Advertisement

ಜಿಲ್ಲೆಯಲ್ಲಿ ಭೂಗರ್ಭ ಜಲಮಟ್ಟ ಕುಸಿತ

02:40 AM May 21, 2018 | |

ಕಾಸರಗೋಡು: ವರ್ಷ ದಿಂದ ವರ್ಷಕ್ಕೆ ನೀರಿನ ಬಳಕೆ ಅಧಿಕ ವಾಗುತ್ತಿರುವುದರಿಂದ ಭೂಗರ್ಭ ಜಲ ಮಟ್ಟ ಕುಸಿಯುತ್ತಿದೆ ಎಂದು ಸಂಬಂಧಪಟ್ಟ ಇಲಾಖೆ ವರದಿಯಲ್ಲಿ ಬಹಿರಂಗಗೊಳಿಸಿದೆ. ಕಾಸರಗೋಡು ಭೂಗರ್ಭ ಜಲ ಇಲಾಖೆ ಕಳೆದ 10 ವರ್ಷಗಳಿಂದ ಸಂಗ್ರಹಿಸಿದ ಅಂಕಿಅಂಶದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ವಲಯಗಳಲ್ಲಿ ಭೂಗರ್ಭ ಜಲಮಟ್ಟ ಕುಸಿಯುತ್ತಿದೆ ಎಂಬುದನ್ನು  ಸೂಚಿಸುತ್ತಿದೆ. ಇದೇ ಸಂದರ್ಭದಲ್ಲಿ ಪ್ರಸ್ತುತ ವರ್ಷ 950 ಕೊಳವೆ ಬಾವಿ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಜಾನೂರು, ನೀಲೇಶ್ವರ, ಬದಿಯಡ್ಕ, ಕುಂಬಾxಜೆ, ಪೈವಳಿಕೆ, ಎಣ್ಮಕಜೆ, ವರ್ಕಾಡಿ, ಕಳ್ಳಾರು, ಪನತ್ತಡಿ ಮೊದಲಾದ ವಲಯಗಳಲ್ಲಿ ನಿರಂತರವಾಗಿ ಭೂಗರ್ಭ ಜಲ ಮಟ್ಟ ಕುಸಿಯುತ್ತಿದೆಯೆಂದು ಕಂಡುಕೊಳ್ಳಲಾಗಿದೆ. 2008ರಿಂದ 2018ರ ಮೇ ತಿಂಗಳ ವರೆಗೆ ದಾಖಲಿಸಿಕೊಂಡ ಅಂಕಿ ಅಂಶಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿದೆ. ಆದರೆ ಕಾರಡ್ಕ, ಬೇಡಗ, ಕೊಳತ್ತೂರು, ಕುಟ್ಟಿಕ್ಕೋಲ್‌, ಮುಳಿಯಾರು, ಚೆಮ್ನಾಡ್‌ ಉಪ್ಪಳ, ವೆಸ್ಟ್‌ ಎಳೇರಿ, ಈಸ್ಟ್‌ ಎಳೇರಿ ಮೊದಲಾದೆಡೆ ಸಂಗ್ರಹಿಸಿದ ಅಂಕಿಅಂಶದಂತೆ ಭೂಗರ್ಭ ಜಲ ಪ್ರಮಾಣ ಸ್ವಲ್ಪ ಮಟ್ಟಿಗೆ ಹೆಚ್ಚಳವಿದೆ ಎಂದು ತಿಳಿಯಲಾಗಿದೆ. ಆದರೆ ಈ ಜಲ ಮಟ್ಟ ದೊಡ್ಡ ಮಟ್ಟದ ಹೆಚ್ಚಳವಲ್ಲ. ಒಟ್ಟು  ಅಂಕಿಅಂಶ ಸೂಚಿಸುವುದೆಂದರೆ ಭೂಗರ್ಭ ಜಲ ಮಟ್ಟ ಕುಸಿಯುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಭೂಗರ್ಭ ಜಲ ಮಟ್ಟ ಮೈನಸ್‌ ಆರು ಮೀಟರ್‌ ವರೆಗೆ ಕುಸಿದ ಸ್ಥಳವೂ ಇದೆ. ಆದರೆ ಭೂಗರ್ಭ ನೀರು ಹೆಚ್ಚಳ ಕಂಡು ಬಂದಲ್ಲಿ ಒಂದು ಮೀಟರ್‌ಗಿಂತ ಅಧಿಕ ಏರಿಲ್ಲ ಎಂದು ಭೂಗರ್ಭ ಜಲ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯಲ್ಲಿ ಭೂಗರ್ಭ ಜಲ ಇಲಾಖೆಗೆ ಕೊಳವೆ ಬಾವಿ ಸಹಿತ 70 ಬಾವಿಗಳು ವೀಕ್ಷಿಸಲು ಇವೆ. ಈ ಬಾವಿಗಳಿಂದ ನೀರಿನ ಪ್ರಮಾಣ ಕಂಡುಕೊಳ್ಳಲಿರುವುದರಿಂದ ನೀರನ್ನು ಪಂಪ್‌ ಮಾಡುವುದಿಲ್ಲ. ಡೀಪ್‌ ಮೀಟರ್‌ ಬಳಸಿ ಜಲ ಮಟ್ಟವನ್ನು ಅಳೆಯಲಾಗುತ್ತಿದೆ. ಪ್ರತೀ ತಿಂಗಳೂ ಭೂಗರ್ಭ ಜಲ ಇಲಾಖೆ ನೀರಿನ ಮಟ್ಟವನ್ನು ಅಳೆಯುತ್ತದೆ.

