Advertisement

ಶ್ರೀಕೃಷ್ಣ ಸಂಧಾನದಲ್ಲಿ ದುರ್ಯೋಧನನ ಪಾತ್ರಕ್ಕೆ ಹೊಸರೂಪ ಕೊಟ್ಟ ಉಜಿರೆ

01:29 AM Jan 17, 2020 | mahesh |

ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಆಯೋಜಿಸಲ್ಪಟ್ಟಿದ್ದ ಶ್ರೀಕೃಷ್ಣ ಕಥಾವಾಹಿನಿ ಸರಣಿ ತಾಳಮದ್ದಳೆಯ ಸಮಾರೋಪ ಸಮಾರಂಭವು ಡಿ. 25ರಂದು ಶ್ರೀಕೃಷ್ಣ ಮಠದಲ್ಲಿ ಜರಗಿದ್ದು, ಈ ಸಂದರ್ಭ ಪೂರ್ವಾಹ್ನ ಮತ್ತು ಅಪರಾಹ್ನ ಎರಡು ಪ್ರತ್ಯೇಕ ಕಥಾಭಾಗದ ತಾಳಮದ್ದಳೆ ಕಾರ್ಯಕ್ರಮವಿತ್ತು. ಪೂರ್ವಾಹ್ನ ಮಧ್ವ ಮಂಟಪದಲ್ಲಿ ಜರಗಿದ್ದ ಶ್ರೀಕೃಷ್ಣ ಸಂಧಾನ – ಗಾಂಧಾರಿ ವಿಲಾಪ ಪ್ರಸಂಗವು ಪ್ರಬುದ್ಧ ಕಲಾವಿದರ ಕೂಡುವಿಕೆಯಿಂದ ಮನಸ್ಪರ್ಶಿಯಾಗಿತ್ತು.

Advertisement

ಇದರಲ್ಲಿ ಮುಖ್ಯವಾಗಿ ಗಮನ ಸೆಳೆದದ್ದು ಉಜಿರೆ ಅಶೋಕ ಭಟ್ಟರ ದುರ್ಯೋಧನ ಮತ್ತು ಸಂಕದಗಂಡಿ ಗಣಪತಿ ಭಟ್ಟರ ಗಾಂಧಾರಿ. ಒಂದೇ ಪದ್ಯಕ್ಕೆ ಅರ್ಥ ಹೇಳುವ ಅವಕಾಶ ಸಿಕ್ಕಿದ್ದ ವಿದುರನ ಪಾತ್ರದಲ್ಲಿ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ ಅವರು ಇಡೀ ಸಭೆಯ ಚಳಿ ಬಿಡಿಸಿದರು ಎಂಬುದು ಕೂಡ ಉಲ್ಲೇಖನೀಯ.

ದುರ್ಯೋಧನನ ಪಾತ್ರದಲ್ಲಿ ಅಶೋಕ ಭಟ್ಟರು ತಮ್ಮ ವಿದ್ವತ್ತಿನ ಮೂಲಕ ಕುರುರಾಯನ ಪಾತ್ರಕ್ಕೇ ಹೊಸ ಕಳೆಗಟ್ಟಿದರು. ಸಂಧಾನಕ್ಕಾಗಿ ಬಂದಿದ್ದ ಕೃಷ್ಣ ,ವಿದುರನ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದು ದುರ್ಯೋಧನನಿಗೆ ಬೇಸರವಾಗಿದ್ದುದು ಏಕೆ ಎಂಬುದಕ್ಕೆ ಇವರು ನೀಡಿದ್ದ ಒಂದು ಕಾರಣ ಆತಿಥ್ಯ ಸ್ವೀಕರಿಸಿದ ವ್ಯಕ್ತಿಯ ಮನಸ್ಸಿನಲ್ಲಿ ಆಗುವಂಥ ಬದಲಾವಣೆಗೆ ಕೈಗನ್ನಡಿಯಾಗಿತ್ತು. ಕೃಷ್ಣನು ದುರ್ಯೋಧನನ ಅರಮನೆಯಲ್ಲಿಯೇ ಆತಿಥ್ಯ ಸ್ವೀಕರಿಸಿದ್ದರೆ ಸಂಧಾನದ ಸಂದರ್ಭ ಅನ್ನದ ಋಣ ಕೃಷ್ಣನ ಮೇಲೆ ಪರಿಣಾಮ ಬೀರುತ್ತಿತ್ತು ಮತ್ತು ಆತ ಪಾಂಡವ ಪಕ್ಷಪಾತಿಯಾಗಿ ಪ್ರಬಲವಾಗಿ ವಾದಿಸಲು ಕಷ್ಟವಾಗುತ್ತಿತ್ತು ಎಂಬ ನಿರೀಕ್ಷೆ ಕೌರವನವಲ್ಲಿತ್ತು. ಆತಿಥ್ಯ ಸ್ವೀಕರಿಸದ ಕಾರಣ ಇಂಥದ್ದೊಂದು ಅವಕಾಶ ತಪ್ಪಿತಲ್ಲಾ ಎಂಬುದನ್ನು ಅಶೋಕ ಭಟ್ಟರು ಪ್ರೇಕ್ಷಕರ ಮನಸ್ಸಿಗೆ ತಟ್ಟುವಂತೆ ಛಲ, ದ್ವೇಷ ತುಂಬಿದ್ದ ಗಾಂಭೀರ್ಯದ ಮಾತಿನಿಂದಲೇ ತೆರೆದಿಟ್ಟರು.

