Advertisement

ಸಿಡಿ ಪ್ರಕರಣದಲ್ಲಿ ಆರೋಪಿ ರಕ್ಷಣೆಗೆ ಮುಂದಾಗಿರುವ ಸರಕಾರದ ನಡೆಯನ್ನು ಖಂಡಿಸುತ್ತೇವೆ:ಉಮಾಶ್ರೀ

03:59 PM May 29, 2021 | Team Udayavani |

ಬನಹಟ್ಟಿ: ಸಿಡಿ ಬಹಿರಂಗ ಪ್ರಕರಣದಲ್ಲಿ ರಮೇಶ ಜಾರಕಿಹೊಳಿಯವರನ್ನು ಈ ಕೂಡಲೇ ಬಂಧಿಸಬೇಕು. ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರು, ಅಧ್ಯಕ್ಷರು ನಮ್ಮ ಎಲ್ಲ ಶಾಸಕರು ಮತ್ತು ನಾಯಕರು ಸೇರಿದಂತೆ ಪಕ್ಷದ ವಕ್ತಾರಳಾದ ನಾನು ಒತ್ತಾಯಿಸುವುದಾಗಿ ಮಾಜಿ ಸಚಿವೆ, ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾದ ಉಮಾಶ್ರೀ ಹೇಳಿದರು.

Advertisement

ಅವರು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಿಡಿ ಪ್ರಕರಣದ ಸಂತ್ರಸ್ಥೆ ತನ್ನ ಮೇಲೆ ಅತ್ಯಾಚಾರ ಆಗಿದೆ. ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅನ್ನುವ ಆರೋಪ ಮಾಡಿದ್ದಾಳೆ. ಆಕೆ ತನಗೆ ಆದ ಅನ್ಯಾಯವನ್ನು ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾಳೆ. ಅದಕ್ಕೂ ಮೊದಲೂ ಸಿಡಿ ಬಿಡುಗಡೆ ಆದಾಗ ಮಂತ್ರಿಗಳಾದಂತವರು ಇದು ನನ್ನನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಸರು ಕೆಡಿಸಲು, ವಿರೋಧಿಗಳು ಮಾಡುತ್ತಿದ್ದಾರೆ. ಸಿಡಿಯಲ್ಲಿ ಇರುವುದು ನಾನಲ್ಲ. ಆಕೆಯ ಪರಿಚಯವಿಲ್ಲ, ನಾನು ಆಕೆಯನ್ನು ಭೇಟಿ ಮಾಡಿಲ್ಲ ಎಂದೆಲ್ಲಾ ಹೇಳಿದರು. ಇದಾದ ನಂತರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಿತು. ಆಕೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ನೀಡಿದಳು, ಅಲ್ಲದೇ ಎಸ್‌ಐಟಿ ಮುಂದೆ ತನ್ನ ಲಿಖಿತ ಹೇಳಿಕೆ ನೀಡಿದ್ದಾಯಿತು. ಈ ಕಡೆ ಗೃಹ ಮಂತ್ರಿಗಳೇ ಹೇಳಿರುವಂತೆ ಆಕೆ ಬಂದು ದೂರು ಕೊಟ್ಟರೆ ಎಫ್‌ಐರ್ ದಾಖಲಿಸುತ್ತೇವೆ ಎಂದಿದ್ದರು. ಅದರಂತೆ ಸೆಕ್ಸೆನ್ 376 ಅಡಿಯಲ್ಲಿ ಎಫ್‌ಐರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದ ನಂತರ ಅತ್ಯಾಚಾರದ ಆರೋಪವನ್ನು ಹೊತ್ತಿರುವ ಆರೋಪಿ ಯಾವುದೇ ಕಾರಣಕ್ಕೂ ಬಹಿರಂಗವಾಗಿ ಒಡಾಡಲು ಸಾಧ್ಯವಿಲ್ಲ. ಸಾಮಾನ್ಯದವರಾದರೆ ಕೂಡಲೇ ಬಂದಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ಅವರನ್ನು ಬಂಧಿಸಿಲ್ಲ ಏಕೆ ತಿಳಿಯಲಿಲ್ಲ. ಅದಕ್ಕೆ ಕೊರೋನಾ ಕಾರಣ ನೀಡಿದ್ದರು. ಅದಾದ ನಂತರವು ಅವರು ಆರಾಮಾಗಿ ಓಡಾಡಿಕೊಂಡಿದ್ದಾರೆ. ಆದರೂ ಪೊಲೀಸರು ಅವರನ್ನು ಬಂಧಿಸುತ್ತಿಲ್ಲ. ಇದೆಲ್ಲವನ್ನು ನೋಡಿದಾಗ ಸರಕಾರ ಅವರ ರಕ್ಷಣೆಗೆ ನಿಂತಿದೆ ಎನ್ನುವ ಅನುಮಾನ ಉಂಟಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಉಮಾಶ್ರೀ ಹೇಳಿದರು.

