Advertisement

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕೈ-ಕಮಲ ನಿಕಟ ಸಮರ

06:00 AM Sep 04, 2018 | |

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ “ರಂಗ ತಾಲೀಮು’ ಎಂದು ಪರಿಗಣಿಸಲಾಗಿದ್ದ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪಾಲಿಗೆ ಮೈತ್ರಿ ಧರ್ಮ ಪಾಲನೆಯ “ಅಗ್ನಿ ಪರೀಕ್ಷೆ’ ಆಗಿದ್ದ 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫ‌ಲಿತಾಂಶ ಹೊರಬಿದ್ದಿದ್ದು ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ನಿಕಟ ಪೈಪೋಟಿ ನೀಡಿದೆ. ಜೆಡಿಎಸ್‌ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ.

Advertisement

ರಾಜ್ಯದ 22 ಜಿಲ್ಲೆಗಳಲ್ಲಿ ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆಗಳು ಸೇರಿ 29 ನಗರಸಭೆ, 53 ಪುರಸಭೆ ಹಾಗೂ 20 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳ 2,662 ವಾರ್ಡ್‌ಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು 982, ಬಿಜೆಪಿ 929, ಜೆಡಿಎಸ್‌ 375, ಬಿಎಸ್‌ಪಿ 13, ಪಕ್ಷೇತರರು 329 ಹಾಗೂ ಇತರರು 34 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ.

ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸದ್ಯದ ಚಿತ್ರಣದಂತೆ ಬಿಜೆಪಿ 27, ಕಾಂಗ್ರೆಸ್‌ 31, ಜೆಡಿಎಸ್‌ 12 ಕಡೆ ನೇರ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, 30 ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳು ಪಕ್ಷೇತರರ ಪಾಲಾಗಿವೆ. ಈ ಆಧಾರದಲ್ಲಿ 43 ಕಡೆ ಮೈತ್ರಿ ಸರ್ಕಾರ ಅಧಿಕಾರ ದಕ್ಕಿಸಿಕೊಳ್ಳಲಿದ್ದು, 30 ಅತಂತ್ರ ಸ್ಥಳೀಯ ಸಂಸ್ಥೆಗಳ ಪೈಕಿ ಯಾರಿಗೆ ಎಷ್ಟು ದಕ್ಕಲಿದೆ ಎಂದು ಕಾದು ನೋಡಬೇಕಿದೆ.

ಮೂರು ಮಹಾನಗರ ಪಾಲಿಕೆಗಳ ಪೈಕಿ ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಹೋಗಿದ್ದು, ಮೈಸೂರು ಹಾಗೂ ತುಮಕೂರು ಮಹಾನಗರ ಪಾಲಿಕೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ನಗರಸಭೆಯಲ್ಲಿ ಬಿಜೆಪಿ, ಪುರಸಭೆಯಲ್ಲಿ ಕೈ ಮುಂದೆ:
ಅದೇ ರೀತಿ 29 ನಗರಸಭೆಗಳ ಪೈಕಿ 9 ಕಡೆ ಬಿಜೆಪಿ, 5 ಕಡೆ ಕಾಂಗ್ರೆಸ್‌, 2 ಕಡೆ ಜೆಡಿಎಸ್‌ ನಿಚ್ಚಳ ಸಂಖ್ಯಾಬಲ ಹೊಂದಿದ್ದು, 12 ಕಡೆ ಅತಂತ್ರ ಸ್ಥಿತಿ ಇದೆ. 2 ಕಡೆ ಪಕ್ಷೇತರರು ಅಧಿಕಾರ ಹಿಡಿಯಲಿದ್ದಾರೆ. 53 ಪುರಸಭೆಗಳ ಪೈಕಿ 10ರಲ್ಲಿ ಬಿಜೆಪಿ, 19ರಲ್ಲಿ ಕಾಂಗ್ರೆಸ್‌, 8ರಲ್ಲಿ ಜೆಡಿಎಸ್‌ ನೇರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ. 14 ಕಡೆ ಅತಂತ್ರ ಸ್ಥಿತಿ ಇದ್ದು,  2 ಕಡೆ ಪಕ್ಷೇತರರು ಆಡಳಿತ ನಡೆಸಲಿದ್ದಾರೆ. 20 ಪಟ್ಟಣ ಪಂಚಾಯಿತಿಗಳಲ್ಲಿ ತಲಾ 7ರಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಾಲಾಗಿದ್ದರೆ, 2 ಜೆಡಿಎಸ್‌ ಪಾಲಾಗಿವೆ. 3 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, 1 ಕಡೆ ಪಕ್ಷೇತರದ್ದೆ ಆಡಳಿತ.

