Advertisement

ಶ್ರೀಕೃಷ್ಣಮಠ: ಕೃಷ್ಣಾಷ್ಟಮಿ ಉತ್ಸವ, ವಿಶೇಷ ಪೂಜೆ, ಅರ್ಘ್ಯ ಪ್ರದಾನ

12:45 AM Aug 20, 2022 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.

Advertisement

ಏಕಾದಶಿಯಂತೆ ನಿರ್ಜಲ ಉಪವಾಸದಿಂದಿದ್ದ ಕಾರಣ ಪರ್ಯಾಯ ಶ್ರೀಪಾದರು ಬೆಳಗ್ಗೆ ಮತ್ತು ರಾತ್ರಿ ಎರಡೂ ಹೊತ್ತು ಮಹಾಪೂಜೆ ನಡೆಸಿದರು. ಲಕ್ಷತುಳಸಿ ಅರ್ಚನೆಯನ್ನು ನಡೆಸಿದರು. ಕಾಣಿಯೂರು ಮಠದ ಶ್ರೀವಿ ದ್ಯಾ ವಲ್ಲಭ ತೀರ್ಥ ಶ್ರೀಪಾದರು ಬೆಳಗ್ಗೆ ಮತ್ತು ರಾತ್ರಿ ಪೂಜೆಗಳಲ್ಲಿ ಪಾಲ್ಗೊಂಡರು. ಶ್ರೀಪಾದರು ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟಿ ಮುಹೂರ್ತ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಯಾಕ್ಸೋಫೋನ್, ನಾಗಸ್ವರ ವಾದನ, ನೃತ್ಯೋತ್ಸವ, ಹುಲಿವೇಷ ಕುಣಿತ ನಡೆಯಿತು. ರಾತ್ರಿ ನೈವೇದ್ಯಗಳನ್ನು ಸಮರ್ಪಿಸಿ  ಮಹಾಪೂಜೆ ನಡೆಸಿದ ಸ್ವಾಮೀಜಿಯವರು ಬಳಿಕ ಚಂದ್ರೋದಯದ ವೇಳೆ 12.21 ಗಂಟೆಗೆ ಕೃಷ್ಣನಿಗೆ ಅರ್ಘ್ಯಪ್ರದಾನ ಮಾಡಿದರು. ಬಳಿಕ ಭಕ್ತರಿಗೆ ಅರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿತ್ತು. ಕೆಲವೆಡೆ ಗುರುವಾರ ಅಷ್ಟಮಿಯಂದು ಕೃಷ್ಣಾರ್ಘ್ಯಪ್ರದಾನವಾಗಿ ಶುಕ್ರವಾರ ಮೊಸರುಕುಡಿಕೆ ಉತ್ಸವ ನಡೆಯಿತು.

ಆಕರ್ಷಕ ಪುಷ್ಪಾಲಂಕಾರ
ಶ್ರೀಕೃಷ್ಣಮಠದ ಒಳ ಹಾಗೂ ಹೊರಭಾಗ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ಮುಖ್ಯಪ್ರಾಣ ದೇವರು, ಕನಕಗೋಪುರಗಳಿಗೆ ಸೇವಂತಿಗೆ, ಗೊಂಡೆ, ತುಳಸಿ ಮೂಲಕ ಅಲಂಕಾರ ಮಾಡಲಾಗಿದೆ. ಯುವರಾಜ್‌ ಮಸ್ಕತ್‌ ಅವರು ಇದಕ್ಕೆ ಬೇಕಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ.

ಕೃಷ್ಣನೂರಿನಲ್ಲಿ ನಂದ ಗೋಕುಲ
ಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ನಂದ ಗೋಕುಲವೇ ಸೃಷ್ಟಿಯಾಗಿತ್ತು. ಕೃಷ್ಣಮಠದಲ್ಲಿ ಆಯೋಜಿಸಿದ್ದ ಕೃಷ್ಣ ಸ್ಪರ್ಧೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕೃಷ್ಣ ವೇಷಧಾರಿ ಪುಟಾಣಿ ಮಕ್ಕಳು ಗಮನ ಸೆಳೆದರು. ಅಲ್ಲದೆ ರಥಬೀದಿ, ನಗರದ ಹಲವೆಡೆ ಕೃಷ್ಣ ವೇಷ, ಪೇಪರ್‌ ವೇಷ, ರಕ್ಕಸ ವೇಷ, ಹುಲಿವೇಷಧಾರಿಗಳ ತಂಡ ಕಂಡುಬಂತು.

