Advertisement

ಅನಿಯಂತ್ರಿತ ಠೇವಣಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

10:31 AM Apr 15, 2019 | keerthan |

ಸುರಕ್ಷಿತ ಹೂಡಿಕೆಯ ಪ್ರಶ್ನೆ ಬಂದಾಗ ಎಲ್ಲಕ್ಕಿಂತ ಮೊದಲು ಕಾಣಿಸುವುದು ನಿರಖು ಠೇವಣಿಗಳು. ಅಂದರೆ ಫಿಕ್ಸೆಡ್‌ ಡಿಪಾಸಿಟ್‌ಗಳು. ವಿವಿಧ ಅವಧಿಗಳ ಈ ನಿರಖು ಠೇವಣಿ ಯೋಜನೆಗಳಲ್ಲಿ ಹಣ ತೊಡಗಿಸುವುದು ಸುಭದ್ರ, ಸುರಕ್ಷಿತ ಮತ್ತು ಆಕರ್ಷಕ ಎಂಬ ನಂಬಿಕೆ ಸಹಜವಾಗಿಯೇ ಜನ ಸಾಮಾನ್ಯರಲ್ಲಿದೆ. ಹಾಗಾಗಿ, ಜನರು ಬ್ಯಾಂಕ್‌, ಸಹಕಾರಿ ಬ್ಯಾಂಕ್‌, ಬ್ಯಾಂಕೇತರ ಹಣಕಾಸು ಕಂಪೆನಿಗಳು ಮತ್ತು ಪೋಸ್ಟ್‌ ಆಫೀಸ್‌ ಟರ್ಮ್ ಡಿಪಾಸಿಟ್‌ ಯೋಜನೆಗಳತ್ತ ಮುಖ ಮಾಡುತ್ತಾರೆ. ನಿರಖು ಠೇವಣಿಗಳು ಸುಭದ್ರ, ಸುರಕ್ಷಿತ, ಆಕರ್ಷಕ ಎಂಬ ಮಾತಿನಲ್ಲಿ ಅತಿಶಯವೇನೂ ಇಲ್ಲ. ಆದರೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಜನರನ್ನು ತಮ್ಮತ್ತ ಸೆಳೆಯಲು ಹೆಚ್ಚಿನ ಬಡ್ಡಿಯ ಆಮಿಷ ಒಡ್ಡುತ್ತವೆ. ಹಾಗೆಯೇ, ಖಾಸಗಿ ಹಣಕಾಸು ಸಂಸ್ಥೆಗಳು, ಕಾಂಜಿಪೀಂಜಿ ಕಂಪೆನಿಗಳು, ಬ್ಲೇಡ್‌ ಸಂಸ್ಥೆಗಳು ಜನರಿಂದ ಠೇವಣಿಗಳನ್ನು ಸಂಗ್ರಹಿಸುತ್ತವೆ. ಹೆಚ್ಚಿನ ಬಡ್ಡಿಯ ಆಸೆಯಲ್ಲಿ ಜನರು ಈ ಬಗೆಯ ಸಂಸ್ಥೆಗಳ ಆಮಿಷಕ್ಕೆ ಒಳಗಾಗಿ ತಮ್ಮ ಕಷ್ಟದ ಸಂಪಾದನೆಯ ಉಳಿತಾಯವನ್ನು ಅವುಗಳಲ್ಲಿ ಠೇವಣಿ ಇಡುತ್ತಾರೆ.

