Advertisement

ಉಮೇಶ್‌ ಪಾಲ್‌ ಹಂತಕ ಗುಡ್ಡು ಮುಸ್ಲಿಂ ಕರ್ನಾಟಕದಲ್ಲಿ?

01:08 PM Apr 18, 2023 | Team Udayavani |

ಬೆಂಗಳೂರು: ಉತ್ತರ ಪ್ರದೇಶದ ಉಮೇಶ್‌ ಪಾಲ್‌ನ ಹತ್ಯೆ ಪ್ರಕರಣದ ಆರೋಪಿ ಗುಡ್ಡು ಮುಸ್ಲಿಂ ಕರ್ನಾಟಕದಲ್ಲಿ ಅಡಗಿ ಕುಳಿತಿರುವ ಬಗ್ಗೆ ಅಲ್ಲಿನ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಎನ್‌ ಕೌಂಟರ್‌ ಭೀತಿಯಿಂದ ತಲೆಮರೆಸಿಕೊಂಡು ಕರ್ನಾಟಕದಲ್ಲೇ ಸುತ್ತಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

Advertisement

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಅತೀಕ್‌ ಅಹಮ್ಮದ್‌ ತಾನು ಗುಂಡೇಟಿಗೆ ಸಾಯುವುದಕ್ಕೂ ಕೆಲವೇ ಕ್ಷಣಗಳ ಹಿಂದೆ ಗುಡ್ಡು ಮುಸ್ಲಿಂ ಕುರಿತು ಮಾತನಾಡುತ್ತಿದ್ದ. ಈ ಗುಡ್ಡು ಮುಸ್ಲಿಂಗಾಗಿ ಉತ್ತರ ಪ್ರದೇಶದ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಕೆಲ ಸ್ಥಳಗಳಲ್ಲಿ ಆತನ ಚಲನಾ ವಲನಾ ಪತ್ತೆ ಹಚ್ಚುವ ಸಲುವಾಗಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳಿ ಪರಿಶೀಲಿಸಿ ತಾಂತ್ರಿಕ ಕಾರ್ಯಾಚರಣೆ ನಡೆಸಲಾಗಿತ್ತು. ಆ ವೇಳೆ ಕೊನೆಯ ಮೊಬೈಲ್‌ ಟವರ್‌ ಲೋಕೇಶನ್‌ ಕರ್ನಾಟಕದಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಪೊಲೀಸರು ಕರ್ನಾಟಕಕ್ಕೆ ಬಂದು ಶೋಧ ನಡೆಸಲು ಮುಂದಾಗಿದ್ದಾರೆ. ಪೊಲೀಸರು ಎನ್‌ ಕೌಂಟರ್‌ ಮಾಡುವ ಭೀತಿಯಿಂದ ಆತ ತಲೆಮರೆಸಿಕೊಂಡು ತಿರುಗಾಡುತ್ತಿರುವುದು ತಿಳಿದು ಬಂದಿದೆ.

ಗುಡ್ಡು ಮುಸ್ಲಿಂ ಯಾರು?: 2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಅವರನ್ನು ಕಳೆದ ಫೆಬ್ರವರಿಯಲ್ಲಿ ಹತ್ಯೆ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಆರು ಜನ ಆರೋಪಿಗಳ ಪೈಕಿ ಅತೀಕ್‌ ಅಹ್ಮದ್‌, ಅಶ್ರಫ್ ಅಹ್ಮದ್‌ನನ್ನು ಇತ್ತೀಚೆಗೆ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅತೀಕ್‌ ಪುತ್ರ ಅಸಾದ್‌ ಅಹ್ಮದ್‌, ಆತನ ಸಹಚರರಾದ ಅರ್ಬಾಜ್‌, ವಿಜಯ್‌ ಚೌಧರಿ ಹಾಗೂ ಗುಲಾಂ ಹಸನ್‌ನನ್ನು ಎನ್‌ಕೌಂಟರ್‌ ಮಾಡಲಾಗಿದೆ. ಪ್ರಕರಣದಲ್ಲಿ ಆರೋಪಿ ಗುಡ್ಡು ಮುಸ್ಲಿಂ ಸದ್ಯ ತಲೆಮರೆಸಿಕೊಂಡಿದ್ದಾನೆ. ಉತ್ತರ ಪ್ರದೇಶ ಪೊಲೀಸರು ಕರ್ನಾಟಕ ಪೊಲೀಸರ ನೆರವು ಕೋರಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಭೂಗತ ಪಾತಕಿಗಳ ಜೊತೆಗೆ ನಂಟು ಹೊಂದಿರುವ ಗುಡ್ಡು ಮುಸ್ಲಿಂ, ಹ್ಯಾಂಡ್‌ ಗ್ರೆನೇಡ್‌ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದ. ಗ್ರೇನೆಡ್‌ ತಯಾರಿಸಿ ಗ್ಯಾಂಗ್‌ಸ್ಟರ್‌ಗಳಿಗೆ ಸರಬರಾಜು ಮಾಡುತ್ತಿದ್ದ. ಉಮೇಶ್‌ ಪಾಲ್‌ ಮೇಲೆ ಬಾಂಬ್‌ ಎಸೆದವರಲ್ಲಿ ಗುಡ್ಡು ಮುಸ್ಲಿಂ ಸಹ ಒಬ್ಬನಾಗಿದ್ದ. ಕಳೆದ 10 ವರ್ಷಗಳಿಂದ ಈತ ಅತೀಕ್‌ ಅಹ್ಮದ್‌ ಗಾಗಿ ಕೆಲಸ ಮಾಡುತ್ತಿದ್ದ. ಲಖನೌ ಪೊಲೀಸ್‌ ಠಾಣೆ ಬಳಿ ಬಾಂಬ್‌ ಎಸೆದ ಪ್ರಕರಣದಲ್ಲಿ ಬಂಧಿತನಾಗಿದ್ದ. ಲಖನೌನ ಪ್ರಸಿದ್ಧ ಪೀಟರ್‌ ಗೋಮ್ಸ್ ಹತ್ಯೆ ಪ್ರಕರಣದಲ್ಲೂ ಶಾಮೀಲಾಗಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next