Advertisement

ಶ್ರೀ ಈಶಪ್ರಿಯತೀರ್ಥರಿಗೆ ಪರ್ಯಾಯ ಪೂಜಾದೀಕ್ಷೆ: ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು

10:08 AM Jan 07, 2020 | Hari Prasad |

ಪಡುಬಿದ್ರಿ: ಈ ಬಾರಿ ಸರ್ವಜ್ಞ ಪೀಠಾರೋಹಣದೊಂದಿಗೆ ಎರಡು ವರ್ಷಗಳ ಶ್ರೀ ಕೃಷ್ಣ ಪರ್ಯಾಯ ಪೂಜೆಯನ್ನು ಶ್ರೀ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಡೆಸಲಿದ್ದಾರೆ. ಮಠದ ನಿರ್ವಹಣೆಯನ್ನೂ ಅವರೇ ನೋಡಿಕೊಳ್ಳಲಿದ್ದಾರೆ.
ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸೋಮವಾರ ಪಡುಬಿದ್ರಿ ಸಮೀಪದ ಶ್ರೀ ಅದಮಾರು ಮೂಲ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು.

Advertisement

ಸಲಹೆ – ಸೂಚನೆ, ಸಹಕಾರ
ಪುರಪ್ರವೇಶದಲ್ಲೂ ಪರ್ಯಾಯ ಮೆರವಣಿಗೆಯಲ್ಲೂ ದರ್ಬಾರ್‌ ಸಹಿತ ಪರ್ಯಾಯ ಕಾಲದ ಅವಸರ ಸನಕಾದಿ ಪೂಜೆ, ಮಹಾಪೂಜೆ, ರಾತ್ರಿಯ ಚಾಮರ ಸೇವೆಗಳನ್ನೂ ಶ್ರೀ ಈಶಪ್ರಿಯತೀರ್ಥರೇ ನಿರ್ವಹಿಸಲಿದ್ದಾರೆ. ಪರ್ಯಾಯದ ಅವಧಿಯಲ್ಲಿ ತಾವು ಉಡುಪಿಗೆ ಹೋಗಿ ಬರುತ್ತಿದ್ದು, ಸಲಹೆ ಸೂಚನೆಗಳನ್ನು ನೀಡುತ್ತಿರುತ್ತೇವೆ.

ಶ್ರೀಕೃಷ್ಣ ಪೂಜೆಯನ್ನೂ ಮಾಡುತ್ತೇವೆ. ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತವನ್ನು ನೋಡುತ್ತಿರುತ್ತೇವೆ ಎಂದೂ ಶ್ರೀ ವಿಶ್ವಪ್ರಿಯತೀರ್ಥರು ಹೇಳಿದರು. ನಮ್ಮ ಗುರುಗಳಾದ ಶ್ರೀ ವಿಬುಧೇಶತೀರ್ಥರ ಸಂಪ್ರದಾಯವನ್ನು ನಾವು ಮುಂದುವರಿಸಿದ್ದೇವೆ. ಪರ್ಯಾಯದ ಎರಡನೇ ಅವಧಿಯ ಬಳಿಕ ಗುರುಗಳು ನಮ್ಮನ್ನು ಪರ್ಯಾಯ ಪೀಠದಲ್ಲಿ ಕುಳ್ಳಿರಿಸಿದ್ದರು ಎಂದು ಶ್ರೀ ವಿಶ್ವಪ್ರಿಯತೀರ್ಥರು ಹೇಳಿದರು.

