Advertisement

ಅಳಿಯುವ ಮುನ್ನ ಉಳಿಯಲಿ ಪರಂಪರೆ ಸಿರಿಬಾಗಿಲು ಪ್ರತಿಷ್ಠಾನದ ರಂಗ ಪ್ರಸಂಗ

07:33 AM Feb 18, 2017 | |

ಅದೊಂದು ಯಕ್ಷಗಾನ ಪ್ರದರ್ಶನ. ಅಕ್ಷಯಾಂಬರ ವಿಲಾಸ. ಕೌರವ ದೂತ ಪ್ರಾತಿಕಾಮಿ ದ್ರೌಪದಿಯ ಅಂತಃಪುರಕ್ಕೆ ತೆರಳಿ ಕೌರವನ ಒಡ್ಡೋಲಗಕ್ಕೆ ಬರಬೇಕು ಎಂಬ ನಿರೂಪವನ್ನರುಹುತ್ತಾನೆ. ಮುಂದೆ ದ್ರೌಪದಿಯು, ಕೌರವನ ಆಸ್ಥಾನದಲ್ಲಿ ಧರ್ಮಜ ತನ್ನನ್ನು ತಾನು ದೂತದಲ್ಲಿ ಸೋತ ಮೇಲೆ ಪತ್ನಿಯನ್ನು ಅಡವಿಟ್ಟದ್ದು ಸರಿಯೇ ಎಂದು ಪ್ರಶ್ನಿಸುವ ದೃಶ್ಯ. ಭಾಗವತರು ಹೊಸಬರು. ಅನುಭವಿ ಕಲಾವಿದ ಕಾರ್ಕಳ ಶಶಿಕಾಂತ ಶೆಟ್ಟರ ದ್ರೌಪದಿ. ಅವರ ಭಾವಸುರಣೆಗೆ ಸರಿಯಾಗಿ ಪದ್ಯ ಬರುತ್ತಿಲ್ಲ. ರಾಗಾನುಸಂಧಾನ ವಾಗುತ್ತಿಲ್ಲ. ಎರಡು ಬಾರಿ ಪಾತ್ರ ಧಾರಿಯೇ ಪದ್ಯವನ್ನು ರಾಗಸಹಿತ ಎತ್ತುಗಡೆ ಮಾಡಿದರು. ಮೂರನೇ ಬಾರಿ ಭಾಗವತರು ತಮ್ಮ ಮನಸ್ಸಿಗೆ ತೋಚಿದಂತೆ ಹಾಡಿದರು. ಶಶಿಕಾಂತರು ದ್ರೌಪದಿಯಾಗಿ ಅಲ್ಲ, ತಮ್ಮ ಪರಿಸ್ಥಿತಿಗೆ ಮರುಗಿ ಅತ್ತರು! 

Advertisement

ಇನ್ನೊಂದು ಬಾರಿ ಗರುಡ ಗರ್ವಭಂಗ ಪ್ರಸಂಗ. ಮೊದಲ ಪದ್ಯವನ್ನೇ ಭಾಗವತರು ತ್ರಿವುಡೆ ತಾಳದಲ್ಲಿ ಆಲಾಪನೆ ಮಾಡಿ ಹಾಡಿದರು. ಅಥ‌ìವಾದಿಗೇ ಗರ್ವಭಂಗವಾದಂತಾಯಿತು. ಅದು ಏಕತಾಳದಲ್ಲಿ ನಿಧಾನ ಗತಿಯಲ್ಲಿ ಹಾಡಬೇಕಾದ ಹಾಡು. 
ಇಂತಹ ಘಟನೆಗಳಿಗೆ ಕಾರಣ ಭಾಗವತರಿಗೆ ಹಾಗೂ ಕಲಾವಿದರಿಗೆ ಪ್ರಸಂಗ ನಡೆ, ರಂಗದ ಮಾಹಿತಿ ಸರಿಯಾಗಿ ಇಲ್ಲದಿರುವುದು. ಪ್ರದರ್ಶನಕ್ಕೆ ಮುನ್ನ ಸಮಾಲೋಚನೆ ನಡೆಸದಿರುವುದು. ತಮ್ಮ ಕಲಾಪ್ರದರ್ಶನ ಬಳಿಕ ಇತರರ ಕಲಾಪ್ರೌಢಿಮೆಯನ್ನು ವೀಕ್ಷಿಸದಿರುವುದು. ಇಂತಹ ಆಭಾಸಗಳು ಕಡಿಮೆ ಯಾಗಲೆಂದೇ ಕಲಾವಿದರಿಗಾಗಿ ರಂಗಶಿಬಿರಗಳ ಅಗತ್ಯವಿದೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. 

