Advertisement

“ಉದ್ಯೋಗ ರತ್ನ’ಪ್ರಶಸ್ತಿ ಪ್ರದಾನ

01:00 AM Feb 26, 2019 | Harsha Rao |

ಮಂಗಳೂರು: ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್‌ ಆಫ್‌ ಎಕನಾಮಿಕ್‌ ಸ್ಟಡೀಸ್‌ ವತಿಯಿಂದ ನಡೆದ ಎಕನಾಮಿಕ್‌ ಡೆವಲಪ್‌ಮೆಂಟ್‌ ಸೆಮಿನಾರ್‌ನಲ್ಲಿ ಎಕನಾಮಿಕ್‌ ಡೆವಲಪ್‌ಮೆಂಟ್‌ “ಉದ್ಯೋಗ ರತ್ನ’-2019 ಪ್ರತಿಷ್ಠಿತ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (ಎಸ್‌ಸಿಡಿಸಿಸಿ ಬ್ಯಾಂಕ್‌) ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ರವಿವಾರ ಹೊಸದಿಲ್ಲಿಯಲ್ಲಿ ಪ್ರದಾನ ಮಾಡಲಾಯಿತು.

Advertisement

ದಿಲ್ಲಿಯ ಇಂಡಿಯಾ ಹ್ಯಾಬಿಟ್ಯಾಟ್‌ ಸೆಂಟರ್‌ ಹಾಲ್‌ನಲ್ಲಿ ನಡೆದ ಸಮಾವೇಶದಲ್ಲಿ ಸಿಕ್ಕಿಂನ ಮಾಜಿ ರಾಜ್ಯಪಾಲ ಹಾಗೂ ವರ್ಲ್ಡ್ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕ ವಾಲ್ಮೀಕಿ ಪ್ರಸಾದ್‌ ಸಿಂಗ್‌ ಅವರಿಂದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಪ್ರಶಸ್ತಿ ಸ್ವೀಕರಿಸಿದರು.

ಸಹಕಾರ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ
ವೈಯಕ್ತಿಕ ಸಾಧನೆಗಾಗಿ ಪ್ರಶಸ್ತಿ ನೀಡಲಾಗಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು ತರುವುದರ ಜತೆಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಡಾ| ಎಂ.ಎನ್‌.ಆರ್‌. ಕಾರಣರಾಗಿದ್ದಾರೆ. 1994ರಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ನ್ನು ಸತತ 25 ವರ್ಷಗಳ ಸುದೀರ್ಘ‌ ಅವಧಿಯಲ್ಲಿ ಮುನ್ನಡೆಸಿದ್ದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕಿಂಗ್‌ ಸೌಲಭ್ಯವನ್ನು ದೊರಕಿಸಿಕೊಡುವಲ್ಲಿ ಶ್ರಮ ವಹಿಸಿದ್ದಾರೆ. ಹಲವಾರು ವಿನೂತನ ಯೋಜನೆಗಳ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್‌ನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.

ಅವರ ಅಧ್ಯಕ್ಷತೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿಗೆ ಸತತ 19 ವರ್ಷಗಳಿಂದ ರಾಜ್ಯದ ಅತ್ಯುತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಎಂದು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಪ್ರಶಸ್ತಿ ಹಾಗೂ 17 ವರ್ಷಗಳಿಂದ ನಬಾರ್ಡ್‌ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಲಂಡನ್‌ನ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ನಡೆದ ಹೊಸದಿಲ್ಲಿಯ ಎನ್‌ಆರ್‌ಐ ವೆಲ್‌ಫೇರ್‌ ಸೊಸೈಟಿ ಆಫ್‌ ಇಂಡಿಯಾದ ಗ್ಲೋಬಲ್‌ ಇಂಡಿಯನ್‌ ಶೃಂಗ ಸಭೆಯಲ್ಲಿ “ಮಹಾತ್ಮಾ ಗಾಂಧಿ ಸಮ್ಮಾನ್‌’ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯ ಸರಕಾರದಿಂದ “ಸಹಕಾರ ರತ್ನ’ ಪ್ರಶಸ್ತಿ, ಕೊಲಂಬೊ ಮುಕ್ತ ವಿವಿಯಿಂದ ಡಾಕ್ಟರೇಟ್‌, ಮದರ್‌ ಥೆರೆಸಾ ಸದ್ಭಾವನಾ ಪ್ರಶಸ್ತಿ, ಸಹಕಾರ ವಿಶ್ವಬಂಧು ಶ್ರೀ ಅಂತಾರಾಷ್ಟ್ರೀಯ ಪ್ರಶಸ್ತಿ, ಮುಂಬಯಿಯ ಬ್ಯಾಂಕಿಂಗ್‌ ಫ್ರಾಂಟಿಯರ್ನಿಂದ ಬೆಸ್ಟ್‌ ಚೇರ್‌ವೆುನ್‌, ಮೊದಲಾದ ರಾಷ್ಟ್ರೀಯ- ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next