ಒಬ್ಬ ಜನ ಪ್ರತಿನಿಧಿಗಳು, ಸಮಾಜ ಸೇವಕರು ಹೇಳಿದ ಮಾತಿಗೆ ಬದ್ಧರಾಗಿರಬೇಕು. ಆರೋಪಿ ಸ್ಥಾನದಲ್ಲಿರುವಂತಹವರು ಕಾಂಗ್ರೆಸ್ ಹಾಗೂ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡಿದರು. ಆ ಸಂತ್ರಸ್ಥೆಯ ಕುಟುಂಬದವರ ಮೇಲೆ ಒತ್ತಡ ಹಾಕಿ ಸಹೋದರನಿಂದ ಹೇಳಿಕೆ ಕೊಡಿಸುವ ಒತ್ತಡ ಹಾಕಿದರು. ಈಗ ಅದೇ ಸಂತ್ರಸ್ಥೆಯ ಕುಟುಂಬಕ್ಕೆ ಎಸ್‌ಐಟಿಯಿಂದ ನೋಟೀಸ್ ಕಳುಹಿಸಿ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಕೋವಿಡ್ ಮಾಹಿತಿ ಹೇಳಲು ಹೋದ ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಿಂದನೆ

Advertisement

ಅಂದು ಸಿಡಿಯಲ್ಲಿ ಇರುವುದು ನಾನಲ್ಲ ಎಂದು ಹೇಳಿರುವ ಆರೋಪಿ ಸ್ಥಾನದಲ್ಲಿರುವ ಮಹನೀಯರು ಇವತ್ತು ಹೇಗೆ ಆ ಸಿಡಿಯಲ್ಲಿರುವುದು ನಾನೇ, ಅವಳು ಅವಳೇ ಎನ್ನುತ್ತಿರುವುದು ನೋಡಿದರೆ ಇಷ್ಟು ದಿನ ಹೇಳಿದ್ದು ಬರೀ ಸುಳ್ಳು, ಆಕೆಯೊಂದಿಗೆ ಸಂಪರ್ಕ ಇದ್ದದು ನಿಜ, ಆಕೆಯೊಂದಿಗೆ ದುರುಪಯೋಗ ಮಾಡಿಕೊಂಡಿರುವುದು ನಿಜ. ಈಗ ಅವರು ಪರಸ್ಪರ ಒಪ್ಪಿಗೆ ಮೇರೆಗೆ ದೈಹಿಕ ಸಂಬಂಧಗಳನ್ನು ಮಾಡಿದ್ದೇವೆ ಎಂಬ ಮಾತನ್ನು ಆಡಿದ್ದಾರೆ. ಅವರು ಆಡಿದ ಮಾತಿಗೆ ಬದ್ದತೆಯಿಲ್ಲ. ತಪ್ಪು ಮಾಡಿದ್ದಾರೆ ಎಂದು ಅವರು ಮನಸ್ಸಿಗೆ ಗೊತ್ತಿದೆ ಎಂದರು.

ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನುನೂ ಇದೆ. ಸಣ್ಣವರು ಯಾವುದೋ ಒಂದು ತಪ್ಪ ಮಾಡಿದರೆ ತಕ್ಷಣ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗದುಕೊಳ್ಳುತ್ತಾರೆ. ಆದರೆ ಈಗ ಯಾಕೆ ಚಾರ್ಜಶೀಟ್ ಹಾಕುತ್ತಿಲ್ಲ, ಇಂತಹ ಪ್ರಕರಣಗಳು 60 ರಿಂದ 90 ದಿನಗಳೊಳಗಾಗಿ ಮುಗಿಯಬೇಕು. ಆದರೆ 60 ದಿನಗಳು ಕಳೆದು ಹೋದರೂ ಸರಕಾರ ವಿಶೇಷ ತನಿಖಾದಳದ ಅಧಿಕಾರಿಗಳನ್ನು ರಜೆಯ ಮೇಲೆ ಮನೆಗೆ ಕಳುಹಿಸಿದ್ದಾರೆ. ಇದರ ಅರ್ಥ ಆರೋಪಿಯ ರಕ್ಷಣೆಗೆ ಸರಕಾರವೇ ಮುಂದಾಗಿದೆ ಎಂದು ಆರೋಪಿಸಿದರು.