ಯಕ್ಷಗಾನದ ರಂಗನಡೆಯ ಕುರಿತು ಇದಮಿತ್ಥಂ ಎಂದು ಹೇಳಬಲ್ಲ ಬಲಿಪ ನಾರಾಯಣ ಭಾಗವತರ ಸಾರಥ್ಯದಲ್ಲಿ ಕಟೀಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ “ರಂಗ ಪ್ರಸಂಗ’ ಕಾರ್ಯಕ್ರಮ ನಡೆಯಿತು. ಆಸಕ್ತ ವೃತ್ತಿಪರರು ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಿಗಾಗಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಆಸಕ್ತಿಯಿಂದ ನಡೆಸು ತ್ತಿರುವ ಮೂರನೇ ರಂಗ ಪ್ರಸಂಗ ಇದು. ನಾಲ್ಕನೆಯ ಪ್ರಸಂಗ ಉಡುಪಿಯಲ್ಲಿ ನಡೆಯಲಿದೆ. ಕಳೆದ ಐದು ವರ್ಷಗಳಿಂದ ಸಿರಿಬಾಗಿಲು ಪ್ರತಿಷ್ಠಾನ ಸರಣಿ ತಾಳಮದ್ದಳೆ, ಯಕ್ಷಗಾನ ಆಟ ಕೂಟ, ಪೂರ್ವರಂಗ ಪ್ರಾತ್ಯಕ್ಷಿಕೆ, ಗಾನವೈಭವ ಮೊದಲಾದ ಕಾರ್ಯಕ್ರಮಗಳ ಮೂಲಕ ಯಕ್ಷ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. 

ಕಟೀಲಿನ ಕಾರ್ಯಕ್ರಮದಲ್ಲಿ ಆಸಕ್ತರಿದ್ದರೂ ತಿರುಗಾಟದ ನೆವದಿಂದ ಅನೇಕ ಕಲಾವಿದರಿಗೆ ಭಾಗವಹಿಸಲು ಸಾಧ್ಯವಾಗಿಲ್ಲ. ಮೇಳಗಳ ಸಂಖ್ಯೆ ಹೆಚ್ಚಿದ್ದರೂ ಕಲಾವಿದರು ಧಾರಾಳ ಇದ್ದರೂ ರಂಗಮಾಹಿತಿ ಇರುವ ವರ ಸಂಖ್ಯೆ ವಿರಳವಾಗುತ್ತಿದೆ. ಕೆಲವೇ ಪ್ರಸಂಗಗಳು ಪುನರಪಿ ಪ್ರದರ್ಶನವಾಗುತ್ತಿರುವ ಕಾರಣ ಹಲವು ಪ್ರಸಂಗಗಳ ರಂಗನಡೆ ಇಂದು ನೆನಪಿನಿಂದ ಮಾಸುತ್ತಿದೆ. ಮೊದಲಾಗಿ ಭಾಗವತರಿಗೆ ರಂಗನಡೆಯ ಅರಿವಿರಬೇಕು. ಪಾತ್ರಧಾರಿಗಳಿಗೂ ತಿಳಿದಿರಬೇಕು. ಇಬ್ಬರಿಗೂ ಹೊಸ ಪ್ರಸಂಗವಾದರೆ ಬಲ್ಲಿದರಿಂದ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ರಂಗದಲ್ಲಿ ಆಭಾಸ ಕಟ್ಟಿಟ್ಟದ್ದು. ಹಾಗಾಗಿ ರಂಗಪ್ರಸಂಗ ಇಂದಿನ ಅನಿವಾರ್ಯಗಳಲ್ಲಿ ಒಂದಾಗಿದೆ. ಸದ್ಯ ಪ್ರದರ್ಶನದಲ್ಲಿ ಚಾಲ್ತಿಯಲ್ಲಿ ಇಲ್ಲದ ರಂಗಕ್ರಮಗಳನ್ನು ನೆನಪಿಸುವ, ದಾಖಲೀಕರಣ ಮಾಡುವ ಕಾರ್ಯ ಇದು. ಸ್ತ್ರೀವೇಷವೆಂದರೆ ತ್ರಿವುಡೆ ತಾಳ ಮತ್ತು ತಿತ್ತಿತೈ ಕುಣಿತ, ಪುಂಡು ವೇಷವೆಂದರೆ ಹತ್ತಾರು ದಿಗಿಣ ಹಾಕಲು ಗೊತ್ತಿದ್ದರೆ ಆಯ್ತು ಎಂದುಕೊಂಡವರೇ ಯಕ್ಷರಂಗದಲ್ಲಿ ತುಂಬಬಾರದು ಎಂಬ ಕಾಳಜಿ. ಧರ್ಮಸ್ಥಳ ಮೇಳದ ಭಾಗವತರಾಗಿದ್ದು ಯಕ್ಷಗಾನ ಕ್ಷೇತ್ರದಲ್ಲಿ ಪರಂಪರೆಯ ದಾಖಲೀಕರಣ ಅಗತ್ಯವೆಂದು ಮನಗಂಡ ರಾಮಕೃಷ್ಣ ಮಯ್ಯರ ಶ್ರಮ ಉಲ್ಲೇಖನೀಯ.  

