Advertisement

ಉಜ್ವಲ ಸಿಲಿಂಡರ್‌ ಬಳಕೆ ವರ್ಷಕ್ಕೆ 4 ಸೀಮಿತ

12:51 AM Feb 25, 2020 | Sriram |

ಕುಂದಾಪುರ: ಪ್ರಧಾನಮಂತ್ರಿ ಉಜ್ವಲ ಯೋಜನೆ’ಯಡಿ ಬಿಪಿಎಲ್‌ ಕುಟುಂಬಗಳಿಗೆ ಸಬ್ಸಿಡಿ ದರದ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡಿದ್ದರೂ ಅದರ ಬಳಕೆ ಪ್ರಮಾಣ ವರ್ಷಕ್ಕೆ ನಾಲ್ಕಕ್ಕೆ ಸೀಮಿತವಾಗಿದೆ. ಉಚಿತ ಅಡುಗೆ ಅನಿಲ ಸಂಪರ್ಕ ಕೊಟ್ಟರೂ ಬಳಕೆ ಪ್ರಮಾಣ ಕಡಿಮೆ ಇದೆ ಎನ್ನುವ ಮಾಹಿತಿಯಿದೆ.

Advertisement

ಏನಿದು ಉಜ್ವಲ ಯೋಜನೆ
2016ರ ಮೇ 1ರಂದು ಉಜ್ವಲ ಯೋಜನೆ ಜಾರಿಗೆ ತರಲಾಗಿದ್ದು, ಹೊಗೆ ರಹಿತ ಅಡುಗೆ ಮನೆ ಪರಿಕಲ್ಪನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳಾ ಸದಸ್ಯರಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ ಯೋಜನೆ. ಶೇ. 100ರಷ್ಟು ಬಡ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಸಾಧಿಸುವ ಗುರಿ ಹೊಂದಲಾಗಿತ್ತು. 2011ರ ಸಾಮಾಜಿಕ ಆರ್ಥಿಕ ಜಾತಿ ಜನಗಣತಿ ಆಧಾರದ ಮೇಲೆ ಸಂಪರ್ಕಗಳನ್ನು ನೀಡಲಾಗುತ್ತಿತ್ತು. ಅನಂತರ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮತ್ತು ಅಂತ್ಯೋದಯ ಯೋಜನೆಯ ಫಲಾನುಭವಿಗಳಾದ ಎಸ್‌ಸಿ, ಎಸ್‌ಟಿ, ಅರಣ್ಯ ನಿವಾಸಿಗಳು, ಅತ್ಯಂತ ಹಿಂದುಳಿದ ವರ್ಗಗಳು, ದ್ವೀಪ ನಿವಾಸಿಗಳು, ಅಲೆಮಾರಿ ಬುಡಕಟ್ಟು ಜನಾಂಗ, ಚಹಾ ಎಸ್ಟೇಟ್‌ಗಳ ಬಡವರಿಗೆ ಯೋಜನೆಯನ್ನು ವಿಸ್ತರಿಸಲಾಗಿತ್ತು. ಅದಾದ ಅನಂತರ 2016ರಲ್ಲಿ ಎಲ್ಲ ವರ್ಗದ ಕಡು ಬಡವರಿಗೂ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಎಲ್‌ಪಿಜಿ ಸಂಪರ್ಕ ಲಭ್ಯವಾಗುವಂತೆ ಮಾಡಲಾಗಿದೆ.

