Advertisement

ಟಿಬೆಟ್ ನಲ್ಲೂ ವಿಶಿಷ್ಟ ದೈವಾರಾಧನೆ: ದೈವಕ್ಕೆ ಉಪ ಸಚಿವ ಸ್ಥಾನ ನೀಡಿದ ಟಿಬೆಟ್‌!

01:54 PM Oct 14, 2022 | Team Udayavani |

ಹುಬ್ಬಳ್ಳಿ: “ಕಾಂತಾರಾ’ ಸಿನೆಮಾದ ನಂತರದಲ್ಲಿ ಕರಾವಳಿಯ ದೈವಗಳ ವಿಚಾರ ದೊಡ್ಡ ಸುದ್ದಿಯಲ್ಲಿದೆ. ಕರಾವಳಿಯ ದೈವಗಳ ರೀತಿಯಲ್ಲಿಯೇ ಟಿಬೆಟಿಯನ್‌ ರಲ್ಲಿ ದೈವ ಮಹತ್ವದ ಸ್ಥಾನ ಪಡೆದಿದೆ. ಟಿಬೆಟಿಯನ್‌ ಸರ್ಕಾರ ದೈವದ ಸಲಹೆ ಪಡೆಯುತ್ತಿದ್ದು, ಅದಕ್ಕೆ ಉಪ ಸಚಿವ ಸ್ಥಾನ ನೀಡಿದೆ.

Advertisement

ಟಿಬೆಟಿಯನ್ನರ ಪರಮೋಚ್ಛ ಧರ್ಮಗುರು ದಲಾಯಿ ಲಾಮಾ ಅವರಿಗೂ ಇದೇ ದೈವ ಸಲಹೆ ನೀಡುತ್ತಿದ್ದು, ದಲಾಯಿ ಲಾಮಾ ಅವರು ವಿದೇಶವೊಂದಕ್ಕೆ ಹೋಗುವುದು ಬೇಡ ಎಂಬ ಸಲಹೆ ನೀಡಿತ್ತು. ಗಮನಾರ್ಹ ಅಂಶವೆಂದರೆ ಮುಂಡಗೋಡದ ಟಿಬೆಟಿಯನ್‌ ಶಿಬಿರದಲ್ಲಿಯೇ ಈ ವಿದ್ಯಮಾನ ನಡೆದಿತ್ತು!

ಕರಾವಳಿಯ ಭೂತಾರಾಧನೆ, ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಕಾರ್ಣಿಕ ಹೇಳಿಕೆ ರೀತಿಯಲ್ಲಿಯೇ ಟಿಬೆಟಿಯನ್‌ರಲ್ಲೂ ದೈವಗಳ ಆಚರಣೆ ಪ್ರಮುಖವಾಗಿದೆ. ಟಿಬೆಟಿಯನ್‌ ಸರ್ಕಾರ ದೈವಕ್ಕೆ ಅಧಿಕೃತ ಸಂರಕ್ಷಕ ಸ್ಥಾನ ನೀಡಿದ್ದು, ಅದರಲ್ಲೂ ನೆಚುಂಗ್‌ ದೈವಕ್ಕೆ ಉಪ ಸಚಿವ ಸ್ಥಾನ ನೀಡಿ ಗೌರವಿಸುತ್ತಿದೆ. ದೈವದ ಸಲಹೆ-ಸೂಚನೆಗಳನ್ನು ಟಿಬೆಟ್‌ ಜನತೆ ಭಕ್ತಿ-ಭಾವದಿಂದ ನಂಬುತ್ತಾರೆ. ದೈವದ ಆರಾಧಾನೆ ಮಾಡುತ್ತಾರೆ. ತಮಗೆ ಒದಗಿದ ಸಂಕಷ್ಟ-ನೋವು, ಸಮಸ್ಯೆಗಳ ಪರಿಹಾರಕ್ಕೆ ದೈವದ ಮೊರೆ ಹೋಗುತ್ತಾರೆ.