ಪ್ರತಿಬಾರಿ ಏನೇ ನಡೆದರೂ ಕಾಂಗ್ರೆಸ್ ಮೇಲೆ ಗೂಭೆ ಕೂಡ್ರಿಸುವ ಕೆಲಸ ನಡೆದಿದೆ. ಈ ಪ್ರಕರಣದಲ್ಲಿಯೂ ಅದೇ ರೀತಿ ಆಗಿದೆ. ನಮ್ಮ ರಾಜ್ಯದಲ್ಲಿ ರಾಜಕೀಯ ಒತ್ತಡದಿಂದ ಪೊಲೀಸ್‌ರ ಕೈ ಕಟ್ಟಿ ಹಾಕಿದಂತಾಗಿದೆ. ಅವರಿಗೆ ಸ್ವಾತಂತ್ರö್ಯ ಕೊಟ್ಟಿದ್ದರೆ ಇಷ್ಟೋತ್ತಿಗೆ ತಪ್ಪಿತಸ್ಥರನ್ನು ಪೊಲೀಸರು ಬಂದಿಸುತ್ತಿದ್ದರು. ಅವರು ಕೆಲಸ ಮಾಡಲು ಸಾಧ್ಯ ಆಗದೇ ಇರುವ ವ್ಯವಸ್ಥೆ ಇಂದು ನಡೆಯುತ್ತಿದೆ. ಆರೋಪ ಹೊತ್ತಿರುವ ಮಂತ್ರಿಗಳು ಗೃಹ ಮಂತ್ರಿಗಳನ್ನು ಬೇಟ್ಟಿ ಮಾಡಿದ್ದಾರೆ.  ಈ ಕುರಿತು ಗೃಹ ಮಂತ್ರಿಗಳು ವಿವರಣೆ ಕೊಡಬೇಕು. ಇಂತಹ ಪ್ರಕರಣದಲ್ಲಿ ಗೃಹಮಂತ್ರಿಗಳು ಇವರನ್ನು ಬಂದಿಸಲು ಆದೇಶ ನೀಡಿ ಬಂದಿಸಿದರೆ ಇವರ ವರ್ಚಸ್ಸು ಇನ್ನೂ ಹೆಚ್ಚಾಗುತ್ತದೆ. ಕಪ್ಪು ಚುಕ್ಕೆ ಬರುವುದಿಲ್ಲ. ಇತಿಹಾಸದಲ್ಲಿ ಉತ್ತಮ ಕೆಲಸ ಮಾಡಿದ ಗೃಹಮಂತ್ರಿ ಎಂಬ ಕೀರ್ತಿ ಇವರಿಗೆ ಸಲ್ಲುತ್ತದೆ. ಕಾರಣ ಅದು ಆಗಬೇಕು ಎಂದು ನಾವು ಒತ್ತಾಯಿಸುತ್ತೇವೆ.

