Advertisement

ದಲಿತರ ಕೇರಿಯಲ್ಲಿ ಕೇಂದ್ರ ಸಚಿವರ ಸೆಲ್ಫಿ

01:31 PM Jun 07, 2017 | Team Udayavani |

ಬೆಂಗಳೂರು: ಬೊಮ್ಮನಹಳ್ಳಿಯಲ್ಲಿನ ಆ ದಲಿತರ ಕೇರಿ ಮಂಗಳವಾರ ನವ ವಧುವಿನಂತೆ ಸಿಂಗಾರಗೊಂಡಿತ್ತು. ಅಲ್ಲಿ ಹಬ್ಬದ ವಾತಾವರಣ ಆವರಿಸಿತ್ತು. ಪ್ರತಿ ಮನೆಯಂಗಳದಲ್ಲಿ ರಂಗೋಲಿ ಚಿತ್ತಾರ, ಕೇರಿಯಲ್ಲಿ ರಾರಾಜಿಸುತ್ತಿದ್ದ ನಾಯಕರ ಕಟೌಟ್‌ಗಳು, ಅತಿಥಿಗಳಿಗಾಗಿ ತಯಾರಿಸಿದ ವಿಶೇಷ ಖಾದ್ಯ ಬಾಯಲ್ಲಿ ನೀರೂರಿಸುತ್ತಿತ್ತು. ಕೇಂದ್ರ ಇಂಧನ ಸಚಿವ ಪಿಯೂಷ್‌ ಗೋಯಲ್‌ ಭೇಟಿ ಹಿನ್ನೆಲೆಯಲ್ಲಿ ಸುಮಾರು 25 ಮನೆಗಳಿರುವ ಬೊಮ್ಮನಹಳ್ಳಿಯ ದಲಿತರ ಕೇರಿಯಲ್ಲಿ ಕಂಡುಬಂದ ದೃಶ್ಯವಿದು. 

Advertisement

ಕೇಂದ್ರ ಸಚಿವರನ್ನು ಬರಮಾಡಿಕೊಳ್ಳಲು ನಸುಕಿನಲ್ಲೇ ದಲಿತರ ಕೇರಿ ಸಿಂಗಾರಗೊಂಡಿತ್ತು. ಸಚಿವರು ಆಗಮಿಸುತ್ತಿದ್ದಂತೆ ಕರತಾಡನದೊಂದಿಗೆ  ಅದ್ಧೂರಿ ಸ್ವಾಗತ ನೀಡಲಾಯಿತು. ನಂತರ ದಲಿತರ ಮನೆಗಳಿಗೆ ತೆರಳಿದ ಪಿಯೂಷ್‌ ಗೋಯಲ್‌, ಚಿತ್ರಾನ್ನ, ಚಪಾತಿ, ಬೀನ್ಸ್‌, ಆಲೂಗಡ್ಡೆ ಪಲ್ಯ ಸೇವಿಸಿ, ಕುಟುಂಬದ ಸದಸ್ಯರೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಇದರ ಘಟನೆಯ ಸವಿನೆನಪಿಗಾಗಿ ಸಸಿ ನೆಟ್ಟರು. ಆಗ ಕುಟುಂಬದ ಸದಸ್ಯರ ಖುಷಿಗೆ ಪಾರವೇ ಇರಲಿಲ್ಲ.
 
ಮೊದಲು ಆರೆಸ್ಸೆಸ್‌ ಕಾರ್ಯಕರ್ತರಾಗಿದ್ದ ಹೊಂಗಸಂದ್ರದ ದಿವಂಗತ ಮದನಗಿರಿಯಪ್ಪ ಅವರ ಮನೆಗೆ ತೆರಳಿದ ಪಿಯೂಷ್‌ ಗೋಯಲ್‌, ಚಪಾತಿ, ಬೀನ್ಸ್‌ ಮತ್ತು ಆಲೂಗಡ್ಡೆ ಪಲ್ಯ ಸೇವಿಸಿದರು. ಅಲ್ಲಿಂದ ಅದೇ ಕೇರಿಯ ರಾಯಪ್ಪ ಅವರ ಮನೆಯಲ್ಲಿ ಕಾಫಿ ಹೀರಿದರು. ಕುಟುಂಬದ ಸದಸ್ಯರೊಂದಿಗೆ ಹರಟಿದರು. ಆಮೇಲೆ ಫೋಟೋ ತೆಗೆಸಿಕೊಂಡರು. ಈ ವೇಳೆ ಮದನಗಿರಿಯಪ್ಪ ಅವರ ಪತ್ನಿ ಮಲ್ಲಿಕಾ (ಯಲ್ಲಮ್ಮ) ಅವರಿಗೆ ಸಚಿವರು ಒಂದು ಲಕ್ಷ ರೂ. ದೇಣಿಗೆ ನೀಡಿದರು. 

