Advertisement

Udupi: ಉಭಯ ಜಿಲ್ಲೆಯಲ್ಲಿ ದಿಢೀರ್‌ ಮಳೆ: ರೈತರಲ್ಲಿ ಹೆಚ್ಚಿದ ಆತಂಕ

02:49 AM Oct 13, 2024 | Team Udayavani |

ಉಡುಪಿ: ಉಭಯ ಜಿಲ್ಲೆಯಲ್ಲಿ ಈ ತಿಂಗಳ ಅಂತ್ಯದೊಳಗೆ ಭತ್ತದ ಕಟಾವು ಪ್ರಕ್ರಿಯೆ ಆರಂಭ ವಾಗಲಿದೆ. ಇದೀಗ ಕೆಲವೆಡೆ ದಿಢೀರ್‌ ಸುರಿಯುತ್ತಿರುವ ಮಳೆಯು ಬೆಳೆಗೆ ನೇರ ಹೊಡೆತ ಕೊಡುವ‌ ಆತಂಕ ಆರಂಭವಾಗಿದೆ.

Advertisement

ಮುಂಗಾರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್‌ ಹಾಗೂ ದಕ್ಷಿಣ ಕನ್ನಡದಲ್ಲಿ 9500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದೀಗ ಭತ್ತದ ತೆನೆ ಬೆಳೆದು ಕಟಾವಿಗೆ ಸಿದ್ಧವಾಗುತ್ತಿದೆ. ದೀಪಾವಳಿಗೂ ಪೂರ್ವದಲ್ಲಿ ಹಲವೆಡೆ ಕಟಾವು ಆರಂಭವಾಗಲಿದೆ. ಉಭಯ ಜಿಲ್ಲೆಯ ಕೆಲವು ಕಡೆ ಎರಡು ಮೂರು ದಿನದಿಂದ ಏಕಾಏಕಿ ಮಳೆ ಕಾಣಿಸಿಕೊಳ್ಳುತ್ತಿರುವುದು ರೈತರಲ್ಲಿ ಭಯ ತಂದಿದೆ.

ಕಟಾವು ಸಂದರ್ಭದಲ್ಲಿ ಮಳೆ ಬಂದರೆ ಒಟ್ಟಾರೆ ಉತ್ಪಾದನೆಯೇ ಕುಸಿತವಾಗಲಿದೆ. ರೈತರಿಗೆ ಸರಿಯಾದ ಬೆಲೆಯೂ ಸಿಗದು. ಸರಕಾರ ಖರೀದಿ ಕೇಂದ್ರ ತೆರೆಯುವುದು ತಡವಾಗುವ ಕಾರಣ ರೈತರು ನಷ್ಟ ಪಡುವಂತಾಗಲಿದೆ. ಈಗಾಗಲೇ ಉಡುಪಿ, ಹೆಬ್ರಿ, ಬ್ರಹ್ಮಾವರ, ಕಾರ್ಕಳ, ಕುಂದಾಪುರದ ಕೆಲವು ಭಾಗ, ಮಂಗಳೂರು ಸೇರಿದಂತೆ ಪುತ್ತೂರು, ಬೆಳ್ಳಾರೆ, ಸುಳ್ಯ, ಉಪ್ಪಿನಂಗಡಿ, ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ.

ಸಮಸ್ಯೆಯೇನು?
ಭತ್ತದ ಗಿಡಗಳು ತೆನೆ ಬಿಡುವ ಸಮಯದಲ್ಲಿ ಮಳೆ ಹೆಚ್ಚಾದರೆ ಇಳುವರಿ ಮೇಲೆ ನೇರ ಪರಿಣಾಮ ಬೀರಿ ಬೆಳವಣಿಗೆ ಕಡಿಮೆಯಾಗಿ ಜಳ್ಳು ಹೆಚ್ಚಾಗುತ್ತದೆ. ತೆನೆ ಬಿಟ್ಟ ಅನಂತರ ಗಾಳಿ ಮಳೆ ಬಂದರೆ ಗಿಡಗಳು ಬೀಳುವ ಸಾಧ್ಯತೆ ಇರುತ್ತದೆ. ಹೀಗಾದರೆ ಕಟಾವು ಕಷ್ಟ. ಗದ್ದೆಯಲ್ಲಿ ನೀರು ತುಂಬಿಕೊಂಡಿದ್ದು, ಭತ್ತ ಮೊಳಕೆ ಬರುವ ಸಾಧ್ಯತೆಯೂ ಹೆಚ್ಚಿದೆ. ಕಟಾವು ಮಾಡಿದ ಭತ್ತವನ್ನು ಸಂಗ್ರಹಿಸಿಡುವುದು ಕಷ್ಟ. ಮನೆಯ ಅಂಗಳದಲ್ಲಿ ಒಣಗಿಸಲು ಆಗುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗುವ ಸಂಭವವಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ ಎಂದು ಸಾರ್ವಜನಿಕರ ಆಗ್ರಹ.

