Advertisement

ಸ್ವಚ್ಛತೆಗಾಗಿ ಸೈಕಲ್‌ ಏರಿದ 72ರ ಉಮಾಪತಿ

04:08 PM Dec 10, 2017 | Team Udayavani |

ಬೆಳ್ತಂಗಡಿ: ಅವರದ್ದು 72ರ ಇಳಿವಯಸ್ಸು. ಸೈಕಲ್‌ ಏರಿ ಹೊರಟರೆಂದರೆ ತಮಗೆ ಆರೋಗ್ಯ ಸಮಸ್ಯೆ ಇದ್ದರೂ ಈ ವಯಸ್ಸಲ್ಲೂ ಇರುವ ಸಾಮಾಜಿಕ ಜಾಗೃತಿಯ ಕಾರಣಕ್ಕೆ ಸೈಕಲ್‌ ಪೆಡಲ್‌ ತುಳಿಯುತ್ತಿದ್ದಾರೆ. 

Advertisement

ಇವರ ಹೆಸರು ಉಮಾಪತಿ ಮೊದಲಿಯಾರ್‌. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಲಿಮಗುರಿ ಸಾಲೇಕಲ್ಲಿನವರು. ಯುವಕರನ್ನೂ ನಾಚಿಸುವ ಜೀವನೋತ್ಸಾಹ. ಅದಕ್ಕೆ ಆರಿಸಿಕೊಂಡದ್ದು ಸೈಕಲ್‌ ಯಾತ್ರೆ. ಸೈಕಲ್‌ ಆದರೆ ಇಂಧನವೂ ಉಳಿತಾಯ ಎಂಬುದು ಲೆಕ್ಕಾಚಾರ.

ಈ ಮೊದಲು ಭ್ರಷ್ಟಾಚಾರ, ಎಚ್‌ ಐವಿ ಸೋಂಕು, ಪರಿಸರ ಮಾಲಿನ್ಯ, ಗೋಹತ್ಯೆ ನಿಷೇಧ ಮೊದಲಾದ ವಿಷಯಗಳ ಜಾಗೃತಿಗೆ ಸೈಕಲ್‌ ತುಳಿದಿದ್ದರು. ಇವರ ಸೈಕಲ್‌ ಯಾತ್ರೆ ಧರ್ಮಸ್ಥಳದಿಂದ ಹೊರಟಿದ್ದು, ರಾಜ್ಯಾದ್ಯಂತ ಪರ್ಯಟನೆ ಮಾಡಿ 2019ರ ಅ. 2ರಂದು ಮೈಸೂರಿನಲ್ಲಿ ಮುಕ್ತಾಯವಾಗಲಿದೆ.

ದಿಲ್ಲಿಗೂ ಸೈಕಲ್‌ ಸವಾರಿ!
ಈ ಮೊದಲು ಗೋಹತ್ಯೆ ಮಸೂದೆಗೆ ಅಂಕಿತ ಹಾಕಿ ಎಂದು ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್‌ ಅವರಿಗೆ ಮನವಿ ಸಲ್ಲಿಸಲು ದಿಲ್ಲಿಗೂ ಇವರು ಸೈಕಲ್‌ ಸವಾರಿ ನಡೆಸಿದ್ದರು. ಶಿವಮೊಗ್ಗದ ಹೊಸನಗರದ ರಾಮಚಂದ್ರಾಪುರ ಮಠದಿಂದ ಹೊರಟು ದಿಲ್ಲಿಯವರೆಗೆ 3,105 ಕಿ.ಮೀ. ದೂರ ಕ್ರಮಿಸಿದ್ದರು. ಆದರೆ ರಾಷ್ಟ್ರಪತಿ ಭೇಟಿ ಸಾಧ್ಯವಾಗಿರಲಿಲ್ಲ. ಕೊನೆಗೆ ಸೈಕಲನ್ನು ದಿಲ್ಲಿಯ ಕರ್ನಾಟಕ ಭವನದಲ್ಲೇ ಬಿಟ್ಟು ಬಂದರು. ಇಂತಹ ಛಲದಂಕ ಮಲ್ಲನಿಗೆ ಆ ವರ್ಷ ರಾಜ್ಯೋತ್ಸವದಂದು ಹಾಸನ ರೋಟರಿ ಕ್ಲಬ್‌ನವರು ಸೈಕಲ್‌ ಉಡುಗೊರೆ ನೀಡಿ ಸಮ್ಮಾನಿಸಿದ್ದರು.