ಇದೊಂದು ಸುವರ್ಣ ಕ್ಷಣ ಎಂದ ಸಚಿವ: ದಲಿತರಿಗೆ ಕೇಂದ್ರ ಸರ್ಕಾರ ಅನೇಕ ಸವಲತ್ತುಗಳನ್ನು ನೀಡಿದೆ. ಇದಕ್ಕಾಗಿ “ಭೀಮ ನಕ್ಷೆ’ ರೂಪಿಸಿದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು. ಈ ವೇಳೆ ಶಾಸಕ ಸತೀಶ್‌ ರೆಡ್ಡಿ, ಕೇರಿಯ ಪ್ರತಿ ಕುಟುಂಬ ಆಧಾರ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಗಳನ್ನು ಲಿಂಕ್‌ ಮಾಡಿಸಿಕೊಂಡಿದೆ ಎಂದು ಗಮನಕ್ಕೆ ತಂದರು. 

ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಾ, “ಇವು ನನ್ನ ಬದುಕಿನ ಸುವರ್ಣ ಕ್ಷಣಗಳು. ಸಹೋದರಿಯರ ಮನೆಗೆ ಬಂದಷ್ಟು ಖುಷಿಯಾಗಿದೆ. ಇಲ್ಲಿಯ ಜನರ ಆತಿಥ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಈ ಕೇರಿಗೆ ಬಾರದಿದ್ದರೆ, ಸ್ಮರಣೀಯ ಅನುಭವ ಕಳೆದುಕೊಳ್ಳುತ್ತಿದ್ದೆ. ಈ ಅವಕಾಶ ಕಲ್ಪಿಸಿದ್ದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ಅಭಿನಂದನೆ’ ಎಂದು ಸಂತಸ ಹಂಚಿಕೊಂಡರು. 

ರಾಜಕೀಯ ಭೇಟಿ ಅಲ್ಲ: “2018ರ ವಿಧಾನಸಭೆ ಚುನಾವಣೆಗೂ ಈ ಭೇಟಿಗೂ ಸಂಬಂಧವಿಲ್ಲ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಅಮಿತ್‌ ಷಾ ಅವರ ಸೂಚನೆಯಂತೆ ಪ್ರತಿ ಕಾರ್ಯಕರ್ತರ ಮನೆಗೆ ಭೇಟಿ ನೀಡುತ್ತಿದ್ದೇನೆ’ ಎಂದೂ ಅವರು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಬೊಮ್ಮನಹಳ್ಳಿ ಸಿಗ್ನಲ್‌ನಲ್ಲಿರುವ ಸ್ವಾಮಿ ವಿವೇಕಾನಂದ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಸ್ವತಃ ಪೊರಕೆ ಹಿಡಿದು ಕಸ ಗೂಡಿಸಿದರು. ಈ ಮೂಲಕ ಸ್ವತ್ಛತೆ ಬಗ್ಗೆ ಜಾಗೃತಿ ಮೂಡಿಸಿದರು. 

Advertisement

ಮೀಸಲಾತಿ ರದ್ದಾಗದು: ನೂರಕ್ಕೆ ನೂರರಷ್ಟು ಮೀಸಲಾತಿ ಮುಂದುವರಿಸಲಾಗುವುದು. ದಲಿತರಿಗೆ ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.  ದಲಿತರ ಕಾಲೊನಿಗೆ ಭೇಟಿ ನೀಡಿದ ವೇಳೆ ಬಹುಜನ ದಲಿತ ಸಂಘ ಸಮಿತಿ ಅಧ್ಯಕ್ಷ ಆರ್‌.ಎಂ.ಎಂ. ರಮೇಶ್‌, ದಲಿತರ ಮೀಸಲಾತಿ ರದ್ದುಗೊಳಿಸಬಾರದು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಆರ್ಥಿಕವಾಗಿ, ಸಾಮಾಜಿಕವಾಗಿ ದಲಿತರು ಸ್ವಾವಲಂಬಿ ಹಾಗೂ ಅಭಿವೃದ್ಧಿ ಆಗುವವರೆಗೆ ಮೀಸಲಾತಿ ರದ್ದುಗೊಳಿಸುವುದಿಲ್ಲ. ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಹೇಳಿದರು. ದಲಿತರ ಕಾಲೋನಿಗೆ ಭೇಟಿ ನೀಡಿದ ನಂತರ ಯಲ್ಲಮ್ಮ ದೇವಿ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಚಿವರು ಪೂಜೆ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next