ಯಂತ್ರಗಳ ಕೊರತೆ
ಭತ್ತದ ಕಟಾವಿಗೆ ಎಲ್ಲರೂ ಯಂತ್ರಗಳನ್ನೆ ಅವಲಂಬಿಸಿದ್ದರೂ ಸಾಕಷ್ಟು ಯಂತ್ರಗಳಿಲ್ಲ. ಉಡುಪಿಯಲ್ಲಿ 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, 8 ಯಂತ್ರಗಳೇ ನಿರ್ವಹಿಸ ಬೇಕಿದೆ. ಕಟಾವು ಆರಂಭವಾದ ಅನಂತರ ಎರಡು ಅಥವಾ ಮೂರು ಯಂತ್ರ ಸೇರ್ಪಡೆಯಾಗಬಹುದು. 9500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ 11 ಯಂತ್ರವಿದೆ. ಇನ್ನೂ ಮೂರು ಅಥವಾ ನಾಲ್ಕು ಸೇರ್ಪಡೆಯಾಗಲಿದೆ. ಪ್ರತಿ ತಾಲೂಕಿಗೂ ಕನಿಷ್ಠ 4-5 ಯಂತ್ರಗಳ ಅಗತ್ಯವಿದೆ. ಯಂತ್ರಗಳ ಕೊರತೆಯಾದಂತೆೆ ಖಾಸಗಿ ಯಂತ್ರದ ದರವೂ ಏರಿಕೆಯಾಗಲಿದೆ. ಗಂಟೆ ಲೆಕ್ಕಾಚಾರದಲ್ಲಿ ದರ ವಿಧಿಸಲಾಗುತ್ತದೆ.

Advertisement

ಕೃಷಿ ವಿಜ್ಞಾನಿಗಳು ಭೇಟಿ
ಜಿಲ್ಲೆಯ ವಿವಿಧ ಗದ್ದೆಗಳಲ್ಲಿ ಬೆಳೆದಿರುವ ಎಂಒ4 ತಳಿಯ ಇಳುವರಿ ಹೇಗಿದೆ ಮತ್ತು ಇದಕ್ಕೆ ಪರ್ಯಾಯವಾಗಿ ಯಾವ ತಳಿ ಅಭಿವೃದ್ಧಿ ಮಾಡಬಹುದು ಎಂಬುದನ್ನು ಪರಿಶೀಲಿಸಲು ಶಿವಮೊಗ್ಗದಲ್ಲಿರುವ ರಾಜ್ಯ ಬೀಜ ನಿಗಮದ ಅಧಿಕಾರಿಗಳು ಹಾಗೂ ಕೃಷಿ ಸಂಶೋಧನ ವಿಜ್ಞಾನಿಗಳು ಗದ್ದೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಟಾವು ಯಂತ್ರಗಳು ಸದ್ಯ ತಾಲೂಕುಗಳಲ್ಲಿ ಒಂದರಂತೆ ಲಭ್ಯವಿದೆ. ಕೆಲವೆಡೆ ಹೆಚ್ಚಿದೆ. ಇನ್ನಷ್ಟು ಯಂತ್ರಗಳು ಬರಲಿವೆ. ಕಟಾವು ಆರಂಭವಾಗುವುದರೊಳಗೆ ರೈತರಿಗೆ ಯಂತ್ರದ ಲಭ್ಯತೆ ಇರಲಿದೆ.
ಡಾ| ಸೀತಾ ಎಂ.ಸಿ., ಹೊನ್ನಪ್ಪಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ, ದ.ಕ.,

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next