Advertisement

ಚರಂಡಿ ವ್ಯವಸ್ಥೆ ಸರಿಪಡಿಸುವ ಬೇಡಿಕೆ 

06:10 AM Aug 23, 2018 | Team Udayavani |

ಉಡುಪಿ ನಗರಸಭೆಯ ಬನ್ನಂಜೆ ವಾರ್ಡ್‌ ಮೂಲಸೌಕರ್ಯ ಅಭಿವೃದ್ಧಿಯ ಹೆಚ್ಚಿನ ಅಗತ್ಯವನ್ನು ಹೊಂದಿದೆ. ಪ್ರಮುಖವಾಗಿ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕೆನ್ನುವ ಬೇಡಿಕೆ ಇದೆ. ಮಳೆಗಾಲದಲ್ಲಿ ಚರಂಡಿ ಸರಿ ಇಲ್ಲದೇ ಸಮಸ್ಯೆಯಾಗುತ್ತಿದೆ.

Advertisement

ಉಡುಪಿ: ಬನ್ನಂಜೆ ವಾರ್ಡ್‌ನ ಉತ್ತರದಲ್ಲಿ ಪುತ್ತೂರು ಗ್ರಾಮ ಗಡಿ ಭಾಗವಾಗಿದ್ದು, ದಕ್ಷಿಣದಲ್ಲಿ ಬನ್ನಂಜೆ ಕಲ್ಸಂಕ ರಸ್ತೆ, ಹಳೆ ಜಿಲ್ಲಾಧಿಕಾರಿ ಕಚೇರಿಯಿಂದ ಹೈವೆಗೆ ತೆರಳಿ ರೈಸ್‌ ಮಿಲ್‌ಗೆ ಹೋಗುವ ರಸ್ತೆ, ಅಂಬಲಪಾಡಿ ಗ್ರಾ.ಪಂ. ಕ್ಷೇತ್ರ, ಪೂರ್ವದಲ್ಲಿ ಪುತ್ತೂರು ಗ್ರಾಮ ಮತ್ತು ಶಿವಳ್ಳಿ ಗ್ರಾಮ ಗಡಿ, ಹಳೆ ಜಿಲ್ಲಾಧಿಕಾರಿ ಕಚೇರಿ ಬನ್ನಂಜೆ ಸರ್ಕಲ್‌ನಿಂದ ಹೋಗುವ ರಸ್ತೆ, ಪಶ್ಚಿಮದಲ್ಲಿ ಅಂಬಲಪಾಡಿ ಗ್ರಾ.ಪಂ. ಕ್ಷೇತ್ರ ಮತ್ತು ಕೊಡವೂರು ಗ್ರಾಮ ಗಡಿ ಭಾಗವನ್ನು ಒಳಗೊಂಡಿದೆ. ಕೆಲವೊಂದು ಮೂಲ ಸೌಕರ್ಯಗಳನ್ನು ಒದಗಿಸಿದ್ದರೂ, ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ.

ನೇರ ಹಣಾಹಣಿಗೆ ವೇದಿಕೆ ಸಜ್ಜು
ಪ್ರಸ್ತುತ ಬನ್ನಂಜೆ ವಾರ್ಡ್‌ನ ಸದಸ್ಯರಾಗಿರುವ ಹರೀಶ ರಾಮ್‌ ಬನ್ನಂಜೆ 2013ರಲ್ಲಿ ಮೊದಲ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 1995ರಲ್ಲಿ ಕಾಂಗ್ರೆಸ್‌ನಿಂದ ಸೋಮಯ್ಯ ಬನ್ನಂಜೆ, 2002ರಲ್ಲಿ ಬಿಜೆಪಿಯಿಂದ ಜಾನಕಿ ಪಾಂಡು ಪೂಜಾರಿ, 2007ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ. ರವಿ ಅಮೀನ್‌ ಗೆಲುವು ಸಾಧಿಸಿ ನಗರಸಭೆ ಸದಸ್ಯರಾಗಿದ್ದರು. ಕಳೆದ ಬಾರಿ ಕಾಂಗ್ರೆಸ್‌ನಿಂದ ಪ್ರವೀಣ್‌ ಶೆಟ್ಟಿ, ಬಿಜೆಪಿಯಿಂದ ಬಿ. ರವಿ ಅಮೀನ್‌ ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿ ಹರೀಶ್‌ ರಾಮ್‌ 68 ಮತಗಳ ಅಂತರದಿಂದ ಗೆದ್ದಿದ್ದರು. ಬನ್ನಂಜೆ ವಾರ್ಡ್‌ ನಲ್ಲಿ ಈ ಬಾರಿ “ಮಹಿಳಾ ಮೀಸಲಾತಿ’ ಬಂದಿರುವ ನೆಲೆಯಲ್ಲಿ ಹರೀಶ್‌ ರಾಮ್‌ ಬನ್ನಂಜೆ ಅವರ ಪತ್ನಿ ಸವಿತಾ ಹರೀಶ್‌ರಾಮ್‌ ಇದೀಗ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ನಿಂದ ರೇಖಾ ಬಿ. ಪೂಜಾರಿ ಸ್ಪರ್ಧಿಸಲಿದ್ದರೆ. ಇಲ್ಲಿ ಒಳಚರಂಡಿ, ಮಳೆನೀರು ಚರಂಡಿ ಇಲ್ಲದೇ ಇರುವುದು ಪ್ರಮುಖ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವ ಸವಾಲು ಮುಂದಿನ ಸದಸ್ಯರಿಗೆ ಪ್ರಮುಖವಾಗಿ ಇದೆ. 

