Advertisement

Udupi ಉಚ್ಚಿಲ ದಸರಾ 2024; ದಸರಾ ವೈಭವದ ಶೋಭೆ ಹೆಚ್ಚಿಸಿದ ಜನಸಾಗರ

01:20 AM Oct 09, 2024 | Team Udayavani |

ಕಾಪು: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿರುವ ಮೂರನೇ ವರ್ಷದ ಉಡುಪಿ ಉಚ್ಚಿಲ ದಸರಾ 2024 ವೈಭವವನ್ನು ಕಣ್ತುಂಬಿಸಿಕೊಳ್ಳಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಿತ ರಾಜ್ಯ ಹಾಗೂ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಉಚ್ಚಿಲಕ್ಕೆ ಧಾವಿಸುತ್ತಿದ್ದಾರೆ.

Advertisement

ಭಾರೀ ಜನಸಾಗರವೇ ಉಚ್ಚಿಲದತ್ತ ಹರಿದು ಬಂದಿದ್ದು ಈವರೆಗೆ ಎರಡೂವರೆ ಲಕ್ಷಕ್ಕೂ ಮಿಕ್ಕಿದ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ತಾಯಿ ಮಹಾಲಕ್ಷ್ಮೀ ಸಹಿತ ಪರಿವಾರ ದೇವರು, ಶಾರದಾ ಮಾತೆ ಮತ್ತು ನವದುರ್ಗೆಯರ ದರ್ಶನ ಪಡೆದರು.

ದೇಗುಲ ಮತ್ತು ಶಾರದಾ ಮಂಟಪಕ್ಕೆ ಪ್ರವೇಶಿಸಲು ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದ್ದು ಒಳ ಪ್ರಾಂಗಣದಲ್ಲೂ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಭಕ್ತರು ವಸ್ತು ಪ್ರದರ್ಶನ, ಅಮ್ಯೂಸ್‌ಮೆಂಟ್‌, ಆಹಾರ ಮಳಿಗೆಗಳಿಗೂ ಭೇಟಿ ನೀಡಿ ಸಂಭ್ರಮಿಸುತ್ತಿದ್ದಾರೆ.

ಭೋಜನ -ಉಪಾಹಾರ
ಮೊದಲ ಆರು ದಿನಗಳಲ್ಲಿ 75 ಸಾವಿರಕ್ಕೂ ಅಧಿಕ ಮಂದಿ ಭೋಜನ ಪ್ರಸಾದ ಸ್ವೀಕರಿಸಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಸಂಜೆಯ ಉಪಾಹಾರವನ್ನು ಸೇವಿಸಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಬಫೆ ಮತ್ತು ಎಲೆಯೂಟಕ್ಕೆ ಆದ್ಯತೆ ನೀಡಲಾಗಿದೆ.

ಸ್ವಯಂ ಸೇವಕರಿಂದ ಸೇವೆ
ಭಕ್ತರ ಅನುಕೂಲಕ್ಕಾಗಿ, ವಿವಿಧ ವ್ಯವಸ್ಥೆಗಳ ಜೋಡಣೆಗಾಗಿ ಉಪ್ಪಳದಿಂದ ಶೀರೂರುವರೆಗಿನ ಮೊಗವೀರ ಸಮಾಜದ ಸಂಘ ಸಂಸ್ಥೆಗಳು, ಇತರ ಸಮಾಜಗಳ ಸಂಘ ಸಂಸ್ಥೆಗಳು, ಮೊಗವೀರ ಯುವ ಸಂಘಟನೆ ಸಹಿತವಾಗಿ ವಿವಿಧ ಸಂಘ ಸಂಸ್ಥೆಗಳ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಸ್ವಯಂ ಸೇವಕರು ವಿವಿಧ ಪಾಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೇ ರೇಂಜರ್ ಮತ್ತು ರೋವರ್, ಎನ್ನೆಸ್ಸೆಸ್‌ ಮತ್ತು ಸ್ಕೌಟ್‌ – ಗೈಡ್ಸ್‌ ವಿದ್ಯಾರ್ಥಿಗಳು ವಿವಿಧೆಡೆ ಸ್ವಯಂ ಸೇವಕರಾಗಿ ಸೇವಾ ನಿರತರಾಗಿದ್ದಾರೆ.

Advertisement

ಸಂಚಾರ ನಿಯಂತ್ರಿಸಲು ಶ್ರಮ
ರಾಷ್ಟ್ರೀಯ ಹೆದ್ದಾರಿ 66ರ ಸನಿಹದದಲ್ಲೇ ಉಚ್ಚಿಲ ದಸರಾ ನಡೆಯುವ ಕಾರಣ ಹೆದ್ದಾರಿಯುದ್ದಕ್ಕೂ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ವಾಹನ ಸಂಚಾರ ವೃತ್ಯಯದ ಒತ್ತಡವನ್ನು ನಿಯಂತ್ರಿಸಲು ಪಡುಬಿದ್ರಿ ಎಸ್‌ಐ ಪ್ರಸನ್ನ ಕುಮಾರ್‌ ನೇತೃತ್ವದಲ್ಲಿ ಪೊಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.

ಸರ್ವ ಧರ್ಮೀಯರ ಭೇಟಿ
ಉಚ್ಚಿಲ ದಸರಾವನ್ನು ಕಣ್ತುಂಬಿಸಿಕೊಳ್ಳಲು ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲ ಧರ್ಮದವರೂ ಉಚ್ಚಿಲಕ್ಕೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ ಭೋಜನ, ಸಂಜೆಯ ಉಪಾಹಾರ ಸ್ವೀಕಾರ, ವಸ್ತು ಪ್ರದರ್ಶನ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಿಸಿ ಪರಿಸರದಲ್ಲಿನ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುತ್ತಿದ್ದಾರೆ.

ನಿರೀಕ್ಷೆಗೂ ಮೀರಿದ ಸ್ಪಂದನೆ
ಉಚ್ಚಿಲ ದಸರಾ ವೈಭವದಲ್ಲಿ ಪಾಲ್ಗೊಳ್ಳುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ, ಸಂಜೆ ಉಪಾಹಾರ ವಿತರಣೆಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿವಿಧ ಸೌಕರ್ಯ, ಸೌಲಭ್ಯಗಳನ್ನು ಜೋಡಿಸಲಾಗಿದ್ದು ಯಾವುದೇ ರೀತಿಯಲ್ಲೂ ಕುಂದಾಗದಂತೆ ದ. ಕ. ಮೊಗವೀರ ಮಹಾಜನ ಸಂಘ, ಕ್ಷೇತ್ರಾಡಳಿತ ಸಮಿತಿ, ಸ್ವಯಂ ಸೇವಕರ ತಂಡ ಉತ್ಸಾಹದಿಂದ ಕೆಲಸ ಮಾಡುತ್ತಿದೆ ಎಂದು ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next