ಭಾರತಕ್ಕೆ ಲಾಮಾ: ಇನ್ನು ಟಿಬೆಟಿಯನ್ನರ ಪರಮೋಚ್ಛ ಧರ್ಮಗುರು ದಲಾಯಿ ಲಾಮಾ ಅವರೂ ಪ್ರಮುಖ ವಿಚಾರ-ವಿಷಯಗಳಲ್ಲಿ ನೆಚುಂಗ್‌ ದೈವದ ಮೊರೆ ಹೋಗಿ ಪರಿಹಾರ ಪಡೆದುಕೊಂಡಿದ್ದಿದೆ. ಚೀನಾ-ಟಿಬೆಟ್‌ ನಡುವಿನ ವಿವಾದ ಹಲವು ದಶಕಗಳದ್ದಾಗಿದೆ. ಟಿಬೆಟ್‌ನ್ನು ವಶಪಡಿಸಿಕೊಳ್ಳುವ ಮೊದಲು ಚೀನಾ ಲಾಮಾ ಅವರನ್ನು ಮಾತುಕತೆಗೆ ಆಹ್ವಾನಿಸಿತ್ತು. ಟಿಬೆಟಿಯನ್ನರ ಮೇಲೆ ಸದಾ ಕ್ರೌರ್ಯ-ದೌರ್ಜನ್ಯ ನಡೆಸುತ್ತಿದ್ದ ಚೀನಾದ ಈ ನಡೆ ಬಗ್ಗೆ ಸಂಶಯಗೊಂಡಿದ್ದ ಟಿಬೆಟ್‌ ಸರಕಾರ ಹಾಗೂ ದಲಾಯಿ ಲಾಮಾ ಅವರು ನೆಚುಂಗ್‌ ದೈವದ ಮೊರೆ ಹೋಗಿದ್ದರು.

ಆಗ ದೈವ ಚೀನಾದ ಮಾತುಕತೆ ಹಿಂದೆ ಷಡ್ಯಂತ್ರ-ಕುತಂತ್ರ ಅಡಗಿದ್ದರ ಸಂದೇಶ ನೀಡಿತ್ತಲ್ಲದೆ, ಮಾತುಕತೆಗೆ ಹೋಗದಂತೆ ಹಾಗೂ ಮುಂದಿನ ಆಶ್ರಯದ ರೂಪವಾಗಿ ಭಾರತದ ಕಡೆ ಕೈ ತೋರಿಸಿತ್ತು. ದೈವದ ಸಲಹೆಯಂತೆಯೇ ಚೀನಾದ ಕಪಟತನದಿಂದ ತಪ್ಪಿಸಿಕೊಂಡು ಲಾಮಾ ಅವರು ಭಾರತಕ್ಕೆ ಬಂದು ನೆಲೆಸಿದ್ದಾರೆ ಎಂಬುದನ್ನು ಟಿಬೆಟಿಯನ್ನರು ಒಪ್ಪುತ್ತಾರೆ.

Advertisement

ಲಾಮಾ ಅವರ ಅಸಂಖ್ಯಾತ ಅನುಯಾಯಿಗಳು ಭಾರತಕ್ಕೆ ಬಂದು ಇಂದಿಗೂ ಆಶ್ರಯ ಪಡೆದುಕೊಂಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಟಿಬೆಟಿಯನ್‌ ಶಿಬಿರಗಳು ನೆಲೆಗೊಂಡಿವೆ. ಲಾಮಾ ಅವರು ಹಿಂದೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್‌ ಶಿಬಿರಕ್ಕೆ ಆಗಮಿಸಿ ದ್ದರು. ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಉದ್ದೇಶ ಹೊಂದಿದ್ದರು. ಈ ಬಗ್ಗೆ ದೈವದ ಮುಂದೆ ಪ್ರಸ್ತಾಪ ಮಾಡಲಾಗಿತ್ತು. ವಿದೇಶ ಪ್ರವಾಸಕ್ಕೆ ಹೋಗದಂತೆ ಸಲಹೆ
ನೀಡಿದ್ದರಿಂದ ಅವರು ಪ್ರವಾಸ ರದ್ದುಪಡಿಸಿದ್ದರು.ಇದಾದ ಕೆಲ ದಿನಗಳಲ್ಲಿಯೇ ವಿಶ್ವದಾದ್ಯಂತ ಕೋವಿಡ್‌ ಮಹಾಮಾರಿ ವ್ಯಾಪಿಸಿಕೊಂಡಿತ್ತು.

