Advertisement

UV Fusion: ಬದುಕಿನ ಸುಳಿಯೊಳಗೆ…

10:23 AM Aug 07, 2024 | Team Udayavani |

ಕಾಯುತ್ತಲೇ ಇರುತ್ತೇವೆ ಎಂದಾದ ರೂಂದು ದಿನ ಬದುಕು ಬದಲಾದೀತು ಎಂದು. ಕೆಲವೊಮ್ಮೆ ಕ್ಷಣಗಳನ್ನು ಯುಗಗಳಂತೆ ಕಳೆಯುತ್ತೇವೆ. ಚಿಕ್ಕ ಹೂಕುಂಡದಲ್ಲಿ ಚಿಗುರಿದ ಗಿಡ, ಅರಳಿದ ಹೂವು, ಬೀಸುವ ತಂಗಾಳಿ, ವಾಕಿಂಗ್‌ ಹೊರಟಾಗ ಎದುರಾಗುವ ಅಪರಿಚಿತ ಮುಖಗಳು, ವಿಷಯವೇ ಇಲ್ಲದಿದ್ದರೂ ಉಂಟಾಗುವ ಕಿರಿಕಿರಿ, ಯಾಕೋ ಎಲ್ಲವೂ ಬೇಜಾರು ಅನಿಸುವುದಕ್ಕೆ ಶುರವಾಗುತ್ತದೆ. ಯಾರೊಂದಿಗೂ ಮಾತನಾಡಲು ಮನವಿಲ್ಲದಂತೆ, ಬೇಕಾದವರೆಲ್ಲ ಸುತ್ತಲೇ ಇದ್ದರು ಎಲ್ಲರಿಂದ ದೂರವಾಗಿ ಪರಮ ಮೂಕರಂತೆ ಇದ್ದುಬಿಡೋಣ ಅನಿಸುತ್ತದೆ. ಯಾಕೆ ಹೀಗೆ ಬದುಕು ಕಾಡಿಸುತ್ತದೆ ಎಂದು ಅಂದುಕೊಂಡಿರುತ್ತೇವೆ. ಆದರೆ ಇದಕ್ಕೆಲ್ಲ ಆತ್ಮತೃಪ್ತಿಯ ಕೊರತೆ ಕಾರಣ ಅನ್ನುವುದನ್ನು ಮರೆತುಬಿಟ್ಟಿದ್ದೇವೆ.

Advertisement

ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ತುಡಿತ. ನಮಗಿರುವ ಯಾವ ಸವಲತ್ತುಗಳು ಸಾಲದು ಅನಿಸುತ್ತಿರುತ್ತದೆ. ಇತರರನ್ನು ನೋಡಿ ಮತ್ತೇನೋ ಹೊಸ ಹೊಸ ಬೇಕುಗಳ ಹಿಂದೆ ಓಡುತ್ತಿರುತ್ತೇವೆ. ಆದರೆ ಒಂದು ಕ್ಷಣಕ್ಕಾದರೂ ನಮಗೀಗ ದಕ್ಕಿರುವ ಬದುಕು ಎಷ್ಟೋ ಜನರ ಕನಸು ಎನ್ನುವುದು ನೆನಪಿಗೆ ಬರುವುದಿಲ್ಲ. ಕೆಲವರಿಗೆ ಒಪ್ಪೋತ್ತಿನ ಊಟ ಸಿಕ್ಕರೆ ಸಾಕು ಅನ್ನುವ ಭಾವ, ಮತ್ತೆ ಕೆಲವರಿಗೆ ಇರಲೊಂದು ಸೂರು ಮತ್ತೆ ಕೆಲವರಿಗೆ ಏಕಾಂಗಿತ ಹೋಗಲಾಡಿಸಲು ಜತೆ ನಡೆದು ಬರಲೊಂದು ಜೀವ…

ಹೀಗೆ ಬಯಕೆಗಳ ಪಟ್ಟಿಯಂತೂ ಇದ್ದದ್ದೇ, ರೂಪ ಬೇರೆ ಬೇರೆ ಅಷ್ಟೇ. ಒಟ್ಟಾರೆ ಆವಶ್ಯಕತೆ ಅನಿವಾರ್ಯತೆಗಳ ಮೇಲೆ ನೆಲೆ ನಿಂತ ಬದುಕು. ಇದೆಲ್ಲದರಿಂದ ಒಮ್ಮೆ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಡಬೇಕು ಅಂದುಕೊಳ್ಳುತ್ತಾ ಹೊಸತನದ ಹುಡುಕಾಟದಲ್ಲಿ ದಿನ ದೂಡುವಾಗಲೇ ನಾಳೆಗಳ ಕನಸು, ನಿನ್ನೆಗಳ ನೆನಪಿನ ಅಲೆಗಳ ಅಬ್ಬರದಲ್ಲಿ ಇಂದಿನ ಚೆಂದದ ಆಯಸ್ಸು ಸದ್ದೇ ಇಲ್ಲದೆ ಕರಗಿ ಹೋಗಿರುತ್ತದೆ. ಅನಿಶ್ಚಿತ ಬದುಕಿನ ಹಾದಿಯಲ್ಲಿ ಹಾದು ಹೋಗುವವರೇ ಎಲ್ಲರೂ.

