Advertisement

ನಗರ ಸ್ಥಳೀಯ ಸಂಸ್ಥೆಗಳ ಸುಸ್ಥಿರ ಅಭಿವೃದ್ಧಿ ಅಗತ್ಯ

06:35 AM Oct 05, 2018 | Team Udayavani |

ಬೆಂಗಳೂರು: ನಗರಗಳ ಕ್ಷಿಪ್ರ ಅಭಿವೃದ್ಧಿ ಮತ್ತು ಜನಸಂಖ್ಯೆಯ ಗಣನೀಯ ಏರಿಕೆಯಾಗುತ್ತಿರುವುದರಿಂದ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಸುಸ್ಥಿರ ಅಭಿವೃದ್ಧಿ ಅಗತ್ಯಗತ್ಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

Advertisement

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾಸಂಸ್ಥೆ(ಫಿಕ್ಕಿ) ಹಾಗೂ ತೈವಾನ್‌ ವರ್ಲ್ಡ್ ಟ್ರೇಡ್‌ ಸೆಂಟರ್‌ ವತಿಯಿಂದ ಗುರುವಾರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ಮಾರ್ಟ್‌ ಏಷ್ಯಾ ಇಂಡಿಯಾ ಎಕ್ಸ್‌ಪೋ ಮತ್ತು ಸಮ್ಮಿಟ್‌-2018 ಉದ್ಘಾಟಿಸಿ ಮಾತನಾಡಿದ ಅವರು, ನಗರಗಳ ಸಮಗ್ರ ಅಭಿವೃದ್ಧಿಗೆ ಇದು ಸಕಾಲವಾಗಿದೆ. ನಗರ ಸ್ಥಳೀಯ ಸಂಸ್ಥೆಗಳನ್ನು ವೃದ್ಧಿಸಲು ಬೇಕಾದ ಕಾರ್ಯ ಯೋಜನೆ ಸಿದ್ಧವಾಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಒದಗಿಸಬೇಕು ಎಂದು ಹೇಳಿದರು.

ಸಂಚಾರ ದಟ್ಟಣೆ ಸಮಸ್ಯೆ, ನೀರಿನ ಅಲಭ್ಯತೆ, ಘನತ್ಯಾಜ್ಯ ನಿರ್ವಹಣೆ, ನೀರಿನ ಮೂಲಗಳ ಸಂರಕ್ಷಣೆ, ಪರಿಸರ ಸಮಾತೋಲನ ಕಾಪಾಡಿಕೊಳ್ಳುವುದು, ಬೀದಿದೀಪಗಳ ನಿರ್ವಹಣೆ, ರಸ್ತೆಗಳ ರಕ್ಷಣೆ ಹಾಗೂ ಜನರ ಭದ್ರತೆ ಮೊದಲಾದ ಅಂಶಗಳು ನಗರಕ್ಕೆ ಸವಾಲಿದೆ. ಇದಕ್ಕೆಲ್ಲ ತುರ್ತು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.  ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ಕಾರ್ಯ ಯೋಜನೆ ನಗರದ ಸವಾಲು ಎದುರಿಸಲು ಪೂರಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಸುಸ್ಥಿರ ಅಭಿವೃದ್ಧಿ ಸರ್ಕಾರ ಬದ್ಧವಾಗಿದೆ. ರಾಜ್ಯದ ಏಳು ಸ್ಮಾರ್ಟ್‌ ಸಿಟಿಗಳ ಅಭಿವೃದ್ಧಿಗೆ ಈ ಎಕ್ಸ್‌ಪೋ ಸಾಕಷ್ಟು ಅನುಕೂಲವಾಗಲಿದೆ. ರಾಜ್ಯದ ಅಭಿವೃದ್ಧಿಗಾಗಿ ತೈವಾನ್‌ ಜತೆ ಉತ್ತಮ ಸಂಬಂಧ ಹೊಂದಲಿದ್ದೇವೆ ಹಾಗೂ ಅವರಿಗೆ ಬೇಕಾದ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಿದ್ದೇವೆ ಎಂಬ ಭರವಸೆ ನೀಡಿದರು.

