Advertisement

Uppinangady ವೈದ್ಯರು ಕುಸಿದು ಬಿದ್ದ ಪ್ರಕರಣ: ವೈದ್ಯಾಧಿಕಾರಿ ಸಂಘದಿಂದ ಪೊಲೀಸರಿಗೆ ದೂರು

01:19 AM Aug 15, 2023 | Team Udayavani |

ಉಪ್ಪಿನಂಗಡಿ: ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಸರಣಿ ಪ್ರಶ್ನೆಗಳಿಂದ ಮಾನಸಿಕ ಒತ್ತಡಕ್ಕೊಳಗಾಗಿ ಕುಸಿದು ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆಗೆ ಸಂಬಂಧಿಸಿ ತಪ್ಪಿತಸ್ಥ ಗ್ರಾಮಸ್ಥ, ಗ್ರಾಮಸಭೆಯ ಚರ್ಚಾ ನಿಯಂತ್ರಣಾಧಿಕಾರಿ ಮತ್ತು ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ ದ.ಕ. ಜಿಲ್ಲಾ ಶಾಖೆಯು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ಸೋಮವಾರ ದೂರು ಸಲ್ಲಿಸಿದೆ.

Advertisement

ಗ್ರಾ.ಪಂ. ಅಧ್ಯಕ್ಷ ಜನಾರ್ದನ ಗೌಡ ಅಧ್ಯಕ್ಷತೆಯಲ್ಲಿ ಆ. 8ರಂದು ನಡೆದ ಗ್ರಾಮಸಭೆಯಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶಿಶಿರಾ ಇಲಾಖೆಯ ಮಾಹಿತಿ ನೀಡುತ್ತಿದ್ದಾಗ, ಡೀಕಯ್ಯ ಪೂಜಾರಿ ಹಾಗೂ ಗಣೇಶ್‌ ಅವರು ಕಳೆದ ಎಪ್ರಿಲ್‌ನಲ್ಲಿ ಗ್ರಾಮದ ಮಮತಾ ಎಂಬ ವಿದ್ಯಾರ್ಥಿನಿ ಚಿಕಿತ್ಸೆಗಾಗಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿದವರು ಅಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ವೈದ್ಯರೇ ಕಾರಣವೆನ್ನುವಂತೆ ಪದೇ ಪದೆ ಪ್ರಶ್ನೆಗಳನ್ನು ಹಾಕುತ್ತಾ 40 ನಿಮಿಷಗಳ ಕಾಲ ವೇದಿಕೆಯಲ್ಲಿ ನಿಲ್ಲಿಸಿ ಮಾನಸಿಕ ಒತ್ತಡ ಹಾಗೂ ಹಿಂಸೆಯನ್ನು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗರ್ಭಪಾತ; ತುರ್ತು ಚಿಕಿತ್ಸೆ
ಕುಸಿದು ಬಿದ್ದ ವೈದ್ಯೆಗೆ ಗರ್ಭಪಾತ ವಾಗಿ, ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಚಿಕಿತ್ಸೆ ಪಡೆಯು ತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ಆಪಾದಿಸಿರುವ ಸಂಘವು, ಗ್ರಾಮಸಭೆಯಲ್ಲಿ ಗ್ರಾಮಸ್ಥರು ಈ ರೀತಿ ಹಿಂಸೆ ನೀಡುತ್ತಿದ್ದಾಗ ಸಭೆಯ ಚರ್ಚಾ ನಿಯಂತ್ರಣಾ ಧಿಕಾರಿಯವರು, ಅಧ್ಯಕ್ಷ, ಉಪಾಧ್ಯ ಕ್ಷರು ಮಧ್ಯ ಪ್ರವೇಶಿಸದೆ ಕರ್ತವ್ಯ ಲೋಪವೆಸಗಿದ್ದಾರೆ. ಸರಕಾರಿ ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸುವ ಸಲುವಾಗಿ ಪ್ರಕರಣವನ್ನು ಅಗತ್ಯ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಇಲಾಖೆಗೆ ಸಲ್ಲಿಸಿದ ಲಿಖಿತ ದೂರಿನಲ್ಲಿ ಅಗ್ರಹಿಸಲಾಗಿದೆ.

ವೈದ್ಯರ ಸಂಘ ದ.ಕ. ಜಿಲ್ಲಾ ಶಾಖೆಯ ಅಧ್ಯಕ್ಷ ಡಾ| ದೀಪಕ್‌ ರೈ ನೇತೃತ್ವದಲ್ಲಿ ಪದಾಧಿಕಾರಿಗಳು ದೂರು ಸಲ್ಲಿಕೆಯ ವೇಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next