Advertisement

ಅನರ್ಹ ಶಾಸಕರ ಪ್ರಕರಣ ಸುಪ್ರೀಂನಲ್ಲಿಂದು ವಿಚಾರಣೆ

11:07 PM Sep 24, 2019 | Team Udayavani |

ಬೆಂಗಳೂರು: ಅನರ್ಹ ಶಾಸಕರ ಪ್ರಕರಣ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಅವರು ಪ್ರತಿನಿಧಿಸಿದ್ದ ಕ್ಷೇತ್ರಗಳಿಗೆ ಈಗಾಗಲೇ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ಆ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ಅನರ್ಹರ ಪರ ವಕೀಲರು ಸುಪ್ರೀಂ ಕೊರ್ಟ್‌ಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.

Advertisement

ಅನರ್ಹ ಶಾಸಕರ ಪರ ನ್ಯಾಯವಾದಿ ಮುಕುಲ್‌ ರೋಹಟಗಿ ಅವರು, ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಅವರ ಆದೇಶವನ್ನು ರದ್ದುಪಡಿಸಿ, 17 ಅನರ್ಹ ಶಾಸಕರಿಗೂ ಈಗಾಗಲೇ ಘೋಷಣೆಯಾಗಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡುವ ಸಾಧ್ಯತೆಯಿದೆ. ಈ ಪ್ರಕರಣದ ಕುರಿತಂತೆ ಚರ್ಚಿಸಲು ಅನರ್ಹ ಶಾಸಕರು ಮಂಗಳವಾರವೇ ದೆಹಲಿಗೆ ತೆರಳಿದ್ದು, ಹೇಗಾದರೂ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್‌ನಿಂದ ಅನುಮತಿ ಕೊಡಿಸುವಂತೆ ತಮ್ಮ ಪರ ವಾದ ಮಾಡುತ್ತಿರುವ ವಕೀಲರಿಗೆ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಕೇಂದ್ರ ಚುನಾವಣಾ ಆಯೋಗದ ಪರ ವಕೀಲರು ಅನರ್ಹರ ಸ್ಪರ್ಧೆಗೆ ಆಯೋಗದಿಂದ ಯಾವುದೇ ತಕರಾರಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಅಭಿಪ್ರಾಯ ಸಲ್ಲಿಸಿರುವುದರಿಂದ ಅದನ್ನೆ ಸುಪ್ರೀಂಕೋರ್ಟ್‌ ಗಮನಕ್ಕೆ ತಂದು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡುವ ಸಾಧ್ಯತೆಯಿದೆ. ಅಲ್ಲದೇ, ತಮಿಳುನಾಡಿಯಲ್ಲಿ ಅನರ್ಹಗೊಂಡ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸಿದ್ದನ್ನು ಅನರ್ಹರ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ.

ಅವರ ವಿರುದ್ಧವಾಗಿ ಸ್ಪೀಕರ್‌ ಪರ ಹಾಗೂ ಕೆಪಿಸಿಸಿ ಪರವಾಗಿ ಕಪಿಲ್‌ ಸಿಬಲ್‌ ಕೇಂದ್ರ ಚುನಾವಣಾ ಆಯೋಗದ ಹೇಳಿಕೆಗೆ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಸ್ಪೀಕರ್‌ ಆದೇಶದ ಸಮರ್ಥನೆ ಹಾಗೂ ಕೆಪಿಸಿಸಿ ಪರ ವಾದ ಮಂಡನೆಗೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಿರುವುದರಿಂದ ಗುರುವಾರವೂ ವಿಚಾರಣೆ ಮುಂದುವರೆಯುವ ಸಾಧ್ಯತೆ ಇದ್ದು, ಗುರುವಾರ ಸಂಜೆಯವರೆಗೂ ಅನರ್ಹರಿಗೆ ಆತಂಕ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next