Advertisement

ಬಿಗಿ ಪೊಲೀಸ್‌ ಬಂದೋಬಸ್ತ್: 123 ಕಡೆ ಸಿಸಿ ಕೆಮರಾ
ಶ್ರೀಕೃಷ್ಣ ಮಠದಲ್ಲಿ ಶನಿ ವಾರ ವಿಟ್ಲಪಿಂಡಿ ಮಹೋತ್ಸವ ನಡೆಯಲಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

ಜಿಲ್ಲಾ ಎಸ್‌ಪಿ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಡಿವೈಎಸ್‌ಪಿ, 4 ಮಂದಿ ಇನ್‌ಸ್ಪೆಕ್ಟರ್‌ಗಳು, 12 ಮಂದಿ ಎಸ್‌ಐ, 23 ಎಎಸ್‌ಐ ಸಹಿತ ಒಟ್ಟು 230 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.

ಸಶಸ್ತ್ರ ಭದ್ರತೆ
ಮಠದ 8 ಗೇಟ್‌ಗಳಲ್ಲಿ ಸಶಸ್ತ್ರ ಭದ್ರತೆ ಮಾಡಲಾಗಿದೆ. ಶ್ವಾನದಳ, ಬಾಂಬ್‌ ಸ್ಕ್ವಾಡ್‌, ಕೆಎಸ್‌ಆರ್‌ಪಿ, ಡಿಎಆರ್‌ ಅನ್ನು ನಿಯೋಜಿಸಲಾಗಿದೆ. ಶ್ವಾನದಳದವರು ಪರಿಶೀಲನೆ ನಡೆಸು ತ್ತಿದ್ದಾರೆ. ಮಠದ ಸುತ್ತ 123 ಕಡೆ ಸಿಸಿಟಿವಿ ಕೆಮರಾ ಅಳವಡಿಸಲಾಗಿದೆ. ಭಕ್ತರ ಸಂಖ್ಯೆ ಗಮನಿಸಿ ಡ್ರೋನ್‌ ಬಳಸುವ ಬಗ್ಗೆ ಇಲಾಖೆ ನಿರ್ಧರಿಸಲಿದೆ.

ನೈಸರ್ಗಿಕ ವಿಗ್ರಹಕ್ಕೆ ಪೂಜೆ
ವಿಟ್ಲಪಿಂಡಿ ಉತ್ಸವದಲ್ಲಿ ಯಾವುದೇ ಬಣ್ಣವಿಲ್ಲದ ಆವೆಮಣ್ಣಿನ ಕೃಷ್ಣ ವಿಗ್ರಹ ಪೂಜೆಗೊಳ್ಳುತ್ತಿದೆ. ಸುಮಾರು 9 ಇಂಚು ಎತ್ತರದ ಮೂರ್ತಿಯನ್ನು ಚಿಟಾ³ಡಿ ಸೋಮನಾಥರು ತಯಾರಿಸಿದ್ದಾರೆ. ರಾಸಾಯನಿಕರಹಿತ ಕಪ್ಪು ಬಣ್ಣವನ್ನು ಕೊಡಲಾಗಿದೆ. ಈಗ ಚಾತುರ್ಮಾಸ್ಯ ವ್ರತದ ಕಾಲವಾದ ಕಾರಣ ಉತ್ಸವಗಳು ನಡೆಯು ವುದಿಲ್ಲ, ಹೀಗಾಗಿ ಉತ್ಸವಮೂರ್ತಿಯನ್ನು ಗರ್ಭ ಗುಡಿಯಿಂದ ಹೊರಗೆ ತರುವುದಿಲ್ಲ. ಶನಿ ವಾರ ಪೂಜೆ ಸಲ್ಲಿಸಿ ಉತ್ಸವದ ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವಸ್ಥಾನದ ಉತ್ಸವ  ಮೂರ್ತಿಗಳಿಗೂ ಉತ್ಸವದಲ್ಲಿ ಪೂಜೆ ನಡೆಯ ಲಿದೆ.

ಇಂದು ವಿಟ್ಲಪಿಂಡಿ ಉತ್ಸವ
ಶ್ರೀಕೃಷ್ಣಮಠದಲ್ಲಿ ಶನಿವಾರ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಅಪರಾಹ್ನ 3ಕ್ಕೆ ಉತ್ಸವ ಆರಂಭವಾಗಿ ಸುಮಾರು 5.30ರ ವೇಳೆ ಮಧ್ವ ಸರೋವರದಲ್ಲಿ ತೀರ್ಥಸ್ನಾನ ಮಾಡುವ ಮೂಲಕ ಸಂಪನ್ನಗೊಳ್ಳಲಿದೆ. ಮೆರವಣಿಗೆ, ಸಾಂಸ್ಕೃತಿಕ, ಜಾನಪದ ವೇಷಧಾರಿಗಳ ತಂಡಗಳು ಗಮನ ಸೆಳೆಯಲಿವೆ. ಸಾವಿರಾರು ಭಕ್ತರಿಗೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next