ನೆಚುಂಗ್‌ಗೆ ಉಪ ಮಂತ್ರಿ ಸ್ಥಾನ: ಟಿಬೆಟಿಯನ್‌ ಬೌದ್ಧ ಪರಂಪರೆ-ಆಚರಣೆಯಲ್ಲಿ ವಿವಿಧ ರೀತಿಯ ದೈವಗಳಿದ್ದರೂ ನೆಚುಂಗ್‌ ಎಂಬ ದೈವಕ್ಕೆ ವಿಶೇಷ ಸ್ಥಾನ-ಗೌರವವಿದೆ. ಟಿಬೆಟಿಯನ್‌ ಸರ್ಕಾರ ಇದಕ್ಕೆ ವಿಶೇಷ ಸಂರಕ್ಷಕ ದೈವದ ಸ್ಥಾನದ ಜತೆಗೆ ಉಪ ಮಂತ್ರಿ ಸ್ಥಾನವನ್ನು ನೀಡಿದೆ. ದೈವಕ್ಕೆ ಸಚಿವ ಸ್ಥಾನಮಾನ ನೀಡಿದ ವಿಶ್ವದ ಮೊದಲ ಸರ್ಕಾರ ಇದೆಂದರೂ ತಪ್ಪಾಗಲಾರದು. ಸರಕಾರಕ್ಕೆ ಸಂಕಷ್ಟ, ಸಮಸ್ಯೆ-ಕಂಟಕ ಎದುರಾದಾಗ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇನ್ನಿತರ ಪ್ರಮುಖ ಸಂದರ್ಭದಲ್ಲಿ ಟಿಬೆಟಿಯನ್‌ ಸರ್ಕಾರ ನೆಚುಂಗ್‌ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪರಿಹಾರದ ಬೇಡಿಕೆ ಸಲ್ಲಿಸುತ್ತಿದೆ. ದೈವದಿಂದ ಬರುವ ಸಲಹೆ-ಪರಿಹಾರದ ಸೂಚನೆಯಂತೆ ಸರ್ಕಾರ ನಡೆದುಕೊಳ್ಳುವ ಪರಂಪರೆ ಪಾಲಿಸಲಾಗುತ್ತದೆ.

ಟಿಬೆಟಿಯನ್ನರಿಗೆ ದೈವ ಸಾರ್ವಜನಿಕವಾಗಿಯೇ ಭವಿಷ್ಯ, ಸಲಹೆ-ಸೂಚನೆಗಳನ್ನು ನೀಡುತ್ತದೆ. ಆದರೆ, ಧರ್ಮಗುರು ದಲಾಯಿ ಲಾಮಾ ಅವರ ವಿಚಾರಕ್ಕೆ ಬಂದಾಗ ಯಾವುದೇ ವಿಷಯ-ವಿಚಾರವಿರಲಿ ಅದನ್ನು ಸಾರ್ವಜನಿಕವಾಗಿ ಹೇಳದೆ, ನೇರವಾಗಿ ಅವರ ಕಿವಿಯಲ್ಲಿ ರಹಸ್ಯವಾಗಿ ಹೇಳುತ್ತದೆ ಎನ್ನಲಾಗಿದೆ.

ದೈವದ ಹೇಳಿಕೆ ಹೇಗೆ?
ಟಿಬೆಟಿಯನ್ನರು ಕರಾವಳಿ ಭಾಗದ ಭೂತಾರಾಧನೆ ಮಾದರಿಯಲ್ಲಿಯೇ ದೈವಾರಾಧನೆಗೆ ಮುಂದಾಗುತ್ತಾರೆ. ದೈವಾರಾಧಕ ವ್ಯಕ್ತಿ ಗೋಲ್ಡನ್‌ ಸಿಲ್ಕ್ ನ ಮೇಲುಡುಗೆ, ಕೆಂಪು, ಬಿಳಿ, ಹಸಿರು, ಹಳದಿ, ನೀಲಿ ಇನ್ನಿತರ ಬಣ್ಣಗಳ ನಿಲುವಂಗಿ, ಕೀರಿಟದೊಂದಿಗೆ ವಿಶೇಷ ಅಲಂಕಾರಿತರಾಗಿರುತ್ತಾರೆ. ಕೈಯಲ್ಲಿ ಖಡ್ಗವಿರುತ್ತದೆ. ದೈವ ನುಡಿಯುವಾಗ ದೈವತ್ವ ಆವರಿಸಿಕೊಂಡಂತೆ ಇರುತ್ತಾರೆ. ಸಹಾಯಕರಿಬ್ಬರು ದೈವಾರಾಧಕ ವ್ಯಕ್ತಿಯನ್ನು ಹಿಡಿದುಕೊಂಡು
ನಿಂತಿರುತ್ತಾರೆ.

