Advertisement

ವಿಕಲಚೇತನ ಮತದಾರರಿಗೆಪ್ರತ್ಯೇಕ ವೆಬ್‌ಸೈಟ್‌ ಸೌಲಭ್ಯ

02:02 PM Apr 08, 2019 | Team Udayavani |
ಕಾರವಾರ: ವಿಕಲಚೇತನ ಮತದಾರರನ್ನು ಗುರುತಿಸಿ ಮತದಾನಕ್ಕೆ ಅನುಕೂಲ ಕಲ್ಪಿಸಲು ಉತ್ತರಕನ್ನಡ ಜಿಲ್ಲಾಡಳಿತ ಪ್ರತ್ಯೇಕ ವೆಬ್‌ ಸೈಟ್‌ ಅಭಿವೃದ್ಧಿಪಡಿಸಿದೆ. ಅದನ್ನು ಪ್ರಾಯೋಗಿಕವಾಗಿ ಗೂಗಲ್‌ ಮ್ಯಾಪಿಂಗ್‌ ನೆರವಿನಿಂದ ಯಶಸ್ವಿಯಾಗಿ ಬಳಸಿದೆ. ಚುನಾವಣಾ ಸಿದ್ಧತೆ ಹಾಗೂ ಸುಗಮ ಮತದಾನ ಸಂಬಂಧಿಸಿದಂತೆ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ತುಷಾರ್‌ ಗಿರಿನಾಥ್‌ ಅವರ ಎದುರು ಈ ಸಾಫ್ಟ್‌ವೇರ್‌ ಉಪಯೋಗ ವಿವರಿಸಲಾಯಿತು.
ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ವಿಕಲಚೇತನ ಮತದಾರರನ್ನು ಗುರುತಿಸಿದ್ದು,
ಅವರಿಗೆ ಮತದಾನ ಮಾಡಲು ಅನುಕೂಲ ಕಲ್ಪಿಸಲು ಪ್ರತ್ಯೇಕ ಸಾಫ್ಟ್‌ ವೇರ್‌ ರೂಪಿಸಿ ಗೂಗಲ್‌ ಮ್ಯಾಪ್‌ ಮೂಲಕ
ವಿಕಲಚೇತನ ಮತದಾರರು ಎಲ್ಲಿದ್ದಾರೆ? ಅವರ ಮತಗಟ್ಟೆ ಸಂಖ್ಯೆ ಯಾವುದು?, ಮತದಾನ ಆಗಿದೆಯೇ? ಇಲ್ಲವೆ?
ಎಂದು ನೋಡಬಹುದಾದ ವ್ಯವಸ್ಥೆ ಮಾಡಿರುವುದು ರಾಜ್ಯದಲ್ಲಿಯೇ ಮೊದಲು ಎಂದು ಜಿಲ್ಲಾಧಿಕಾರಿ ಡಾ|
ಹರೀಶ್‌ಕುಮಾರ್‌ ಪ್ರಾದೇಶಿಕ ಆಯುಕ್ತರಿಗೆ ವಿವರಿಸಿದರು.
ಉತ್ತರಕನ್ನಡ ಜಿಲ್ಲಾಡಳಿತ ಎನ್‌ಐಸಿ(ನಿಕ್‌) ಸಹಯೋಗದಲ್ಲಿ ಈ ವಿನೂತನ ಸಾಫ್ಟವೇರ್‌ ರೂಪಿಸಿದ್ದು ಉತ್ತರಕನ್ನಡ ಜಿಲ್ಲೆಯ ಎಲ್ಲಾ 1437 ಮತಗಟ್ಟೆಗಳಲ್ಲಿಯೂ ಇರುವ ವಿಕಲಚೇತನ ಮತದಾರರ ವಿವರಗಳನ್ನು ಈಗಾಗಲೇ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಬಹುವಿಧ ಪುನರ್ವಸತಿ, ಆಶಾ ಕಾರ್ಯಕರ್ತರ ಮೂಲಕ ಕಲೆ ಹಾಕಲಾಗಿದೆ. ಜಿಲ್ಲೆಯಲ್ಲಿ ಒಟ್ಟು 12,913 ವಿಕಲಚೇತನ ಮತದಾರರನ್ನು ಗುರುತಿಸಿ, ಮತಗಟ್ಟೆವಾರು ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.