ತೈವಾನ್‌ ವಲ್ಡ್‌ ಟ್ರೇಡ್‌ ಸೆಂಟರ್‌ ಅಧ್ಯಕ್ಷ ಜೇಮ್ಸ… ಸಿ.ಎಫ್ ಹುವಾಂಗ್‌ ಮಾತನಾಡಿ, ವಿಶ್ವದ ಅರ್ಧದಷ್ಟು ಜನಸಂಖ್ಯ ನಗರ ಪ್ರದೇಶದಲ್ಲಿದೆ. ಮುಂದಿನ ಕೆಲವು ವರ್ಷದಲ್ಲಿ ಜನಸಂಖ್ಯೆ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಘನತ್ಯಾಜ್ಯ ನಿರ್ವಹಣೆ, ನೀರು, ವಸತಿ ಇತ್ಯಾದಿ ಸಮಸ್ಯೆಯಾಗಲಿದೆ. ಇದಕ್ಕೆಲ್ಲ ತಂತ್ರಜ್ಞಾನ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

Advertisement

ರಾಜ್ಯ ಸ್ಮಾರ್ಟ್‌ಸಿಟಿ ಮಿಷನ್‌ ನಿರ್ದೇಶಕ ಎ.ಬಿ. ಇಬ್ರಾಹಿಂ ಮಾತನಾಡಿ, ಕೆಲವು ದೇಶದಲ್ಲಿ ನಗರಗಳು ಸ್ವತ್ಛ ಹಾಗೂ ವ್ಯವಸ್ಥಿತವಾಗಿದೆ. ಕಾರಣ, ಅಲ್ಲಿನ ಆಡಳಿತ ವ್ಯವಸ್ಥೆ, ಯೋಜನೆ ರೂಪಿಸುವ ವಿಧಾನ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಚೆನ್ನಾಗಿರುತ್ತದೆ. ನಮ್ಮಲ್ಲೂ ಸರ್ಕಾರದ ಆಡಳಿತಯಂತ್ರ, ಸಾರ್ವಜನಿಕರು ಹಾಗೂ ಹೂಡಿಕೆದಾರರು ಒಟ್ಟಾದಾಗ ನಗರದ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯ. ಇದಕ್ಕೆ ಪೂರಕವಾಗಿ ಸರ್ಕಾರಗಳು ಉತ್ತಮ ಯೋಜನೆ ಸಿದ್ಧಪಡಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಬೆಂಗಳೂರು ಸಹಿತವಾಗಿ ಏಳು ನಗರ ಸ್ಮಾರ್ಟ್‌ಸಿಟಿಗೆ ಆಯ್ದುಕೊಳ್ಳಲಾಗಿದೆ. ಬೆಂಗಳೂರು ಈಗಾಗಲೆ ಸ್ಮಾರ್ಟ್‌ ಆಗಿದೆ. ಐಟಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಇದೇ ರೀತಿಯ ಸಾಧನೆ ಎಲ್ಲ ಕ್ಷೇತ್ರದಲ್ಲೂ ಆಗಬೇಕು. ತುಮಕೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವ ನಗರಗಳಲ್ಲಿ ಬಿಜಿನೆಸ್‌ ಅವಕಾಶಗಳು ಹೆಚ್ಚಿವೆ. ವಿದೇಶಿ ಹೂಡಿಕೆಯ ಜತೆಗೆ ದೇಶದೊಳಗಿನ ಹೂಡಿಕೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಈ ಬಗ್ಗೆ ಫಿಕ್ಕಿ ವಿಶೇಷ ಗಮನ ಹರಿಸುವಂತಾಗಬೇಕು ಎಂದರು.