ಶ್ರೀಕೃಷ್ಣನು ಭಗವಾನ್‌ ಶ್ರೀಮನ್ನಾರಾಯಣನೇ ಎಂಬುದನ್ನು ಕೂಡ ಇವರು ಭಿನ್ನ ರೂಪದಲ್ಲಿ ಇಲ್ಲಿ ಪ್ರಸ್ತುತಪಡಿಸಿದರು. ಕೃಷ್ಣನನ್ನು ಹಗ್ಗದಲ್ಲಿ ಬಂಧಿಸಲು ಹೇಳಿದಾಗ ಆತ ವಿಶ್ವರೂಪ ತೋರಿಸಿ ಬಂಧನಕ್ಕೆ ಸಿಲುಕದಾದ. ಇಲ್ಲಿ, ಈ ಕೌರವನ ಬಂಧನದಿಂದ ತಪ್ಪಿಸಿಕೊಳ್ಳಲು ನಿನಗೆ ವಿಶ್ವರೂಪ ತೋರಿಸಬೇಕಾಯಿತಲ್ಲಾ ಎಂಬುದನ್ನೇ ದುರ್ಯೋಧನ ತನ್ನ ಪಾಲಿನ ಹೆಮ್ಮೆ ಎಂದು ಭಾವಿಸಿದುದನ್ನೂ ಅಶೋಕ ಭಟ್ಟರು ಮನಸ್ಪರ್ಶಿಯಾಗಿ ಹೇಳಿದರು. ಮುಂದೆ 5 ಗ್ರಾಮಗಳನ್ನಾದರೂ ನೀಡು ಎಂದಾಗಲೂ, ಹಿಂದಿನ ಬಲಿ ಚಕ್ರವರ್ತಿ ಮತ್ತು ವಾಮನನ ಕಥೆಯನ್ನು ನೆನಪಿಸಿಕೊಂಡರು. ಬಲಿ ಚಕ್ರವರ್ತಿಯ ಕಥೆಯನ್ನು ಅರಮನೆಯಲ್ಲಿ ಕೇಳಿದ್ದ ನಾನು, ಬಲಿ ಚಕ್ರವರ್ತಿ ಮಾಡಿದಂಥ ಮೂರ್ಖತನದ ಕೆಲಸ ಮಾಡಲು ಸಿದ್ಧನಿಲ್ಲ. ಅಂದು ವಾಮನ ಮೂರು ಪಾದ ಅಳತೆಯ ಭೂಮಿ ಕೇಳಿ ಭೂಲೋಕ, ಆಕಾಶವನ್ನು ಅಳೆದು, ಮೂರನೆಯ ಪಾದದಲ್ಲಿ ಬಲಿಯನ್ನೇ ಪಾತಾಳಕ್ಕೆ ತಳ್ಳಿದ್ದ. ನೀನಿಂದು 5 ಗ್ರಾಮಗಳನ್ನು ಕೇಳಿ ಯಾವುದನ್ನೆಲ್ಲ ಅಳೆದುಕೊಳ್ಳುತ್ತಿಯೋ ಎಂಬ ದುರ್ಯೋಧನದ ಭೀತಿಯಲ್ಲೂ ಶ್ರೀಕೃಷ್ಣನು ಮಹಾವಿಷ್ಣುವೇ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡುದನ್ನು ಕೂಡ ಮನ ತಟ್ಟುವಂತೆ ಹೇಳಿದ್ದರು. ಕುಟುಂಬ ಮತ್ತು ರಾಜಕೀಯ ಪ್ರತ್ಯೇಕ ಎಂಬುದನ್ನೂ ಇವರು ಸಮರ್ಥವಾಗಿ ಮಂಡಿಸಿದರು. ಹೀಗೆ ಅಶೋಕ ಭಟ್ಟರ ಪ್ರತಿಯೊಂದು ಮಾತೂ ಅರ್ಥವತ್ತಾಗಿತ್ತು. ಇವರಿಗೆ ಸಮದಂಡಿಯಾಗಿ ಶ್ರೀಕೃಷ್ಣನಾಗಿ ಪ್ರೊ| ಪ್ರಭಾಕರ ಜೋಷಿ ಕೂಡ ಸಮರ್ಥ ವಾದ ಮಂಡಿಸಿದರು.

