Advertisement

ಅಬ್ಬರವಿಲ್ಲದ ಪ್ರಚಾರ; ಸಿದ್ಧನಾಗಿದ್ದಾನೆ ಮತದಾರ !  

10:04 PM Apr 16, 2019 | mahesh |

ಮಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಮತದಾನವಾಗಿದ್ದ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈಗ ಮತ್ತೆ ಮತದಾರ ಬಹುದೊಡ್ಡ ತೀರ್ಪು ನೀಡಲು ಸಜ್ಜಾಗುತ್ತಿದ್ದಾನೆ. ಒಟ್ಟು 17.24 ಲಕ್ಷ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಅತಿಹೆಚ್ಚು ಮತದಾನ ನಿರೀಕ್ಷಿಸಲಾಗಿದೆ. ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆಯಿದ್ದು,
ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತದಾರರು ಎಷ್ಟೊಂದು ಉತ್ಸಾಹ-ಖುಷಿಯಿಂದ ಭಾಗವಹಿಸುವುದಕ್ಕೆ ಅಣಿಯಾಗಿರುವುದನ್ನು ತಿಳಿಸುವ ಪ್ರಯತ್ನ ಉದಯವಾಣಿಯದ್ದು.

Advertisement

ಅದಕ್ಕಾಗಿ ಕ್ಷೇತ್ರದುದ್ದಕ್ಕೂ ಸಂಚರಿಸಿ, ಮತದಾರರ ಕೊನೆ ಕ್ಷಣದ ಚುನಾವಣೆ ಸಮಾಚಾರ, ಮೂಡ್‌, ಅಭ್ಯರ್ಥಿಗಳ ಪ್ರಚಾರದ ಅಬ್ಬರ, ಚುನಾವಣೆಯಲ್ಲಿ ಚರ್ಚೆಗೆ ಬಂದ ವಿಷಯ, ರಾಷ್ಟ್ರ-ರಾಜ್ಯ ನಾಯಕರ ಭೇಟಿ ಪ್ರಭಾವಳಿಯನ್ನು ಇಲ್ಲಿ ಕಲೆ ಹಾಕಲಾಗಿದೆ. ಆ ಮೂಲಕ, ಮತದಾರರ ನಾಡಿಮಿಡಿತವನ್ನು ವಾಸ್ತವಿಕ ನೆಲೆಯಲ್ಲಿ ಅರಿಯುವ-ಅಳೆಯುವ ಪ್ರಯತ್ನವಿದು.

ಹಿಂದಿನ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಎಲ್ಲಿಯೂ ಪ್ರಚಾರದ ಅಬ್ಬರವಾಗಲಿ; ಅಭ್ಯರ್ಥಿಗಳು- ಕಾರ್ಯಕರ್ತರ ನಿರಂತರ ಮನೆ-ಮನೆ ಭೇಟಿಯ ಚಿತ್ರಣ ಕಂಡಿದ್ದು ಕಡಿಮೆ. ಇಡೀ ನಮ್ಮ ಸುತ್ತಾಟದಲ್ಲಿ ಎಲ್ಲಿಯೂ ಪಕ್ಷಗಳ ಪ್ರಚಾರ ಸಭೆ ಅಥವಾ ಅಭ್ಯರ್ಥಿಗಳು-ಕಾರ್ಯಕರ್ತರನ್ನು ಮುಖಾಮುಖೀಯಾಗುವ ಸಂದರ್ಭವೂ ಕಾಣ ಸಿಗಲಿಲ್ಲ. ಕೆಲವೆಡೆಯಷ್ಟೇ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದರು. ಹೀಗಾಗಿ, ವಾಸ್ತವದಲ್ಲಿ ಮತದಾನಕ್ಕೆ ಎರಡು ದಿನ ಬಾಕಿಯಿರಬೇಕಾದರೆ, ಮಂಗಳೂರಿನಿಂದ ಸುಳ್ಯದವರೆಗೆ ಸಂಚಾರ ನಡೆಸಿದರೂ, ಎಲ್ಲೆಡೆಯೂ ಮತದಾರರು “ಈ ಸಲ ಎಲೆಕ್ಷನ್‌ ಇದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಓಟ್‌ ಕೇಳುವುದಕ್ಕೆ ಮನೆಗೆ ಕೆಲವರು ಬಂದು ಹೋಗಿರುವುದು ಬಿಟ್ಟರೆ ಚುನಾವಣೆಯ ಯಾವುದೇ ಸದ್ದು-ಗದ್ದಲವಿಲ್ಲ. ಮೊದಲೆಲ್ಲ ಓಟು ಅಂದರೆ ಈ ರೀತಿ ಇರಲಿಲ್ಲ.’ ಎನ್ನುವ ಒಕ್ಕೊರಲಿನ ಅಭಿಪ್ರಾಯ ಕೇಳಿಬಂತು.

ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ ಸಿಂಗ್‌, ಸುರೇಶ್‌ ಪ್ರಭು, ತಾವರಚಂದ್‌ ಗೆಹಲೋಟ್, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಬಿ.ಎಲ್‌., ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಹೊರತುಪಡಿಸಿದರೆ, ಇನ್ಯಾವುದೇ ಪ್ರಮುಖರು ಕ್ಷೇತ್ರಕ್ಕೆ ಬಂದಿಲ್ಲ. ಇನ್ನು ಕಾಂಗ್ರೆಸ್‌ನಲ್ಲಿ ರಾಜ್ಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ದಿನೇಶ್‌ ಗುಂಡೂರಾವ್‌, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಹೊರತುಪಡಿಸಿದರೆ, ಸ್ಟಾರ್‌ ಪ್ರಚಾರಕರಾಗಿ ಶತ್ರುಘ್ನ ಸಿನ್ಹ ಮಾತ್ರ ಬಂದು ಹೋಗಿದ್ದಾರೆ. ಅದೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಗೆ ಮೋದಿಯಿಂದ ಹಿಡಿದು ರಾಹುಲ್‌ ಗಾಂಧಿ ತನಕ ಎರಡೂ ಪಕ್ಷಗಳಿಂದ ಘಟಾನುಘಟಿ ನಾಯಕರು ಭಾಗವಹಿಸಿದ್ದರು.

ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ, ಕಾಟಿಪಳ್ಳದ ದೀಪಕ್‌ ಕುಮಾರ್‌, ಶರತ್‌ ಮಡಿವಾಳ ಕೊಲೆ ಪ್ರಕರಣವೂ ಬಹಳ ಚರ್ಚಿತವಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಂದ ಹಿಡಿದು ಅನೇಕ ಬಿಜೆಪಿ ನಾಯಕರು ಈ ಎರಡೂ ಕಡೆ ಬಂದು ಹೋಗಿದ್ದರು. ಹೀಗಾಗಿ, ಸುರತ್ಕಲ್‌-ಕೃಷ್ಣಾಪುರದಿಂದಲೇ ಕ್ಷೇತ್ರ ದರ್ಶನ ಆರಂಭಿಸಲಾಯಿತು. ಅಲ್ಲಿಗೆ ಹೋದರೆ, ಅಲ್ಲಿ ಎಲ್ಲವೂ ಸಹಜವಾಗಿತ್ತು. ಮತದಾರರು ಮತದಾನದ ದಿನವನ್ನಷ್ಟೇ ಎದುರು ನೋಡುತ್ತಿದ್ದಾರೆ. ಇಲ್ಲಿನ ಹೂ ವ್ಯಾಪಾರಿ ಹನೀಫ್‌ ಪ್ರಕಾರ, “ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಪ್ರಚಾರವೇ ಇಲ್ಲ. ಪಕ್ಷದ ಪ್ರಮುಖರು ಇರಲಿ; ಅಭ್ಯರ್ಥಿಗಳು ಒಮ್ಮೆಯಷ್ಟೇ ಬಂದು ಹೋಗಿದ್ದಾರೆ’ ಎಂದರು.

