Advertisement

ಮೇಲ್ವರ್ಗಕ್ಕೆ ಮೀಸಲು ಚುನಾವಣಾ ಗಿಮಿಕ್‌

08:50 AM Jan 12, 2019 | |

ಹೂವಿನಹಡಗಲಿ: ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಾತಿ ಕಲ್ಪಿಸಲು ಮುಂದಾಗಿರುವುದು ಚುನಾವಣಾ ಗಿಮಿಕ್‌ ಆಗಿದೆ ಎಂದು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ್‌ನಾಯ್ಕ ಆರೋಪಿಸಿದರು.

Advertisement

ತಾಲೂಕಿನ ಹಿರೇಮಲ್ಲನಕೇರಿ ಗ್ರಾಮದಲ್ಲಿ ಶುಕ್ರವಾರ ಸಚಿವ ಪಿ.ಟಿ.ಪರಮೇಶ್ವರ್‌ನಾಯ್ಕ ಮತ್ತು ಸಂಸದ ವಿ.ಎಸ್‌.ಉಗ್ರಪ್ಪ ಅವರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಯಾವ ಭರವಸೆಗಳು ಈಡೇರಿಲ್ಲ. ಸರ್ಕಾರದ ಅವಧಿ 5 ವರ್ಷ ಪೂರೈಸುತ್ತಾ ಬಂದರೂ ನಿರುದ್ಯೋಗಿಗಳಿಗೆ ಯಾವ ಉದ್ಯೋಗ ಸೃಷ್ಟಿ ಮಾಡಲಿಲ್ಲ. ವಿದ್ಯಾವಂತ ಯುವಕರು ಉದ್ಯೋಗ ಕೇಳಿದರೆ ಪಕೋಡ ಮಾರಾಟ ಮಾಡಿ ಜೀವನ ಮಾಡಿ ಎಂದು ಹೇಳುವ ಮೂಲಕ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ. ದೇಶದ ಮಹಿಳೆಯರು, ಗ್ರಾಮೀಣ ಜನರು, ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ದೂರಿದರು.

ಸಂಸದ ವಿ.ಎಸ್‌.ಉಗ್ರಪ್ಪ ಮಾತನಾಡಿ, ದೇಶದಲ್ಲಿ ಈಗಾಗಲೇ 2019ರ ಚುನಾವಣೆಯ ಯುದ್ಧದ ಕಾರ್ಮೋಡಗಳು ಕವಿಯುತ್ತಿವೆ. 5 ರಾಜ್ಯಗಳಲ್ಲಿ ಈಗಾಗಲೇ ನಡೆದ ಚುನಾವಣೆಯಲ್ಲಿ ಜನತೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವಿರುದ್ಧವಾಗಿ ಸ್ಪಷ್ಟವಾದ ಸಂದೇಶ ನೀಡಿದ್ದಾರೆ. 2019 ರ ಚುನಾವಣೆ ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ, ದೇಶದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಬಿಜೆಪಿ ಮನೆಗೆ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಕೃಷಿಕರ ಸಮಸ್ಯೆಗಿಂತ ರಾಮ ಮಂದಿರ ಸಮಸ್ಯೆ ದೊಡ್ಡದಾಗಿ ಕಾಣುತ್ತದೆ. ದೇಶದಲ್ಲಿ ಸಮಾಜ ಒಡೆಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ರೈತರ ಸಾಲಮನ್ನಾ ಮಾಡಲು ಆಗದ ಮೋದಿಯವರಿಗೆ ಅಂಬಾನಿ ಹಾಗೂ ಇನ್ನಿತರೆ ಕಾರ್ಪೋರೇಟ್‌ಗಳ ಸಾಲಮನ್ನಾ ಮಾಡಲು ಹೇಗೆ ಸಾಧ್ಯವಾಯಿತು.? ದೇಶದ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಸ್ತುತ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಂದ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಂದ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ಈ ಹಿಂದೆ ಬಿಜೆಪಿಯವರು ಮಂಡಲ್‌ ವರದಿಯನ್ನು ವಿರೋಧಿಸಿದವರು. ಈಗ ಮೀಸಲಾತಿ ಕುರಿತು ಮಾತನಾಡುತ್ತಾರೆ. ರಫೇಲ್‌ಹಗರಣ ಹಾಗೂ ಸಾಲಮನ್ನಾ ಮಾಡದಿರುವುದರಿಂದಾಗಿ ಬಿಜೆಪಿ ಪಕ್ಷದ ವರ್ಚಸ್ಸು ಕಡಿಮೆಯಾಗಿದೆ. ಈಗ ಅದನ್ನು ಮೀಸಲಾತಿ ವಿಷಯದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಹೊರಟಿದ್ದಾರೆ ಎಂದು ವ್ಯಂಗವಾಡಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಹಡಗಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ಪರಮೇಶ್ವರಪ್ಪ, ಇಟಗಿ ಬ್ಲಾಕ್‌ ಅಧ್ಯಕ್ಷ ಐಗೊಳ್‌ ಚಿದಾನಂದ್‌, ಮುಖಂಡರಾದ ವಾರದ ಗೌಸುಮೊಹನುದ್ದಿನ್‌, ಬಿ. ಹನುಮಂತಪ್ಪ, ಜ್ಯೋತಿ ಮಲ್ಲಣ್ಣ, ಬಿ.ಚಂದ್ರನಾಯ್ಕ, ಅಟವಾಳಗಿ ಕೊಟ್ರೇಶ್‌ ಇನ್ನಿತರರಿದ್ದರು.

ಮೋದಿ ಪಾರ್ಟ್‌ಟೈಂ ಪ್ರೈಮಿನಿಸ್ಟರ್‌
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸರಿಯಾಗಿ ಸಂಸತ್‌ಗೆ ಆಗಮಿಸಲು ಆಗದೆ ಬರೀ ವಿದೇಶ ಸುತ್ತುವ ಫ್ಯಾಶನ್‌ನಲ್ಲಿ ಮುಳುಗಿ ಒಂದು ರೀತಿ ದೇಶದ ಪಾರ್ಟ್‌ಟೈಂ ಪ್ರೈಮಿನಿಸ್ಟರ್‌ ಆಗಿದ್ದಾರೆ.
ವಿ.ಎಸ್‌.ಉಗ್ರಪ್ಪ, ಸಂಸದ.

Advertisement

Udayavani is now on Telegram. Click here to join our channel and stay updated with the latest news.

Next