Advertisement

30 ಮಂದಿ ಅವಿರೋಧ ಆಯ್ಕೆ
ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ನ 9, ಬಿಜೆಪಿಯ 3, ಜೆಡಿಎಸ್‌ನ 1, ಬಿಎಸ್‌ಪಿ 1 ಮತ್ತು 16 ಮಂದಿ ಪಕ್ಷೇತರರು ಸೇರಿ ಒಟ್ಟು 30 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ ಪಟ್ಟಣ ಪಂಚಾಯಿತಿಗಳ ಚುನಾವಣೆ ತಡೆ ಹಿಡಿಯಲಾಗಿದೆ. ಕಲಬುರಗಿ ಜಿಲ್ಲೆಯ ಅಫ‌ಜಲಪುರ ಪುರಸಭೆಯ ವಾರ್ಡ್‌ ಸಂಖ್ಯೆ 19ರಲ್ಲಿ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿರುವುದರಿಂದ ಈ ವಾರ್ಡ್‌ನಲ್ಲಿ ಚುನಾವಣೆ ನಡೆಯುತ್ತಿಲ್ಲ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರ ಸಭೆಯ ವಾರ್ಡ್‌ ಸಂಖ್ಯೆ 9ರಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ ಅಭ್ಯರ್ಥಿ ಸಿ.ಎಸ್‌. ರಮೇಶ್‌ ಮೃತಪಟ್ಟಿದ್ದರಿಂದ ಈ ವಾರ್ಡ್‌ನಲ್ಲಿ ಚುನಾವಣೆ ಸ್ಥಗಿತಗೊಳಿಸಲಾಗಿತ್ತು.

ಬೆಳಗಾವಿ “ಸಿಂಡಿಕೇಟ್‌ ಪಾಲಿಟಿಕ್ಸ್‌’:
ಸ್ಥಳೀಯ ಸಂಸ್ಥೆಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ “ಸಿಂಡಿಕೇಟ್‌ ಪಾಲಿಟಿಕ್ಸ್‌’ ಮೇಲುಗೈ ಸಾಧಿಸಿದೆ. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಸೇರಿ 14 ನಗರ ಸ್ಥಳೀಯ ಸಂಸ್ಥೆಗಳ 343 ಸೀಟುಗಳಲ್ಲಿ ಅತಿ ಹೆಚ್ಚು 144 ಮಂದಿ ಪಕ್ಷೇತರರು ಗೆದ್ದಿದ್ದಾರೆ. ಸಚಿವ ರಮೇಶ್‌ ಜಾರಕಿಹೊಳಿ ಸ್ವಕ್ಷೇತ್ರ ಗೋಕಾಕ್‌ದಲ್ಲಿ 31 ಸ್ಥಾನಗಳ ಪೈಕಿ 30 ಮಂದಿ ಪಕ್ಷೇತರರು ಗೆದ್ದಿದ್ದಾರೆ. ನಿಪ್ಪಾಣಿಯಲ್ಲಿ 31 ವಾರ್ಡ್‌ಗಳ ಪೈಕಿ 18 ಪಕ್ಷೇತರರು, ಕಾಂಗ್ರೆಸ್‌ ಸಂಸದ ಪ್ರಕಾಶ್‌ ಹುಕ್ಕೇರಿ ಪ್ರತಿನಿಧಿಸುತ್ತಿದ್ದ ಹಾಗೂ ಸದ್ಯ ಅವರ ಪುತ್ರ ಗಣೇಶ್‌ ಹುಕ್ಕೇರಿ ಪ್ರತಿನಿಧಿಸುತ್ತಿರುವ ಚಿಕ್ಕೋಡಿ ಪುರಸಭೆಯ ಎಲ್ಲ 23 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬ್ಯಾಳ್‌ಕರ್‌ ಅವರ ಕ್ಷೇತ್ರವಾದ ಖಾನಾಪುರದಲ್ಲಿ ಎಲ್ಲ 20 ವಾರ್ಡ್‌ಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಕಣ್ಣೂರು ಪುರಸಭೆಯ ಎಲ್ಲ 23 ವಾರ್ಡ್‌ಗಳಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ.

