Advertisement

ಉಡುಪಿ: ಟ್ರಾವೆಲ್‌ ಹಿಸ್ಟರಿ ಇಲ್ಲದ ಇಬ್ಬರಲ್ಲಿ ಒಮಿಕ್ರಾನ್‌

01:42 AM Dec 21, 2021 | Team Udayavani |

ಉಡುಪಿ: ಟ್ರಾವೆಲ್‌ ಹಿಸ್ಟರಿ ಹೊಂದಿರದ ಜಿಲ್ಲೆಯ ಇಬ್ಬರಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್‌ ಸೋಂಕು ಪತ್ತೆಯಾಗಿದೆ. ಅವರು ನಗರ ವ್ಯಾಪ್ತಿಯವರು. ಜನರು ನಿರ್ಲಕ್ಷ್ಯ ತೋರದೆ ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

Advertisement

ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಒಮಿಕ್ರಾನ್‌ ಸೋಂಕಿತರಿಬ್ಬರೂ ಒಂದೇ ಕುಟುಂಬದವರು; 73 ವರ್ಷದ ಮಹಿಳೆ ಮತ್ತು 82 ವರ್ಷದ ಪುರುಷ. ಇಬ್ಬರೂ ಆರೋಗ್ಯವಾಗಿದ್ದು ಕೋವಿಡ್‌ ಲಕ್ಷಣಗಳಿಲ್ಲ ಎಂದರು.

ಇಬ್ಬರಲ್ಲೂ ಬೇರೆ ಬಗೆಯ ವಯೋ ಸಹಜ ಕಾಯಿಲೆಗಳಿದ್ದು, ಮಹಿಳೆಗೆ ಕ್ಯಾನ್ಸರ್‌ ಇದೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲಿರುವ 11 ವರ್ಷದ ವಿದ್ಯಾರ್ಥಿ ಬೆಂಗಳೂರಿನಲ್ಲಿರುವ ಶಾಲೆಗೆ ಹೋಗ ಬೇಕಿರುವುದರಿಂದ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ವಿದ್ಯಾರ್ಥಿಗೆ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕ ಮೇರೆಗೆ ಕುಟುಂಬ ಸದಸ್ಯರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕುಟುಂಬದ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ನಿರ್ದಿಷ್ಟ ಮಾದರಿಗಳನ್ನು ಒಮಿಕ್ರಾನ್‌ ಪರೀಕ್ಷೆಗೆ ಕಳುಹಿಸಿದ್ದು, ಡಿ. 2ಕ್ಕೆ ಫ‌ಲಿತಾಂಶ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ತತ್‌ಕ್ಷಣ ಕುಟುಂಬದ ಸದಸ್ಯರು ಮತ್ತು ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಆಧರಿಸಿ ಆರೋಗ್ಯ ಇಲಾಖೆ ಸರ್ವೇಕ್ಷಣಾ ತಂಡ ಪರಿಶೀಲನೆ ಆರಂಭಿಸಿ 2,700 ಮಂದಿಯನ್ನು ಪರೀಕ್ಷೆ ಗೊಳಪಡಿಸಲಾಗಿದ್ದು, ಒಬ್ಬರಿಗೆ ಮಾತ್ರ ಕೋವಿಡ್‌ ಸೋಂಕು ಪತ್ತೆಯಾಗಿದೆ ಎಂದರು.

ಟ್ರಾವೆಲ್‌ ಹಿಸ್ಟರಿ ಇಲ್ಲದೆ ಒಮಿಕ್ರಾನ್‌ ಹೇಗೆ ತಗಲಿರಬಹುದು ಎಂಬ ಸಾಧ್ಯತೆ ಬಗ್ಗೆ ತಜ್ಞರಿಂದ ವಿಶ್ಲೇಷಣೆ ನಡೆಯುತ್ತಿದೆ. ಹೊರಗಿನಿಂದ ಬಂದವರಿಂದ ಸಂಪರ್ಕ ಹೊಂದಿರಬಹುದೇ ಎಂಬುದನ್ನು ಕುಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