ವರ್ಷದ ಮೂರು ತಿಂಗಳು ಸೈಕಲ್‌ ಯಾತ್ರೆ
ಉಮಾಪತಿಯವರು ಸಂಸಾರಿ. ಅವರ ಪತ್ನಿ ಮಾನಸಿಕ ಅಸ್ವಸ್ಥೆಯಂತೆ. ಈ ಕಾರಣಕ್ಕೆ ಬಾಲಕಿಯೊಬ್ಬಳನ್ನು ದತ್ತು ಪಡೆದು ಬಳಿಕ ಆಕೆಗೆ ವಿವಾಹವನ್ನೂ ಮಾಡಿಸಿದ್ದಾರೆ. ಇವರು ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್‌. ವರ್ಷದ ಮೂರು ತಿಂಗಳು ಸಾಮಾಜಿಕ ಜಾಗೃತಿಗಾಗಿ ಸೈಕಲ್‌ ಏರುತ್ತಾರೆ. 2001ರಿಂದ ಒಟ್ಟು 22,000 ಕಿ.ಮೀ. ಸೈಕಲ್‌ ತುಳಿದಿದ್ದಾರೆ. ಪ್ರವಾಸಗಳೂ ಸೈಕಲ್‌ನಲ್ಲೇ. ಅಷ್ಟೇ ಅಲ್ಲ ಇವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವೂ ಹೌದು. 2008ರಿಂದ ಈವರೆಗೆ 8 ಚಿನ್ನದ ಪದಕ, 6 ಬೆಳ್ಳಿ, 7 ಕಂಚಿನ ಪದಕ ಪಡೆದಿದ್ದಾರೆ. 11 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆದದ್ದು ಇವರ ಹೆಗ್ಗಳಿಕೆ. ಇತ್ತೀಚೆಗೆ ಮಾಸ್ಟರ್ಸ್‌ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಉಡುಪಿಯಲ್ಲಿ ಆಯೋಜಿಸಿದ 400 ಮೀ. ಓಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

Advertisement

ಡಾ| ಹೆಗ್ಗಡೆ ಶುಭಾಶಯ ಜಾಗೃತಿಗಾಗಿ ಸೈಕಲ್‌ ಏರಿದ ಉಮಾಪತಿ ಅವರಿಗೆ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶುಭಾಶಯ ಕೋರಿದ್ದಾರೆ. ಹೆಗ್ಗಡೆಯವರು ಜಾಥಾಕ್ಕೆ ಚಾಲನೆ ನೀಡಬೇಕೆಂದು ಕೆಲವು ದಿನ ಕಾದು ಅವರ ಭೇಟಿಯಾದ ಬಳಿಕವಷ್ಟೇ ಯಾತ್ರೆ ಆರಂಭಿಸಿದ್ದಾರೆ .

ಈ ಬಾರಿಯೂ ನದಿ ಜೋಡಣೆ ಉದ್ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕೆಂದು ದಿಲ್ಲಿವರೆಗೆ ಸೈಕಲ್‌ ತುಳಿದಿದ್ದೇನೆ. ನಾನು ಹೋದಲ್ಲೆಲ್ಲ ಜಾಥಾ ಮಾಡಿಸಿ ಮಕ್ಕಳು, ಹಿರಿಯರ ಮನಸ್ಸಿನಲ್ಲೂ ಜಾಗೃತಿ ಮೂಡಿಸುತ್ತಿದ್ದೇನೆ.
 – ಉಮಾಪತಿ ಮೊದಲಿಯಾರ್‌

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next