ನಿಧಾನಕ್ಕೆ ನೃತ್ಯ ಮಾಡುವ ಮೂಲಕ ದೈವವಾಣಿ ಹೇಳುತ್ತಾರೆ. ಟಿಬೆಟಿಯನ್‌ ದೈವ ಕೆಲವು ವಿಷಯವನ್ನು ನೇರವಾಗಿ, ಇನ್ನು ಕೆಲವನ್ನು ನಮ್ಮ ಕಾರ್ಣಿಕರು ಹೇಳುವ ರೀತಿಯಲ್ಲಿ ಒಗಟಿನಂತೆ ಹೇಳುತ್ತದೆ. ದೈವದ ಪೂಜೆಯಲ್ಲಿರುವ ಟಿಬೆಟಿಯನ್‌ ವಿಶೇಷ ಪಂಡಿತರು ಒಗಟು ಬಿಡಿಸಿ ಆ ಹೇಳಿಕೆಯನ್ನು ಸಾಮಾನ್ಯ ಜನರಿಗೂ ತಿಳಿಯುವಂತೆ ಅರ್ಥೈ ಯಿಸುತ್ತಾರೆ, ವಿವರಣೆ ನೀಡುತ್ತಾರೆ. ನಮ್ಮ ಜನ ಕಾರ್ಣಿಕ ಕೇಳಲು ಹೇಗೆ ಸಾರ್ವಜನಿಕವಾಗಿ ಒಂದೆಡೆ ಸೇರಿರುತ್ತಾರೋ ಅದೇ ರೀತಿ ಟಿಬೆಟಿಯನ್‌ ಮಕ್ಕಳು, ಯುವಕರು, ವಯಸ್ಕರು, ವೃದ್ಧರು, ಮಹಿಳೆಯರು ಎಲ್ಲರೂ ನೆರೆದು ದೈವದ ನುಡಿಗಳನ್ನು ಕೇಳುತ್ತಾರೆ.

ದೈವದ ಪರಿಕಲ್ಪನೆ ಪ್ರಾಚೀನ ಕಾಲದಿಂದಲೂ ವಿವಿಧೆಡೆ ಆಚರಣೆಯಲ್ಲಿದೆ. ಭಾರತ, ಮೆಕ್ಸಿಕೊ, ಬ್ರೆಜಿಲ್‌ ಇನ್ನಿತರ ದೇಶಗಳಲ್ಲಿಯೂ ದೈವದ ಆಚರಣೆ ಇದೆ. ಟಿಬೆಟಿಯನ್ನರಲ್ಲಿಯೂ ದೈವಾರಾಧನೆ ವಿಶಿಷ್ಟವಾಗಿದೆ. ಮನುಷ್ಯ ಮತ್ತು ದೈವದ ನಡುವಿನ ಮಾಧ್ಯಮವಾಗಿ ಇದು ಬಳಕೆಯಾಗುತ್ತಿದೆ. ಧರ್ಮಶಾಲಾದಲ್ಲಿ ದೈವಾರಾಧನೆಗೆ ಹೆಚ್ಚಿನ ಮಹತ್ವ ಇದ್ದು, ಟಿಬೆಟಿಯನ್‌ ಸರ್ಕಾರ ದೈವಕ್ಕೆ ಉಪ ಸಚಿವ ಸ್ಥಾನ ನೀಡಿರುವುದನ್ನು ದೈವಕ್ಕಿರುವ ಮಹತ್ವ ಮನವರಿಕೆ ಆಗುತ್ತದೆ.
●ಅಮೃತ ಜೋಶಿ,
ರಾಷ್ಟ್ರೀಯ ಸಹ ಸಂಯೋಜಕ, ಕೋರ್‌
ಗ್ರೂಪ್‌ ಫಾರ್‌ ಟಿಬೆಟ್‌

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next