Advertisement

ಈ ಸಲ ಜನರಲ್ಲಿ ಮತದಾನದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿದೆ ಎನ್ನುವುದಕ್ಕೆ ಮೂಡಬಿದಿರೆ ತಾಲೂಕಿನ ನಿಡ್ಡೋಡಿಯ ನಿವೃತ್ತ ಶಿಕ್ಷಕಿ ಸುಶೀಲ ಹೇಳಿದ ಮಾತು ಸಾಕ್ಷಿ. “ದೇಶದ ಭವಿಷ್ಯಕ್ಕಾಗಿ ಮತದಾನ ಮಾಡಬೇಕೆನ್ನುವ ಅರಿವು ಜನರಲ್ಲಿ ಈಗ ಮೂಡಿದೆೆ. ನನ್ನ ಸೊಸೆ ಕೂಡ ಮತ ಹಾಕಲು ಶೃಂಗೇರಿಗೆ ಹೋಗುತ್ತಾರೆ’ ಎನ್ನುತ್ತಾರೆ. ವಿಶೇಷವೆಂದರೆ, ಚುನಾವಣೆ ಬಗ್ಗೆ ಜನಸಾಮಾ ನ್ಯರು ಅಷ್ಟೊಂದು ಆಸಕ್ತಿ, ಕುತೂಹಲದಿಂದ ಮಾತನಾಡುತ್ತಿದ್ದ ಚಿತ್ರಣ ಈ ಹಿಂದೆ ಕಂಡಿದ್ದು ಕಡಿಮೆ. ಇನ್ನು ಪಕ್ಷಗಳೂ ಜಿಲ್ಲೆಯ ಯಾವುದೇ ನೈಜ ಸಮಸ್ಯೆ ಅಥವಾ ವಾಸ್ತವ ವಿಚಾರವನ್ನು ಪ್ರಸ್ತಾವಿಸಿಲ್ಲ ಎನ್ನುವುದು ಗಮನಾರ್ಹ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವ ಪ್ರಮುಖ ಚರ್ಚಾ ವಿಷಯವಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಅಂಥ ಯಾವುದೇ ಆರೋಪ-ಪ್ರತ್ಯಾರೋಪಗಳಿರಲಿಲ್ಲದಿರುವುದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಇಲ್ಲಿನ ನಾಗರಿಕರೊಬ್ಬರು.

ವಿಜಯ ಬ್ಯಾಂಕ್‌ ವಿಲೀನವನ್ನು ಕಾಂಗ್ರೆಸ್‌- ಬಿಜೆಪಿ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದರೂ ನೇಪಥ್ಯಕ್ಕೆ ಸರಿಯಿತು. ನದಿ ನೀರು ವಿಷಯವಾಗಿ ಎತ್ತಿನಹೊಳೆ, ರಾಷ್ಟ್ರೀಯ ಹೆದ್ದಾರಿಗಳ ಸ್ಥಿತಿ-ಗತಿ, ಟೋಲ್‌ ಸಂಗ್ರಹ, ರೈಲ್ವೇ ಬೇಡಿಕೆಯಂಥ ಪ್ರಮುಖ ವಿಷಯಗಳನ್ನು ಕಾಂಗ್ರೆಸ್‌ ಅಥವಾ ಬಿಜೆಪಿ ಪ್ರಸ್ತಾವಿಸದಿರುವುದೂ ಕೆಲವು ಪ್ರಜ್ಞಾವಂತರಿಗೆ ಬೇಸರ ತಂದಿದೆ.

ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯ ನಾರಾವಿಯ ಕುತ್ಲೂರು ನಕ್ಸಲ್‌ ಪೀಡಿತ ಪ್ರದೇಶ. ಇಲ್ಲಿ “ಬೀಡಿ ಕಟ್ಟುವ ನಮಗೆ ಸರಕಾರದ ಆಶ್ರಯ ಯೋಜನೆ, ಉಚಿತ ಗ್ಯಾಸ್‌ ಸಂಪರ್ಕ ಲಭಿಸಿದೆ’ ಎಂದು ಲಲಿತಾ ಹೇಳಿದರು. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಚುನಾವಣೆ ಬಂದಾಗಷ್ಟೇ ಪೊಲೀಸ್‌ ಭದ್ರತೆ ಜಾಸ್ತಿ ಮಾಡು ತ್ತಾರೆಯೇ ಹೊರತು ಬೇರೇನೂ ವ್ಯತ್ಯಾಸ ಇರದು ಎಂಬುದು ಕುತ್ಲೂರಿನ ರಮೇಶ್‌ ಅಭಿಪ್ರಾಯ.

ಬೆಳ್ತಂಗಡಿ ತಾಲೂಕಿನ ಕಾಡಂಚಿನಲ್ಲಿ ಮಲೆ ಕುಡಿಯ ಕುಟುಂಬಗಳು ವಾಸಿಸುತ್ತಿದ್ದು, ಅವರಲ್ಲಿ ಚುನಾವಣೆ ಕುರಿತ ಮಾಹಿತಿ ಇದೆ ಎನ್ನುವುದಕ್ಕೆ ಬರೆಂಗಾಡಿಯ ಮಲೆಕುಡಿಯ ಮನೆ ಸಾಕ್ಷಿ. “ನಮಗೆ ಮಂಗಳೂರಿಗೆ ಮೋದಿ ಬಂದು ಹೋಗಿರುವುದು ಗೊತ್ತಿದೆ; ರಾಹುಲ್‌ ಗಾಂಧಿ ಕೇರಳದಿಂದ ಸ್ಪರ್ಧಿಸುತ್ತಿರುವುದು ಗೊತ್ತಿದೆ. ಮನೆಯಲ್ಲಿ 3 ಓಟು ಇದ್ದು, ಎ.18ರಂದು 5 ಕಿಮೀ. ದೂರದಲ್ಲಿರುವ ಬೂತ್‌ಗೆ ಹೋಗಿ ಮತದಾನ ಮಾಡುವುದಕ್ಕೆ ಸಿದ್ಧರಾಗಿದ್ದೇವೆ’ ಎಂದು ಆ ಮನೆ ಯಜಮಾನ ಕುಶಾಲಪ್ಪ ಹೇಳಿದರು.

ಬೆಳ್ತಂಗಡಿ, ಪುತ್ತೂರು ತಾಲೂಕಿನಲ್ಲಿ ಒಂದು ಕಾಲದಲ್ಲಿ ದೊಡ್ಡ ಸಮಸ್ಯೆಯಾಗಿದ್ದು ಎಂಡೋ ಸಲ್ಫಾನ್‌ ಪ್ರಕರಣ. ಈ ಹಿನ್ನೆಲೆಯಲ್ಲಿ ಕೊಕ್ಕಡದ ಆಲ್ಬರ್ಟ್‌ ಮೆನೇಜಸ್‌ ಮನೆಗೆ ಹೋದೆವು. ಅಲ್ಲಿ, 28 ವರ್ಷದ ಸಂತೋಷ್‌, ಚಲನ ಶೀಲತೆ ಕಳೆದುಕೊಂಡು ಬೆಡ್‌ ಮೇಲೆ ಮಲಗಿದ್ದ. “ಆದರೆ, ಸಂತೋಷ್‌ ಮಾತ್ರ ಮೊನ್ನೆಯಿಂದಲೇ ಓಟು ಯಾವಾಗ? ನನ್ನನ್ನು ಕರೆದುಕೊಂಡು ಹೋಗಿ; ನನಗೂ ಮತ ಹಾಕಬೇಕು ಎನ್ನುತ್ತಿದ್ದಾನೆ’ ಎಂದು ಅವನ ತಾಯಿ ಗ್ರೇಸಿ ನೋವಿನಿಂದ ನುಡಿದರು.

