Advertisement

ಯದ್ವಾತದ್ವಾ ಚಲಿಸಿದ ಜೀಪ್‌: ಮಹಿಳೆ, ಮಗು ಪವಾಡ ಸದೃಶ ಪಾರು

01:00 AM Feb 11, 2019 | Harsha Rao |

ಉಪ್ಪಿನಂಗಡಿ: ನಿಲ್ಲಿಸಿದ್ದ ಜೀಪನ್ನು ಹೊಟೇಲ್‌ ಕಾರ್ಮಿಕನೋರ್ವ ಚಲಾಯಿಸಿ ಅವಘಡಕ್ಕೀಡಾಗಿಸಿದ ಘಟನೆ ರವಿವಾರ ಸಂಜೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ. ಜೀಪಿನಡಿಗೆ ಸಿಲುಕಿದ ಮಹಿಳೆ ಹಾಗೂ ಮಗು ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ್ಯವಾಗಿ ಪಾರಾಗಿದ್ದಾರೆ.

Advertisement

ಪಾರಾಗಿರುವ ಉರುವಾಲು ಗ್ರಾಮದ ಚಂದ್ರಲತಾ ಅವರ ತಲೆಗೆ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಅವರ ಎರಡೂವರೆ ವರ್ಷದ ಪುತ್ರ ರಿತೇಜ್‌ಗೆ ತರಚು ಗಾಯಗಳಾಗಿವೆ.

ಘಟನೆಯ ವಿವರ
ಹಿರೇಬಂಡಾಡಿಯ ಜಗದೀಶ್‌ ಅವರು ಜೀಪಿನಲ್ಲಿ ಟಿಫಿನ್‌ಹಾಲ್‌ ಹೊಟೇಲ್‌ಗೆ ಕಟ್ಟಿಗೆ ತಂದಿದ್ದರು. ಕಟ್ಟಿಗೆ ಖಾಲಿ ಮಾಡಲೆಂದು ಜೀಪನ್ನು ಅಡುಗೆ ಕೋಣೆ ಸಮೀಪ ನಿಲ್ಲಿಸಿ ಇವರು ಚಾ ಕುಡಿಯಲೆಂದು ಹೊಟೇಲಿನ ಒಳಗೆ ತೆರಳಿದ್ದರು. ಆಗ ಕೀಯನ್ನು ಜೀಪಲ್ಲೇ ಬಿಟ್ಟು ಹೋಗಿದ್ದರು. 

ಕಟ್ಟಿಗೆ ಖಾಲಿ ಮಾಡಿದ ಮೇಲೆ  ಕಾರ್ಮಿಕ ಶಂಕರ ಜೀಪನ್ನು ಸ್ಟಾರ್ಟ್‌ ಮಾಡಿದರು. ಅದು ಅತಿ ವೇಗದಲ್ಲಿ ಮುನ್ನುಗ್ಗಿ ಹೊಟೇಲ್‌ ಎದುರು ನಿಲ್ಲಿಸಿದ್ದ ಬೈಕಿಗೆ ಗುದ್ದಿತು. ಮತ್ತೂ ಮುಂದುವರಿದು ಮೆಡಿಕಲ್‌ ಶಾಪೊಂದರ ಎದುರು  ಮಗುವನ್ನು ಎತ್ತಿಕೊಂಡು ನಿಂತಿದ್ದ ಚಂದ್ರಲತಾ ಅವರಿಗೆ ಢಿಕ್ಕಿ ಹೊಡೆದಿದೆ. ಗುದ್ದಿದ ರಭಸದಲ್ಲಿ ಮಗು ದೂರಕ್ಕೆ ಎಸೆಯಲ್ಪಟ್ಟಿದ್ದು, ಚಂದ್ರಕಲಾ ಅವರ ಮೇಲೆ ಜೀಪು ಹಾದು ಹೋಗಿ ಎದುರಿದ್ದ ಸ್ಕೂಟಿಗೆ ಗುದ್ದಿತು.

ಅದನ್ನು ಮುಂದಕ್ಕೆ ಎಳೆದುಕೊಂಡು ಹೋಗಿ ಗೇಟಿನ  ಪಿಲ್ಲರ್‌ಗೆ ಗುದ್ದಿ,  ಹಿಂಬದಿ ಚಕ್ರ ಅಂಗಡಿ ಮಳಿಗೆಗಳ ಜಗಲಿ ಮೇಲೆ ಹತ್ತಿ ನಿಂತಿತ್ತು. ಬೈಕ್‌, ಸ್ಕೂಟಿ ನಜ್ಜುಗುಜ್ಜಾಗಿದ್ದು, ಗೇಟಿನ  ಪಿಲ್ಲರ್‌ ಮುಂಮುರಿದಿದೆ.  

Advertisement

ಇವೆಲ್ಲ ಕ್ಷಣ ಮಾತ್ರದಲ್ಲಿ ನಡೆದಿವೆ. ರವಿವಾರವಾದ್ದರಿಂದ ಜನ ಸಂದಣಿ ಕಡಿಮೆಯಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.

ಶನಿವಾರವೂ ಜೀಪು ಗುದ್ದಿತ್ತು !
ಶನಿವಾರ ಕೂಡ ಇದೇ ಹೊಟೇಲಿಗೆ ಸಾಮಾನು ತಂದಿದ್ದ ಜೀಪನ್ನು ಕಾರ್ಮಿಕನೋ ರ್ವ ಚಲಾಯಿಸಿ ರಸ್ತೆ ಬದಿಗೆ ಗುದ್ದಿದ್ದು, ಬಂಪರ್‌ಗೆ ಹಾನಿಯಾಗಿತ್ತು. ಇಷ್ಟಾದರೂ ಮುಂಜಾಗರೂಕತೆ ವಹಿಸಿದೆ ರವಿವಾರವೂ ಕೀಯನ್ನು ಜೀಪಲ್ಲೇ ಬಿಟ್ಟು ಹೋಗಿದ್ದ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next