Advertisement

Karnataka: ಜನಸ್ಪಂದನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ- ಸಿಎಂಗೆ 12 ಸಾವಿರ ಅರ್ಜಿ!

10:11 PM Feb 08, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಎದುರು ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿದ್ದು, ದಾಖಲೆಯ 12,372 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

Advertisement

ಈ ಹಿಂದೆ ಮುಖ್ಯಮಂತ್ರಿಗಳ ಮನೆ ಎದುರು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ 5 ಸಾವಿರ ಅರ್ಜಿಗಳು ಬಂದಿದ್ದವು. ಈ ಬಾರಿ ಅದರ ದುಪ್ಪಟ್ಟು ಮನವಿಗಳು ಬಂದಿವೆ. ಈ ಪೈಕಿ 246 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದ್ದು, 12,126 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಕಂದಾಯ ಇಲಾಖೆಗೆ ಅತೀ ಹೆಚ್ಚಿನ ಅರ್ಜಿಗಳು ಬಂದಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಇಡೀ ಸರಕಾರವೇ ವಿಧಾನಸೌಧದ ಅಂಗಳದಲ್ಲಿ ಟೆಂಟ್‌ ಹಾಕಿಕೊಂಡು ಅಹವಾಲು ಸ್ವೀಕರಿಸಲು ನಿಂತಿತ್ತು. ಆಯಾ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕರೆದುಕೊಂಡು ಜನರು ಇದ್ದಲ್ಲಿಯೇ ತೆರಳಿ ಪರಿಹಾರ ಸೂಚಿಸಲಾಯಿತು. ಈ ಮೂಲಕ ಜನರ ಬಳಿಗೆ ಸರಕಾರವನ್ನು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಯಿತು. ವಿಧಾನಸೌಧದ ಎದುರು ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮ ಇದಾದದ್ದರಿಂದ ಜನತೆಗೂ ಹೆಚ್ಚಿನ ನಿರೀಕ್ಷೆ ಇತ್ತು.

ಎರಡನೇ ಜನಸ್ಪಂದನ ಅಕ್ಷರಶಃ ಜಾತ್ರೆ ಸ್ವರೂಪ ಪಡೆದಿತ್ತು. ನಾಡಿನ ದೊರೆಗೆ ಅಹವಾಲುಗಳ ಮಹಾಪೂರ ಹರಿದುಬಂತು. ಹೀಗೆ ಅಹವಾಲು ಸಲ್ಲಿಸುವುದರ ಜತೆಗೆ ಕೆಲವರು ಗೋಳು ತೋಡಿಕೊಂಡರು. ದರ್ಶನ ಸಿಗದೆ ಕೆಲವರು ಸಿಟ್ಟಾದರೆ, ಅಳಲು ಕೇಳದ್ದರಿಂದ ಬೇಸರಗೊಂಡು ಧಿಕ್ಕಾರ ಕೂಗಿದರು. ಬೆನ್ನಲ್ಲೇ ಹಲವರು ಜೈಕಾರವನ್ನೂ ಹಾಕಿದರು.

ಅರ್ಜಿ ವಿಲೇವಾರಿಗೆ ತಿಂಗಳ ಗಡುವು
ದೂರದ ಊರುಗಳಿಂದ ಅರ್ಜಿ ಹಿಡಿದುಕೊಂಡು ಬಂದವರಿಗೆ ಬಹುತೇಕ ಸಲ ಎಸಿ ಕೆಳಗೆ ಕುಳಿತ ಮಂತ್ರಿ ಮಹೋದಯರ ದರ್ಶನ ಭಾಗ್ಯ ಒತ್ತಟ್ಟಿಗಿರಲಿ, ಪ್ರವೇಶವೂ ಸಿಗುತ್ತಿರಲಿಲ್ಲ. ಆದರೆ ಸರಕಾರ ಹಮ್ಮಿಕೊಂಡಿದ್ದ ಜನಸ್ಪಂದನದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇತ್ತು. ಸಮಸ್ಯೆಗಳನ್ನು ಹೊತ್ತುತಂದ ಒಬ್ಬೊಬ್ಬ ಸಂತ್ರಸ್ತರನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕರೆದು ಕುಳ್ಳಿರಿಸಿ ಬಗೆಹರಿಸಿದರು. ಹೋಗುವಾಗ ಊಟವನ್ನೂ ಕೊಟ್ಟು ಕಳುಹಿಸಿದರು. ಸ್ಥಳದಲ್ಲಿ ಇತ್ಯರ್ಥವಾಗದ ಅರ್ಜಿಗಳ ವಿಲೇವಾರಿಗೆ ಮುಖ್ಯಮಂತ್ರಿ ತಿಂಗಳ ಗಡುವು ವಿಧಿಸಿದರು.

