Advertisement

“ಅಕಳಂಕ’ನಡೆಯ ಉತ್ತುಂಗದ ಉಪ್ಪಂಗಳ ರಾಮ ಭಟ್‌

10:55 PM Aug 25, 2021 | Team Udayavani |

“ಕಳಂಕ’ ಶಬ್ದಕ್ಕೆ ವಿರುದ್ಧವಾದ ಕಳಂಕರಹಿತ ಎಂಬ ಶಬ್ದಕ್ಕೆ “ಅಕಳಂಕ’ ಎಂದು ಬಳಸುವುದು ಕಾಣುವುದಿಲ್ಲ. ಕೆಲವು ಬಾರಿ “ಳ’- “ಲ’ ಅಕ್ಷರವನ್ನು ಭಾಷಾ ಶಾಸ್ತ್ರೀಯವಾಗಿ ಅದಲು ಬದಲು ಮಾಡುವುದಿದೆ. ಇದೀಗ ನಮ್ಮ ನ್ನಗಲಿದ ಭಾಷಾ ಶಾಸ್ತ್ರದಲ್ಲಿ ಪ್ರಸಿದ್ಧಿ, ಪ್ರಚಾರವಿಲ್ಲದೆ ಕೆಲಸ ಮಾಡಿದ ಡಾ| ಉಪ್ಪಂಗಳ ರಾಮ ಭಟ್ಟರಿಗೂ “ಅಕಲಂಕ’ ಶಬ್ದಕ್ಕೂ ಎರಡು ರೀತಿಯ ಸಾಮ್ಯವಿದೆ. ಭಟ್ಟಾಕಲಂಕ, ಅಕಲಂಕ ಎಂಬ ವ್ಯಾಕರಣದ ಮೇರು ವಿದ್ವಾಂಸ ಸಾಮಾನ್ಯರಿಗೆ ಅಪ್ರಸಿದ್ಧವಾದರೂ ಬೆನ್ನಟ್ಟಿ ಅವರ ಕೆಲಸವನ್ನು ಪ್ರಚುರಪಡಿಸಿದ ಭಟ್ಟರು, ತಾವು ಬರೆದದ್ದಕ್ಕೆಲ್ಲ ಕ್ಷೇತ್ರಕಾರ್ಯ, ಶಾಸನ ಸಂಶೋ ಧನೆಗಳ ತಳಪಾಯ ಒದಗಿಸಿಯೂ ಸಾಮಾನ್ಯರಿಗೆ ಅಪ್ರಸಿದ್ಧ ರಾಗಿ ಉಳಿದಿದ್ದರು. ಪ್ರಾಯಃ ಹೀಗಾಗಿಯೋ ಏನೋ ಕಳಂಕರಹಿತರಾಗಿ (ಅಕಳಂಕ) ಇದ್ದರು ಎನ್ನಬಹುದು.

Advertisement

ಭಟ್ಟರ ಜೀವನಾಡಿ ಭಟ್ಟಾಕಲಂಕ/ ಅಕಲಂಕ ಪ್ರತಿ ಪಾದಿತ ಭಾಷಾ ವ್ಯಾಕರಣ ಶಾಸ್ತ್ರವೆಂದರೆ ತಪ್ಪಾಗದು. ಇವರ ಪಿಎಚ್‌.ಡಿ. ಸಂಶೋಧನ ಪ್ರಬಂಧವೂ ಇದಕ್ಕೆ ಸಂಬಂಧಿಸಿದ್ದು. ಭಟ್ಟಾಕಲಂಕ ಜೈನ ಕವಿ. ಈತನ ಗುರು ಅಕಲಂಕದೇವ. ಇವರು ಒಬ್ಬರಿರಬಹುದೆ ಎಂಬ ಜಿಜ್ಞಾಸೆಯನ್ನೂ ಭಟ್ಟರು ಮಾಡಿದ್ದರು. ಕವಿ ಎಂದು ಆಡುಮಾತಿನಲ್ಲಿ ಬಂದಿದೆಯಾದರೂ ಇವರು ಶಬ್ದಮಣಿ ದರ್ಪಣ, ಕವಿರಾಜಮಾರ್ಗ, ಕಾವ್ಯಾವಲೋಕನದಂತಹ ಲಾಕ್ಷಣಿಕ/ ವ್ಯಾಕರಣ ಗ್ರಂಥ “ಶಬ್ದಾನುಶಾಸನ’ವನ್ನು ಬರೆದ ಕಾರಣ ಈತನೊಬ್ಬ ಲಾಕ್ಷಣಿಕ/ ವೈಯಾಕರಣ.