105 ಸ್ಥಳೀಯ ಸಂಸ್ಥೆಗಳು
ಒಟ್ಟು ಸ್ಥಾನಗಳು: 2,662
ಬಿಜೆಪಿ-929
ಕಾಂಗ್ರೆಸ್‌-982
ಜೆಡಿಎಸ್‌-375
ಬಿಎಸ್‌ಪಿ-13
ಪಕ್ಷೇತರರು-329
ಇತರರು-34

3 ಮಹಾನಗರ ಪಾಲಿಕೆಗಳು
ಒಟ್ಟು ಸ್ಥಾನಗಳು-135
ಬಿಜೆಪಿ-54
ಕಾಂಗ್ರೆಸ್‌-36
ಜೆಡಿಎಸ್‌-30
ಬಿಎಸ್‌ಪಿ-1
ಪಕ್ಷೇತರರು-14
ಇತರರು-0

29 ನಗರಸಭೆ
ಒಟ್ಟು ಸ್ಥಾನಗಳು-926
ಬಿಜೆಪಿ-370
ಕಾಂಗ್ರೆಸ್‌-294
ಜೆಡಿಎಸ್‌-106
ಬಿಎಸ್‌ಪಿ-10
ಪಕ್ಷೇತರರು-123
ಇತರರು-23

53 ಪುರಸಭೆ
ಒಟ್ಟು ಸ್ಥಾನಗಳು-1,246
ಬಿಜೆಪಿ-375
ಕಾಂಗ್ರೆಸ್‌-514
ಜೆಡಿಎಸ್‌-210
ಬಿಎಸ್‌ಪಿ-2
ಪಕ್ಷೇತರರು-135
ಇತರರು-10

20 ಪಟ್ಟಣ ಪಂಚಾಯಿತಿಗಳು
ಒಟ್ಟು ಸ್ಥಾನಗಳು-355
ಬಿಜೆಪಿ-130
ಕಾಂಗ್ರೆಸ್‌-138
ಜೆಡಿಎಸ್‌-29
ಬಿಎಸ್‌ಪಿ-0
ಪಕ್ಷೇತರರು-57
ಇತರರು-1

ಬಿಜೆಪಿ ತೆಕ್ಕೆಗೆ
1 ಮಹಾನಗರಪಾಲಿಕೆ-ಶಿವಮೊಗ್ಗ
9 ನಗರಸಭೆ-ಬಾಗಲಕೋಟೆ, ಮುಧೋಳ, ಇಳಕಲ್‌, ರಬಕವಿ-ಬನಹಟ್ಟಿ, ಉಡುಪಿ, ಪುತ್ತೂರು, ಶಿರಸಿ, ಯಾದಗಿರಿ, ಸುರಪುರ
10 ಪುರಸಭೆ-ಮಹಾಲಿಂಗಪುರ, ರಾಮದುರ್ಗ, ಸವದತ್ತಿ, ಸದಲಗಾ, ಹೊಸದುರ್ಗ, ಗಜೇಂದ್ರಗಡ, ಸೇಡಂ, ಜೇವರ್ಗಿ, ಕುಂದಾಪುರ, ಕುಮಟಾ.
7 ಪಟ್ಟಣ ಪಂಚಾಯಿತಿ-ಬೀಳಗಿ, ಹೊನ್ನಾಳ್ಳಿ, ಜಗಳೂರು, ನರೇಗಲ್‌, ಯಲಬುರ್ಗಾ, ಸಾಲಿಗ್ರಾಮ, ಮುಂಡಗೋಡ.

