Advertisement

ಹೊಗೆ ಮುಕ್ತ ಹಾದಿಯಲ್ಲಿ ಉಡುಪಿ ಜಿಲ್ಲೆ

12:42 AM Jan 23, 2020 | Sriram |

ಉಡುಪಿ: ಸುಸ್ಥಿರ ಅಭಿವೃದ್ಧಿ, ಜನರ ಆರೋಗ್ಯ ದೃಷ್ಟಿಯಿಂದ ಜಾರಿಗೆ ತಂದಿರುವ ಉಜ್ವಲ ಹಾಗೂ ಅನಿಲ ಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಉಡುಪಿ ಜಿಲ್ಲೆ ಯಶಸ್ವಿಯಾಗಿದೆ.

Advertisement

ಕೇಂದ್ರದ ಉಜ್ವಲ್‌ ಯೋಜನೆ ಹಾಗೂ ರಾಜ್ಯದ‌ ಅನಿಲ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 29,274 ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಈ ಮೂಲಕ ಶೇ.95.ರಷ್ಟು ಗುರಿ ಸಾಧಿಸಿದೆ.

ನಾಲ್ಕು ವರ್ಷಗಳಿಂದ ಅಭಿಯಾನ
ಉಜ್ವಲ ಯೋಜನೆಯಡಿ ಫ‌ಲಾನುಭವಿಗಳನ್ನು ಗುರುತಿಸುವ ಕೆಲಸ ಹಿಂದಿನ ನಾಲ್ಕು ವರ್ಷಗಳಲ್ಲಿ ನಡೆದಿತ್ತು. ಕುಟುಂಬ ಸದಸ್ಯರಿಂದ‌ ಅರ್ಜಿ ಆಹ್ವಾನಿಸಿ ಫ‌ಲಾನುಭವಿಗಳನ್ನು ಗುರುತಿಸುವ ಕೆಲಸ ನಡೆದಿತ್ತು. ಅರ್ಜಿ ಸಲ್ಲಿಸಿದ ಬಡ ಕುಟುಂಬಗಳ ಆರ್ಹ ಫ‌ಲಾನುಭವಿಗಳಿಗೆ ಗ್ಯಾಸ್‌ ವಿತರಣೆ ಪೂರ್ಣಗೊಂಡಿದೆ. ದಾಖಲೆಗಳಿಲ್ಲದೆ ಅಸಮರ್ಪಕವಾಗಿರುವ ಕೆಲ ಅರ್ಜಿದಾರರಿಗೆ ವಿತರಣೆಗೆ ಬಾಕಿ ಇದೆ. ಸದ್ಯ ವಿತರಣೆ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ನಾಗರಿಕ ಇಲಾಖೆಯಿಂದ ನೇಮಕಗೊಂಡ ನೋಡಲ್‌ ಅಧಿಕಾರಿಗಳು ತಿಳಿಸಿದ್ದಾರೆ.


ಯೋಜನೆ ಸಮರ್ಪಕ ಬಳಕೆ
ಬಡ ಕುಟುಂಬಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಕೇಂದ್ರ ಸರಕಾರ ಉಜ್ವಲ ಯೋಜನೆಯನ್ನು 2016ರಲ್ಲಿ ಜಾರಿಗೆ ತಂದಿತ್ತು. 2017ರ ಸೆಪ್ಟಂಬರ್‌ನಲ್ಲಿ ರಾಜ್ಯ ಸರಕಾರ ಅನಿಲಭಾಗ್ಯ ಯೋಜನೆಯನ್ನು ಜಾರಿಗೆ ತಂದಿತ್ತು. ಎರಡು ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡಿದ್ದಾರೆ.