ಇವರ ಮೊದಲ ಕೃತಿಯೂ “ಕನ್ನಡ ವೈಯಾಕರಣ ಭಟ್ಟಾಕಲಂಕ’ ಆಗಿರುವುದು, ಕನ್ನಡ ವ್ಯಾಕರಣದ ಬಗ್ಗೆ ಸಂಸ್ಕೃತದಲ್ಲಿ ರಚಿಸಿದ ಭಟ್ಟಾಕಲಂಕನ “ಶಬ್ದಾನುಶಾಸನ’ ಕುರಿತು ಸಂಶೋಧನೆ ನಡೆಸಿ ಪಿಎಚ್‌.ಡಿ. ಪಡೆದ ಕನ್ನಡದ ಮೊದಲ ಸಂಶೋಧಕರು ಎನ್ನುವುದು, ಛಂದಃಶಾಸ್ತ್ರಜ್ಞ ಸೇಡಿಯಾಪು ಕೃಷ್ಣ ಭಟ್ಟರು ಇದಕ್ಕೆ ಮುನ್ನುಡಿ ಬರೆದದ್ದು ಮೇಲ್ಗಾರಿಕೆಯನ್ನು ತೋರುತ್ತದೆ. ಇವರಿಗೆ ಅನೇಕ ಪ್ರಶಸ್ತಿಗಳು ಬಂದಿದ್ದರೂ ಇದೇ ಕೃತಿಗೆ 1986ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದದ್ದು ಉಲ್ಲೇಖನೀಯ. ಪರೋಕ್ಷ ಗುರುವಿನ ಗೌರ ವಾರ್ಥ ಅಕಲಂಕ ಪ್ರತಿಷ್ಠಾನದ ಮೂಲಕ ವಿದ್ವಾಂಸರನ್ನು ಗೌರವಿಸುತ್ತಿದ್ದರು.

ಕ್ಷೇತ್ರ ಕಾರ್ಯದಂಗವಾಗಿ ಶಿರಸಿ ಸಮೀಪದ ಸೋಂದೆಯ ಜೈನ ಮಠಕ್ಕೆ ಭೇಟಿ ಕೊಟ್ಟು ವಿಚಾರ ವಿನಿಮಯ ನಡೆಸಿದಾಗ ಆ ಮಠಕ್ಕೆ ಭಟ್ಟಾಕಲಂಕ ಮಠವೆಂಬ ಹೆಸರು ಇತ್ತು. ಗುರುವಿಗೆ ಅಕಲಂಕ ದೇವ ಎಂದೂ, ಶಿಷ್ಯರಿಗೆ ಭಟ್ಟಾಕಲಂಕನೆಂಬ ಹೆಸರೂ ಅನು ಕ್ರಮವಾಗಿ ಪಟ್ಟಧಾರಿಗಳಿಗೆ ಹೆಸರು ಇಡುವ ಕ್ರಮವಿದೆ ಎಂಬುದನ್ನು ಕಂಡು ಕೊಂಡರು. ಶಾಸನಾಧಾರದಲ್ಲಿ ಭಟ್ಟಾಕಲಂಕನ ಕಾಲವನ್ನು 1528-1615 ಎಂದೂ ನಿರ್ಣಯಿಸುತ್ತಾರೆ.

ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮೂಲಕ ಕನ್ನಡ ವಿದ್ವಾಂಸರಾಗಿ ಉಡುಪಿಯಲ್ಲಿ ನೆಲೆನಿಂತ ಭಟ್ಟರು ಹಿಂದಿ ಯಲ್ಲೂ ಪ್ರಾವೀಣ್ಯ ಪಡೆ ದವರು. ಹಿಂದಿಯ ಮಹಾಕವಿ ಮೈಥಿಲೀ ಶರಣ ಗುಪ್ತರ “ಪಂಚವಟಿ’ ಖಂಡಕಾವ್ಯವನ್ನು ಕನ್ನಡಕ್ಕೆ ಅನು ವಾದಿಸಿದರು. ಇದೊಂದು ಸ್ವತಂತ್ರ ಕಾವ್ಯವೆಂಬಂತೆ ಕಂಡುಬರುತ್ತದೆ ಎನ್ನುವುದು ವಿದ್ವಾಂಸರ ಅಭಿಮತ.

Advertisement

ಕನ್ನಡ, ಹವ್ಯಕ, ತುಳು ಭಾಷೆಗಳ ಅಧ್ಯಯನ ಗಳ ಆಕರ ಗ್ರಂಥವಾದ “ಮಾನಸ’ವು “ಶಿವ ಮೆರೆದ ಹಳ್ಳಿ ಶಿವಳ್ಳಿ’, “ಮಧ್ವವಿಜಯದಲ್ಲಿ ತುಳು ಶಬ್ದಗಳು’, “ಹವ್ಯಕ ರಲ್ಲಿ ಅಡ್ಡ ಹೆಸರು’, “ಹವ್ಯಕರಲ್ಲಿ ತುಳು ಶಬ್ದಗಳು’, “ಹವ್ಯಕ-ಒಳಭೇದಗಳು’, “ಕನ್ನಡದ ಕೆಲವು ಪ್ರಾದೇಶಿಕ ವೈಶಿಷ್ಟéಗಳು’, “ಹೊಸ ಗನ್ನಡದಲ್ಲಿ ಇತ್ತೀಚಿನ ಕೆಲವು ಪ್ರಯೋಗಗಳು’ ಹೀಗೆ ಹಲವು ಲೇಖನಗಳ ಮೂಲಕ ಭಾಷೆ-ಸಂಸ್ಕೃತಿಗಳ ಉತVನನ ಕಂಡುಬರುತ್ತವೆ.