1,600 ರೂ. ಸಬ್ಸಿಡಿ
ಉಜ್ವಲ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸುವ ಸರಕಾರಿ ಸ್ವಾಮ್ಯದ ಇಂಧನ ಕಂಪೆನಿಗಳಿಗೆ ಸರಕಾರವು 1,600 ರೂ. ಸಬ್ಸಿಡಿ ನೀಡುತ್ತದೆ. ಈ ಸಬ್ಸಿಡಿಯು ಸಿಲಿಂಡರ್‌ ಭದ್ರತೆ ಶುಲ್ಕ ಮತ್ತು ಇತರ ಶುಲ್ಕಗಳನ್ನು ಒಳಗೊಂಡಿದೆ. ಸಿಲಿಂಡರ್‌, ರೆಗ್ಯುಲೇಟರ್‌, ಪೈಪ್‌, ಪುಸ್ತಕ ಮೊದಲಾದವರು ಈ ಮೊತ್ತದಲ್ಲಿ ಸೇರುತ್ತದೆ.

ಒಟ್ಟು 8,393 ಸಂಪರ್ಕ
ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಒಟ್ಟು 8,393 ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಬೈಂದೂರಿನ ಶಾಂತೇರಿ ಕಾಮಾಕ್ಷಿ ಏಜೆನ್ಸಿ 1,799, ಮಲ್ಲಿಕಾರ್ಜುನ ಏಜೆನ್ಸಿ ಗಂಗೊಳ್ಳಿ 2,395, ಮಧು ಏಜೆನ್ಸಿ ಕುಂದಾಪುರ 57, ಆಂಜನೇಯ ಏಜೆನ್ಸಿ ಕುಂದಾಪುರ 771, ಮುಕ್ತಾ ಏಜೆನ್ಸಿ ಸಿದ್ದಾಪುರ 1,917, ಸುರಕ್ಷಾ ಇಂಡಿಯನ್‌ ಡಿಸ್ಟ್ರಿಬ್ಯೂಟರ್‌ ಕೋಟೇಶ್ವರ 1,454 ಸಂಪರ್ಕಗಳನ್ನು ನೀಡಿದೆ.

ಕಡಿಮೆ ಬಳಕೆ
ರಾಜ್ಯದಲ್ಲಿ 1.58 ಕೋಟಿ ಅಡಿಗೆ ಅನಿಲ ಸಿಲಿಂಡರ್‌ ಬಳಕೆದಾರರಿದ್ದು ಈ ಪೈಕಿ 31 ಲಕ್ಷ ಸಿಲಿಂಡರ್‌ಗಳು ಉಜ್ವಲ ಯೋಜನೆಯಡಿ ನೀಡಲ್ಪಟ್ಟಿವೆ. ಈ ಪೈಕಿ ಪ್ರತಿ ಕುಟುಂಬವೂ ವಾರ್ಷಿಕ 3.53 ಸಿಲಿಂಡರ್‌ಗಳನ್ನಷ್ಟೇ ಪಡೆದುಕೊಳ್ಳುತ್ತಿವೆ. ಅಂದರೆ ಸರಾಸರಿಯಾಗಿ ವರ್ಷಕ್ಕೆ 4 ಸಿಲಿಂಡರ್‌ಗಿಂತ ಹೆಚ್ಚಿನ ಬಳಕೆಯಿಲ್ಲ. ಕೊಪ್ಪಳದಲ್ಲಿ ಬ್ರಿಟಿಷ್‌ ಕೊಲಂಬಿಯಾ ವಿವಿಯವರು ನಡೆಸಿದ ಸರ್ವೆಗಳ ಪ್ರಕಾರ ಒಂದು ಕುಟುಂಬಕ್ಕೆ ವಾರ್ಷಿಕ ಸರಾಸರಿ 14.2 ಕೆ.ಜಿ.ಯ 10 ಸಿಲಿಂಡರ್‌ಗಳು ಅವಶ್ಯವಿದೆ.

