Advertisement

ಉಡುಪಿಯ ಹಲವೆಡೆ ಉರಿಯದ ಬೀದಿದೀಪಗಳು

09:53 PM Dec 14, 2020 | mahesh |

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳಲ್ಲಿ ಒಂದಾದ ಬೀದಿದೀಪಗಳ ನಿರ್ವಹಣೆ ಹಲವೆಡೆ ಸಮರ್ಪಕವಾಗಿಲ್ಲದ ಕಾರಣ ಜನರು ಕತ್ತಲಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿವೆ. ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಪ್ರತಿ ವಾರ್ಡ್‌ನ ಬೀದಿಯಲ್ಲೂ ವಿದ್ಯುತ್‌ ಕಂಬಗಳಿದ್ದು, ಅವುಗಳಲ್ಲಿ ದೀಪಗಳೂ ಇವೆ. ಆದರೆ ಅವುಗಳಲ್ಲಿ ಹಲವು ರಾತ್ರಿಯಾದರೆ ಬೆಳಗುವುದಿಲ್ಲ. ರಸ್ತೆ ಬದಿ ಅಂಗಡಿಗಳು, ಮನೆಗಳ ದೀಪ ಗಳ ಬೆಳಕನ್ನೇ ರಸ್ತೆಯಲ್ಲಿ ಸಂಚರಿಸುವವರು ನಿರೀಕ್ಷಿಸುವಂತಾಗಿದೆ.

17,800 ದೀಪಗಳು
ನಗರಸಭೆ ವ್ಯಾಪ್ತಿಯಲ್ಲಿ 17,800 ವಿವಿಧ ಬೀದಿ ದೀಪಗಳಿವೆ. ಸುಮಾರು 815 ಕಂಟ್ರೋಲಿಂಗ್‌ ಪಾಯಿಂಟ್‌ಗಳಿವೆ. ನಿಯಮದ ಪ್ರಕಾರ ಪ್ರತಿನಿತ್ಯ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ವಿದ್ಯುತ್‌ ದೀಪಗಳು ಬೆಳಗಬೇಕು. ಅದರೆ ಇಲ್ಲಿ ಬಹುತೇಕ ಬೀದಿದೀಪಗಳು ಉರಿಯುತ್ತಿಲ್ಲ.

ಎನ್‌.ಎಚ್‌. 169ಎ
ಕುಂಜಿಬೆಟ್ಟಿನಿಂದ ಮಣಿಪಾಲದವರೆಗೂ ಬೀದಿದೀಪಗಳು ಕಾಣ ಸಿಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟ್‌ ಕೆಲಸ ಎಂಐಟಿ ವರೆಗೆ ಪೂರ್ಣಗೊಂಡು ವರ್ಷ ಸಮೀಪಿಸುತ್ತಿದ್ದರೂ ದಾರಿದೀಪಗಳ ಅಳವಡಿಕೆ ಬಾಕಿ ಇದೆ. ರಾತ್ರಿ ಹೊತ್ತು ವಾಹನ ದಟ್ಟಣೆ ಈ ಭಾಗದಲ್ಲಿ ಹೆಚ್ಚಿರುವುದರಿಂದ ಸಹಜವಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಪೆರಂಪಳ್ಳಿ -ಮಣಿಪಾಲ ರಸ್ತೆ
ಅಂಬಾಗಿಲಿನಿಂದ ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ತೆರಳುವ ರಸ್ತೆಯಲ್ಲೂ ಇದೇ ಸ್ಥಿತಿ ಇದೆ. ಕಾಲೇಜು, ಆಸ್ಪತ್ರೆ, ಕೈಗಾರಿಕಾ ಪ್ರದೇಶಕ್ಕೆ ನೂರಾರು ವಾಹನಗಳು ಓಡಾಡುತ್ತವೆ. ರಾತ್ರಿ ಹೊತ್ತು ಈ ರಸ್ತೆಯಲ್ಲಿ ದೀಪಗಳ ಬೆಳಕು ಗೋಚರಿಸುತ್ತಿಲ್ಲ. ಇದೀಗ ಈ ಪ್ರದೇಶದಲ್ಲಿ ರಸ್ತೆ ವಿಸ್ತರೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸಲೂ ಭಯವಾಗುತ್ತಿದೆ ಎನ್ನುತ್ತಾರೆ ಮಣಿಪಾಲದ ರವೀಂದ್ರ ಅವರು.