ಕಾಸರಗೋಡಿನ ಬಹುಮುಖೀ ಭಾಷೆ, ಸಾಹಿತ್ಯ, ಶಾಸನ, ಭೌಗೋಳಿಕ ಕುತೂಹಲ, ಸ್ಮಾರಕಗಳು, ದೇವಸ್ಥಾನಗಳು, ಹಳೆಯ ನಾಣ್ಯ ಕಡತ, ಸಾಂಸ್ಕೃತಿಕ- ಸಾಹಿತ್ಯಿಕ- ಸಾಮಾಜಿಕ- ರಾಜಕೀಯ ಮಹತ್ವವೆಲ್ಲ ವನ್ನೂ “ಗಡಿನಾಡು- ಕಾಸರಗೋಡು’ ಕೃತಿಯಲ್ಲಿ   ಕೆತ್ತಿರುವುದು ಬಹುಮುಖೀ ಸಂಶೋಧನ ಪ್ರವೃತ್ತಿ ಯನ್ನು ಸಾರುವುದಲ್ಲದೆ ಮಾತೃಭೂಮಿಗೂ (ಕಾಸರ ಗೋಡು ಜಿಲ್ಲೆಯ ಉಪ್ಪಂಗಳ) ನ್ಯಾಯ ಒದಗಿಸಿ ದಂತಾಗಿದೆ. ಜೀವನ, ಸಂಸ್ಕೃತಿ, ಸೃಷ್ಟಿ, ಇತಿಹಾಸ, ದೇವರು, ನಂಬಿಕೆ ಇತ್ಯಾದಿಗಳ ಬಗೆಗೆ ಕೀರ್ತನೆ, ಕಗ್ಗದ ಸಾಲಿಗೆ ಸೇರುವ ನಾಲ್ಕು ಪಾದಗಳ (ಚೌಪದಿ) ಮುಕ್ತಕಗಳನ್ನೂ (ಬಾಳನೋಟ) ಬರೆದು ಫಿಲಾಸಫ‌ರ್‌ ಆದರು. ಗಮಕ ಇವರ ಇನ್ನೊಂದು ಕಾರ್ಯವ್ಯಾಪ್ತಿ.

30ಕ್ಕೂ ಹೆಚ್ಚು ಪ್ರಕಟಿತ ಕೃತಿಗಳನ್ನು ಭಟ್ಟರು ಹೊರ ತಂದಿದ್ದರೆ, “ಅಶ್ವತ್ಥ’, “ಅಷ್ಟಮ’ ಇತ್ಯಾದಿ ಆರು ಸಂಪಾ ದಿತ ಕೃತಿಗಳಿವೆ.  ಸೀತಾಪರಿತ್ಯಾಗ, ಬೇರಿಲ್ಲದ ಬಳ್ಳಿ, ಕಾರ್ಗಿಲ್‌ ವೀರ (ಕಿರು ನಾಟಕ), ಮಧ್ವಾಚಾರ್ಯರ ಜೀವನಯಾತ್ರೆಯನ್ನು ಒಳಗೊಂಡ “ಆನಂದಾಯನ’ ದಂತಹ  ಅಪ್ರಕಟಿತ ಕೃತಿಗಳೂ ಇವೆ. ಪ್ರವಾಸಪ್ರಿಯರೂ ಆಗಿದ್ದ ಡಾ| ಭಟ್ಟರು ಪ್ರವಾಸದ ವೇಳೆ ಕಂಡುಬಂದ ಅನೇಕ ಕುತೂಹಲಗಳನ್ನು ಲೇಖನಕ್ಕೆ ಇಳಿಸಿ “ಉದಯವಾಣಿ’ಗೆ ಕೊಡುತ್ತಿದ್ದರು. ಒಟ್ಟಾರೆ ಭಟ್ಟರಲ್ಲಿ ಶ್ರದ್ಧಾಧ್ಯಯನ ಸ್ವಯಂವ್ಯಕ್ತ. ವ್ಯಾಕರಣ, ಮುಕ್ತ ಕಗಳಂತಹ ವಿದ್ವತ್ಪರಂಪರೆಗೆ ಈಗ ಆದರ ಕಡಿಮೆ. ಶೈಕ್ಷಣಿಕವಾಗಿ ಎಷ್ಟು ಬೇಕೋ ಅಷ್ಟನ್ನು ಬರೆದರೆ ಸಾಕೆ ನ್ನುವ ಕಾಲಘಟ್ಟದಲ್ಲಿ ಉಪ್ಪಂಗಳರು ಹವ್ಯಾಸ ರೀತಿ ಮಾಡಿದ ಸಾಧನೆ ಉತ್ತುಂಗದಂತೆ ಕಾಣುತ್ತದೆ.

 

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next