Advertisement

ಹಾವಿನ ಭಯದ ಭೀತಿಯಲ್ಲಿ ಉದ್ಯಾವರ ಗೇಟ್‌ ಶಾಲೆ ವಿದ್ಯಾರ್ಥಿಗಳು

07:38 PM Nov 27, 2019 | mahesh |

ಮಂಜೇಶ್ವರ: ಕೇರಳದ ವಯನಾಡ್‌ ಸರಕಾರಿ ಶಾಲಾ ಕೊಠಡಿಯಲ್ಲಿ ಹಾವು ಕಚ್ಚಿ ಹತ್ತು ವರ್ಷದ ಬಾಲಕಿ ಮೃತಪಟ್ಟು ನಾಡನ್ನು ನಡುಗಿಸಿದ ಪ್ರಕರಣ ನಡೆದ ಬಳಿಕ ಇನ್ನು ಎಚ್ಚೆತ್ತುಕೊಳ್ಳದ ಅಧಿಕೃತರ ಅನಾಸ್ಥೆಯಿಂದಾಗಿ ಮಂಜೇಶ್ವರ ಉದ್ಯಾವರ ಗೇಟ್‌ ಜಿ.ಎಲ್‌.ಪಿ. ಶಾಲೆಯ ವಿದ್ಯಾರ್ಥಿಗಳು ಹಾವಿನ ಭೀತಿಯಲ್ಲಿ ಕಳೆಯುತ್ತಿದ್ದಾರೆ.

Advertisement

ಈ ಶಾಲೆಯ ವಿದ್ಯಾರ್ಥಿಗಳು ಕಲಿಯುವ ಕೊಠಡಿಯ ಹಿಂಬಾಗ ಕಾಡು ಪೊದರುಗಳಿಂದ ತುಂಬಿದ್ದು, ಜೊತೆಯಾಗಿ ಅಲ್ಲಲ್ಲಿ ದೊಡ್ಡ ದೊಡ್ಡ ಕಲ್ಲುಗಳು ರಾಶಿ ಬಿದ್ದುಕೊಂಡಿದೆ. ಈ ಭಾಗದಲ್ಲಿ ಸ್ಥಳೀಯರು ಹಾಗೂ ಹಳೆ ವಿದ್ಯಾರ್ಥಿಗಳು ಹಾವುಗಳನ್ನು ಹಲವು ಸಲ ಕಂಡಿದ್ದಾರೆ. ಇದಕ್ಕೆ ತಾಗಿಕೊಂಡೇ ಮಕ್ಕಳು ಕಿಟಿಕಿಯ ಭಾಗದಲ್ಲಿ ಕುಳಿತು ಕಲಿಯುತ್ತಿದ್ದಾರೆ. ಈ ಕಿಟಿಕಿಯ ಬಾಗಿಲನ್ನು ಮುಚ್ಚುವ ಸ್ಥಿತಿ ಕೂಡಾ ಇಲ್ಲದಂತಾಗಿದೆ. ರಾತ್ರಿ ವೇಳೆಗಳಲ್ಲೂ ಕಿಟಿಕಿಯ ಭಾಗದಲ್ಲಿ ಹಾವು ಕಂಡಿರುವುದಾಗಿ ಪರಿಸರವಾಸಿಗಳು ಹೇಳುತ್ತಿದ್ದಾರೆ. ಕಿಟಿಕಿಯ ಭಾಗದಲ್ಲೇ ಮಕ್ಕಳು ಶಾಲಾ ಬ್ಯಾಗುಗಳನ್ನು ಕೂಡಾ ಇಡುತ್ತಿದ್ದಾರೆ. ಕಿಟಿಕಿ ಮುಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾಡು ಪೊದರಿನಲ್ಲಿರುವ ವಿಷ ಪೂರಿತ ಹಾವುಗಳು ರಾತ್ರಿ ಕಾಲದಲ್ಲೂ ಅದೇ ರೀತಿ ತರಗತಿ ನಡೆಯುವ ಸಂದರ್ಭಗಳಲ್ಲೂ ವಿದ್ಯಾರ್ಥಿಗಳ ಹತ್ತಿರ ಸುಳಿಯುವ ಸಾಧ್ಯತೆ ತೋರುತ್ತಿದೆ. ತರಗತಿ ನಡೆಯುವ ಸಂದರ್ಭಗಳಲ್ಲೂ ಹಾವುಗಳನ್ನು ಕಂಡಿರುವ ಬಗ್ಗೆ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಈ ಸ್ಥಳದಲ್ಲಿ ಹಾವನ್ನು ಕಂಡಂತಹ ಸ್ಥಳೀಯರು ಶಾಲಾ ರಕ್ಷಕ ಶಿಕ್ಷಕ ಸಂಘಕ್ಕೆ ಮಾಹಿತಿ ನೀಡಿದ್ದಾರೆ. ಜೊತೆಯಾಗಿ ಮಾಧ್ಯಮ ಪ್ರತಿನಿಧಿಗಳಿಗೂ ಮಾಹಿತಿ ನೀಡಿದ್ದಾರೆ. ಮಂಜೇಶ್ವರ ಗ್ರಾ.ಪಂ.ನ ಮೇಲ್ನೋಟದಲ್ಲಿರುವ ಈ ಶಾಲೆಯ ಬಗ್ಗೆ ಈಗಾಗಲೇ ಅಧಿಕೃತರಿಗೆ ಮಾಹಿತಿಯನ್ನು ನೀಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲವೆಂಬುದಾಗಿ ಶಾಲಾ ಅಧಿಕೃತರು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಪಂ. ಅಧ್ಯಕ್ಷರನ್ನು ಸಂಪರ್ಕಿಸಿದಾಗ ನಮಗೆ ಅಂತಹ ಯಾವುದೇ ದೂರು ಲಭಿಸಿಲ್ಲವೆಂಬುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ಶಾಲೆಯ ಮಕ್ಕಳಿಗಾಗಿ ಮೀಸಲಿಟ್ಟ ಆಟದ ಮೈದಾನ ಕೂಡಾ ಕಾಡು ಪೊದರುಗಳಿಂದ ತುಂಬಿಕೊಂಡಿದೆ.

ಅವಘಡ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಚಾಳಿಯನ್ನು ಅಭ್ಯಾಸಮಾಡಿಕೊಂಡಿರುವ ಅಧಿಕೃತರು ಇದೊಂದು ರಾಷ್ಟ್ರ ಮಟ್ಟದ ಸುದ್ದಿಯಾಗುವುದಕ್ಕಿಂತ ಮೊದಲು ಮಕ್ಕಳನ್ನು ವಿಷಪೂರಿತ ಹಾವುಗಳ ಕಾಟದಿಂದ ರಕ್ಷಿಸುವರೇಎಂಬುದು ಇಲ್ಲಿಯ ಸ್ಥಳೀಯರ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next