ಅಪವಾದಗಳಿಂದ ನೋವಾಗಿದೆ
ಉಡುಪಿಯ ಮಂದಿ ನಾನಾ ರೀತಿಯಾಗಿ ಮಾತನಾಡುತ್ತಿದ್ದು, ಎಲ್ಲರಿಗೂ ಈ ಮೂಲಕವಾಗಿ ಉತ್ತರ ನೀಡಿದ್ದೇವೆ. ಸಮಾಜವು ತನಗೆ ಸಂಬಂಧಪಡದ ವಿಚಾರವನ್ನು ಮಾತನಾಡಬಾರದು. ಆಧ್ಯಾತ್ಮಿಕ ವಿಚಾರವನ್ನು ಎಚ್ಚರ ವಹಿಸಿ ಮಾತನಾಡಬೇಕು. ನೆಮ್ಮದಿಯಿಂದ ನಾವು ಅಧಿಕಾರವನ್ನು ಬಿಟ್ಟುಕೊಟ್ಟಿದ್ದೇವೆ. ನಮ್ಮ ಮತ್ತು ಕಿರಿಯ ಸ್ವಾಮಿಗಳ ಮೇಲೆ ಇಲ್ಲ ಸಲ್ಲದ ಅಪವಾದಗಳನ್ನು ಮಾಡುತ್ತಿರುವುದರಿಂದ ನಮ್ಮ ಮನಸ್ಸಿಗೆ ನೋವಾಗಿದೆ ಎಂದು ಶ್ರೀಪಾದರು ನುಡಿದರು.

ಶಿರಸಾ ವಹಿಸಿದ್ದೇವೆ: ಶ್ರೀ ಈಶಪ್ರಿಯತೀರ್ಥರು
ಆಶ್ರಮ ಗುರುಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಅಪ್ಪಣೆಯನ್ನು ಶಿರಸಾ ವಹಿಸಿ ಸರ್ವಜ್ಞ ಪೀಠವೇರಿ ಶ್ರೀಕೃಷ್ಣ ಪೂಜೆಯನ್ನು ಕೈಗೊಳ್ಳುವ ಪ್ರಯತ್ನ ಮಾಡಲಿದ್ದೇವೆ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ಮಠಾಧೀಶರ ಒಪ್ಪಿಗೆ ಪಡೆದು ಪರ್ಯಾಯ ದರ್ಬಾರನ್ನು ಸಂಜೆಯ ಹೊತ್ತಿಗೆ ನಡೆಸಲಿದ್ದೇವೆ. ಇದರಿಂದಾಗಿ ಶ್ರೀ ಕೃಷ್ಣ ಪೂಜೆಯನ್ನು ಸಮಯದಲ್ಲೇ ಮುಗಿಸಲು ಸಾಧ್ಯವಾಗುತ್ತದೆ ಎಂದು ಅದಮಾರು ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯತೀರ್ಥರು ತಿಳಿಸಿದರು.

Advertisement

ಸಂಪ್ರದಾಯಕ್ಕೆ ಚ್ಯುತಿ ಇಲ್ಲ
ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಬೆಳಗಿನ ಪರ್ಯಾಯ ದರ್ಬಾರನ್ನು ಬಡಗು ಮಾಳಿಗೆಯಲ್ಲೇ ನಿರ್ವಹಿಸಲಾಗುತ್ತದೆ. ಲಕ್ಷ ತುಳಸೀ ಅರ್ಚನೆ, ಅಖಂಡ ಭಜನೆ ಮತ್ತು ಚಿಣ್ಣರ ಸಂತರ್ಪಣೆಗಳನ್ನು ಮುಂದುವರಿಸುವ ಪ್ರಯತ್ನಗಳು ನಡೆಯಲಿವೆ. ಸಾಂದರ್ಭಿಕವಾಗಿ ಒಳ್ಳೆಯ ವಿಚಾರಗಳು ಬಂದಾಗ ಅದನ್ನೂ ನಡೆಸಲು ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಶ್ರೀ ಈಶಪ್ರಿಯತೀರ್ಥರು ಹೇಳಿದರು.