Advertisement

ಒಮಿಕ್ರಾನ್‌ ಪರೀಕ್ಷೆಗೆ 167 ಮಾದರಿ
ರೂಪಾಂತರಿ ಒಮಿಕ್ರಾನ್‌ ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಜಿಲ್ಲೆಯಿಂದ ಇದುವರೆಗೆ ಒಟ್ಟು 167 ಮಾದರಿಗಳನ್ನು ಕಳುಹಿಸಿಕೊಡಲಾಗಿದ್ದು, 33 ವರದಿಗಳು ಬಂದಿವೆ. ಇದರಲ್ಲಿ ಎರಡು ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದೆ. ಒಮಿಕ್ರಾನ್‌ ಬಗ್ಗೆ ಜನರು ಭಯ ಪಡುವ ಅಗತ್ಯವಿಲ್ಲ, ಕೋವಿಡ್‌ ಮಾರ್ಗಸೂಚಿ ತಪ್ಪದೆ ಪಾಲಿಸಬೇಕು. ಮದುವೆ ಶುಭ ಸಮಾರಂಭ, ಸರಕಾರಿ ಕಾರ್ಯಕ್ರಮ, ಸಿನೆಮಾ ಮಂದಿರ, ಹೆಚ್ಚು ಜನ ಸೇರುವ ಧಾರ್ಮಿಕ ಸ್ಥಳ, ಉತ್ಸವಗಳಲ್ಲಿ ಜನರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೈರಿಸ್ಕ್ ದೇಶದಿಂದ ಬಂದವರು 21 ಮಂದಿ
ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಸಂಪೂರ್ಣ ಇಳಿಕೆಯಾಗುತ್ತಿದ್ದು, ಕಳೆದ 14 ದಿನಗಳಲ್ಲಿ ಸರಾಸರಿ ಪಾಸಿಟಿವಿಟಿ ದರ ಶೇ 0.09, ಕಳೆದ ಏಳು ದಿನಗಳಲ್ಲಿ ಶೇ. 0.11 ಇದೆ. ಕಳೆದ ಒಂದು ವಾರದಲ್ಲಿ ದಿನಕ್ಕೆ 2,713ರಂತೆ ಒಟ್ಟು 18,995 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಮುಂಬಯಿಯಿಂದ ಕಳೆದ ಒಂದು ವಾರದಲ್ಲಿ 370, ಒಂದು ತಿಂಗಳಲ್ಲಿ 565 ಮಂದಿ ಆಗಮಿಸಿದ್ದಾರೆ. ಕೇರಳದಿಂದ ಕಳೆದ ವಾರದಲ್ಲಿ 95, ತಿಂಗಳಲ್ಲಿ 239 ಮಂದಿ ಜಿಲ್ಲೆಗೆ ಬಂದಿದ್ದಾರೆ. ಎಲ್ಲರೂ ಕೋವಿಡ್‌ ನೆಗೆಟಿವ್‌ ವರದಿ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕಳೆದ 7 ದಿನಗಳಲ್ಲಿ ಉಡುಪಿಗೆ ಆಗಮಿಸಿದವರ ಸಂಖ್ಯೆ 43, ಒಂದು ತಿಂಗಳಲ್ಲಿ 61 ಮಂದಿ ಬಂದಿದ್ದು, ಎಲ್ಲರನ್ನು ಪತ್ತೆ ಮಾಡಿ ಪರೀಕ್ಷೆಗೊಳಪಡಿಸಲಾಗಿದೆ. ಹೈರಿಸ್ಕ್ ದೇಶದಿಂದ ಬಂದ 21 ಪ್ರಯಾಣಿಕರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ 34 ಇದ್ದು, 7 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ 3 ಮಂದಿ ಇದ್ದು, ಇಬ್ಬರು ವೆಂಟಿಲೇಟರ್‌ನಲ್ಲಿದ್ದಾರೆ ಎಂದು ತಿಳಿಸಿದರು.

ಶೇ. 10ರಷ್ಟು ಮಕ್ಕಳಿಗೆ ಪರೀಕ್ಷೆ
ಕೋವಿಡ್‌ ಸಂಭಾವ್ಯ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ನಿಗದಿಪಡಿಸಿದ ಒಟ್ಟು ಪರೀಕ್ಷೆ ಗುರಿಯಲ್ಲಿ ಶೇ. 50ನ್ನು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಮತ್ತು ಉಳಿದ ಶೇ. 50ನ್ನು ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಮಾಡಲಾಗುವುದು. ಒಟ್ಟು ಪರೀಕ್ಷೆ ಗುರಿಯಲ್ಲಿ ಶೇ. 10ರಷ್ಟು ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗುವುದು. ಕಳೆದ ಏಳು ದಿನಗಳಲ್ಲಿ ಉಡುಪಿ ಶೇ 0.2, ಕುಂದಾಪುರ ಶೇ 0.03, ಕಾರ್ಕಳ ಶೇ 0.05 ತಾಲೂಕು ಪಾಸಿಟಿವಿಟಿ ದರ ಹೊಂದಿದೆ. ದೈನಂದಿನ ಕೋವಿಡ್‌ ಪರೀಕ್ಷಾ ಗುರಿಯನ್ನು 4 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.

ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಎಡಿಸಿ ಬಾಲಕೃಷ್ಣಪ್ಪ, ಡಿಎಚ್‌ಒ ಡಾ| ನಾಗಭೂಷಣ ಉಡುಪ, ಕೋವಿಡ್‌ ನೋಡಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

21,084 ಮಂದಿ
ಇನ್ನೂ ಲಸಿಕೆ ಪಡೆದಿಲ್ಲ !
ಹರ್‌ಘರ್‌ ದಸ್ತಕ್‌ ಅಭಿಯಾನದಡಿಯಲ್ಲಿ ಆಶಾ / ಅಂಗನವಾಡಿ, ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೂ ಪ್ರಥಮ ಡೋಸ್‌ ಲಸಿಕೆ ಪಡೆಯದ 18 ವರ್ಷ ಮೇಲ್ಪಟ್ಟ 21,084 ಮಂದಿ ಇದ್ದು, ಅವರು ಲಸಿಕೆ ಪಡೆಯಬೇಕು. ಅಶಕ್ತರು ಇದ್ದಲ್ಲಿ ಮನೆಗೆ ತೆರಳಿ ನೀಡಲಾಗುವುದು. ಮೊದಲ ಡೋಸ್‌ ಲಸಿಕೆ ಶೇ. 95.68, ಎರಡನೇ ಡೋಸ್‌ ಶೇ. 80.97 ಲಸಿಕೆ ವಿತರಿಸಲಾಗಿದೆ. ಎರಡನೇ ಡೋಸ್‌ ಪಡೆಯಲು 94,196 ಮಂದಿ ಬಾಕಿ ಇದ್ದಾರೆ. ಶೀಘ್ರ ಜಿಲ್ಲಾಡಳಿತ ಲಸಿಕೆ ಗುರಿಯಲ್ಲಿ ಶೇ. 100 ಗುರಿ ಸಾಧಿಸಲು ಎಲ್ಲರೂ ಸಹಕರಿಸಬೇಕು ಎಂದು ಕೂರ್ಮಾ ರಾವ್‌ ಮನವಿ ಮಾಡಿದರು.

ದ. ಕ.; ನರ್ಸಿಂಗ್‌ ಕಾಲೇಜು ವಿದ್ಯಾರ್ಥಿನಿಗೆ ಒಮಿಕ್ರಾನ್‌ ದೃಢ
ಮಂಗಳೂರು: ಇಲ್ಲಿನ ಖಾಸಗಿ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಒಮಿಕ್ರಾನ್‌ ಇರುವುದು ಸೋಮವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಮಿಕ್ರಾನ್‌ಗೆ ಒಳಗಾದವರ ಸಂಖ್ಯೆ 6ಕ್ಕೇರಿದೆ.
ಕುರ್ನಾಡು ಬಳಿಯ ಶಾಲೆಯೊಂದರಲ್ಲಿ 4 ಮಂದಿ ವಿದ್ಯಾರ್ಥಿಗಳು ಹಾಗೂ ಮಂಗಳೂರಿನ ಖಾಸಗಿ ನರ್ಸಿಂಗ್‌ ಕಾಲೇಜಿನ ಒಬ್ಬರಲ್ಲಿ ಶನಿವಾರ ಒಮಿಕ್ರಾನ್‌ ಪತ್ತೆಯಾಗಿತ್ತು. ಸೋಮವಾರ ಒಮಿಕ್ರಾನ್‌ ಪತ್ತೆಯಾದ ವಿದ್ಯಾರ್ಥಿನಿಯ ಟ್ರಾವೆಲ್‌ ಹಿಸ್ಟರಿ ಸದ್ಯಕ್ಕೆ ಲಭ್ಯವಾಗಿಲ್ಲ. ಅವರ ಆರೋಗ್ಯ ಸ್ಥಿರವಾಗಿದ್ದು, ಯಾರೂ ಕೂಡ ಆತಂಕಕ್ಕೆ ಒಳಗಾಗಬೇಡಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next