Advertisement

ಸುಗ್ರೀವಾಜ್ಞೆ ಜಾರಿಯಾಗಿದೆ
ಹೀಗೆ ಠೇವಣಿ ಇಡುವ ಅನೇಕ ಖಾಸಗಿ ಹಣಕಾಸು ಸಂಸ್ಥೆಗಳು ಜನರಿಗೆ ಮೋಸ ಮಾಡಿದ ಹಲವಾರು ಉದಾಹರಣೆಗಳಿವೆ. ಇವುಗಳನ್ನು ನಿಯಂತ್ರಿಸಲೆಂದೇ ಕೇಂದ್ರ ಸರಕಾರ ಈಚೆಗೆ 2019ರ ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದೆ. ಈ ನಿಷೇಧಾಜ್ಞೆಯಿಂದಾಗಿ ಅನಿಯಂತ್ರಿತ ಠೇವಣಿ ಸಂಗ್ರಹಿಸುವ ಎಲ್ಲ ಹಣಕಾಸು, ಬ್ಯಾಂಕೇತರ ಹಣಕಾಸು, ಖಾಸಗಿ ಹಣಕಾಸು ಮತ್ತು ಸಹಕಾರಿ ಬ್ಯಾಂಕುಗಳಿಗೆ ಕೂಡ ಈಗ ಬಿಸಿ ಮುಟ್ಟಿದೆ. ಕೇಂದ್ರ ಸರಕಾರದ ಈ ಕ್ರಮದಿಂದಾಗಿ ಅನಿಯಂತ್ರಿತ ಠೇವಣಿ ಸಂಚಯನಕಾರರು ಈಗ ಬಿಗಿಯಾದ ಆರ್‌ಬಿ ಐ ನೀತಿ ನಿಯಮಗಳಿಗೆ ಒಳಪಡುವಂತಾಗಿದೆ.

ಶಿಕ್ಷಾರ್ಹ ಅಪರಾಧ
ಈ ಸುಗ್ರೀವಾಜ್ಞೆಯಡಿ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸುವ ಠೇವಣಿಗಳನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. 1. ನಿಯಂತ್ರಿತ ಠೇವಣಿ, 2. ಅನಿಯಂತ್ರಿತ ಠೇವಣಿ. ಇದರಲ್ಲಿ ಎರಡನೇ ಬಗೆಯ ಅನಿಯಂತ್ರಿತ ಠೇವಣಿಗಳ ಸಂಚಯನವನ್ನು ಸಂಪೂರ್ಣ ನಿಷೇಧಿಸಲಾಗಿದೆ ಮಾತ್ರವಲ್ಲದೆ ಅದು ಶಿಕ್ಷಾರ್ಹ ಅಪರಾಧವೆಂದೂ ಪರಿಗಣಿಸಲಾಗಿದೆ. ಸೆಬಿಯಿಂದ ಆರ್‌ಬಿಐನಿಂದ ಅನುಮತಿ ಪಡೆದ ಬ್ಯಾಂಕ್‌ ಠೇವಣಿಗಳು, ಐಈಅ ಅನುಮತಿ ಪಡೆದ ವಿಮಾ ಸಂಸ್ಥೆಗಳ ಯೋಜನೆಗಳು, ರಾಜ್ಯಗಳ ಕಾಯಿದೆಯಡಿ ನೋಂದಾಯಿತವಾಗಿರುವ ಸಹಕಾರಿ, ಚಿಟ್‌ಫ‌ಂಡ್‌ ಸಂಸ್ಥೆಗಳು ಮುಂತಾಗಿ ಒಟ್ಟು 9 ರೀತಿಯ ನಿಯಂತ್ರಣ ಪ್ರಾಧಿಕಾರದಡಿ ಬರುವ ಠೇವಣಿ ಯೋಜನೆಗಳು ಮಾತ್ರವೇ ನಿಯಂತ್ರಿತ ಠೇವಣಿ ಯೋಜನೆಗಳೆಂದು ಪರಿಗಣಿತವಾಗಿವೆ.

ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡರೆ ಜನ ಸಾಮಾನ್ಯರ ನಿರಖು ಠೇವಣಿ ಹಣ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮತ್ತು ಅಂಚೆ ಇಲಾಖೆಯ ಠೇವಣಿ ಯೋಜನೆಗಳಲ್ಲಿ ಹೆಚ್ಚು ಸುಭದ್ರ ಎನ್ನಬಹುದು. ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಅಸಲನ್ನೂ ಕಳೆದುಕೊಳ್ಳುವ ರಿಸ್ಕ್ ಖಂಡಿತ ಬೇಡ ಎನ್ನುವವರು ಸದಾ ಕಾಲ ಮುಂಚೂಣಿಯ ಸರಕಾರಿ ಬ್ಯಾಂಕುಗಳು ಮತ್ತು ಅಂಚೆ ಇಲಾಖೆಯ ಟರ್ಮ್ ಡೆಪಾಸಿಟ್‌ ಯೋಜನೆಗಳನ್ನು ನೆನಪಿನಲ್ಲಿ ಇರಿಸಿ ಕೊಳ್ಳುವುದು ಕ್ಷೇಮ. ಹೂಡಿಕೆಯಲ್ಲಿ ಯಾವತ್ತೂ ನಾವು ರಿಸ್ಕ್ ಫ್ಯಾಕ್ಟರ್‌ ಮರೆಯಬಾರದು. ಹೂಡಿಕೆದಾರರು ಮತ್ತು ವಹಿವಾಟುದಾರರ ನಡುವೆ ಇರುವ ಅಂತರವೇ ರಿಸ್ಕ್ ತೆಗೆದುಕೊಳ್ಳುವಲ್ಲಿನ ಛಾತಿ. ಸಾಮಾನ್ಯವಾಗಿ ವಹಿವಾಟುದಾರರನ್ನು ಹೂಡಿಕೆದಾರರೆಂದು ಪರಿಣತರು ಪರಿಗಣಿಸುವುದಿಲ್ಲ. ವಹಿವಾಟುದಾರರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಗರಿಷ್ಠ ಲಾಭ ಗಳಿಸುವುದೇ ಹೂಡಿಕೆಯ ಮೂಲ ಉದ್ದೇಶವಾಗಿರುತ್ತದೆ.

ಹೂಡಿಕೆದಾರರಿಗೆ ಆರರಿಂದ ಹನ್ನೆರಡು ತಿಂಗಳ ಅವಧಿಯೆಂದರೆ ಒಂದು ಯುಗ. ಈ ಅವಧಿಯೊಳಗೆ ತಮ್ಮ ಹೂಡಿಕೆ ಮೊತ್ತವು ನಷ್ಟದ ಹಾದಿ ಹಿಡಿದರೆ ಅದನ್ನು ನಿರ್ದಯೆಯಿಂದ ಅವರು ಕೊನೆಗೊಳಿಸಿ ಕೈಗೆ ಬಂದಷ್ಟು ದುಡ್ಡನ್ನು ಬೇರೆ ಆಕರ್ಷಕ ಮಾಧ್ಯಮಗಳಲ್ಲಿ ತೊಡಗಿಸುತ್ತಾರೆ. ಈ ಯತ್ನದಲ್ಲಿ ತಾವು ಅಸಲಿನ ಭಾಗವನ್ನೇ ಕಳೆದುಕೊಂಡರೂ ಅವರು ಚಿಂತಿಸುವುದಿಲ್ಲ. ಗಾಯಗೊಂಡ ಹುಲಿ ತನ್ನ ದೇಹದ ಒಂದು ಕಡೆಯ ಮಾಂಸವನ್ನು ಕಿತ್ತು ಗಾಯದ ಭಾಗಕ್ಕೆ ಅಂಟಿಸುವ ಯತ್ನ ಮಾಡುವಂತೆ ವಹಿವಾಟುದಾರರು ನಿಷ್ಕರುಣೆಯಿಂದ ವ್ಯವಹಾರ ನಿರತವಾಗಿರುತ್ತಾರೆ. ಆದರೆ ಹೂಡಿಕೆದಾರರು ಹಾಗಲ್ಲ. ಅವರು ತಮ್ಮ ಹೂಡಿಕೆಯನ್ನು ಸಟ್ಟಾ ವ್ಯವಹಾರ ಎಂದು ತಿಳಿಯುವುದಿಲ್ಲ. ಈಸ ಬೇಕು ಇದ್ದು ಜಯಿಸಬೇಕು ಎಂಬ ದಾಸವಾಣಿಯನ್ನು ಹೂಡಿಕೆದಾರರು ಯಥಾವತ್‌ ಪಾಲಿಸುತ್ತಾರೆ. ಹೂಡಿಕೆದಾರರು ಒಂದೆಡೆ ಹಣ ಹೂಡಿದರೆ ಅದು ಲಾಭ ದೊರಕಿಸಿಕೊಡುವ ತನಕ ನಿರ್ಗಮಿಸುವುದಿಲ್ಲ. ಅದು ಬೇಕಿದ್ದರೆ ಶೇರು, ಬಾಂಡ್‌, ಮ್ಯೂಚುವಲ… ಫ‌ಂಡ್‌, ಇಟಿಎಫ್ ಯಾವುದೇ ಇರಲಿ; ಹೂಡಿದ ಮೊತ್ತ ಮಾಗುವ ತನಕವೂ ಕಾಯುತ್ತಾರೆ.