ಭಕ್ತರ ಅನುಸಂಧಾನದಂತೆ ಮೇನೆಯಲ್ಲೇ ಮೆರವಣಿಗೆ
ಪರ್ಯಾಯ ಮೆರವಣಿಗೆಯಲ್ಲಿ ತಾವಿರುವ ಮೇನೆಯನ್ನು ಭಕ್ತರು ಹೊತ್ತು ಸಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅದಮಾರು ಕಿರಿಯ ಶ್ರೀಪಾದರು, ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ ಬಲು ದೊಡ್ಡ ಮಹತ್ವದ ಅಂಶವಿರುತ್ತದೆ. ಉದ್ದೇಶ ಏನು, ಯಾಕೆ ಮಾಡುತ್ತಾರೆ ಎಂಬುದನ್ನು ಅರಿತಾಗ ಸಮಸ್ಯೆಗಳಿರುವುದಿಲ್ಲ. ವಿರಕ್ತರಾದವರಿಗೆ ತನ್ನದೆಂಬುದು ಏನೂ ಇರುವುದಿಲ್ಲ.

ಭಕ್ತರ ದೈವೀ ಶಕ್ತಿಯ ಅನುಸಂಧಾನದಂತೆ ಎಲ್ಲವೂ ನಡೆಯುತ್ತವೆ. ಭಕ್ತರು ನಮ್ಮಲ್ಲಿ ಪರಮಾತ್ಮನನ್ನು ಕಂಡುಕೊಳ್ಳುತ್ತಾರೆ. ಅವರು ನಮ್ಮನ್ನು ಹೊರುವುದಲ್ಲ, ನಮ್ಮೊಳಗಿನ ದೈವೀ ಶಕ್ತಿಯನ್ನು ಹೊತ್ತು ತರುತ್ತಾರೆ. ಎಲ್ಲರಿಗೂ ಶ್ರೇಯಸ್ಸಾಗಲಿದೆ. ಸಂಪ್ರದಾಯಬದ್ಧವಾಗಿ ಹಿಂದೆ ಹೇಗಿತ್ತೋ ಹಾಗೆಯೇ ನಡೆಯಲಿದೆ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಪುರಪ್ರವೇಶಕ್ಕೆ ನಡಿಗೆ ಮಾತ್ರವೋ ಅಥವಾ ಟ್ಯಾಬ್ಲೋಗಳಿರುತ್ತವೆಯೋ ಎಂಬ ಪ್ರಶ್ನೆಗೆ ಉತ್ತರಿಸಿ, ತಾವು ನಡಿಗೆಯನ್ನೇ ಬಯಸುವೆವು. ಟ್ಯಾಬ್ಲೋ ಭಕ್ತ ಜನರ ಇಚ್ಛೆ. ಯಾವುದಾಗುತ್ತದೋ ಗೊತ್ತಿಲ್ಲ ಎಂದರು.

ಕೊನೆ ತನಕವೂ ಪಾಠಶ್ರವಣ
ಪಾಠಗಳಿನ್ನೂ ಮುಗಿದಿಲ್ಲ ಎಂಬುದರಿಂದ ಪರ್ಯಾಯ ಪೀಠಾರೋಹಣ ಜವಾಬ್ದಾರಿ ಸ್ವೀಕರಿಸಲು ಹಿಂಜರಿದಿರೇ ಎಂಬ ಪ್ರಶ್ನೆಗೆ ಕಿರಿಯ ಶ್ರೀಗಳು ಉತ್ತರಿಸಿ, ಜವಾಬ್ದಾರಿಗಳು ಬಂದಾಗ ಸಾಧನೆಗೆ ತೊಡಕಾಗುತ್ತದೆ. ಪರ್ಯಾಯ ಪೀಠವೇರಿದ ಬಳಿಕ, ಮಠದ ನಿರ್ವಹಣೆಯ ಜವಾಬ್ದಾರಿ ಹೊತ್ತ ಅನಂತರ ನೂರಾರು ಜನರನ್ನು ಜತೆಗೂಡಿಸಿಕೊಂಡು ಮುನ್ನಡೆಯಬೇಕಾಗಿರುವುದರಿಂದ ಸ್ವಲ್ಪ ಹಿಂಜರಿಕೆ ಇದ್ದುದು ನಿಜ. ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರಂತಹ ಹಿರಿಯರೂ ಪಾಠಗಳನ್ನು ಜೀವನದ ಕೊನೆಯ ತನಕ ಅಭ್ಯಸಿಸುತ್ತಿದ್ದರು; ನಾವು ಕೂಡ ಹಾಗೆ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next