ಬಲಿಪ ನಾರಾಯಣ ಭಾಗವತರ ಭಾಗವತಿಕೆಯಲ್ಲಿ ವೃಷಕೇತು ಸಹಿತವಾದ ಕರ್ಣಪರ್ವ ನಡೆಯಿತು. ಸುಬ್ರಾಯ ಹೊಳ್ಳ ಹಾಗೂ ಶಂಭಯ್ಯ ಕಂಜರ್ಪಣೆ ಅವರ ಕರ್ಣಾರ್ಜುನ, ನವೀನ್‌ ಶೆಟ್ಟಿ  ಮುಂಡಾಜೆ ಅವರ ವೃಷಕೇತು, ಈಶ್ವರ ಪ್ರಸಾದ ಧರ್ಮಸ್ಥಳ ಅವರ ಕೌರವ, ಗುಂಡಿಮಜಲು ಗೋಪಾಲ ಭಟ್ಟರ ಅಶ್ವತ್ಥಾಮ, ವಸಂತ ಗೌಡ ಕಾಯರ್ತಡ್ಕರ ಕೃಷ್ಣ. ಬಲಿಪರ ದಕ್ಷ ನಿರ್ದೇಶನದಲ್ಲಿ ಪರಂಪರೆಯ ಮಟ್ಟುಗಳು, ಯುದ್ಧದೃಶ್ಯಗಳು ನಡೆದವು. ಅನಂತರ ಅತಿಕಾಯ ಮೋಕ್ಷದಲ್ಲಿ ಉಬರಡ್ಕ ಉಮೇಶ ಶೆಟ್ಟರ ಅತಿಕಾಯನನ್ನು ಸಮರ್ಥ ವಾಗಿ ಮೆರೆಸಿ ಒಟ್ಟು ಪ್ರದರ್ಶನ ಕಳೆಗಟ್ಟಿಸಿದ್ದು ಪ್ರಸಾದ ಬಲಿಪರ ಪದ್ಯಗಳು. ಸಬ್ಬಣ ಕೋಡಿ ರಾಮ ಭಟ್ಟರ ಲಕ್ಷ್ಮಣ, ರಾಧಾಕೃಷ್ಣ ನಾವಡರ ಜಾಂಬವಂತ ಪಾತ್ರಗಳಿದ್ದರೆ ಅಂಬಾ ಪ್ರಸಾದ ಪಾತಾಳ ಮೊದಲಾದ ಅನುಭವಿಗಳು ಪ್ರಸಂಗದ ನಡೆಯನ್ನು ಸಮರ್ಥವಾಗಿ ನಿಭಾಯಿಸಿ ದರು. ಅನಂತರ ಮೈರಾವಣ ಕಾಳಗ ಹಾಗೂ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ನಡೆಯಿತು. 