ಕಡಬ ಹೊಸ ತಾಲೂಕು ರಚನೆ ಪ್ರಮುಖ ಚುನಾವಣೆ ವಿಷಯವಾಗಬೇಕೆಂದು ಭಾವಿಸಿ ದ್ದೆವು. ಆದರೆ, “ಕಡಬ ಹೊಸ ತಾಲೂಕು ರಚನೆ ಯಾಗಿರುವುದು ಬಿಟ್ಟರೆ ಯಾವುದೇ ಮೂಲ ಸೌಕರ್ಯ ಅಥವಾ ಪೂರಕ ಪ್ರಕ್ರಿಯೆ ಆಗಿಲ್ಲ. ಹೀಗಾಗಿ, ಎರಡೂ ಪಕ್ಷಗಳು ಹೊಸ ತಾಲೂಕು ರಚನೆ ವಿಷಯ
ವನ್ನು ಚುನಾವಣೆ ಲಾಭಕ್ಕೆ ಬಳಸಲು ಹೋಗಿಲ್ಲ’ ಎಂದರು ಹೋಟೆಲ್‌ ಮಾಲಕ ಸುಧಾಕರ್‌.

“ಆದರ್ಶ ಗ್ರಾಮ’ವಾದ ಸುಳ್ಯ ತಾಲೂಕಿನ ಬಳ್ಪ ಗ್ರಾಮಕ್ಕೆ ಬಂದರೆ, “ಬಳ್ಪವನ್ನು ಆದರ್ಶ ಗ್ರಾಮವೆಂದು ಘೋಷಿಸಿದ್ದಷ್ಟೇ. ಒಂದೆರಡು ಸೋಲಾರ್‌ ದೀಪ, ಬ್ಯಾಂಕ್‌ ಶಾಖೆ ಬಂದಿದೆ. ಗ್ರಾಮಕ್ಕೆ ವರ್ತುಲದ ರಸ್ತೆ, ಬೋಗಯ್ಯನ ಕೆರೆ ಅಭಿವೃದ್ಧಿ ಇನ್ನು ಭರವಸೆಯಾಗಿ ಉಳಿದಿದೆ’ ಎಂದರು ಬಳ್ಪದ ಕೆಲವು ಗ್ರಾಮಸ್ಥರು. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್‌ ಸುಳ್ಯ ಭಾಗದಲ್ಲಿ ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿದೆ. ಇದೇ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ನ ಅಭ್ಯರ್ಥಿ ಸೇರಿದಂತೆ ಪಕ್ಷದ ಕೆಲವು ಪ್ರಮುಖ ರಾಜ್ಯ ನಾಯಕರು ಇಲ್ಲಿಗೆ ಬಂದು ಚುನಾವಣಾ ಪ್ರಚಾರ ನಡೆಸಿದ್ದಾರೆ. ಉಳಿದ ಬಂಟ್ವಾಳ ತಾಲೂಕು ಸಹಿತ ದಕ್ಷಿಣ ಕನ್ನಡ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಿಯೂ ಚುನಾವಣೆ ಪ್ರಚಾರದ ಅಬ್ಬರವಾಗಲಿ ಅಥವಾ ಅಭ್ಯರ್ಥಿಗಳ- ಕಾರ್ಯಕರ್ತರ ಬಿರುಸಿನ ಪ್ರಚಾರ ನಡೆಸುತ್ತಿರುವುದು ಕಾಣಿಸಿಲ್ಲ ಎನ್ನುವುದೇ ವಿಶೇಷ.