Advertisement

ಮಣಿಪಾಲ -ಅಲೆವೂರು
ಮಣಿಪಾಲ ಎಂಜೆಸಿ- ಅಲೆವೂರು ಮಾರ್ಗದ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ. ಇಂಡಸ್ಟ್ರಿಯಲ್‌ ಏರಿಯಾ ಸೇರಿದಂತೆ ವಿವಿಧ ಕಡೆಗಳಲ್ಲಿ ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುವವರು, ರಾತ್ರಿ- ಮುಂಜಾನೆ ವಾಕಿಂಗ್‌ ಹೋಗುವವರು ಆತಂಕದಲ್ಲಿ ಓಡಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ದುರಸ್ತಿ ಮಾಡುವ ಕುರಿತು ನಗರಸಭೆ ಭರವಸೆ ನೀಡುತ್ತಾ ಬಂದಿದೆ. ಆದರೆ ಇದುವರೆಗೂ ದುರಸ್ತಿಯಾಗಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮಣಿಪಾಲ ಎಂಜೆಸಿ ಸನಿಹದ ನಿವಾಸಿ ಚಂದ್ರಶೇಖರ್‌.

ಅನುಮಾನದ ನೋಟ!
ರಾತ್ರಿಯಾದರೆ ಬೀದಿದೀಪಗಳು ಉರಿಯದ ಕಾರಣದಿಂದ ಬೀದಿಯಲ್ಲಿ ಹಿಂಡಾಗಿ ತಿರುಗುವ ನಾಯಿಗಳು ಮತ್ತು ಗಿಡ ಗಂಟಿಗಳು ಬೆಳೆದಿರುವ ಕಡೆಯಲ್ಲಿ ಹಾವು, ಇನ್ನೊಂದೆಡೆ ಕಳವಿನ ಭಯದಿಂದ ಓಡಾಡುವುದು ಕಷ್ಟವಾಗಿದೆ. ರಾತ್ರಿ ವೇಳೆ ಯಾರೇ ಓಡಾಡಿದರೂ ಅನುಮಾನದಿಂದ ನೋಡುವಂತಾಗಿದೆ.

ಶೀಘ್ರ ದುರಸ್ತಿಗೊಳಿಸಿ
ವಿಪಿ ನಗರದಲ್ಲಿ ವಿದ್ಯುತ್‌ ದೀಪಗಳು ಉರಿಯುತ್ತಿಲ್ಲ. ಇಲ್ಲಿ ಬೆಳಗ್ಗೆ-ರಾತ್ರಿ ವಾಕಿಂಗ್‌ಗೆಂದು ತೆರಳುವ ಹಿರಿಯರಿಗೆ ಸಮಸ್ಯೆ ಆಗಿದೆ. ಶೀಘ್ರದಲ್ಲಿ ದುರಸ್ತಿಗೊಳಿಸಬೇಕು.
-ಪ್ರೊ| ಉದಯ ಶೆಟ್ಟಿ, ವಿಪಿ ನಗರ ನಿವಾಸಿ

ಹಂತ ಹಂತವಾಗಿ ಅಳವಡಿಕೆ
ನಗರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪ ಅಳವಡಿಕೆಗೆ ಟೆಂಡರ್‌ ಆಗಿದೆ. ವಿವಿಧ ಕಡೆಗಳಲ್ಲಿ ಕೆಲಸಗಳು ಭರದಿಂದ ಸಾಗುತ್ತಿವೆ. ಎನ್‌ಎಚ್‌ 169 (ಎ) ಮಾರ್ಗ, ಮಣಿಪಾಲ, ಅಲೆವೂರು, ವಿಪಿ ನಗರ ಸೇರಿದಂತೆ ಇತರ ಪ್ರದೇಶದ ಬೀದಿದೀಪಗಳನ್ನು ಹಂತ ಹಂತವಾಗಿ ಅಳವಡಿಸಲಾಗುವುದು.
-ಡಾ| ಉದಯ ಶೆಟ್ಟಿ, ಪೌರಾಯುಕ್ತರು, ನಗರಸಭೆ ಉಡುಪಿ

35 ಒಟ್ಟು ವಾರ್ಡ್‌ಗಳು
17,800 ನಗರದಲ್ಲಿರುವ ಬೀದಿ ದೀಪಗಳ ಸಂಖ್ಯೆ
815 ಕಂಟ್ರೋಲಿಂಗ್‌ ಪಾಯಿಂಟ್‌ಗಳು

Advertisement

Udayavani is now on Telegram. Click here to join our channel and stay updated with the latest news.

Next