Advertisement

Udupi: ಬೆಳ್ಳಂಬೆಳಗ್ಗೆ ಮನೆಯಲ್ಲಿ ಅಗ್ನಿ ದುರಂತ: ಬಾರ್ ಮಾಲೀಕ ಮೃತ್ಯು, ಪತ್ನಿ ಗಂಭೀರ  

12:55 AM Jul 16, 2024 | Team Udayavani |

ಉಡುಪಿ: ಅಂಬಲಪಾಡಿಯ ಗಾಂಧಿ ನಗರದ ಮನೆಯೊಂದರಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಉದ್ಯಮಿ ರಮಾನಂದ ಶೆಟ್ಟಿ (56) ಸಾವನ್ನಪ್ಪಿದ್ದು, ಅವರ ಪತ್ನಿ ಅಶ್ವಿ‌ನಿ ಶೆಟ್ಟಿ (48) ಗಂಭೀರ ಗಾಯಗೊಂಡಿದ್ದಾರೆ.

Advertisement

ಮಣಿಪಾಲದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಮಕ್ಕಳಾದಹಂಸಿಜಾ (20) ಮತ್ತು ಅಭಿಕ್‌ (16) ಪಾರಾಗಿದ್ದಾರೆ.

ಗಾಯಾಳುಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿ ಸಲಾಯಿತಾದರೂ ರಮಾನಂದ ಶೆಟ್ಟಿ ಹೃದಯಾ ಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಘಟನೆಗೆ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಕಾರಣ ಎನ್ನಲಾಗಿದ್ದು, ತನಿಖೆ ನಡೆಯುತ್ತಿದೆ. ಬೆಳಗ್ಗೆ ಸುಮಾರು 5.50ರ ವೇಳೆಗೆ ದುರಂತದ ಬಗ್ಗೆ ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಬಂದಿದ್ದು, ತತ್‌ಕ್ಷಣ ಸ್ಥಳಕ್ಕೆ ತೆರಳಿದ ಸಿಬಂದಿ ಸತತ 3ಗಂಟೆ ಕಾರ್ಯಾಚರಣೆ ನಡೆಸಿ ಇಬ್ಬರು ಮಕ್ಕಳನ್ನು ರಕ್ಷಿಸಿದರು.

ಗಾಜು ಒಡೆದು ರಕ್ಷಣೆ
ಅಗ್ನಿಶಾಮಕ ದಳದವರು ತಲುಪಿದಾಗ ಮನೆ ಸಂಪೂರ್ಣ ಹೊಗೆಯಿಂದ ಆವೃತ್ತವಾಗಿತ್ತು. ಬಾಗಿಲು ತೆರೆಯಲೂ ಸಾಧ್ಯವಾಗಿರಲಿಲ್ಲ. ಕಿಟಕಿಗಳ ಗಾಜುಗಳನ್ನು ಉಪಕರಣಗಳ ಸಹಾಯದಿಂದ ಒಡೆದು ಇಬ್ಬರು ಸಿಬಂದಿ ಉಸಿರಾಟದ ಸಲಕರಣೆ ಧರಿಸಿ ಒಳ ಪ್ರವೇಶಿಸಿದರು. ಆಗ ರಮಾನಂದ ಶೆಟ್ಟಿ ಬಾಗಿಲಿನ ಬಳಿಯಲ್ಲಿ ಹಾಗೂ ಅಶ್ವಿ‌ನಿ ಬೆಡ್‌ರೂಂನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಹೊರಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕೊಂಡೊ ಯ್ಯಲಾಯಿತು. ಬಳಿಕ ಸಿಬಂದಿ ಪರಿಶೀಲಿಸಿದಾಗ ಶೌಚಾಲಯದೊಳಗೆ ದಂಪತಿಯ 20 ವರ್ಷದ ಪುತ್ರಿ ಹಾಗೂ 16 ವರ್ಷದ ಪುತ್ರ ಇರುವುದು ಕಂಡು ಬಂದರು. ಕೂಡಲೇ ಅವರನ್ನೂ ರಕ್ಷಿಸಲಾಯಿತು.

