Advertisement

Udupi ವಿಧಾನ ಪರಿಷತ್‌ ಚುನಾವಣೆ: ಪದವೀಧರ, ಶಿಕ್ಷಕರ ಕ್ಷೇತ್ರದ ಮೇಲೆ ಅಭ್ಯರ್ಥಿಗಳ ಕಣ್ಣು

12:30 AM Oct 26, 2023 | Team Udayavani |

ಉಡುಪಿ: ಲೋಕಸಭೆ ಚುನಾವಣೆಯ ಜತೆ ಜತೆಗೆ ವಿಧಾನ ಪರಿಷತ್‌ನ ನೈಋತ್ಯ ಪದವಿಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯೂ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೂರು ಪಕ್ಷಗಳಿಂದಲೂ ವಿಧಾನ ಪರಿಷತ್‌ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ.

Advertisement

ಆಡಳಿತರೂಢ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ಆಕಾಂಕ್ಷಿಗಳು ಮತದಾರರ ಪಟ್ಟಿ ನೋಂದಣಿಗೆ ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಮುಖರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಬಿಜೆಪಿಗರು ಪದವೀಧರ ಕ್ಷೇತ್ರವನ್ನು ಪ್ರಮುಖವಾಗಿಟ್ಟುಕೊಂಡು ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದರೆ, ಜೆಡಿಎಸ್‌ ಶಿಕ್ಷಕರ ಕ್ಷೇತ್ರಕ್ಕೆ ಆದ್ಯತೆ ನೀಡಿ ನೋಂದಣಿ ಮಾಡಿಸುತ್ತಿದ್ದಾರೆ.

ನ.6ರವರೆಗೂ ಮತದಾರರ ಪಟ್ಟಿಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಮಾತುಕತೆಗಳು ಈಗಾಗಲೇ ರಾಷ್ಟ್ರಮಟ್ಟದ ವರಿಷ್ಠರ ಮಧ್ಯೆ ನಡೆದಿದೆ. ಆದರೆ, ವಿಧಾನ ಪರಿಷತ್‌ ಚುನಾವಣೆ ಮೈತ್ರಿ ಸಂಬಂಧ ಈವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ಲೋಕಸಭೆ ಚುನಾವಣೆಗೆ ಮೈತ್ರಿ ಅಧಿಕೃತಗೊಂಡರೆ, ವಿಧಾನ ಪರಿಷತ್‌ ಚುನಾವಣೆಗೂ ಅದು ಅನ್ವಯಿಸುವ ಎಲ್ಲ ಸಾಧ್ಯತೆಯೂ ಇರುತ್ತದೆ. ಆಗ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಪದವೀಧರ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಆಕಾಂಕ್ಷಿಗಳು
ಕಳೆದ ಬಾರಿ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಯ ಸಾಧಿಸಿದ್ದ ಆಯನೂರು ಮಂಜುನಾಥ ಅವರು ಸದ್ಯ ಕಾಂಗ್ರೆಸ್‌ನಲ್ಲಿ ಇರುವುದರಿಂದ ಕಾಂಗ್ರೆಸ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಅವರ ಹೆಸರೂ ಇದೆ. ಕಳೆದಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್‌.ಪಿ. ದಿನೇಶ್‌ ಅವರ ಜತೆಗೆ ಉಡುಪಿ ಜಿಲ್ಲೆಯಿಂದ ಡಾ| ಸುದೀಪ್‌ ಶೆಟ್ಟಿ, ಚಿಕ್ಕಮಗಳೂರಿನ ಪ್ರೊ| ನಂಜೇಶ್‌ ಕೂಡ ಆಕಾಂಕ್ಷಿಯಾಗಿದ್ದಾರೆ.

ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ, ದ.ಕ. ಜಿಲ್ಲೆಯ ಮೋನಪ್ಪ ಭಂಡಾರಿ, ವಿಕಾಸ್‌ ಮೊದಲಾದವರ ಹೆಸರು ಚಾಲ್ತಿಯಲ್ಲಿದೆ. ಶಿಕ್ಷಕರ ಕ್ಷೇತ್ರದ ಹಾಲಿ ಸದಸ್ಯ ಭೋಜೇಗೌಡರಿಗೆ ಎಸ್‌ಡಿಎಸ್‌ ಟಿಕೆಟ್‌ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.

Advertisement

ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳ ಪಟ್ಟಿ ದಿನೇದಿನೆ ಬೆಳೆಯುತ್ತಿರುವುದರಿಂದ ಇನ್ನು ಕೆಲವರ ಹೆಸರು ಹುರಿಯಾಳುಗಳು ಪಟ್ಟಿಗೆ ಸೇರಿಕೊಳ್ಳುವ ಸಾಧ್ಯತೆಯೂ ಇದೆ.

ವಿಶಾಲ ಕ್ಷೇತ್ರ
ನೈಋತ್ಯ ಕ್ಷೇತ್ರವು ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ದಾವಣಗೆರೆಯ ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲೂಕುಗಳನ್ನು ಒಳಗೊಂಡಿದೆ. ಒಟ್ಟು ಆರು ಜಿಲ್ಲೆಗಳಲ್ಲಿ ಲಕ್ಷಾಂತರ ಪದವೀಧರರಿದ್ದಾರೆ. ಅಭ್ಯರ್ಥಿ ಆಕಾಂಕ್ಷಿಗಳು, ಪಕ್ಷ ಪ್ರಮುಖರಿಗೆ ಇಷ್ಟು ದೊಡ್ಡ ವ್ಯಾಪ್ತಿಯ ಮತದಾರರನ್ನು ನೋಂದಾಯಿಸುವುದೂ ಒಂದು ಸವಾಲಾಗಿದೆ.

ಕಳೆದ ಬಾರಿಯ ಫ‌ಲಿತಾಂಶ
2018ರಲ್ಲಿ ನಡೆದ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಆಯನೂರು ಮಂಜುನಾಥ ಅವರು 25,250 ಮತ ಪಡೆದು ಜಯ ಸಾಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ. ದಿನೇಶ್‌ 12,838 ಮತ ಪಡೆದಿದ್ದರು. ಶಿಕ್ಷಕ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಎಸ್‌.ಎಲ್‌. ಭೋಜೇಗೌಡ 8,647 ಮತ ಪಡೆದು ಜಯ ಸಾಧಿಸಿದ್ದರು. ಬಿಜೆಪಿಯ ಕ್ಯಾ| ಗಣೇಶ್‌ ಕಾರ್ಣಿಕ್‌ 5,812 ಮತ ಪಡೆದಿದ್ದರು.

ಶಿಕ್ಷಣ ಸಂಸ್ಥೆಗಳಿಂದ ಸಂದೇಶ
ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಹಕ್ಕು ಪಡೆಯುವ ಸಂಬಂಧ ಆಯಾ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಅರ್ಹ ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರಿಗೆ ಸಂದೇಶ ರವಾನಿಸಿ ಅಗತ್ಯ ದಾಖಲೆಗಳೊಂದಿಗೆ ಮತದಾನದ ಹಕ್ಕು ಪಡೆಯಲು ನೋಂದಾಯಿಸಿಕೊಳ್ಳಲು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next