ಆದ ಕೆಲಸ
ರಸ್ತೆ 

ಬಿ.ಜೆ. ಕಂಪೌಂಡ್‌ ರಸ್ತೆ, ಗರಡಿ ರಸ್ತೆಯ ಎಡಕ್ಕೆ ಶನೀಶ್ವರ ದೇಗುಲಕ್ಕೆ ಹೋಗುವ ರಸ್ತೆ, ಕಲ್ಕುಡ ದೈವಸ್ಥಾನಕ್ಕೆ ಹೋಗುವ ರಸ್ತೆ, ಕಡ್ಲೆ ಓಣಿಯ ಮುಂದುವರಿದ ಹಾಗೂ ಎಡಭಾಗದ ರಸ್ತೆ, ರಾಜ್ಯ ಹೆದ್ದಾರಿಯಿಂದ ಗರಡಿ ತನಕ ರಸ್ತೆ, ಎಸ್‌ಪಿ ಆಫೀಸ್‌ ಹಿಂಬದಿ ಎಸ್‌ಸಿ ಕಾಲನಿ ರಸ್ತೆ ಕಾಮಗಾರಿ ಆಗಿದೆ.

ಕಾಂಕ್ರೀಟ್‌
ಮೂಡುಬೆಟ್ಟುವಿನಿಂದ ಮೂಡನಿಡಂಬೂರು ಗರಡಿವರೆಗೆ ತೋಡಿನ ಹೂಳೆತ್ತುವುದು, ತೋಡಿನ ಅಂಚಿನಲ್ಲಿರುವ ಮನೆಗಳ ಕಾಂಕ್ರೀಟ್‌ ಶಾಶ್ವತ ತಡೆಗೋಡೆ ನಿರ್ಮಾಣ, ಆದಿಉಡುಪಿ ಮೀನು ಮಾರುಕಟ್ಟೆ ಹಿಂಬದಿ ಆವರಣ ಗೋಡೆ, ಒಳಚರಂಡಿ ನಿರ್ಮಾಣ, ಜಿಲ್ಲಾ ಅಂಬೇಡ್ಕರ್‌ ಭವನ ಅಭಿವೃದ್ಧಿ, ಇತ್ಯಾದಿ ಕೆಲಸ ಆಗಿವೆ.

Advertisement

ಇಂಟರ್‌ಲಾಕ್‌
ಬನ್ನಂಜೆ ಮೆಟ್ರಿಕ್‌ ಪೂರ್ವ ವಸತಿ ನಿಲಯದ ಆವರಣಕ್ಕೆ ಇಂಟರ್‌ಲಾಕ್‌ ಅಳವಡಿಕೆ, ಆವರಣ ಗೋಡೆ ಎತ್ತರಿಸುವುದು, ಆದಿಉಡುಪಿ ಮೀನು ಮಾರುಕಟ್ಟೆಯ ಎದುರು ಇಂಟರ್‌ಲಾಕ್‌ ಅಳವಡಿಕೆ, ಆವರಣ ಗೋಡೆ ದುರಸ್ತಿಗೊಳಿಸಲಾಗಿದೆ.