Advertisement

ಮಕ್ಕಳು ಪಾರಾದುದು ಹೇಗೆ?
ಮೂಲಗಳ ಪ್ರಕಾರ ಈ ಘಟನೆ ರಕ್ಷಣ ಕಾರ್ಯಾಚರಣೆಗೂ 20ರಿಂದ 25 ನಿಮಿಷಗಳ ಮುನ್ನ ನಡೆದಿರುವ ಸಾಧ್ಯತೆ ಇದೆ. ಮನೆಯೊಳಗೆ ಸಂಪೂರ್ಣ ಭದ್ರತೆ ಇದ್ದ ಕಾರಣ ಬಾಗಿಲುಗಳು ಸ್ವಯಂ ಲಾಕ್‌ ಆಗಿದ್ದವು. ಸುರಕ್ಷೆಯ ಗ್ಲಾಸ್‌ಗಳಿದ್ದ ಕಾರಣ ಅದನ್ನೂ ಸುಲಭದಲ್ಲಿ ಒಡೆಯಲಾಗಲಿಲ್ಲ. ಮನೆಯ ಒಳ ಭಾಗ ಸಂಪೂರ್ಣ ಮರದ ವಸ್ತುಗ ಳಿಂದ ವಿನ್ಯಾಸಗೊಂಡಿದ್ದರಿಂದ ತತ್‌ಕ್ಷಣವೇ ಎಲ್ಲ ವೂ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಯಿತು ಎನ್ನಲಾಗುತ್ತಿದೆ.

ಶಾರ್ಟ್‌ ಸರ್ಕ್ನೂಟ್‌ ಮೊದಲಿಗೆ ಮನೆಯ ಹಾಲ್‌ನಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಸಂಪೂರ್ಣ ಹೊಗೆ ಕಾಣಿಸಿಕೊಂಡಿದ್ದು, ಅನಂತರ ಎಲ್ಲ ಕೊಠಡಿಗಳಿಗೂ ಆವರಿಸಿದೆ. ಮರದ ಪರಿಕರಗಳು ಹೊತ್ತಿ ಉರಿಯುತ್ತಿದ್ದಂತೆ ಮೂರು ಮಹಡಿಯ ಮನೆಯ ಸುತ್ತಲೂ ಹೊಗೆ ಆವರಿಸಿಕೊಂಡಿದೆ. ಈ ವೇಳೆ ಬಾಗಿಲು ತೆರೆಯಲೆಂದು ರಮಾನಂದ ಶೆಟ್ಟಿ ಪ್ರಯತ್ನಿಸಿದರೂ ಭದ್ರತೆಯ ಲಾಕರ್‌ ತೆರೆಯಲು ಆಗಲಿಲ್ಲ. ಆಗ ಹೊಗೆಯಿಂದ ಉಸಿರುಗಟ್ಟಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಏನೂ ಕಾಣುತ್ತಿರಲಿಲ್ಲ
ಹೊಗೆ ಹಾಗೂ ಬೆಂಕಿಯ ದಟ್ಟಣೆ ಎಷ್ಟಿತ್ತೆಂ ದರೆ ಅಗ್ನಿಶಾಮಕ ದಳದ ಸಿಬಂದಿ ಒಳ ಪ್ರವೇಶಿ ಸುವ ಹೊತ್ತಿಗೆ ಅವರಿಗೆ ಏನೂ ಕಾಣಿಸು ತ್ತಿರಲಿಲ್ಲ ಎಂಬುದನ್ನು ಸಿಬಂದಿ ವರ್ಗವೇ ಕಾರ್ಯಾ ಚರಣೆಯ ಬಳಿಕ ತಿಳಿಸಿದ್ದಾರೆ. ಟಾರ್ಚ್‌ ಬೆಳಕಿನ ಸಹಾಯದಲ್ಲಿ ಒಳಪ್ರವೇಶಿಸಿ ಕಾರ್ಯಾಚರಣೆ ನಡೆಸಲಾಯಿತು. ಬೆಂಕಿ ಹಾಗೂ ಹೊಗೆಯ ಕೆನ್ನಾಲಿಗೆಗೆ ಇಬ್ಬರೂ ಮೂಛೆì ತಪ್ಪಿ ಬಿದ್ದಿದ್ದರು. ಮನೆಯೊಳಗಿದ್ದ ಬಹುಪಾಲು ಸಾಮಗ್ರಿಗಳು ಬೆಂಕಿಯಿಂದ ಸುಟ್ಟು ಕರಕಲಾಗಿದೆ.