ಗಾಂಧಾರಿ ವಿಲಾಪದಲ್ಲಿ ಗಾಂಧಾರಿಯಾಗಿದ್ದ ಸಂಕದಗಂಡಿ ಗಣಪತಿ ಭಟ್ಟರು ಮಾತು ಮಾತೆಯೊಬ್ಬರ ಅಂತಕರಣವನ್ನು ತೆರೆದಿಟ್ಟಿತು. ಯುದ್ಧ ಮುಗಿದ ಬಳಿಕ ಪಾಂಡವರನ್ನು ಸೇರಿಸಿಕೊಂಡು ಗಾಂಧಾರಿಯ ಬಳಿಗೆ ಬಂದ ಕೃಷ್ಣನಿಗೆ ಆಕೆ ಕೇಳುವ ಪ್ರಶ್ನೆಗಳು ಮಾತೃಹೃದಯವು ಎಂಥ ಕೆಟ್ಟ ಮಕ್ಕಳನ್ನೂ ಸಮರ್ಥಿಸಬೇಕಾದ ಅನಿವಾರ್ಯತೆಯನ್ನು ತೆರೆದಿಟ್ಟಿತು. ನನ್ನ ಆಂತರ್ಯದ ದೃಷ್ಟಿಗೆ ದ್ರೌಪದಿಯು ಸಿರಿಮುಡಿಯನ್ನು ಕಟ್ಟಿರುವುದು ಕಾಣುತ್ತಿದೆ. ಆದರೆ ಅದಕ್ಕೆ ಬಳಕೆಯಾದುದು ನನ್ನ ಕರುಳಕುಡಿಯಲ್ಲವೇ ಕೃಷ್ಣ? ಆ ಕರುಳ ಕುಡಿಯ ಸಂಹಾರ ಸಂದರ್ಭ ಅಲ್ಲಿ ಕ್ಷುದ್ರ ಶಕ್ತಿ ಇತ್ತು. ದೇವರಿದ್ದಲ್ಲಿ ಕ್ಷುದ್ರ ಶಕ್ತಿ ಇರುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಅದು ತಪ್ಪಾಯಿತಲ್ಲವೋ ಕೃಷ್ಣ. ಅಲ್ಲದೆ ಹಾಗೆ ಮಾಡಬೇಡ ಎಂದು ಯಾರೂ ಆ ಕ್ಷುದ್ರ ಶಕ್ತಿಯನ್ನು (ಭೀಮ) ತಡೆಯಲಿಲ್ಲವಲ್ಲಾ ಕೃಷ್ಣ? ನಿನ್ನ ತಾಯಿಯಾದರೋ 7 ಮಕ್ಕಳನ್ನು ಕಳಕೊಂಡು ನಿನ್ನ ಮೂಲಕ ಆ ವಿರಹವೇದನೆಯನ್ನು ಮರೆತರು. ಭೀಷ್ಮನ ಹೆತ್ತವರು ಕೂಡ ಭೀಷ್ಮನ ಬದುಕಿನ ಮೂಲಕ ಹಿಂದಿನ ಮಕ್ಕಳ ಅಗಲಿಕೆಯ ನೋವನ್ನು ಮರೆತರು. ಆದರೆ ನನಗೆ ಒಂದು ಮಕ್ಕಳೂ ಉಳಿಯಲಿಲ್ಲ ಕೃಷ್ಣ ಎಂಬ ಗಾಂಧಾರಿಯ ಪ್ರಶ್ನೆಗೆ ಅಷ್ಟೇ ಸಮರ್ಥವಾಗಿ ಆ ಭಾಗದ ಕೃಷ್ಣನಾಗಿದ್ದ ವಾಸುದೇವ ರಂಗ ಭಟ್ಟರು ಉತ್ತರಿಸುತ್ತಾ, ಪ್ರಹ್ಲಾದನಂಥ ಹರಿಭಕ್ತ ಮಗನನ್ನು ಪಡೆದಿದ್ದರೂ ಕಯಾದುವಿಗೆ ತನ್ನ ಮಾಂಗಲ್ಯ ಭಾಗ್ಯವನ್ನು ಉಳಿಸಿಕೊಳ್ಳಲಾಗಲಿಲ್ಲವಲ್ಲಾ ಎಂದಾಗ, ಬೆಣ್ಣೆ ತಿಂದವ ನೀನು. ನಿನ್ನಿಂದ ಬೆಣ್ಣೆಯಂಥ ಮಾತು ಬರುವುದು ವಿಶೇಷವೇನಲ್ಲ … ಹೀಗೆ ಇಡೀ ಕಥಾ ಭಾಗದಲ್ಲಿ ಗಾಂಧಾರಿಯ ಮಾತೃಹೃದಯ ನೋವು ತೆರೆದಿಟ್ಟಿತ್ತು.

Advertisement

ಭಾಗವತರಾಗಿ ಜನ್ಸಾಲೆ ರಾಘವೇಂದ್ರ ಆಚಾರ್‌, ಚೆಂಡೆಯಲ್ಲಿ ಸುಜನ್‌ ಹಾಲಾಡಿ ಮತ್ತು ಮದ್ದಲೆಯಲ್ಲಿ ಸುನಿಲ್‌ ಭಂಡಾರಿ ಕಡತೋಕ ಅವರು ಸಹಕರಿಸಿದ್ದರು.

ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next