Advertisement

ಮುಗಿಯದ ಕಾಮಗಾರಿ: ಅಪಘಾತಗಳ ಸರಮಾಲೆ

03:07 PM May 19, 2023 | Team Udayavani |

ಕಡಬ: ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಮರ್ದಾಳ ಸಮೀಪದ ನೆಕ್ಕಿತಡ್ಕ ಎಂಬಲ್ಲಿ ರಸ್ತೆಗೆ ಮೋರಿ ರಚಿಸಲು ಪ್ರಾರಂಭಿಸಿ ಎರಡು ತಿಂಗಳಾದರೂ ಕಾಮಗಾರಿ ಮುಗಿಯದೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಲೇ ಇದೆ.

Advertisement

ಈಗ ಮೋರಿ ರಚಿಸುತ್ತಿರುವ ಸ್ಥಳದಲ್ಲಿ ಈ ಹಿಂದೆ ಎರಡು ಫೀಟ್‌ ಸುತ್ತಳತೆಯ ಪೈಪ್‌ ಅಳವಡಿಸಿರುವುದರಿಂದ ಮಳೆ ಗಾಲದಲ್ಲಿ ಇಲ್ಲಿ ನೀರು ಸರಾಗವಾಗಿ ಹರಿಯದೆ ಮಳೆ ನೀರು ಶೇಖರಣೆಯಾಗಿ ಸಮಸ್ಯೆ ತಲೆದೋರುತ್ತಿತ್ತು. ಈ ಬಗ್ಗೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿ ಸರಿಯಾದ ಮೋರಿ ಅಳವಡಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿರುವ ಇಲಾಖಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಇದೀಗ ಮಳೆಹಾನಿಯೋಜನೆಯಲ್ಲಿ ಹೆದ್ದಾರಿ ದುರಸ್ತಿ ಅನುದಾನದಲ್ಲಿ ಇಲಾಖೆ ಮುಖಾಂತರ ಮೋರಿ ರಚಿಸುವ ಕಾರ್ಯ ಎರಡು ತಿಂಗಳ ಹಿಂದೆ ಪ್ರಾರಂಭಿಸಲಾಗಿದೆ.

ರಸ್ತೆಯ ಒಂದು ಭಾಗದಿಂದ ಕಾಮಗಾರಿ ಪ್ರಾರಂಭಿಸಿ ಪೈಪ್‌ ಅಳವಡಿಸಿ ಮಣ್ಣು ಹಾಕದೆ ಒಂದು ಬದಿಯಲ್ಲಿ ಮಾತ್ರ ಬ್ಯಾರಿಕೇಡ್‌ ಹಾಕಲಾಗಿದೆ. ಒಂದೆಡೆ ಈ ಬ್ಯಾರಿಕೇಡ್‌, ಇನ್ನೊಂದೆಡೆ ಮೋರಿ ಅಳವಡಿಸಿ ಮಣ್ಣ ಹಾಕದೆ ಇರುವುದರಿಂದ ಅಪಘಾತಗಳು ನಿರಂತರ ನಡೆಯುತ್ತಲೇ ಇದೆ. ಮಾರ್ಚ್‌ಲ್ಲಿ ಕಾಮಗಾರಿ ಪ್ರಾರಂಭಿಸಿ ಬಿಟ್ಟು ಹೋದ ಗುತ್ತಿಗೆದಾರ ಮತ್ತೆ ಈ ಕಡೆ ಸುಳಿಯಲೇ ಇಲ್ಲ. ಮೂಲ್ಕಿ ಮೂಲದ ಇಮ್ರಾನ್‌ ಎನ್ನುವವರು ಕಾಮಗಾರಿ ಗುತ್ತಿಗೆ ಪಡೆದಿದ್ದು, ಕಾಮಗಾರಿ ಪ್ರಾರಂಭಿಸಿ ಕಾಮಗಾರಿಯನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. ಪರಿಣಾಮ ಈಗ ಅಪಘಾತದ ಸರಮಾಲೆ ಇಲ್ಲಿ ಸಂಭವಿಸುತ್ತಿದೆ.

ಉಪ್ಪಿನಂಗಡಿಯ ಹಿರೆಬಂಡಾಡಿ ನಿವಾಸಿಯೊಬ್ಬರು ತಮ್ಮ ಸಂಬಧಿಕರ ಮನೆ ಮರ್ದಾಳಕ್ಕೆ ಆಗಮಿಸುತ್ತಿದ್ದಾಗ ಅವರು ಚಲಾಯಿಸುತ್ತಿದ್ದ ಬೈಕ್‌ ಅಪಘಾತಕ್ಕೆ ಒಳಗಾಗಿದೆ. ಇವರಿಗೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಮಗಾರಿ ಪ್ರಾರಂಭವಾದ ದಿನದಿಂದ ಈವರೆಗೆ ಒಟ್ಟ 13 ಅಪಘಾತಗಳು ಸಂಭವಿಸಿದ್ದು ಆತಂಕಕ್ಕೆ ಕಾರಣವಾಗಿದೆ. ಸಂಬಧಪಟ್ಟವರು ತತ್‌ಕ್ಷಣ ಕ್ರಮ ಕೈಗೊಂಡು ಕಾಮಗಾರಿ ಮುಗಿಸಕೊಡಬೇಕು ಎಂದು ಜನರು ಅಗ್ರಹಿಸಿದ್ದಾರೆ.

ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ
ಮಳೆಹಾನಿ ನಿರ್ವಹಣೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಗುತ್ತಿಗೆದಾರರ ಕೆಲಸದವರು ಕೈಕೊಟ್ಟು ಕಾಮಗಾರಿ ನಿಧಾನಗತಿಯಲ್ಲಿ ಸಾಗುವಂತಾಗಿದೆ. ಅಲ್ಲಿ ಅಪಘಾತಗಳು ಸಂಭವಿಸುತ್ತವೆ ಎನ್ನುವ ಕಾರಣಕ್ಕಾಗಿ ಇಲಾಖೆ ವತಿಯಿಂದಲೇ ಮೋರಿ ಅಳವಡಿಸಿದಲ್ಲಿಗೆ ಮಣ್ಣು ಹಾಕಲಾಗುತ್ತಿದೆ. ಈಗ ಪ್ರಾರಂಭಿಸಿರುವ ಕಾಮಗಾರಿಯನ್ನು ಇನ್ನೆರಡು ದಿನಗಳಲ್ಲಿ ಮುಗಿಸಿ ಇನ್ನೊಂದು ಭಾಗದ ಕಾಮಗಾರಿ ಪ್ರಾರಂಭಿಸಲಾಗುವುದು. ವಾರದಲ್ಲಿ ಕಾಮಗಾರಿ ಪೂರ್ತಿಗೊಳಿಸಲಾಗುವುದು. ಅಪಘಾತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು.
-ಕನಿಷ್ಕ ಎಸ್‌. ಚಂದ್ರ , ಸಹಾಯಕ ಅಭಿಯಂತರರು, ಲೋಕೊಪಯೋಗಿ ಇಲಾಖೆ ಪುತ್ತೂರು ವಿಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next