ಡಿಎನ್‌ಎ ಟೆಸ್ಟ್ ಏಕೆ ಮಾಡಿಸಲಿಲ್ಲ: ಅತ್ಯಾಚಾರ ಪ್ರಕರಣದಲ್ಲಿ ಅಂತಹ ಆರೋಪವನ್ನು ಹೊತ್ತವರಿಂದ ಡಿಎನ್‌ಎ ಟೆಸ್ಟ್ ಆಗಲೇ ಬೇಕು ಎಂದು ಹೇಳಿ ಕಾನೂನಿನಲ್ಲಿ ಗಂಭೀರವಾಗಿ ಹೇಳಿದ್ದಾರೆ. ಯಾಕೆ ಅದು ಆಗಲಿಲ್ಲ? ತಮ್ಮ ಆರೋಪಿ ಅದರಲ್ಲಿ ಸಿಲುಕಿಕೊಂಡರೆ ಎನ್ನುವ ಆತಂಕ ಸರಕಾರಕ್ಕಿದೆಯೇ. ಒಬ್ಬ ಉನ್ನತ ಹುದ್ದೆಯಲ್ಲಿದ್ದವರು ಇಂತಹ ದೊಡ್ಡ ಅನ್ಯಾಯನ್ನು ಮಾಡಿದ್ದಾರೆ ಎಂದು ಪದೇ ಪದೇ ಮಹಿಳೆ ಹೇಳಿದರೂ ಅವರ ರಕ್ಷಣೆಗೆ ನೀವು ಬರದೇ ವ್ಯಕ್ತಿಯನ್ನು ರಕ್ಷಣೆ ಮಾಡುತ್ತೀರಿ ಎಂದರೆ ಕಾರಣ ಸ್ಪಷ್ಟವಾಗಿದೆ. ಏಕೆಂದರೆ ಅವರು ಪದೇ ಪದೇ ಹೇಳುವಂತೆ ನಾನು ಇಂತಹ ಸರಕಾರ ತರಬಲ್ಲೇ ಮತ್ತು ಕೆಡವು ಬಲ್ಲೇ ಎಂದು ಹೇಳಿದ್ದಾರೆ. ಕಾರಣ ಅವರು ಈ ಸರಕಾರ ಅಸ್ಥಿತ್ವಕ್ಕೆ ಬರಲು ಕಾರಣ ಅವರೇ ಎಂದು ಸರಕಾರಕ್ಕೆ ಗೊತ್ತಿರುವ ಕಾರಣ ಅಂತಹ ವ್ಯಕ್ತಿಯನ್ನು ರಕ್ಷಣೆ ಮಾಡುತ್ತಿರುವ ಸರಕಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಉಮಾಶ್ರೀ ಹೇಳಿದರು.

ನಮ್ಮ ಪಕ್ಷ, ವಿರೋಧ ಪಕ್ಷದ ನಾಯಕರು, ಅಧ್ಯಕ್ಷರು ನಮ್ಮ ಎಲ್ಲ ಶಾಸಕರು ಮತ್ತು ನಾಯಕರು ಒತ್ತಾಯಿಸುವುದೇನೆಂದರೆ ಈ ಕೂಡಲೇ ಅವರನ್ನು ಬಂಧಿಸುವುದರ ಜೊತೆಗೆ ಸರಕಾರ ರಚನೆಗೆ ಸಹಾಯ ಮಾಡಿದ ವ್ಯಕ್ತಿಯ ಋಣ ಸಂದಾಯ ನೀತಿಗೆ ಭಾಗಿಯಾಗದೇ, ಅನ್ಯಾಯಕ್ಕೆ ಒಳಗಾದ ಹೆಣ್ಣಿಗೆ ನ್ಯಾಯ ಕೊಡಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದರು.

ಆರೋಪಿ ಸ್ಥಾನದಲ್ಲಿದ್ದವರು ಎರಡು ಮುಖ, ಎರಡು ನಾಲಿಗೆ ಇರುವ ಇವರು ಒಂದು ಸಲ ನಾನಲ್ಲ ಎಂದು ಮತ್ತೋಂದು ಸಲ ನಾನೇ ಎಂದರು. ಇಂತಹ ದ್ವಿಮುಖ ನೀತಿಯ ವ್ಯಕ್ತಿಗಳನ್ನು, ಪಕ್ಷ, ರಾಜಕಾರಣದಲ್ಲಿ, ಸರಕಾರದಲ್ಲಿ ಇವರನ್ನು ನೋಡುತ್ತೇವೆಂದರೆ ಅದು ನಮ್ಮ ದೌರ್ಭಾಗ್ಯ. ಆದರಿಂದ ಕೂಡಲೇ ಮಾನ್ಯ ಮುಖ್ಯ ಮಂತ್ರಿಗಳಾಗಲಿ, ಸರಕಾರವಾಗಲಿ, ಕೇಂದ್ರದವರಾಗಲಿ ಯಾರೇ ಆದರೂ ಕೂಡಾ ಇವರ ರಕ್ಷಣೆಗೆ ಬರಬಾರದು ಒಂದು ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ಈ ಸಂದರ್ಭಲ್ಲಿ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಮುಖಂಡರಾದ ಶಂಕರ ಜಾಲಿಗಿಡದ, ರಾಜು ಭದ್ರನ್ನವರ, ನೀಲಕಂಠ ಮುತ್ತೂರ, ಸತ್ಯಪ್ಪ ಮಗದುಮ್, ಶ್ರೀಶೈಲ ಮೇಣಿ, ಸಂಗಪ್ಪ ಕುಂದಗೋಳ, ನಸೀಮ ಮೋಕಾಸಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next