Advertisement

Agriculture ವಿವಿಯಿಂದ ರೈತರಿಗೆ ಅನಗತ್ಯ ತೊಂದರೆ; ಇರುವಕ್ಕಿ ಗ್ರಾಮಸ್ಥರ ಪ್ರತಿಭಟನೆ

06:36 PM Jan 19, 2024 | Shreeram Nayak |

ಸಾಗರ: ತಾಲೂಕಿನ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನು ಹೊರತುಪಡಿಸಿ, ಉಳಿದ ಜಮೀನು ಕೃಷಿ ವಿವಿಗೆ ಡಿನೋಟಿಫಿಕೇಶನ್ ಮಾಡಿ ಕೊಡಬೇಕು. ಸ್ಥಳೀಯ ರೈತರಿಗೆ ಕೃಷಿ ವಿಶ್ವವಿದ್ಯಾಲಯ ಅಧಿಕಾರಿಗಳು ನೀಡುತ್ತಿರುವ ಕಿರುಕುಳವನ್ನು ಖಂಡಿಸಿ ಗುರುವಾರ ಇರುವಕ್ಕಿ ನಮ್ಮ ಭೂಮಿ   ನಮ್ಮ ಹಕ್ಕು ಹೋರಾಟ ಸಮಿತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ, ಇರುವಕ್ಕಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ರೈತರು ನೂರಾರು ವರ್ಷಗಳಿಂದ ಕೃಷಿ ಇನ್ನಿತರೆ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದಾರೆ. ಈಚೆಗೆ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ಸುಮಾರು 772 ಎಕರೆ ಜಾಗವನ್ನು ವಿವಿಗೆ ಮಂಜೂರು ಮಾಡಲಾಗಿದೆ. ವಿವಿಗೆ ಮಂಜೂರು ಮಾಡಿರುವ ಜಾಗದಲ್ಲಿ ರೈತರ ಜಮೀನು, ಮನೆ, ಕೊಟ್ಟಿಗೆ ಬರುತ್ತಿದೆ. ವಿಶ್ವವಿದ್ಯಾಲಯ ಸುತ್ತಲೂ ಬೇಲಿ ಹಾಕಿ ತನ್ನ ಜಮೀನು ಬಂದೋಬಸ್ತು ಮಾಡಲು ಮುಂದಾಗಿದ್ದು ರೈತರ ಓಡಾಟದ ರಸ್ತೆಯನ್ನು ಮುಚ್ಚಲಾಗಿದೆ. ಕೃಷಿ ವಿಶ್ವವಿದ್ಯಾಲಯ ಬಂದಿದ್ದು ಒಳ್ಳೆಯದು. ಆದರೆ ರೈತರಿಗೆ ಅನಗತ್ಯ ತೊಂದರೆ ಕೊಟ್ಟರೆ ಸಹಿಸಲು ಸಾಧ್ಯವಿಲ್ಲ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ರೈತರ ಮನೆ ಜಮೀನು ಕೆರೆಕಟ್ಟೆಗಳಿವೆ. ರೈತರು ಕೆರೆ ಅಭಿವೃದ್ಧಿ ಮಾಡಿದ್ದು ಅದು ಸಹ ವಿಶ್ವವಿದ್ಯಾಲಯ ಬೌಂಡರಿಯಲ್ಲಿ ಸೇರಿದೆ. ಕೃಷಿ ವಿಶ್ವವಿದ್ಯಾಲಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡಬಾರದು. ರೈತರ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದು ಶಾಸಕರು ಜಿಲ್ಲಾಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡಬೇಡಿ ಎಂದು ಸೂಚನೆ ನೀಡಿದ್ದಾರೆ. ಸರ್ಕಾರ ಕೃಷಿ ವಿಶ್ವವಿದ್ಯಾಲಯಕ್ಕೆ ಭೂಮಿ ಡಿನೋಟಿಫಿಕೇಶನ್ ಮಾಡಿಕೊಡುವಾಗ ರೈತರ ಜಮೀನು ಬಿಟ್ಟು ಮಂಜೂರಾತಿ ಕೊಡಬೇಕು ಎಂದರು.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಅರುಣ್ ಕರಡಿಮನೆ, ಉಮೇಶ್ ಕುಮಾರ್, ಸೋಮಶೇಖರ್, ಪ್ರವೀಣ್ ಕೆ.ವಿ., ಶಂಕರಪ್ಪ, ನವೀನ್, ತಾರಾಮೂರ್ತಿ, ಆನಂದ ಭೀಮನೇರಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next