Advertisement

ಅತೃಪ್ತರ ಮನವೊಲಿಕೆ: “ಕೈ’ಚೆಲ್ಲಿದ ನಾಯಕರು

10:58 PM Jul 16, 2019 | Team Udayavani |

ಬೆಂಗಳೂರು: ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದು ಅತೃಪ್ತರನ್ನು ಒಲೈಸುವ ಕಸರತ್ತು ನಡೆಸಿರುವ ಕಾಂಗ್ರೆಸ್‌ ನಾಯಕರು ವಿಶ್ವಾಸ ಮತ ಯಾಚನೆಯ ದಿನ ಹತ್ತಿರವಾಗುತ್ತಿರುವಂತೆ ಕೈ ಚೆಲ್ಲಿ ಕುಳಿತುಕೊಳ್ಳುವಂತಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನೇ ನೆಚ್ಚಿಕೊಳ್ಳುವಂತಾಗಿದೆ.

Advertisement

ಮೈತ್ರಿ ಪಕ್ಷದ ಭಾಗವಾಗಿರುವ ಕಾಂಗ್ರೆಸ್‌ಗೆ ತಮ್ಮದೇ ಪಕ್ಷದ ಹದಿಮೂರು ಶಾಸಕರು ರಾಜೀನಾಮೆ ಸಲ್ಲಿಸಿ ಮುಂಬೈ ಹೊಟೇಲ್‌ ಸೇರಿಕೊಂಡಿದ್ದು, ಕಾಂಗ್ರೆಸ್‌ ನಾಯಕರ ಕೈಗೆ ಸಿಗದಂತಾಗಿದ್ದಾರೆ. ರಾಮಲಿಂಗಾರೆಡ್ಡಿ ಅವರನ್ನು ಹೊರತು ಪಡಿಸಿದರೆ, ಯಾವ ಶಾಸಕರೂ ಕಾಂಗ್ರೆಸ್‌ ನಾಯಕರ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಸರ್ಕಾರದ ಭವಿಷ್ಯದ ಬಗ್ಗೆ ಯಾರಿಗೂ ವಿಶ್ವಾಸ ಉಳಿದುಕೊಂಡಂತೆ ಕಾಣುತ್ತಿಲ್ಲ.

ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಸರ್ಕಾರ ಹೇಗೆ ಉಳಿಸಿಕೊಳ್ಳುತ್ತೇನೆ ಎನ್ನುವ ಸಂಪೂರ್ಣ ಗುಟ್ಟು ಕಾಂಗ್ರೆಸ್‌ ನಾಯಕರಿಗೆ ಬಿಟ್ಟು ಕೊಟ್ಟಿಲ್ಲ ಎನ್ನಲಾಗುತ್ತಿದೆ. ಈಗಿರುವ ಶಾಸಕರನ್ನು ಉಳಿಸಿಕೊಂಡರೆ ಸರ್ಕಾರ ಸುರಕ್ಷಿತವಾಗುತ್ತದೆ ಎಂದಷ್ಟೇ ಮುಖ್ಯಮಂತ್ರಿ ಕಾಂಗ್ರೆಸ್‌ ನಾಯಕರಿಗೆ ಹೇಳಿದ್ದಾರೆ ಎನ್ನಲಾಗಿದ್ದು, ಅವರನ್ನೇ ಹೊಟೇಲ್‌ನಲ್ಲಿಟ್ಟುಕೊಂಡು ಕಾಯುವ ಸ್ಥಿತಿ ಕಾಂಗ್ರೆಸ್‌ ನಾಯಕರಿಗೆ ಬಂದೊದಗಿದೆ.

ಆರಂಭದಲ್ಲಿ ಆನಂದ್‌ ಸಿಂಗ್‌ ರಾಜೀನಾಮೆ ಸಲ್ಲಿಸಿದಾಗ “ಹೋದರೆ ಹೋಗಲಿ’ ಎಂದು ನಿರ್ಲಕ್ಷ್ಯ ಮಾಡಿದ್ದ ಕಾಂಗ್ರೆಸ್‌ ನಾಯಕರು, ಜುಲೈ 6 ರಂದು ಏಕಕಾಲಕ್ಕೆ ಜೆಡಿಎಸ್‌ನ ಮೂವರು ಶಾಸಕರು ಸೇರಿ ಹನ್ನೆರಡು ಶಾಸಕರು ರಾಜೀನಾಮೆ ಸಲ್ಲಿಸಿದಾಗ ಎಚ್ಚೆತ್ತುಕೊಂಡರು. ಮತ್ತಷ್ಟು ಶಾಸಕರು ರಾಜೀನಾಮೆ ಸಲ್ಲಿಸುತ್ತಾರೆಂಬ ವದಂತಿ ಇದ್ದ ಶಾಸಕರ ಮನವೊಲಿಕೆ ಕಸರತ್ತು ಆರಂಭಿಸಿದರು. ಅದರ ನಡುವೆಯೂ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್‌ ಹಾಗೂ ಸಚಿವ ಎಂ.ಟಿ.ಬಿ ನಾಗರಾಜ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಕಾಂಗ್ರೆಸ್‌ ನಾಯಕರ ಜಂಘಾಬಲವನ್ನೇ ಉಡುಗಿಸಿತು.