ಸ್ಮಾರ್ಟ್‌ ಸಿಟಿಯ ಅನುಷ್ಠಾನ ಹಾಗೂ ಹೆಚ್ಚಿನ ಉದ್ಯೋಗಾವಕಾಶಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಪಾಲುದಾರರು(ಸ್ಟೇಕ್‌ಹೋಲ್ಡರ್) ಜತೆ ಮಾತುಕತೆ ಆರಂಭಿಸಿದೆ. ಇಂಧನ ಕ್ಷೇತ್ರದ ಹೂಡಿಕೆಗೆ ವಿಶೇಷ ಆದ್ಯತೆ ನೀಡುತ್ತಿದ್ದೇವೆ. ಸೌರಶಕ್ತಿಯ ಸದ್ಭಳಕೆ ಹೆಚ್ಚಾಗಬೇಕು. ಸ್ಮಾರ್ಟ್‌ಸಿಟಿಗಳ ನಿರ್ವಹಣೆ ಬೆಂಗಳೂರಿನಿಂದಲೇ ಆಗುತ್ತದೆ. ಸ್ಮಾರ್ಟ್‌ಸಿಟಿ ಸಂಬಂಧಿಸಿದಂತೆ ಯಾವುದೇ ಸಂಸ್ಥೆಗಳಿಂದ ಪ್ರಸ್ತಾವನೆ ಬಂದರೂ ಮೂರು ತಿಂಗಳೊಳಗೆ ಅದನ್ನು ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಫಿಕ್ಕಿ ಅಧ್ಯಕ್ಷ ಶೇಖರ್‌ ವಿಶ್ವನಾಥನ್‌, ಬೆಂಗಳೂರು ವಲ್ಡ್‌ ಟ್ರೇಡ್‌ಸೆಂಟರ್‌ ಅಧ್ಯಕ್ಷ ಬಲರಾಮ್‌ ಮೆನನ್‌ ಉಪಸ್ಥಿತರಿದ್ದರು..

ಮೇಳದಲ್ಲಿ ತೈವಾನ್‌ ಹಲವು ಬ್ರ್ಯಾಂಡ್‌ಗಳು, ಸ್ಮಾರ್ಟ್‌ಸಿಟಿ, ಸ್ಮಾರ್ಟ್‌ ಸಾರಿಗೆ, ಸ್ಮಾರ್ಟ್‌ ಎನರ್ಜಿ, ಸ್ಮಾರ್ಟ್‌ ಹೆಲ್ತ್‌ಕೇರ್‌, ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಸ್ಮಾರ್ಟ್‌-ಲೈಫ್ ಸಾಧನಗಳ ಉದ್ಯಮ ಇದ್ದವು. ತೈವಾನ್‌ ಎಕ್ಸ್‌ಲೆನ್ಸ್‌ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು. ಹೈಎಂಡ್‌ ಫೋನ್‌ ಸೇರಿ ಹಲವು ಆಧುನಿಕ ಪರಿಕರಗಳಾದ ಲ್ಯಾಪ್‌ಟಾಪ್‌, ಸ್ಕ್ಯಾನರ್‌, ಹಾರ್ಡ್‌ಡಿಸ್ಕ್, ಸ್ಮಾರ್ಟ್‌ ಹೆಲ್ತ್‌ಕೇರ್‌ ಉತ್ಪನ್ನಗಳು, ಗೋಡೆ ಅಲಂಕಾರಕ ವಸ್ತುಗಳು, ರೀಡಿಂಗ್‌ ದೀಪ ಸೇರಿದಂತೆ ಆಸಸ್‌, ಏಸರ್‌, ಎಂಎಸ್‌ಐ, ಎಐಎಫ್ಎ, ಸೈಬರ್‌ ಪವರ್‌, ಅಡಾಟಾ, ಪುÉಸ್ಟೆಕ್‌, ಟ್ರಾನ್ಸೆಂಡ್‌, ಟೊಕುಯೊ, ಫೇಕಾ, ಡಿಲಿಂಕ್‌, ಒಫ್ರಾ9, ಬೆನ್‌ಕ್ಯೂ ತೈವಾನ್‌ ಎಕ್ಸಲೆನ್ಸ್‌ ಭಾಗವಾಗಿತ್ತು.

ಕರ್ನಾಟಕ ನಗರ ಅಭಿವೃದ್ಧಿ ನಿಗಮ, ಕೇಂದ್ರದ ತೆಂಗಿನ ನಾರಿನ ಮಂಡಳಿ, ಟಾಟಾ ಗ್ರೂಪ್‌, ಲೋಧಾ ಗ್ರೂಪ್‌, ನಾಶಿಕ್‌ ಇಂಜಿನಿಯರಿಂಗ್‌ ಕೈಗಾರಿಕಾ ಕ್ಲಸ್ಟರ್‌ ಸೇರಿ 50 ಪ್ರದರ್ಶಕರಿಂದ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಎಲೆಕ್ಟ್ರಾನಿಕ್ಸ್‌  ವಸ್ತುಗಳ ಪ್ರದರ್ಶನ ಇದಾಗಿದೆ. ಆ.6ರ ತನಕ ಪ್ರದರ್ಶನ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next