Advertisement


ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು ನಾನಾ ಅವಧಿಯ, ಆಕರ್ಷಕ ಬಡ್ಡಿಯ ನಿರಖು ಠೇವಣಿ ಯೋಜನೆಗಳನ್ನು ಪ್ರಚುರ ಪಡಿಸುತ್ತಲೇ ಇರುತ್ತವೆ. ಹಾಗಿದ್ದರೂ ಜನರು ಸುಭದ್ರ ಮತ್ತು ಸುರಕ್ಷಿತ ಎಂಬ ಕಾರಣಕ್ಕೆ ಅಂಚೆ ಕಚೇರಿಯ ಅವಧಿ ಠೇವಣಿಗಳ ಕಡೆಗೆ ಮುಖ ಮಾಡುವ ಜರೂರಿ ಇದೆ. ಅಂಚೆ ಇಲಾಖೆಯ ನಿರಖು ಠೇವಣಿಗಳ ಮೇಲಿನ ಬಡ್ಡಿ 1. ಒಂದು ವರ್ಷದಿಂದ ಮೂರು ವರ್ಷದ ತನಕ ಡಿಪಾಸಿಟ್‌ಗೆ ಶೇ. 7ರಷ್ಟು ಬಡ್ಡಿ. ನಾಲ್ಕು, ಐದು ವರ್ಷಕ್ಕೆ 7.8ರಷ್ಟು ಬಡ್ಡಿ.

ನಿರಖು ಠೇವಣಿ ಅಂದರೆ…
ಹೂಡಿಕೆಯಲ್ಲಿ ಸಹನೆ, ತಾಳ್ಮೆ, ಸಂಯಮ ತೋರುವ ಹೂಡಿಕೆದಾರರು ನಿಶ್ಚಿಂತೆ, ಸುಭದ್ರತೆಯನ್ನು ಬಯಸುವವರಾಗಿರುತ್ತಾರೆ. ಅವರು ನಿರ್ದಿಷ್ಟ ವರ್ಷಗಳ ಕಾಲಕ್ಕೆ ಹಣವನ್ನು ಹೂಡಿ, ಅದು ಮಾಗುವವರೆಗೆ ಕಾಯುತ್ತಾರೆ. ಈ ಬಗೆಯ ಪ್ರವೃತ್ತಿದಾರರಿಗೆ ಅತ್ಯಂತ ಪ್ರಶಸ್ತವಾಗಿರುವ ಹೂಡಿಕೆ ಮಾಧ್ಯಮ ಎಂದರೆ ನಿರಖು ಠೇವಣಿ. ಇದನ್ನೇ ನಾವು ಫಿಕ್ಸ್‌$xಡಿಪಾಸಿಟ್‌ ಎಂದು ಕರೆಯುವುದು. ಒಂದು, ಎರಡು, ಮೂರು, ಐದು ವರ್ಷಗಳ ಅವಧಿಯ ಟರ್ಮ್… ಡಿಪಾಸಿಟ್‌ ಗಳು ಅಥವಾ ಅವಧಿ ನಿರಖು ಠೇವಣಿಗಳು ಸುಭದ್ರತೆ, ಸುರಕ್ಷೆಯ ದೃಷ್ಟಿಯಿಂದ ಒಳ್ಳೆಯದು. ಹಾಗಿದ್ದರೂ ಲಾಭದಾಯಕತೆ ನಿಶ್ಚಿತವಾಗಿರುವುದರಿಂದ ಮಧ್ಯಮ ವರ್ಗದ ಮಂದಿಯ ಮೊದಲ ಹೂಡಿಕೆಯ ಆಯ್ಕೆಯೇ ನಿರಖು ಠೇವಣಿ.

Advertisement

Udayavani is now on Telegram. Click here to join our channel and stay updated with the latest news.

Next