ಈ ಬಾರಿ 17.24 ಲಕ್ಷ ಮತದಾರರು
ಕ್ಷೇತ್ರದಲ್ಲಿ ಒಟ್ಟು 17,24,460 ಮತದಾರರು. ಆ ಪೈಕಿ 8,45, 308 ಪುರುಷರು ಮತ್ತು 8,79,050 ಮಹಿಳೆಯರಿದ್ದಾರೆ. ಕಳೆದ ಚುನಾವಣೆಗೆ ಹೋಲಿ ಸಿದರೆ, 1,33,303 ಮತದಾರರು ಜಾಸಿ. ಆ ಪೈಕಿ 21,292 ಮಂದಿ ಹೊಸ ಮತದಾರರು. ಸ್ಪರ್ಧಾ ಕಣದಲ್ಲಿ 13 ಮಂದಿ ಅಭ್ಯರ್ಥಿಗಳಿದ್ದು, ಒಟ್ಟು 1861 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ದಕ್ಷಿಣ ಕನ್ನಡದಲ್ಲಿ 1952ರಿಂದೀಚೆಗೆ ಲೋಕಸಭೆ ಚುನಾವಣೆಯಲ್ಲಿ ಒಟ್ಟು 9 ಬಾರಿ ಕಾಂಗ್ರೆಸ್‌ ಹಾಗೂ 7 ಬಾರಿ ಬಿಜೆಪಿ ಗೆದ್ದಿದೆ. ಕ್ಷೇತ್ರ ವಿಂಗಡನೆ ಬಳಿಕ ನಡೆದ 2009ರ ಚುನಾವಣೆಯಲ್ಲಿ ನಳಿನ್‌ 4,99,385 ಹಾಗೂ ಕಾಂಗ್ರೆಸ್‌ನ ಜನಾರ್ದನ ಪೂಜಾರಿ 4,58,965 ಮತಗಳನ್ನು ಗಳಿಸಿದ್ದರು. ನಳಿನ್‌ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಆಗ 13,63,651 ಮತದಾರರಿದ್ದು, ಶೇ.74.44ಷ್ಟು ಮತದಾನವಾಗಿತ್ತು. 2014ರ ಚುನಾವಣೆಯಲ್ಲಿ ನಳಿನ್‌ 6,42,739 ಮತ ಗಳಿಸಿದ್ದರೆ, ಜನಾರ್ದನ ಪೂಜಾರಿ 4,99,030 ಮತ ಪಡೆದಿದ್ದರು. ಗೆಲುವಿನ ಅಂತರ 1.43 ಲಕ್ಷ. ಕಳೆದ ಚುನಾವಣೆಯಲ್ಲಿ ಅಮ್‌ ಆದ್ಮಿ ಪಕ್ಷ, ಸಿಪಿಐ(ಎಂ), ಎಸ್‌ಡಿಪಿಐ ಸ್ಪರ್ಧೆ ಮಾಡಿದ್ದು, ಎಸ್‌ಡಿಪಿಐನ ಹನೀಫ್‌ ಕೊಣಾಜೆ 27 ಸಾವಿರ ಮತ ಪಡೆದಿದ್ದರು.

ಈ ಬಾರಿ 17.24 ಲಕ್ಷ ಮತದಾರರು
ಈ ಸಲದ ಚುನಾವಣೆಗೆ ಕ್ಷೇತ್ರದಲ್ಲಿ ಒಟ್ಟು 17,24,460 ಮತದಾರರು ಇದ್ದು, ಆ ಪೈಕಿ 8,45, 308 ಪುರುಷರು ಮತ್ತು 8,79,050 ಮಹಿಳೆಯರು ಇದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ, 1,33,303 ಮತದಾರರು ಜಾಸ್ತಿಯಾಗಿದ್ದು, ಆ ಪೈಕಿ 21,292 ಮಂದಿ ಹೊಸ ಮತದಾರರು. ಸ್ಪರ್ಧಾ ಕಣದಲ್ಲಿ 13 ಮಂದಿ ಅಭ್ಯರ್ಥಿಗಳಿದ್ದು, ಒಟ್ಟು 1861 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next