Advertisement

ಕ್ರಿಕೆಟಿಗ ಉಮೇಶ್‌ ಯಾದವ್‌ ಮನೆಗೆ ಕಳ್ಳರ ಕನ್ನ!

05:45 AM Jul 20, 2017 | Team Udayavani |

ನಾಗ್ಪುರ: ಭಾರತ ಕ್ರಿಕೆಟ್‌ ತಂಡದ ಪ್ರಮುಖ ವೇಗಿ ಉಮೇಶ್‌ ಯಾದವ್‌ ನಾಗ್ಪುರದಲ್ಲಿರುವ ಮನೆಗೆ ಕಳ್ಳರು ಕನ್ನ ಹಾಕಿದ ಘಟನೆ ನಡೆದಿದೆ. ಈ ವೇಳೆ  ಕಳ್ಳರು 45 ಸಾವಿರ ರೂ. ನಗದು ಹಾಗೂ 2 ಬೆಲೆ ಬಾಳುವ ಮೊಬೈಲ್‌ ಫೋನ್‌ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಏನಿದು ಘಟನೆ?: ನಾಗ್ಪುರದ  ಲಕ್ಷ್ಮೀನಗರದಲ್ಲಿ ಉಮೇಶ್‌ ಯಾದವ್‌ ಕುಟುಂಬ 9ನೇ ಮಹಡಿಯ ಫ್ಲ್ಯಾಟ್‌ವೊಂದರಲ್ಲಿ ವಾಸವಿದೆ. ಸೋಮವಾರ ಕಾರ್ಯಕ್ರಮವೊಂದರ ನಿಮಿತ್ತ ಕುಟುಂಬ ಸದಸ್ಯರು ಮನೆಯಿಂದ ಹೊರಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ವೇಳೆ ಕಳ್ಳರು ಹೊಂಚು ಹಾಕಿ  ಕಿಟಕಿ ಗಾಜು ಒಡೆದು  ಮನೆಯ ಒಳಗೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಯಾದವ್‌ ತಾಯಿಗೆ ಸೇರಿದ ಮೊಬೈಲ್‌ ಫೋನ್‌ ಹಾಗೂ ಯಾದವ್‌ ಪತ್ನಿಯ ಪರ್ಸ್‌ನಲ್ಲಿದ್ದ ಹಣವನ್ನು ಅಪಹರಿಸಿದ್ದಾರೆ.

ಮಂಗಳವಾರ ಕುಟುಂಬ ಸದಸ್ಯರು ಮನೆಗೆ ವಾಪಸ್‌ ಬಂದಾಗ ವಿಷಯ ಬಯಲಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಪೊಲೀಸ್‌ ತಪಾಸಣೆ ನಡೆಯುತ್ತಿದೆ. 8ನೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಕಳ್ಳರನ್ನು ಬಂಧಿಸುವುದಾಗಿ ತನಿಖೆ ನೇತೃತ್ವ ಹೊತ್ತಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ ಬಿ.ಆರ್‌.ಖಾಂಡಲೆ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next