Advertisement

ಇಲ್ಲಿ ಕಲಾವಿದರ ಜತೆಗೆ ಹಿನ್ನೆಲೆ ಸಹಾಯಕರ ಶ್ರಮವೂ ದಾಖಲಿಸಲ್ಪಟ್ಟಿತು. ಶ್ರೀಕೃಷ್ಣ ಪಾರಿಜಾತದ ಸಂದರ್ಭ ರಂಗಸ್ಥಳವನ್ನು ಇಬ್ಭಾಗವಾಗಿಸಿ ತೆರೆ ಹಿಡಿದು ಪ್ರೇಕ್ಷಕರಿಗೆ ಎರಡೂ ಕಡೆಯ ಕಲಾವಿದರ ಅಭಿನಯ ಕಾಣುವಂತೆ ಮಾಡಿದ್ದು ರಂಗಪ್ರಸಂಗದ ಹೊಸತನದ ಆವಿಷ್ಕಾರ. ವೃಷಕೇತುವಿನ ಯುದ್ಧದ ಸಂದರ್ಭ ಬೇಕಾದ ಆಯುಧಗಳ ಒದಗಣೆ ಹಿನ್ನೆಲೆ ರಂಗಕರ್ಮಿಗಳ ಜ್ಞಾನಕ್ಕೆ ಹಿಡಿದ ಕನ್ನಡಿ. ಪ್ರಸಂಗ ನಡೆಗೆ ಸರಿಯಾಗಿ ಆಯಾ ಹೊತ್ತಿಗೆ ರಂಗದಲ್ಲಿ ಬೇಕು ಬೇಕಾದ ಸಲಕರಣೆಗಳನ್ನು ಒದಗಿಸುವ ಹಿನ್ನೆಲೆ ರಂಗಕರ್ಮಿಗಳ ಕೆಲಸವೂ ಸುಲಭವಾದುದಲ್ಲ. ಅದಕ್ಕೂ ರಂಗದ ಮಾಹಿತಿ, ಅನುಭವ ಚೆನ್ನಾಗಿಯೇ ಇರಬೇಕು.  

ಕಾಲಮಿತಿಯ ವೇಗದಲ್ಲಿ ಎಲ್ಲದಕ್ಕೂ ಕತ್ತರಿ ಪ್ರಯೋಗವಾಗುತ್ತಿರುವ ಈ ದಿನಗಳಲ್ಲಿ ಕಲಾವಿದನಿಗಾದರೂ ರಂಗ ಪ್ರಸಂಗಗಳ ಮಾಹಿತಿ ಇರಬೇಕೆಂಬ ತುಡಿತದಿಂದ ಮಾಡಿದ ಕಾರ್ಯಕ್ರಮ ಚೆನ್ನಾಗಿಯೇ ಮೂಡಿಬಂತು. ಅನಾವಶ್ಯಕ ದೀರ್ಘಾಲಾಪನೆ ಮಾಡುವ ಭಾಗವತರಿಗೆ, ಸುದೀರ್ಘ‌ ಅವಧಿ ಕುಣಿಯುವ ಸ್ತ್ರೀ ವೇಷದವರಿಗೆ, ಅಸಂಬದ್ಧ ಮಾತನಾಡುವ ಹಾಸ್ಯ ಕಲಾವಿದರಿಗೆ, ಪದ್ಯದ ಅರ್ಥವೊಂದನ್ನು ಬಿಟ್ಟು ಅಧಿಕಪ್ರಸಂಗವೇ ಮಾತನಾಡುವ ಅರ್ಥವಾದಿಗಳಿಗೆ ಇಂತಹ ಕಾರ್ಯಾಗಾರಗಳು ನೆರವಾಗಬಲ್ಲವು. ಬಳಸಿಕೊಳ್ಳುವ, ಕಲಿಯುವ ಹಂಬಲ ಬೇಕು ಅಷ್ಟೇ. 

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next