ವರ್ಷದಿಂದ ವರ್ಷಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಕಟ್ಟಡಗಳ ಸಂಖ್ಯೆ ಹೆಚ್ಚಳ ವಾಗುತ್ತಿದ್ದು, ಅರಣ್ಯ ಪ್ರದೇಶ ಮತ್ತು ಜಲಾಶಯಗಳು ಕಡಿಮೆಯಾಗುತ್ತಿವೆ. ಇದರಿಂದಾಗಿ ಭೂಮಿಯೊಳಗೆ ಸಹಜವಾಗಿ (ನ್ಯಾಚುರಲ್‌ ರೀ ಚಾರ್ಜಿಂಗ್‌) ನೀರು ಸಾಗುವುದಿಲ್ಲ. ಆದರೆ ಅದೇ ವೇಳೆ ನೀರಿನ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇದರಿಂದಾಗಿ ಭೂಗರ್ಭ ಜಲಸಂಪತ್ತು ಕುಸಿಯುತ್ತಲೇ ಸಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಂಗು ಗುಂಡಿಗಳು, ಚೆಕ್‌ ಡ್ಯಾಂಗಳು, ತಡೆಗೋಡೆ, ಬಾವಿ ರೀಚಾರ್ಜಿಂಗ್‌ ನಿರ್ಮಿಸುವ ಮೂಲಕ ನೀರು ಸಂಗ್ರಹಿಸಲು ಸಾಧ್ಯವಾಗುವುದು ಎಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ.

2006ರಲ್ಲಿ ಜಾರಿಗೆ ಬಂದ ಭೂಗರ್ಭ ಕಾಯ್ದೆ ಪ್ರಕಾರ ಭೂಗರ್ಭ ಜಲ ಕುಸಿಯುತ್ತಿರುವ ಸ್ಥಳಗಳ ಯಾದಿಯಲ್ಲಿ ಕಾಸರಗೋಡು ಸಹ ಸೇರ್ಪಡೆಗೊಂಡಿದೆ. ಇದರಂತೆ ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್‌ಪುತ್ತೂರು, ಚೆಂಗಳ, ಚೆಮ್ನಾಡ್‌, ಬೇಡಗ, ಕಾರಡ್ಕ, ಮುಳಿಯಾರು, ಕುಟ್ಟಿಕ್ಕೋಲ್‌, ದೇಲಂಪಾಡಿ ಮೊದಲಾದ ಸ್ಥಳಗಳೂ ಈ ಕಾಯ್ದೆಯಲ್ಲಿ ಒಳಗೊಂಡಿವೆೆ. ಈ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆಯಲು ಭೂಗರ್ಭ ಜಲ ಇಲಾಖೆಯ ಅನುಮತಿ ಬೇಕು. ಆದರೆ ಯಾವುದೇ ಅನುಮತಿ ಪಡೆಯದೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕೊಳವೆ ಬಾವಿ ಕೊರೆಯಲಾಗುತ್ತಿದೆ.

Advertisement

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next