Advertisement

ಆದರೆ ಉಜ್ವಲ ಯೋಜನೆಯಲ್ಲಿ ಕೇವಲ 4 ಸಿಲಿಂಡರ್‌ಗಳನ್ನಷ್ಟೇ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ನಿಖರ ಕಾರಣಗಳು ತಿಳಿದಿಲ್ಲ. ಆದರೆ ಕಡಿಮೆ ಪ್ರಮಾಣದಲ್ಲಿ ಅಡುಗೆ ಅನಿಲ ಬಳಸುತ್ತಿರುವ ಕಾರಣ ಗ್ರಾಮೀಣ ಭಾಗದಲ್ಲಿ ಇನ್ನೂ ಸಾಂಪ್ರದಾಯಿಕ ಉರುವಲಿನ ಮೊರೆಯಿಂದ ಮರೆಯಾಗಿಲ್ಲ ಎನ್ನುವುದು ಖಚಿತಪಟ್ಟಿದೆ. ಹೀಗೆ ಬೆರಣಿ, ಸೌದೆ ಮೊದಲಾದ ಇಂಧನಗಳಿಂದ ಹೊಗೆ ಬಂದು ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದೇ ಹೊಗೆ ರಹಿತ ಅಡುಗೆಗಾಗಿ ಸಿಲಿಂಡರ್‌ ನೀಡಲಾಗಿತ್ತು. ಸಂಪರ್ಕ ಉಚಿತವಾದರೂ ಅನಂತರ ಅನಿಲ ಮರುಪೂರಣಕ್ಕೆ ಹಣ ನೀಡಬೇಕಾದುದು ಕೂಡಾ ಕಡಿಮೆ ಬಳಕೆಗೆ ಕಾರಣ ಆಗಿದೆ ಎನ್ನಲಾಗಿದೆ.

ಕಡಿಮೆ ತೂಕ
14.2 ಕೆ.ಜಿ. ತೂಕದ ಸಿಲಿಂಡರ್‌ಗೆ ಸಬ್ಸಿಡಿ ಹೊರತಾಗಿ 546.2 ರೂ. ಆಗುತ್ತದೆ. ಇದು ಗ್ರಾಮೀಣ ಭಾಗದ ಬಡವರಿಗೆ ಹೊರೆಯಾಗಬಾರದು ಎಂದು ಸರಕಾರ 5 ಕೆ.ಜಿ.ಯ ಸಿಲಿಂಡರ್‌ನ್ನು ಕೂಡಾ ಪರಿಚಯಿಸಿದೆ. ಹಣಕಾಸಿನ ಕೊರತೆಯಾಗದಂತೆ 260 ರೂ.ಗೆ ಈ ಸಿಲಿಂಡರ್‌ ಲಭ್ಯವಾಗುತ್ತಿದೆ. ಆದರೆ ರಾಜ್ಯದಲ್ಲಿ ವಿವಿಧ ತೈಲ ಕಂಪೆನಿಗಳು ಈ ವರ್ಷ 1.24 ಲಕ್ಷ ಸಿಲಿಂಡರ್‌ಗಳನ್ನಷ್ಟೇ ಮಾರಾಟ ಮಾಡಿವೆ. ಗ್ರಾಮಾಂತರದಲ್ಲಿ ಬೆಳಗ್ಗೆಯೇ ಇಡೀ ದಿನದ ಅಡುಗೆ ತಯಾರಿಸುವ ಕಾರಣದಿಂದಲೂ ಬಳಕೆ ಕಡಿಮೆ ಪ್ರಮಾಣದಲ್ಲಿ ಇದೆ ಎನ್ನುತ್ತಾರೆ ಏಜೆನ್ಸಿಯವರು.

