೀಕರಿಸಿದರೆ ಕ್ಷಣಮಾತ್ರದ ಸಂತೃಪ್ತಿಯೂ ಬದುಕಲ್ಲಿ ಲಭಿಸುವುದು ಅಸಾಧ್ಯ.

Advertisement

ಆದರೆ ಪ್ರತೀ ಸಂದರ್ಭವನ್ನು ನಾನೇ ಎನ್ನುವ ಅಹಂ ಭಾವದ ಕೋಟೆಯೊಳಗಿನಿಂದ ಮಾತ್ರ ಆಲೋಚಿಸದೆ ಹಲವಾರು ಆಯಾಮಗಳಿಂದ ವಿವೇಚಿಸಬೇಕು. ಸಮಸ್ಯೆಗಳಲ್ಲಿ ಭಾಗಿಯಾಗದ ಮೂರನೆಯ ವ್ಯಕ್ತಿಯಾಗಿ ವರ್ತಿಸಿ, ತರ್ಕಿಸಿ ತೀರ್ಪನ್ನು ನೀಡುವ ಸನ್ನಿವೇಶವನ್ನು ರೂಢಿಗೊಳಿಸಬೇಕು. ಇದರಿಂದ ಅದೆಷ್ಟೋ ಸಮಸ್ಯೆಗಳು ಕ್ಷಣಮಾತ್ರದಲ್ಲಿ ಪರಿಹಾರವಾಗಿಬಿಡುತ್ತವೆ.

ಆದಾಗ್ಯೂ, ಭೂತಭವಿಷ್ಯದ ಬಗೆಗೆ ಎಷ್ಟು ಚಿಂತಿಸುತ್ತಾ ಕೂತರೂ ವಿಧಿಯ ಬರಹವನ್ನು ಎಂದಿಗೂ ತಪ್ಪಿಸಲು ಸಾಧ್ಯವಿಲ್ಲ. ಅಂತಹ ಚಿಂತೆಯ ಬೆಂಕಿಯು ನೆಮ್ಮದಿಯನ್ನು ಸುಟ್ಟಿàತು, ಮನಸ್ಸನ್ನು ಅಸ್ವಸ್ಥಗೊಳಿಸೀತೇ ಹೊರತು ಬೆಂಕಿಯ ಜ್ವಾಲೆಯನ್ನು ನಂದಿಸಲಾರದು. ಅತಿಯಾಗಿ ಯೋಚಿಸಿ ಜಗತ್ತನ್ನು ನಡೆಸುವ ಅಚ್ಯುತವಾದ ಶಕ್ತಿಯ ಕಾರ್ಯದಲ್ಲಿ ಚ್ಯುತಿ ಉಂಟಾದಿತೇನೋ ಎಂದು ಭಾವಿಸುವುದು ಮೂರ್ಖತನ. ಹಾಗಾಗಿ ಶಕ್ತಿಗೆ ವ್ಯಾಕುಲತೆಯಿಂದ ತಲೆಬಾಗಿ ಬಿಡುವುದು ಹೆಚ್ಚು ಸಮಂಜಸವೆಂದೆನಿಸುತ್ತದೆ. ದಾಸನು ದೀನನಾದರೆ ಕೃಪೆಯ ಕಾವು ತಟ್ಟಿಯೇ ತಟ್ಟುತ್ತದೆ. ಹಾಗಾಗಿ ವಿಧಿ ಎಂತಹದ್ದೇ ಆಟಕ್ಕೂ ಕೃಪಾಕಟಾಕ್ಷದಡಿಯಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸಿದ್ಧಿಸಿಬಿಡುತ್ತದೆ.

 ಪಂಚಮಿ ಬಾಕಿಲಪದವು

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next