ಈ ಎಲ್ಲ ಮತದಾರರ ಮನೆಗಳು ಹಾಗೂ ಮತಗಟ್ಟೆಗಳನ್ನು ಹೆಸರು ಸಹಿತ ಗೂಗಲ್‌ನಲ್ಲಿ ಮ್ಯಾಪಿಂಗ್‌ ಮಾಡಲಾಗಿದ್ದು
ಪ್ರಸ್ತುತ ಎಲ್ಲವನ್ನು ಹಸಿರು ಬಣ್ಣದ ವೃತ್ತದಿಂದ ಗುರುತಿಸಲಾಗಿದೆ. ಈ ವೃತ್ತಕ್ಕೆ ಒತ್ತಿದರೆ ವಿಕಲಚೇತನ ಮತದಾರರ ವಿವರ ಲಭ್ಯವಾಗುತ್ತದೆ. ಮತ್ತು ಮತದಾನ ದಿನದಂದು ಅವರನ್ನು ಮತಗಟ್ಟೆಗೆ ಕರೆದೊಯ್ದರೆ ಆ ವೃತ್ತ ನೀಲಿ ಬಣ್ಣದಿಂದ ಕಾಣಿಸುತ್ತದೆ. ಇದರಿಂದ ಗುರುತಿಸಲ್ಪಟ್ಟ ವಿಕಲಚೇತನ ಮತದಾರ ಮತದಾನವಾಗಿದೆಯೇ ಅಥವಾ ಬಿಟ್ಟು ಹೋಗಿರುವ ಮತದಾರ ಯಾರು ಎಂದು ಸುಲಭವಾಗಿ ಕಾಣಿಸುತ್ತದೆ. ಇದನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಬಹುವಿಧ ಪುನರ್ವಸತಿ ಕಾರ್ಯಕರ್ತರು ನಿರ್ವಹಿಸಲಿದ್ದು ವೆಬ್‌ಸೈಟ್‌ ಬಳಸುವ ಬಗ್ಗೆ ಜಿಲ್ಲಾ ಮಟ್ಟದ ನೋಡಲ್‌ ಅಧಿಕಾರಿಗಳೂ ಆದ ಜಿಪಂ ಸಿಇಒ ಎಂ.ರೋಷನ್‌ ನೇತೃತ್ವದಲ್ಲಿ ಅವರಿಗೆ ತರಬೇತಿ ನೀಡಲಾಗಿದೆ. ಅಲ್ಲದೆ ವಿಕಲಚೇತನರ ಅನುಕೂಲಕ್ಕಾಗಿ ವ್ಹೀಲ್‌ಚೇರ್‌, ಬ್ರೈಲ್‌ಲಿಪಿಯ ಬ್ಯಾಲೆಟ್‌, ಭೂತಗನ್ನಡಿಗಳನ್ನು ಪ್ರತಿಗಟ್ಟೆಗೆ ವ್ಯವಸ್ಥೆ ಮಾಡಲಾಗಿದೆ.
ಗ್ರಾಮೀಣ ಭಾಗದ ಮತಗಟ್ಟೆ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಮೇಲ್ವಿಚಾರಣೆ ವಹಿಸಲು ಜಿಪಂ ಮುಖ್ಯಯೋಜನಾಧಿಕಾರಿ ವಿ.ಎಂ.ಹೆಗಡೆ ಅವರನ್ನು ನಿಯೋಜಿಸಲಾಗಿದ್ದು ಅಂಕವಿಕಲರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಜ್ಜಪ್ಪ ಸೊಗಲದ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯನ್ನೂ ಪ್ರತ್ಯೇಕ ಸಾಫ್ಟ್‌ವೇರ್‌ ರೂಪಿಸಿ ಗೂಗಲ್‌ ಮ್ಯಾಪಿಂಗ್‌ ಮಾಡುವ
ಸೌಲಭ್ಯವನ್ನು ರೂಪಿಸಿಕೊಂಡಿದ್ದು ಉತ್ತರಕನ್ನಡ ಜಿಲ್ಲಾಡಳಿತ ರಾಜ್ಯದಲ್ಲಿಯೇ ಮಾದರಿಯಾಗಿದೆ.
ಪ್ರಾದೇಶಿಕ ಆಯುಕ್ತ ತುಷಾರ್‌ ಗಿರಿನಾಥ್‌, ಜಿಲ್ಲಾಡಳಿತ ಕೈಗೊಂಡ ಸುಗಮ ಮತದಾನ ಸೌಲಭ್ಯಗಳು ಹಾಗೂ ಮತದಾರಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿ ಕಾರಿ ಡಾ| ಹರೀಶ್‌ಕುಮಾರ್‌, ಜಿಪಂ
ಸಿಇಒ ಎಂ.ರೋಷನ್‌, ಅಪರ ಜಿಲ್ಲಾಧಿಕಾರಿ ನಾಗರಾಜ್‌ ಎಸ್‌, ಎಸ್‌.ಯೋಗೇಶ್ವರ, ಮತ್ತಿತರ ಅಧಿ ಕಾರಿಗಳು ಉಪಸ್ಥಿತರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next