ಕಾಂಗ್ರೆಸ್‌ ತೆಕ್ಕೆಗೆ
5 ನಗರಸಭೆ- ಜಮಖಂಡಿ, ಚಳ್ಳಕೆರೆ, ಶಾಹಬಾದ, ಸಿಂಧನೂರು, ದಾಂಡೇಲಿ
19 ಪುರಸಭೆ-ಬಾದಾಮಿ, ಹುನಗುಂದ, ಗುಳೆದಗುಡ್ಡ, ಬೈಲಹೊಂಗಲ, ಹುಕ್ಕೇರಿ, ಕುಡುಚಿ, ಹಳ್ಳಿಖೇಡ, ಚಿಂಚೋಳಿ, ರೋಣ, ಹಾನಗಲ್‌, ಸವಣೂರು, ಚಿತ್ತಾಪುರ, ಅಫ‌ಜಲಪುರ, ಕುಷ್ಟಗಿ, ಲಿಂಗಸುಗೂರು, ಮುದಗಲ್‌, ಮಧುಗಿರಿ, ಹಳಿಯಾಳ, ಗುರುಮಿಠಕಲ್‌.

7 ಪಟ್ಟಣ ಪಂಚಾಯಿತಿ-ಕುಡತಿನಿ, ರಾಯಬಾಗ, ಮುಳಗುಂದ, ಶಿರಹಟ್ಟಿ, ಬೆಳ್ಳೂರು, ಹಟ್ಟಿ, ಯಲ್ಲಾಪುರ.

ಜೆಡಿಎಸ್‌ ತೆಕ್ಕೆಗೆ
2 ನಗರಸಭೆ- ಅರಸೀಕೆರೆ, ಮಂಡ್ಯ
8 ಪುರಸಭೆ-ಚನ್ನರಾಯಪಟ್ಟಣ, ಸಕಲೇಶಪುರ, ಹೊಳೇನರಸೀಪುರ, ಮದ್ದೂರು, ಪಾಂಡವಪುರ, ನಾಗಮಂಗಲ, ಪಿರಿಯಾಪಟ್ಟಣ, ಚಿಕ್ಕನಾಯಕನಹಳ್ಳಿ,
2 ಪಟ್ಟಣ ಪಂಚಾಯಿತಿ-ಗುಬ್ಬಿ, ಕೊರಟಗೆರೆ

ಪಕ್ಷೇತರರ ತೆಕ್ಕೆಗೆ
2 ನಗರಸಭೆ- . ಗೋಕಾಕ್‌, ನಿಪ್ಪಾಣಿ.
2 ಪುರಸಭೆ- ಚಿಕ್ಕೋಡಿ, ಕೊಣ್ಣೂರು
1 ಪಟ್ಟಣ ಪಂಚಾಯಿತಿ-ಖಾನಾಪುರ.

ಅತಂತ್ರ
2 ಮಹಾನಗರ ಪಾಲಿಕೆ- ಮೈಸೂರು, ತುಮಕೂರು.
11 ನಗರಸಭೆ-ಚಿತ್ರದುರ್ಗ, ಚಾಮರಾಜನಗರ, ಕೊಳ್ಳೆಗಾಲ, ಉಲ್ಲಾಳ, ಹಾಸನ, ಹಾವೇರಿ, ರಾಣೆಬೆನ್ನೂರು, ಕೊಪ್ಪಳ, ಗಂಗಾವತಿ, ರಾಯಚೂರು, ಕಾರವಾರ,
14 ಪುರಸಭೆ-ಸಂಕೇಶ್ವರ, ತೆರದಾಳ, ಮೂಡಲಗಿ, ಬಂಟ್ವಾಳ, ಚನ್ನಗಿರಿ, ಲಕ್ಷ್ಮೇಶ್ವರ, ಆಳಂದ, ಟಿ. ನರಸೀಪುರ, ಎಚ್‌.ಡಿ. ಕೋಟೆ, ದೇವದುರ್ಗ, ಮಾನ್ವಿ, ಕಾರ್ಕಳ, ಅಂಕೋಲಾ, ಮುದ್ದೇಬಿಹಾಳ.
3 ಪಟ್ಟಣ ಪಂಚಾಯಿತಿ-ಕೇರೂರು, ಕೊಟ್ಟೂರು, ಹಿರೆಕೇರೂರು.

Advertisement

Udayavani is now on Telegram. Click here to join our channel and stay updated with the latest news.

Next