Advertisement

ಸ್ಥಳದಲ್ಲೇ ಪರಿಹಾರ ಘೋಷಣೆ
ಸ್ವಂತ ಉದ್ಯೋಗ ಕೈಗೊಳ್ಳಲು ಕಂಪ್ಲಿಯ ಅಂಧ ಯುವಕ ಶರಣ ಬಸವ ಕುಮಾರ್‌ಗೆ ಆರ್ಥಿಕ ನೆರವಿನ ಅಭಯ, ರಾಮನಗರದ ವಿಜಯಕುಮಾರ್‌ ಬಿನ್‌ ನರಸಿಂಹಮೂರ್ತಿ ಅವರ ಕಿಡ್ನಿ ಕಸಿಗಾಗಿ ಸ್ಥಳದಲ್ಲೇ 4 ಲಕ್ಷ ರೂ. ಮಂಜೂರು, ಸಿಂಧಗಿಯ ಬಸನಗೌಡ ಬಿರಾದಾರ್‌ಗೆ ಅಸ್ಥಿಮಜ್ಜೆ ಕಸಿಗಾಗಿ 4 ಲಕ್ಷ ಪರಿಹಾರ, ತುಮಕೂರಿನ ಎಂಟು ವರ್ಷದ ಶಾಂಭವಿಗೆ ಶ್ರವಣ ಸಾಧನಕ್ಕಾಗಿ 50 ಸಾವಿರ ನೆರವು, ಬೆಂಗಳೂರಿನ ಮಹಾಬೋಧಿ ಸಂಶೋಧನ ಕೇಂದ್ರದ ಆಧ್ಯಾತ್ಮಿಕ ಗ್ರಂಥಾಲಯ ನವೀಕರಣಕ್ಕೆ ಅಗತ್ಯವಿರುವ 20 ಲಕ್ಷ ರೂ. ಅನುದಾನ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ, ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನ ರಾಜೇಶ್‌ ಅವರಿಗೆ ಕೆಲಸ ಖಾಯಂಗೊಳಿಸುವ ಬಗ್ಗೆ ಪರಿಶೀಲನೆ -ಹೀಗೆ ನೂರಾರು ಪ್ರಕರಣಗಳಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರದ ಅಭಯ ನೀಡಿದರು.

ಈ ಭರವಸೆಗಳ ನಡುವೆ ವೃದ್ಧ ಪೋಷಕರೊಂದಿಗೆ ಬಂದು ಸಲ್ಲಿಸಿದ ವರ್ಗಾವಣೆ ಮನವಿಗಳು, ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲು ಸಲ್ಲಿಸಿದ ಅಹವಾಲು, ಮುಖ್ಯಮಂತ್ರಿಗಳ ಒಂದು ಲಕ್ಷ ಮನೆಗಳ ನಿರ್ಮಾಣ ಯೋಜನೆ ಅಡಿ ಅರ್ಜಿ ಹಾಕಿ ಹಲವು ವರ್ಷಗಳಾದರೂ ಸಿಗದ “ಮನೆ ಭಾಗ್ಯ’, ವರ್ಗಾವಣೆಗಾಗಿ ಅಲೆದು ದಯಾಮರಣ ನೀಡುವಂತೆ ಕೋರಿದ ಶಿಕ್ಷಕಿ ಸಹಿತ ಸಾವಿರಾರು ಅರ್ಜಿಗಳಿಗೆ ತತ್‌ಕ್ಷಣಕ್ಕೆ ಉತ್ತರ ಇರಲಿಲ್ಲ.

ಜನಸ್ಪಂದನ ವಿಶೇಷಗಳು
* ವಿಧಾನಸೌಧದ ಎದುರು ನಡೆದ ಮೊದಲ ಜನಸ್ಪಂದನ
* ಒಟ್ಟು 12,372 ಅರ್ಜಿಗಳಲ್ಲಿ 246 ಅರ್ಜಿ ತತ್‌ಕ್ಷಣ ವಿಲೇವಾರಿ
* ಕಂದಾಯ ಇಲಾಖೆಗೆ 3,150 ಅರ್ಜಿ
* ಮನೆ ಬೇಕೆಂದವರು 1,500 ಮಂದಿ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 903 ಅರ್ಜಿ
* 20 ಸಾವಿರಕ್ಕೂ ಹೆಚ್ಚು ಜನ ಭಾಗಿ

