Advertisement

ಉಜಿರೆ ಜನಾರ್ದನ‌ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಅಸ್ತಂಗತ

02:57 PM Feb 19, 2023 | Team Udayavani |

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ(78) ಅವರು ಫೆ.19 ರಂದು ಮಧ್ಯಾಹ್ನ ವಯೋಸಹಜವಾಗಿ ತಮ್ಮ ಉಜಿರೆ ಪಡುವೆಟ್ಟು ಮನೆಯಲ್ಲಿ ದೈವಾಧೀನರಾದರು.

Advertisement

ಅವರು ಪುತ್ರರಾದ ತುಳು ಶಿವಳ್ಳಿ ಸಭಾ ಉಜಿರೆ ವಲಯಾಧ್ಯಕ್ಷ, ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಶರತ್ ಕೃಷ್ಣ ಪಡುವೆಟ್ನಾಯ, ಪುತ್ರಿ ಬೆಂಗಳೂರಿನಲ್ಲಿ ನೆಲೆಸಿರುವ ಸಂಧ್ಯಾ ಅವರನ್ನು ಅಗಲಿದ್ದಾರೆ.

ಭಾಗೀರಥಿಯಮ್ಮ ಮತ್ತು ರಾಮಕೃಷ್ಣ ಪಡ್ವೆಟ್ನಾಯ ದಂಪತಿಗಳ ಪುತ್ರರಾದ ಉಜಿರೆಯ ಪಡುವೆಟ್ಟು ಮನೆಯಲ್ಲಿ 1945 ಅ.16 ರಂದು ಜನಿಸಿದ ವಿಜಯರಾಘವ ಪಡ್ವೆಟ್ನಾಯರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರರು ಹಾಗೂ ಮೂಡಣ ಹದಿನಾರು ಗ್ರಾಮಗಳ ಗ್ರಾಮಣಿತ್ವ ಹೊಂದಿದ ಅರಮನೆತ್ತಾಯ ಕುಲದಲ್ಲಿ ಜನಿಸಿದವರು.

ಉಜಿರೆಯ ಜನಾರ್ದನ ಶಾಲೆ ಮತ್ತು ಕರ್ನಾಟಕ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ಪದವೀಧರರಾದರೂ ಹಿರಿಯರ ಕೃಷಿ ಭೂಮಿಯನ್ನೇ ಕರ್ಮಕ್ಷೇತ್ರವನ್ನಾಗಿ ಕೃಷಿಯಲ್ಲೇ ತಮ್ಮ ಆಸಕ್ತಿ; ಅಭಿರುಚಿಯನ್ನು ಬೆಳೆಸಿಕೊಂಡು ಆದರ್ಶ ಕೃಷಿಕರೆನಿಸಿಕೊಂಡರು.

ಉಜಿರೆ ಗ್ರಾಮದಲ್ಲಿ 3000 ಅಕ್ಕಿ ಮುಡಿಯ ಹುಟ್ಟುವಳಿ ಹೊಂದಿ ದಾನ ಧರ್ಮಾದಿಗಳಿಗೆ ಪ್ರಸಿದ್ಧಿ ಪಡೆದ ಮನೆತನವದು. ಆರು ಗ್ರಾಮಗಳಲ್ಲಿ ಹಂಚಿ ಕೊಂಡಿದ್ದು ಒಕ್ಕಲುಗಳಿಂದ ಅಕ್ಕಿ ಗೇಣಿ ಬರುತ್ತಿದ್ದ ಜಿಲ್ಲೆಯ ಅತಿ ದೊಡ್ಡ ಜಮೀನ್ದಾರರರು ಪಡುವೆಟ್ನಾಯರು.

Advertisement

ಉಜಿರೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ನಿರ್ದೇಶಕರಾಗಿ, ಮಾರ್ಗದರ್ಶಕರಾಗಿ ಸಂಘದ ಅಭ್ಯುದಯಕ್ಕೆ ಕಾರಣರಾಗಿದ್ದಾರೆ. ಉಜಿರೆ ಲಯನ್ಸ್ ಕ್ಲಬ್ಬಿನ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಉಜಿರೆ ಬ್ರಾಹ್ಮಣ ಸಂಘಟನೆಗಾಗಿ ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸ್ಥಾಪಿಸಿದ್ದರು.

ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಗೌರವಾಧ್ಯಕ್ಷರಾಗಿ, ತುಳು ಶಿವಳ್ಳಿ ಸಭಾದ (ಬೆಳ್ತಂಗಡಿ) ಅಧ್ಯಕ್ಷರಾಗಿ 8 ವಲಯಗಳನ್ನು ರಚಿಸಿ ಸಮಾಜ ಸಂಘಟನೆ ಕಾರ್ಯ ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕು ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷರಾಗಿ, ಉಜಿರೆ ವರ್ತಕ ಸಂಘದ ಸ್ಥಾಪಕಧ್ಯಕ್ಷರಾಗಿ, ತಾಲೂಕಿನಾದ್ಯಂತ ನಡೆಯುತ್ತಿರುವ ಹಿಂದೂ ಸಮಾಜೋತ್ಸವಗಳಲ್ಲಿ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ.

ಉಜಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಶಾರದಾ ಪೂಜಾ ಸಮಿತಿ ಗೌರವಾಧ್ಯಕ್ಷರಾಗಿ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಗ್ನೇಯ ಪಾರ್ಶ್ವದಲ್ಲಿ ಮಧ್ವಮಂಟಪ ರಚಿಸಿ ಅಲ್ಲಿ ಶ್ರೀ ಮಧ್ವಾಚಾರ್ಯರ ಪ್ರತಿಮೆಯನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳವರ ಮೂಲಕ ಪ್ರತಿಷಾಪಿಸಿ, ಆಚಾರ್ಯರು ಕುಳಿತು ಗ್ರಂಥ ಬರೆದ ಶಿಲೆಯನ್ನು ಸಂರಕ್ಷಿಸಿರುವುದು ಪ್ರತೀತಿ.

ಯಕ್ಷಗಾನ ಪ್ರದರ್ಶನ ಹಾಗೂ ತಾಳಮದ್ದಳೆ ಸಪ್ತಾಹಗಳನ್ನು ನಡೆಸಿ ಕಲಾಭಿಮಾನಿಗಳ ಮನತಣಿಸಿದ್ದಾರೆ. ಅದಲ್ಲದೆ ತಾಲೂಕಿನ ಅದೆಷ್ಟೋ ದೇವಸ್ಥಾನಗಳ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವಕ್ಕೆ ಕಾರಣೀಕರ್ತರು. ಅವರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಂಬನಿ ಮಿಡಿದಿದ್ದಾರೆ. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಮಾಜಿ ಶಾಸಕ ಕೆ.ವಸಂತ ಬಂಗೇರ ಸಹಿತ ಅನೇಕರು ಕಂಬನಿ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next