3 ಪೆಟ್ರೋಲಿಯಂ ಸಂಸ್ಥೆಗಳಿಂದ ವಿತರಣೆ
ಉಜ್ವಲ ಯೋಜನೆಯಲ್ಲಿ ಹಿಂದೂಸ್ತಾನ್‌ ಪೆಟ್ರೋಲಿಯಂ, ಭಾರತ್‌ ಪೆಟ್ರೋಲಿಯಂ, ಇಂಡಿಯನ್‌ ಆಯಿಲ್‌ ಸಂಸ್ಥೆಗಳ ಮೂಲಕ ಸಂಪರ್ಕವನ್ನು ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದ ಬಡತನ ರೇಖೆಗಿಂತ ಕೆಳಗಿನ ಫ‌ಲಾನುಭವಿಗಳಿಗೆ ವಿತರಿಸಲಾಗಿದೆ.

ಬಹುತೇಕ ವಿತರಣೆ ಪೂರ್ಣ
2019ರ ಜನವರಿ ವರೆಗೆ ಅರ್ಜಿ ಸಲ್ಲಿಸಿದವರೆಲ್ಲರಿಗೆ ಎರಡು ಯೋಜನೆಯ ಒಂದರಲ್ಲಿ ಸಂಪರ್ಕ ನೀಡಿದ್ದೇವೆ.ನಮ್ಮ ಪ್ರಕಾರ ವಿತರಣೆ ಪ್ರಕ್ರಿಯೆ ಒಂದು ಹಂತದಲ್ಲಿ ಪೂರ್ಣ ಕಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಸಂಪರ್ಕ ಜತೆ ಜೀವವಿಮೆ
ಉಜ್ವಲ ಯೋಜನೆಯಲ್ಲಿ ಗ್ಯಾಸ್‌ ಜತೆಗೆ ಸುರಕ್ಷತೆಗಾಗಿ ರೂ. 6 ಲಕ್ಷ ಮೌಲ್ಯದ ಜೀವವಿಮೆಯನ್ನು ನೀಡಲಾಗಿದೆ, ಸೌದೆ ಒಲೆಯಿಂದ ಉಂಟಾಗುವ ಹೊಗೆಯಿಂದ ಬಡ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಈ ಉದ್ದೇಶದಿಂದ ಬಡವರಿಗಾಗಿ ಕೇಂದ್ರ ಸರಕಾರ ತಂದ ಮಹತ್ವಕಾಂಕ್ಷೆಯ ಯೋಜನೆ ಇದಾಗಿದೆ.

ಉಜ್ವಲ್‌, ಅನಿಲ ಭಾಗ್ಯ ಯೋಜನೆಗಳು ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು ಶೇ.95ರಷ್ಟು ಗುರಿ ಸಾಧಿಸಿದೆ. ಇದರಿಂದ ಅಡುಗೆಗೆ ಉರುವಲು ಬಳಸುವ, ಹೊಗೆ ವಾತಾವರಣದಲ್ಲಿ ಮಹಿಳೆಯರು ಇರಬೇಕಾದ ಪರಿಸ್ಥಿತಿಯೂ ಇಲ್ಲವಾಗಿದೆ.

ಸೂಕ್ತ ದಾಖಲೆ ಸಲ್ಲಿಸಿದವರಿಗೆ ಸಂಪರ್ಕ
ಯೋಜನೆಯಲ್ಲಿ ಅರ್ಜಿ ನೋಂದಾಯಿಸಿ ಸೌಲಭ್ಯ ಪಡೆಯಲು ಫ‌ಲಾನುಭವಿಗಳು ಬಿಪಿಎಲ್‌ ಪ್ರಮಾಣ ಪತ್ರ, ಬಿಪಿಎಲ್‌ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಚುನಾವಣೆ ಚೀಟಿ, ಡ್ರೈವಿಂಗ್‌ ಚಾಲನೆ ಪರವಾನಿಗೆ, ಭಾವಚಿತ್ರಗಳೊಂದಿಗೆ ವಿತರಣೆ ಕೇಂದ್ರಗಳಿಗೆ ತೆರಳಿ ನಿಗದಿತ ಅರ್ಜಿ ಸಮೂನೆಯಲ್ಲಿ ಭರ್ತಿಗೊಳಿಸಿ ನೀಡಿದ್ದರು. ಬಳಿಕ ದಾಖಲೆ ಪರಿಶೀಲನೆ ನಡೆದು ಸಮರ್ಪಕವಿದ್ದ‌ ಅರ್ಜಿದಾರರಿಗೆ ಗ್ಯಾಸ್‌ ಸಂಪರ್ಕ ದೊರಕಿದೆ.