ರಸ್ತೆ ಅಭಿವೃದ್ಧಿ
ಆದಿಉಡುಪಿ ಮೀನು ಮಾರುಕಟ್ಟೆಯ ಹಿಂಬದಿ ರಸ್ತೆ, ಅಂಬೇಡ್ಕರ್‌ ಭವನದ ಪಕ್ಕದ ರಸ್ತೆ, ಮಠದಬೆಟ್ಟುವಿನ ಸುರೇಶ್‌ ಅವರ ಮನೆಯ ಪಕ್ಕದ ಹೊಸದಾದ ರಸ್ತೆಗೆ ಜಲ್ಲಿ ಹಾಕಿ ಅಭಿವೃದ್ಧಿ, ಆದಿ ಡುಪಿ-ಕೊಡವೂರು-ಮೂಡುಬೆಟ್ಟು ರಸ್ತೆ ಅಗಲೀಕರಣ ಆಯ್ದ ಭಾಗ ಕಾಂಕ್ರೀಟ್‌ ಮಾಡಲಾಗಿದೆ.

ಆಗದ ಕೆಲಸ
ಒಳಚರಂಡಿ

ರಾ.ಹೆ. ಕಾರ್ತಿಕ್‌ ಸೆಂಟರ್‌ನಿಂದ ಹಳೆಯ ಯಮಹಾ ಶೋರೂಂ ಪಕ್ಕದ ರಸ್ತೆಯ ಒಳಚರಂಡಿ ಜಾಲ ಪುನರುಜ್ಜೀವನ.  ಮಠದಬೆಟ್ಟು, ಮೂಡನಿಡಂಬೂರು ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ನಿರ್ವಹಣೆ ಸಮರ್ಪಕವಾಗಿಲ್ಲ. ಇದರಿಂದ ಸಮಸ್ಯೆಯಾಗಿದೆ. 

ಕಾಮಗಾರಿ
ಆದಿಉಡುಪಿ ಶಾಲೆಯ ಹಿಂದಿನ ಜೈಜವಾನ್‌ ಮಾರ್ಗದ ರಸ್ತೆ ಫೇವರ್‌ ಫಿನಿಶ್‌ ಡಾಮರೀಕರಣ ಅರ್ಧ ಕೆಲಸ ಮುಗಿದಿದ್ದು, ಉಳಿದ ಅರ್ಧ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಸ್ವಚ್ಛತೆ
ಆದಿಉಡುಪಿ ಮೀನು ಮಾರುಕಟ್ಟೆಯಲ್ಲಿ ಮಟನ್‌ ವ್ಯಾಪಾರಸ್ಥರಿಗೆ ನಗರಸಭೆಯಿಂದ ಮಾಂಸ ಮಾರಾಟಕ್ಕೆ ಮಾತ್ರ  ಅನುಮತಿ ನೀಡಲಾಗಿದ್ದರೂ, ಅಲ್ಲಿಯೇ ಪ್ರಾಣಿಗಳ ವಧೆ ನಡೆಯುತ್ತಿರುವುದರಿಂದ ಸ್ವತ್ಛತೆಗೆ ತೊಡಕಾಗಿದೆ. ಒಳಚರಂಡಿಯ ಸರಾಗ ಹರಿವಿಗೆ ಅಡ್ಡಿಯಾಗಿದೆ. 

ತಡೆಗೋಡೆ
ಮಠದಬೆಟ್ಟುವಿನಿಂದ ಮುಂದುವರಿದ ಭಾಗದ ರಸ್ತೆಗಳು, ಮೂಡನಿಡಂಬೂರು ಗರಡಿ ಪಕ್ಕದ ಕಲ್ಸಂಕದ ಮುಖ್ಯ ಚರಂಡಿಗೆ ತಡೆಗೋಡೆ ರಚನೆಯಾಗಬೇಕಿದೆ. ಚರಂಡಿಗೆ ತಡೆಗೋಡೆ ಇಲ್ಲದಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಪುರುಷರು: 1142
ಮಹಿಳೆಯರು: 1185
ಒಟ್ಟು  ಮತದಾರರು:2327

Advertisement

Udayavani is now on Telegram. Click here to join our channel and stay updated with the latest news.

Next