ಅರ್ಜಿ ನೀಡಿದವರಿಗೆಲ್ಲಾ ಸಂಪರ್ಕ ನೀಡಲಾಗಿದ್ದರೂ ಸಿಲಿಂಡರ್‌ ಬಳಕೆ ಪ್ರಮಾಣ ಕಡಿಮೆ ಇದೆ. ಗ್ರಾಮೀಣ ಭಾಗದಲ್ಲಿ ಇನ್ನೂ ಅಡುಗೆ, ಇನ್ನಿತರ ಬಳಕೆಗಾಗಿ ಉರುವಲನ್ನೇ ಹೆಚ್ಚಾಗಿ ಆಶ್ರಯಿಸಿದ್ದಾರೆ. ಹೀಗೆ ಬೆರಣಿ, ಸೌದೆ ಮೊದಲಾದ ಇಂಧನಗಳಿಂದ ಹೊಗೆ ಬಂದು ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದೇ ಹೊಗೆ ರಹಿತ ಅಡುಗೆಗಾಗಿ ಸಿಲಿಂಡರ್‌ ನೀಡಲಾಗಿತ್ತು. ಸಂಪರ್ಕ ಉಚಿತವಾದರೂ ಅನಂತರ ಅನಿಲ ಮರುಪೂರಣಕ್ಕೆ ಹಣ ನೀಡಬೇಕಾದುದು ಕೂಡಾ ಕಡಿಮೆ ಬಳಕೆಗೆ ಕಾರಣ ಆಗಿದೆ ಎನ್ನಬಹುದು.

ಲೇಖಪಾಲರ ವರದಿ
ಸಿಲಿಂಡರ್‌ ವಿತರಣೆಯಲ್ಲಿ ದೋಷ ಕಂಡುಬಂದಿದೆ ಎಂದು ಮಹಾಲೇಖಪಾಲರ ವರದಿ (ಸಿಎಜಿ) ತಿಳಿಸಿದೆ. 2016-2018ರ ಅವಧಿಯಲ್ಲಿ 2.61 ಲಕ್ಷ ಫಲಾನುಭವಿಗಳು ಒಂದೇ ದಿನದಲ್ಲಿ 2ರಿಂದ 20 ಸಿಲಿಂಡರ್‌ಗಳನ್ನು ಖರೀದಿಸಿದ ನಿದರ್ಶನ ಉಲ್ಲೇಖೀಸಲಾಗಿದೆ. ಈ ಯೋಜನೆಯಡಿ ಒಂದು ವರ್ಷ ಪೂರೈಸಿರುವ ಗ್ರಾಹಕರ ಪೈಕಿ ಶೇ. 17.61ರಷ್ಟು ಮಂದಿ ಎರಡನೇ ಸಿಲಿಂಡರ್‌ ಪಡೆದಿಲ್ಲ. ಶೇ. 33ರಷ್ಟು ಫಲಾನುಭವಿಗಳು ಎರಡೂವರೆ ವರ್ಷಗಳಲ್ಲಿ 1ರಿಂದ 3 ಸಿಲಿಂಡರ್‌ ಮಾತ್ರ ಬಳಕೆ ಮಾಡಿದ್ದಾರೆ. 5 ಕೆ.ಜಿ. ತೂಕದ ಸಿಲಿಂಡರ್‌ ವಿತರಣೆಯೂ ಅಸಮರ್ಪಕವಾಗಿದೆ. 225 ಎಲ್‌ಪಿಜಿ ಸಂಪರ್ಕಗಳು ಅಪ್ರಾಪ್ತ ವಯಸ್ಸಿನವರ ಪಾಲಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಂಪರ್ಕ ನೀಡಲಾಗಿದೆ
ಅರ್ಜಿ ನೀಡಿದವರಿಗೆಲ್ಲಾ ಸಂಪರ್ಕ ನೀಡಲಾಗಿದೆ. ಯಾವುದೇ ಅರ್ಜಿಗಳು ವಿಲೇವಾರಿಗೆ ಬಾಕಿ ಇಲ್ಲ. ಸಂಪರ್ಕ ನೀಡಿದ ಬಳಿಕ ಗ್ರಾಹಕರು ಸಂಬಂಧಪಟ್ಟ ಏಜೆನ್ಸಿಗಳ ಜತೆಗೆ ವ್ಯವಹಾರ ನಡೆಸುತ್ತಾರೆ.
-ಪ್ರಕಾಶ್‌ ದೇವಾಡಿಗ, ಆಹಾರ ಉಪನಿರೀಕ್ಷಕರು ಕುಂದಾಪುರ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next