ಯೋಜನೆ
ಹೊಗೆ ಮುಕ್ತ ಅಡುಗೆ ಮನೆ ದೃಷ್ಟಿಯಿಂದ ಜಾರಿಗೆ ತಂದ ಈ ಯೋಜನೆಯನ್ನು ಜನರೂ ಮುಕ್ತವಾಗಿ ಸ್ವೀಕರಿಸಿದ್ದಾರೆ.

ಬಡ ಮಹಿಳೆಯರಲ್ಲಿ ಸುಧಾರಣೆ
ಉಜ್ವಲ ಯೋಜನೆಯ ಪ್ರಯೋಜವನ್ನು ಅನೇಕ ಬಡ ಕುಟುಂಬಗಳು ಪಡಕೊಂಡಿವೆ. ಒಲೆಯ ಮುಂದೆ ಕುಳಿತು ಹೊಗೆಯಿಂದ ಕಷ್ಟಪಡುತ್ತಿದ್ದ ಬಡ ಮಹಿಳೆಯರು ಅದರಿಂದ ಹೊರಬಂದಿದ್ದಾರೆ. ಗ್ರಾಮೀಣ ಮಹಿಳೆಯರ ಜೀವನ ಸುಧಾರಿಸಿದೆ. ದಾಖಲೆಗಳ ವ್ಯತ್ಯಾಸಗಳಿಂದ ಕೆಲವರಿಗೆ ಸಂಪರ್ಕ ಕೈ ತಪ್ಪಿದೆ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಅವರನ್ನು ಸೇರಿಸಿ ವಿತರಿಸುತ್ತೇವೆ.
-ರಘುಪತಿ ಭಟ್‌, ಶಾಸಕರು, ಉಡುಪಿ.

ನಿರೀಕ್ಷಿತ ಗುರಿ ತಲುಪಿದ್ದೇವೆ
ಉಜ್ವಲ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಅರ್ಹರಿಗೆ ಗ್ಯಾಸ್‌ ಸಂಪರ್ಕ ನೀಡಿದ್ದೇವೆ. ದಾಖಲೆಗಳು ಸರಿ ಇಲ್ಲದೆ ಇರುವವರಿಗೆ ತಾಂತ್ರಿಕ ತೊಂದರೆಗಳಿಂದ ವಿತರಿಸಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ನಿರೀಕ್ಷಿತ ಗುರಿ ಸಾಧಿಸಿದ ವಿಶ್ವಾಸವಿದೆ.
-ಶ್ರೀನಿವಾಸ, ಜಿಲ್ಲಾ ಮಟ್ಟದ
ನೋಡೆಲ್‌ ಅಧಿಕಾರಿ, ಉಜ್ವಲ ಯೋಜನೆ.

ಗ್ಯಾಸ್‌ ಬಳಸುತ್ತಿದ್ದೇನೆ
ಸೌದೆ ಬಳಸಿ ಅಡುಗೆ ತಯಾರಿಸುತ್ತಿದ್ದೆವು. ಸರಕಾರದಿಂದ ಇಂತಹದ್ದೊಂದು ಯೋಜನೆ ಇದೆ ಎಂದು ಸಂಬಂದಿಕರೊಬ್ಬರಿಂದ ತಿಳಿಯಿತು. ಅವರ ಸಲಹೆ ಪಡೆದು ಅರ್ಜಿ ಸಲ್ಲಿಸಿದೆ. ಸಂಪರ್ಕ ಲಭಿಸಿತು. ಈಗ ಗ್ಯಾಸ್‌ ಬಳಸಿ ಅಡುಗೆ ಸಿದ್ಧಪಡಿಸುತ್ತಿದ್ದೇನೆ.
– ಶಾರದೇಶ್ವರಿ ಕಡಿಯಾಳಿ, ಗೃಹಿಣಿ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next