ವ್ಯವಸ್ಥೆಗೆ ಕನ್ನಡಿ; ಸಿಎಂ ಸ್ಪಷ್ಟ ಎಚ್ಚರಿಕೆ
ಕೇವಲ ಎರಡೂವರೆ ತಿಂಗಳುಗಳ ಅಂತರದಲ್ಲಿ ನಡೆದ ಎರಡನೇ ಜನಸ್ಪಂದನ ಇದಾಗಿದೆ. ಈ ಬಾರಿ ಹರಿದುಬಂದ ಅಹವಾಲುಗಳ ಸಂಖ್ಯೆ ದುಪ್ಪಟ್ಟಾಗಿದೆ!
ನ. 27ರಂದು ಗೃಹ ಕಚೇರಿ “ಕೃಷ್ಣಾ’ದಲ್ಲಿ ನಡೆದ ಜನಸ್ಪಂದನದಲ್ಲಿ ಸುಮಾರು ಐದು ಸಾವಿರ ಅರ್ಜಿಗಳು ಬಂದಿದ್ದವು. ಆ ಪೈಕಿ ಶೇ. 98ರಷ್ಟನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರ ನಡುವೆ ಗುರುವಾರದ ಜನಸ್ಪಂದನದಲ್ಲಿ ದುಪ್ಪಟ್ಟು ಅಂದರೆ 11 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಇದು ವ್ಯವಸ್ಥೆಗೆ ಕನ್ನಡಿ ಹಿಡಿಯಿತು.

ಈ ಬಗ್ಗೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸ್ಪಷ್ಪ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಹಂತದಲ್ಲೇ ಸಮಸ್ಯೆ ಬಗೆಹರಿಯಬೇಕು. ಜನರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಕೆಳಹಂತದಲ್ಲೇ ಸಮಸ್ಯೆ ಬಗೆಹರಿಸಿದರೆ, ಜನರು ಬೆಂಗಳೂರಿಗೆ ಬಂದು ಅರ್ಜಿ ಕೊಡುವ ಸನ್ನಿವೇಶ ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ ಎಂದು ಸೂಚಿಸಿದರು.

ತಡವಾದ ನೋಂದಣಿ; ತಡವರಿಸಿದ ಜನ
ಜನಸ್ಪಂದನಕ್ಕಾಗಿ ಬೆಳಗ್ಗೆ 7 ಗಂಟೆಗಾಗಲೇ ಸಾವಿರಾರು ಜನ ವಿಧಾನಸೌಧ ಮುಂದೆ ಜಮಾಯಿಸಿದ್ದರು. ಆಗ ಪ್ರವೇಶ ಸಿಗದೆ ರಸ್ತೆಯುದ್ದಕ್ಕೂ ನಿಂತಿದ್ದರು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸಹಿತ ನಾನಾ ಭಾಗಗಳಿಂದ ಬೆಳಗಿನಜಾವ ಬಂದಿಳಿದ ಅರ್ಜಿದಾರರು ನೇರವಾಗಿ ವಿಧಾನಸೌಧ ಪ್ರವೇಶದ್ವಾರದ ಮುಂದೆ ನೋಂದಣಿಗೆ ಕಾದುಕುಳಿತರು. ಆದರೆ ಆಗಿನ್ನೂ ನೋಂದಣಿ ಪ್ರಕ್ರಿಯೆ ಆರಂಭವಾಗಿರಲಿಲ್ಲ. ಅವರೆಲ್ಲರೂ ವಿಧಾನಸೌಧದ ಮುಂದಿನ ರಸ್ತೆಯಲ್ಲೇ ಕಾದುಕುಳಿತಿದ್ದರು. ಬೆಳಗ್ಗೆ 8ರ ಅನಂತರ ನೋಂದಣಿ ಪ್ರಕ್ರಿಯೆ ಆರಂಭವಾಯಿತು.

ಆಡಳಿತವು ಜಡತ್ವದಿಂದ ಕೂಡಿರಬಾರದು. ಕೆಳ ಹಂತದಲ್ಲೇ ಸಮಸ್ಯೆ ಬಗೆಹರಿಸಬೇಕು. ಜನರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು.
-ಸಿಎಂ ಸಿದ್ದರಾಮಯ್ಯ

 

Advertisement

Udayavani is now on Telegram. Click here to join our channel and stay updated with the latest news.

Next