ಆಗಲೇ ಪಕ್ಷದ ಹೈಕಮಾಂಡ್‌ ಅತೃಪ್ತ ಶಾಸಕರ ಮನವೊಲಿಕೆಗೆ ಕಸರತ್ತು ನಡೆಸುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿತ್ತು. ಆದರೆ, ಹೈಕಮಾಂಡ್‌ನ‌ ಸೂಚನೆಯನ್ನು ಗಂಭೀರವಾಗಿ ಸಚಿವ ಡಿ.ಕೆ. ಶಿವಕುಮಾರ್‌ ಪರಿಗಣಿಸಿದಷ್ಟು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಉಳಿದ ನಾಯಕರು ಪರಿಗಣಿಸಲಿಲ್ಲ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ಕೈ ಕೊಟ್ಟ ನಂಬಿಕೆ: ರಾಜೀನಾಮೆ ಸಲ್ಲಿಸಿದ್ದ ಹದಿಮೂರು ಶಾಸಕರಲ್ಲಿ ರಾಮಲಿಂಗಾ ರೆಡ್ಡಿ ಅವರು ಅತೃಪ್ತರ ಗುಂಪು ಸೇರಿಕೊಳ್ಳದೇ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್‌ ನಾಯಕರಿಗೆ ಭರವಸೆ ಉಳಿದಿತ್ತು. ಬಿಟಿಎಂ ಲೇಔಟ್‌ ಶಾಸಕ ರಾಮಲಿಂಗಾರೆಡ್ಡಿ ಅವರ ಮನವೊಲಿಕೆ ಮಾಡಿ ವಾಪಸ್‌ ಕರೆಸಿದರೆ, ಅವರೊಂದಿಗೆ ಬೆಂಗಳೂರಿನ ಶಾಸಕರೂ ರಾಜೀನಾಮೆ ವಾಪಸ್‌ ಪಡೆಯುತ್ತಾರೆಂಬ ನಂಬಿಕೆಯಲ್ಲಿಯೇ ಕಾಂಗ್ರೆಸ್‌ ನಾಯಕರಿದ್ದರು.

ಆದರೆ, ರಾಮಲಿಂಗಾ ರೆಡ್ಡಿ ಕೂಡ ತಾವು ಪಕ್ಷದಲ್ಲಿಯೇ ಉಳಿಯುವ ಭರವಸೆ ನೀಡಿ, ಉಳಿದವರ ಉಸಾಬರಿ ನನಗೆ ಗೊತ್ತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಕಾಂಗ್ರೆಸ್‌ ನಾಯಕರಿಗೆ ಸರ್ಕಾರ ರಕ್ಷಿಸುವಷ್ಟು ಅತೃಪ್ತರು ರಾಜೀನಾಮೆ ವಾಪಸ್‌ ಪಡೆಯುತ್ತಾರೆ ಎನ್ನುವ ನಂಬಿಕೆ ಹೋಗಿದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಕೇಳಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಾವ ಅಸ್ತ್ರ ಪ್ರಯೋಗಿಸುತ್ತಾರೆ ಎನ್ನುವ ಕುತೂಹಲ ಕಾಂಗ್ರೆಸ್‌ ನಾಯಕರಿಗೂ ಇದ್ದಂತಿದೆ.

ರಿವರ್ಸ್‌ ಆಪರೇಷನ್‌ ಅಥವಾ ಗೈರು?: ಇಷ್ಟೊಂದು ಜನ ಶಾಸಕರು ರಾಜೀನಾಮೆ ಸಲ್ಲಿಸಿ ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್‌ ಪಡೆಯುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದರೂ, ಮುಖ್ಯಮಂತ್ರಿ ಕುಮಾರಸ್ವಾಮಿ ಧೈರ್ಯದಿಂದ ವಿಶ್ವಾಸ ಮತ ಯಾಚನೆಗೆ ಮುಂದಾಗಿರುವುದು, ಬಿಜೆಪಿ ಶಾಸಕರ ರಿವರ್ಸ್‌ ಆಪರೇಷನ್‌ ಅಥವಾ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿಯ ಕನಿಷ್ಠ ಐದರಿಂದ ಆರು ಶಾಸಕರನ್ನು ಗೈರು ಹಾಜರಿ ಮಾಡಿಸುವ ಆಲೋಚನೆ ಹೊಂದಿರಬಹುದೆಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next