ಕೊನೆಯವರೆಗೂ ಯಾರು, ಯಾವುದೂ ಜತೆ ಬರುವುದಿಲ್ಲ ಎಂಬುವುದು ಗೊತ್ತಿದ್ದರೂ, ನಿರೀಕ್ಷೆಗಳ ಮೂಟೆ ಹೊತ್ತೇ ಸಾಗುತ್ತಿರುತ್ತೇವೆ. ಅವುಗಳು ಹುಸಿಯಾದರೆ ಅಥವಾ ಕೊಂಚ ಬದಲಾವಣೆಗಳಾದರೆ ಸಾಕು ಬದುಕೇ ಮುಗಿದು ಹೋದಂತೆ ನಲುಗುತ್ತೇವೆ.

“ಅಸಲಿಗೆ ಯಾರಾದರೂ ಯಾಕೆ ನಮ್ಮ ಇಚ್ಛೆಗಳನ್ನು ಪೂರೈಸಬೇಕು? ಯಾಕೆ ನಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯಬೇಕೆಂಬ ಹಂಬಲ ಬೆಳೆಸಿಕೊಳ್ಳಬೇಕು? ನಾವು ಯಾರ ಇಚ್ಛೆಯಂತೆ ಬದುಕುತ್ತಿದ್ದೇವೆ? ಪ್ರತಿಯೊಬ್ಬ ವ್ಯಕ್ತಿಗೂ ಆತನ ನಿಯಮಿತ ಪರಿಧಿಯಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಅವರವರ ಇಚ್ಛೆಯಂತೆ ಅವರು ಬದುಕಲಿ. ನಾವು ನಾವಾಗಿರೋಣ ಅಂತ ಒಮ್ಮೆ ಗಟ್ಟಿಯಾಗಿ ಅನ್ನಿಸೋಕೆ ಆರಂಭವಾದರೆ ತಲೆಯಲ್ಲಿನ ನಿರೀಕ್ಷೆಗಳ ಭಾರ ಕಡಿಮೆಯಾಗುತ್ತದೆ ನೋಡಿ. ಆಗ ಬದುಕು ನಿಜಕ್ಕೂ ನಿರಾಳವಾಗುತ್ತಾ ಹೋಗುತ್ತದೆ. “ಆನಂದಮಯ ಈ ಜಗಹೃದಯ’ ಎಂದು ಅನಿಸುವುದು ಆಗಲೇ. ಎಲ್ಲವೂ ಸುಂದರವಾಗಿ ಕಾಣುತ್ತದೆ. ಅಲ್ಲಲ್ಲ, ಎಲ್ಲದರಲ್ಲೂ ಸೌಂದರ್ಯ ತಂತಾನೆ ಇದೆ. ನಾವು ನೋಡುವ ನೋಟ ಬದಲಾದಾಗ ಅಥವಾ ನಿಷ್ಕಲ್ಮಶವಾದಾಗ ಪ್ರತಿಯೊಂದರೊಳಗಿನ ಕದಲಿಕೆಯು ಸುಂದರವೇ.

Advertisement

ಬದುಕೊಂದು ಹೊಳೆಯಾದರೆ ಪರಿಸ್ಥಿತಿಯದರ ಸುಳಿಗಳು. ಅದರೊಳಗೆ ಮುಳುಗದೆ, ಬಂದ ಅಲೆಗಳೊಟ್ಟಿಗೆ ಮನದ ಹಗುರತೆಯಿಂದ ತೇಲುತ್ತಾ ಹೋದರೆ, ಅಶಾಶ್ವತ ಪಯಣದಲ್ಲಿ ಶಾಶ್ವತದ ಬಯಕೆ ಕಮ್ಮಿಯಾದರೆ ತಲುಪುವ ತೀರ ಹಸನು ಬದುಕಿನ ತಪ್ಪಲು. ಜಗದ ಜಂಜಾಟಗಳಿಂದ ಬಿಡುಗಡೆ ಹೊಂದಿ ಹೊರಡುವಾಗ, ಸಾಂದ್ರಗೊಂಡ ಭಾವಗಳು ಮನದಲ್ಲಿ ಸಂತೃಪ್ತಿಯನ್ನು ಸು#ರಿಸಿದರೆ ಅದೊಂದು ಸಾರ್ಥಕ್ಯದ ಬದುಕು. ಅಂತದೊಂದು ಚೆಂದದ ಭಾವ ನಮ್ಮೆಲ್ಲರ ಪಾಲಿಗೂ ದಕ್ಕುವಂತಾಗಲಿ. ಆ ನಿಟ್ಟಿನ ಪಯಣದೆಡೆಗೆ ನಿರಂತರ ಸಾಗುವಂತಾಗಲಿ.

-ಪಲ್ಲವಿ ಚೆನ್ನಬಸಪ್ಪ

Advertisement

Udayavani is now on Telegram. Click here to join our channel and stay updated with the latest news.

Next