Advertisement

ಜಮೀನು ವಿವಾದ, ಹಲ್ಲೆ ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣು

07:10 PM Aug 06, 2023 | Team Udayavani |

ಹುಣಸೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಮರಕ್ಕೆ ಕಟ್ಟಿಹಾಕಿ ಥಳಿಸಿದ್ದರಿಂದ ಅವಮಾನಿತರಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕುಡಿನೀರು ಮುದ್ದನಹಳ್ಳಿಯಲ್ಲಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಕುಡಿನೀರುಮುದ್ದನಹಳ್ಳಿ ಗ್ರಾಮದ ಗುರುರಾವ್ ಭಾಂಗೆ(೬೦) ಆತ್ಮಹತ್ಯೆಗೆ ಶರಣಾದವರು. ಪತ್ನಿ, ಮಕ್ಕಳಿದ್ದಾರೆ. ಈ ಸಂಬಂಧ ಪತ್ನಿ ಮಂಜುಳಾ ಬಾಯಿ ಪತಿಯ ಆತ್ಮಹತ್ಯೆಗೆ ಗ್ರಾಮದ ಮಹೇಶ್ ಮತ್ತವರ ಪತ್ನಿ ಸಾಕಮ್ಮ ಹಾಗೂ ಇವರ ಪುತ್ರ ರಂಜನ್‌ರ ಕಿರುಕುಳವೇ ಕಾರಣವೆಂದು ದೂರು ದಾಖಲಿಸಿದ್ದಾರೆ.

ಘಟನೆ ವಿವರ: ತರೀಕಲ್ ಗ್ರಾಮದಲ್ಲಿ ಗುರುರಾವ್ ಬಾಂಗೆಗೆ ೨.೦೫ಎಕರೆ ಜಮೀನಿದ್ದು, ಪಕ್ಕದ ಜಮೀನಿನ ಮಹೇಶ್ ಮತ್ತು ಕುಟುಂಬದವರು ಗುರುರಾವ್ ಬಾಂಗೆ ಜಮೀನಿನಲ್ಲಿ ೧೬ಗುಂಟೆ ನಮ್ಮ ಕುಟುಂಬಕ್ಕೆ ಸೇರಬೇಕೆಂದು ಹಿಂದಿನಿಂದಲೂ ಗುರುರಾವ್ ಭಾಂಗೆ ಕುಟುಂಬಕ್ಕೂ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಕಳೆದ ಎರಡು ವರ್ಷಗಳ ಹಿಂದೆ ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.

ಪೊಲೀಸರ ಎಚ್ಚರಿಕೆ:
ಶುಕ್ರವಾರ ಸಹ ಮಹೇಶ್ ಮತ್ತು ಗುರುರಾವ್ ಬಾಂಗೆ ನಡುವೆ ಗಲಾಟೆಯಾಗಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರನ್ನು ಕರೆಸಿ ಜಮೀನು ವಿವಾದ ನ್ಯಾಯಾಲಯದಲ್ಲಿದ್ದು, ಆದೇಶ ಹೊರಬೀಳುವವರೆಗೆ ಇಬ್ಬರೂ ಸಹ ಗಲಾಟೆ ಮಾಡಿಕೊಳ್ಳದಂತೆ ಎಚ್ಚರಿಸಿ ಕಳುಹಿಸಿದ್ದರು.

ಅವಮಾನ ತಾಳಲಾರದೆ ಆತ್ಮಹತ್ಯೆ:
ಈ ನಡುವೆ ಶುಕ್ರವಾರ ಸಂಜೆ ಮತ್ತೆ ಗಲಾಟೆ ನಡೆದಿದ್ದು, ಮಹೇಶ್ ಮತ್ತವರ ಪತ್ನಿ ಸಾಕಮ್ಮ ಇವರ ಪುತ್ರ ರಂಜನ್‌ರವರು ಗುರುರಾವ್ ಭಾಂಗೆ ಅವರಿಗೆ ಕುಡಿನೀರು ಮುದ್ದನಹಳ್ಳಿ ಗ್ರಾಮದ ಸರ್ಕಲ್‌ನಲ್ಲಿ ಚಪ್ಪಲಿಯಿಂದ ಮನಬಂದಂತೆ ಥಳಿಸಿ ಅಪಮಾನ ಮಾಡಿದ್ದರಿಂದ ಮನನೊಂದ ಗುರುರಾವ್‌ಭಾಂಗೆ ಶನಿವಾರ ಮುಂಜಾನೆ ತಮ್ಮ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡಿದ್ದವರನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Advertisement

ತಮ್ಮ ಪತಿಯ ಸಾವಿಗೆ ಮಹೇಶ್, ಆತನ ಪತ್ನಿ ಸಾಕಮ್ಮ ಹಾಗೂ ಇವರ ಪುತ್ರ ರಂಜನ್‌ರವರುಗಳೇ ಕಾರಣವೆಂದು ಗುರುರಾವ್‌ಭಾಂಗೆ ಪತ್ನಿ ಮಂಜುಳಾಬಾಯಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next