ಮನೆಸುತ್ತಲೂ ಜಮಾಯಿಸಿದ ಜನರು
ಘಟನೆ ನಡೆದ ಮನೆಯ ಸುತ್ತಲೂ ಪರಿಚಯ ಸ್ಥರು, ಸ್ನೇಹಿತರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ನಾವು ಬೆಳಗ್ಗೆ ವಾಕಿಂಗ್‌ ಹೋಗುವವರೆಗೂ ದುರ್ಘ‌ಟನೆ ನಡೆದಿರಲಿಲ್ಲ. ಅನಂತರ ಈ ಘಟನೆ ಬಗ್ಗೆ ತಿಳಿದುಬಂದಿತು. ಆದರೆ ಇಷ್ಟೊಂದು ಭೀಕರವಾಗಿರುತ್ತದೆ ಎಂದು ಅಂದು ಕೊಂಡಿರಲಿಲ್ಲ ಎಂದು ಸಮೀಪದ ಮನೆಯವರು ತಿಳಿಸಿದರು. ಘಟನಾ ಸ್ಥಳಕ್ಕೆ ಎಎಸ್‌ಪಿ ಟಿ.ಸಿದ್ದಲಿಂಗಪ್ಪ, ಉಭಯ ಪಕ್ಷಗಳ ರಾಜಕೀಯ ನಾಯಕರು ಭೇಟಿ ನೀಡಿದರು. ಶಾಸಕ ಯಶ್‌ಪಾಲ್‌ ಸುವರ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಮೂಲಕ ಮಾಹಿತಿ ಪಡೆದರು.

ಸಿಬಂದಿಗೆ ಗಾಯ
ಕಾರ್ಯಾಚರಣೆ ವೇಳೆ ಹೋಮ್‌ಗಾರ್ಡ್‌ ಸಿಬಂದಿ ರಾಘವೇಂದ್ರ ಆಚಾರ್ಯ ಅಸ್ವಸ್ಥರಾಗಿ ಬಿದ್ದು ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಮಂಗಳೂರು ಮುಖ್ಯ ಅಗ್ನಿಶಾಮಕ ಅಧಿಕಾರಿ ತಿರುಮಲೇಶ್‌, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಯು. ಕಲ್ಗುಟ್ಕರ್‌, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರವೀಂದ್ರ ಹಾಗೂ 13 ಮಂದಿ ಸಿಬಂದಿ ಪಾಲ್ಗೊಂ ಡಿದ್ದು, ಸ್ಥಳೀಯರು ಸಹಕಾರ ನೀಡಿದ್ದಾರೆ.

ಎಸಿ ಸ್ಫೋಟ ಕಾರಣವಲ್ಲ
ಘಟನೆ ನಡೆದ ಆರಂಭದಲ್ಲಿ ಹಲವು ಮಂದಿ ಎಸಿ ನ್ಪೋಟ ಆಗಿರುವುದೇ ಘಟನೆಗೆ ಕಾರಣ ಎಂದು ಊಹಿಸಿದ್ದರು. ಆದರೆ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಆಗಿ ಕಾರ್ಬನ್‌ ಮೊನಾಕ್ಸೆ„ಡ್‌ ಸಂಪೂರ್ಣ ತುಂಬಿಕೊಂಡ ಕಾರಣ ಉಸಿರಾಡಲಾಗದೇ ಪ್ರಜ್ಞೆ ತಪ್ಪಿದ್ದರು ಎಂಬ ಅಂಶ ತಿಳಿದುಬಂದಿದೆ. ಆಕ್ಸಿಜನ್‌ ಪೂರೈಕೆ ಕಡಿಮೆಯಾದರೂ ಹೃದಯಾಘಾತ (ಹೃದಯ ಸ್ತಂಭನ) ಉಂಟಾಗುತ್ತದೆ. ಹೊಗೆ ಬಂದಾಗ ಕಾರ್ಬನ್‌ ಡೈ ಆಕ್ಸೆ„ಡ್‌ ಅಧಿಕವಾಗುತ್ತದೆ. ಆಕ್ಸಿಜನ್‌ ಪೂರೈಕೆಯೂ ಇಲ್ಲದಾಗ ಇಂತಹ ಘಟನೆಗಳು ನಡೆಯು ವುದುಂಟು ಎನ್ನುತ್ತಾರೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು.

ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ರಮಾನಂದ ಶೆಟ್ಟಿ
ರಮಾನಂದ ಶೆಟ್ಟಿ ಅವರು ಪತ್ನಿ ಅಶ್ವಿ‌ನಿ ಶೆಟ್ಟಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಶೆಟ್ಟಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಮಾಲಕರಾಗಿದ್ದರು. ಲಯನ್ಸ್‌ ಕ್ಲಬ್‌ ಉಡುಪಿ ಚೇತನದ ಕೋಶಾಧಿಕಾರಿ, ಪಂದುಬೆಟ್ಟು ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ, ಪಂದುಬೆಟ್ಟು ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರೂ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಸಿಂಗಾಪುರದಲ್ಲೂ ಉದ್ಯಮ ಹೊಂದಿದ್ದರು. ಆದಿ ಉಡುಪಿಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಎಂಜಿಎಂನಲ್ಲಿ ಪದವಿ ಪೂರೈಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಅಶ್ವಿ‌ನಿ ಖ್ಯಾತಿ
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅಶ್ವಿ‌ನಿ ಅವರು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದರು. ಉಡುಪಿ ನಗರ ಮಹಿಳಾ ಮೋರ್ಚಾದ ಪದಾಧಿಕಾರಿಯಾಗಿದ್ದ ಅವರು ಇತ್ತೀಚೆಗಷ್ಟೇ ಅಧ್ಯಕ್ಷೆಯಾಗಿದ್ದರು. ಬಂಟರ ಸಂಘ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ತುಳುನಾಡಿನ ಆಚಾರ-ವಿಚಾರ, ಸಾಂಸ್ಕೃತಿಕ ವಿಚಾರಗಳನ್ನು ಬಿಂಬಿಸುವ ವೀಡಿಯೋಗಳನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸಿ ಖ್ಯಾತಿ ಗಳಿಸಿದ್ದರು.

ಅಲರಾಂ ವ್ಯವಸ್ಥೆ ಇರಲಿಲ್ಲ
ಸುಮಾರು 1.5ರಿಂದ 2 ಕೋ ರೂ. ಬೆಲೆ ಬಾಳುವ ಮನೆ ಇದಾಗಿದ್ದು, ಸುಮಾರು 60 ರಿಂದ 70 ಲ.ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಮನೆಯನ್ನು ಅತ್ಯಾಧುನಿಕ ಫ‌ರ್ನಿಚರ್‌ಗಳೊಂದಿಗೆ ವಿನ್ಯಾಸ ಗೊಳಿಸಲಾಗಿತ್ತು. ಸೆಂಟ್ರಲ್‌ ಎಸಿ ಅಳ
ವಡಿಸಲಾಗಿತ್ತು. ಮನೆಗೆ ಡಬಲ್‌ ಡೋರ್‌ ಭದ್ರತೆ ಇತ್ತು. ಗಾಜುಗಳೂ ಸುಲಭದಲ್ಲಿ ಒಡೆಯುವಂಥದ್ದಾಗಿರಲಿಲ್ಲ. ಇಷ್ಟೆಲ್ಲ ಭದ್ರತಾ ವ್ಯವಸ್ಥೆಗಳಿದ್ದರೂ ವೆಂಟಿಲೇಷನ್‌(ಗಾಳಿ ಒಳ ಹಾಗೂ ಹೊರ ಪ್ರವೇಶ)ಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಜತೆಗೆ ಅಗ್ನಿ ಅವಘಡಗಳು ಸಂಭವಿಸಿದಾಗ ಎಚ್ಚರಿಸುವ ಅಲರಾಂ ವ್ಯವಸ್ಥೆ ಅಳವಡಿಸಿರಲಿಲ್ಲ.

ಸಿಲಿಂಡರ್‌ ಏನೂ ಆಗಿರಲಿಲ್ಲ!
ಮನೆಯ ಹೊರಭಾಗದಲ್ಲಿ 3 ಸಿಲಿಂ ಡರ್‌ಗಳಿದ್ದು, ಅವು ಏನೂ ಆಗಿರ ಲಿಲ್ಲ. ಮನೆಯೊಳಗಿದ್ದ ಕುಕ್ಕರ್‌ಕೂಡ ಸ್ಫೋಟಗೊಂಡಿರಲಿಲ್ಲ. ವೆಂಟಿಲೇ ಷನ್‌ ಕೊರತೆಯಿಂದ ಗಾಳಿ ಸಂಚಾರಕ್ಕೆ ಅಡಚಣೆಯಾಗಿ ಒಬ್ಬರು ಜೀವ ಕಳೆದುಕೊಂಡರು. ವಿಧಿ-ವಿಜ್ಞಾನ ತಜ್ಞರು, ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next