Advertisement

Udupi: ದೀಪಾವಳಿ ಪಟಾಕಿ; ನಿರ್ಬಂಧಗಳದೇ ಸದ್ದು!

06:00 PM Oct 20, 2024 | Team Udayavani |

ಉಡುಪಿ: ದೀಪಾವಳಿ ಆಚರಣೆಗೆ ದಿನಗಣನೆ ಆರಂಭಗೊಂಡಿದೆ. ಈ ನಡುವೆ ಪಟಾಕಿ ಮಾರಾಟ ಪರವಾನಿಗೆ ನಿಯಮಾವಳಿಗಳೂ ಸದ್ದು ಮಾಡುತ್ತಿದೆ.

Advertisement

ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟಕ್ಕಾಗಿಯೇ ವಿಶೇಷ ವ್ಯವಸ್ಥೆ ಇರುವುದರಿಂದ ಹಲವರು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಜಿಲ್ಲಾದ್ಯಂತ 200ಕ್ಕೂ ಅಧಿಕ ಅರ್ಜಿ ಈಗಾಗಲೇ ಸಲ್ಲಿಕೆಯಾಗಿದ್ದು ಕಾನೂನುಬದ್ಧವಾಗಿ ಪರಿಶೀಲಿಸಿ, ನಿಯಮ ಬದ್ಧ ಅರ್ಜಿಗಳಿಗೆ ಅನುಮತಿ ಜಿಲ್ಲಾಡಳಿತ ನೀಡಲಿದೆ.

ಆಯಾ ಠಾಣಾ ವ್ಯಾಪ್ತಿಯಲ್ಲಿ ಬರುವ ಕಿರಿದಾದ, ಜನನಿಬಿಡ ಮತ್ತು ವಾಣಿಜ್ಯ ಸಂಕೀರ್ಣ ಸ್ಥಳಗಳಲ್ಲಿ ಯಾವುದೇ ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆ ಯಲು, ಪಟಾಕಿಗಳ ದಾಸ್ತಾನು ಹಾಗೂ ಮಾರಾಟಕ್ಕೆ ಅನುಮತಿ ನೀಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ.

ಜನವಸತಿ ಪ್ರದೇಶಗಳಲ್ಲಿ ನಿಷೇಧ
ಪಟಾಕಿಗಳನ್ನು ಅಧಿಕಾರಿಗಳು ನಿಗದಿಪಡಿಸಿದ ಮೈದಾನ ಅಥವಾ ತೆರೆದ ಪ್ರದೇಶಗಳಲ್ಲಿ, ಸ್ಥಳೀಯ ಆಡಳಿತ ಅನುಮತಿ ನೀಡಿರುವ ತಾತ್ಕಾಲಿಕ ಮಳಿಗೆಗಳಲ್ಲಿ ಮಾತ್ರ ದಾಸ್ತಾನು ಮಾಡಲು ಹಾಗೂ ಮಾರಾಟಕ್ಕೆ ಅನುಮತಿ ಕಲ್ಪಿಸಲಾಗಿದೆ. ನಗರ ಭಾಗ, ಜನವಸತಿ ಸ್ಥಳಗಳಲ್ಲಿ ಇದರ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಾರಾಟಗಾರರು ನಿರ್ದಿಷ್ಟ ಮೊತ್ತವನ್ನು ಸರಕಾರಿ ಖಜಾನೆಗೆ ಜಮೆ ಮಾಡುವುದನ್ನೂ ಕಡ್ಡಾಯಗೊಳಿಸಲಾಗಿದೆ.

ದೀಪಾವಳಿ ಹಬ್ಬಕ್ಕೂ ಮೊದಲೇ ಮಾರಾಟ
ಪಟಾಕಿ ಮಾರಾಟದಲ್ಲಿ ವ್ಯಾಪಾರಸ್ಥರು ಶೇ.80ರಷ್ಟು ಕಮಿಷನ್‌ ಗಿಟ್ಟಿಸಿಕೊಳ್ಳುತ್ತಾರೆ ಎಂಬ ಮಾತಿದೆ. ದೀಪಾವಳಿಗೂ 2ರಿಂದ 3 ದಿನಗಳ ಮೊದಲೇ ವ್ಯಾಪಾರ ಆರಂಭಗೊಳ್ಳಲಿದ್ದು ಗ್ರಾಹಕರು ಕೂಡ ಮುಗಿಬಿದ್ದು ಪಟಾಕಿ ಖರೀದಿಸಲಿದ್ದಾರೆ. ಈ ಬಾರಿ ಮಳೆ ಬರುವ ಮುನ್ಸೂಚನೆಯಿದ್ದು, ಇದಕ್ಕೆ ಪೂರಕವಾಗಿಯೇ ಸಕಲ ತಯಾರಿ ಮಾಡಲು ವ್ಯಾಪಾರಸ್ಥರು ಸಜ್ಜಾಗಿದ್ದಾರೆ.

Advertisement

ಹಸುರು ಪಟಾಕಿ ಹೆಸರಿಗೆ ಮಾತ್ರ, ಬೇಡಿಕೆ ಕಡಿಮೆ
ಕಳೆದ ಮೂರ್‍ನಾಲ್ಕು ವರ್ಷಗಳಿಂದ ಹಸುರು ಪಟಾಕಿ ಹೆಚ್ಚು ಸದ್ದು ಮಾಡುತ್ತಿದೆ. ಸರಕಾರ, ಜಿಲ್ಲಾಡಳಿತವೂ ಪರಿಸರ ಮಾಲಿನ್ಯ ತಡೆ ನಿಟ್ಟಿನಲ್ಲಿ ಹಸುರು ಪಟಾಕಿಗೆ ಉತ್ತೇಜನ ನೀಡುತ್ತಾ ಬಂದಿದೆ. ಆದರೆ, ಹಸುರು ಪಟಾಕಿಯ ಬಗ್ಗೆ ಜನರಲ್ಲಿ ಒಲವು ಕಡಿಮೆ. ಹೀಗಾಗಿ ಬೇಡಿಕೆಯೂ ಕಡಿಮೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

ಆನ್‌ಲೈನ್‌ ಪೂರೈಕೆ ಪೊಲೀಸರ ಕಣ್ಣು
ಜಿಲ್ಲಾಡಳಿತ ಅದೆಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಆನ್‌ಲೈನ್‌ ಮೂಲಕ ವಿವಿಧ ರೀತಿಯ ಪಟಾಕಿಗಳು ಸುಲಭದಲ್ಲಿ ಪೂರೈಕೆಯಾಗುತ್ತಿವೆ. ಜತೆಗೆ ವಾಟ್ಸಾಪ್‌ ಸಹಿತ ವಿವಿಧ ಸಾಮಾಜಿಕ ಜಾಲತಾಣದ ಮೂಲಕ ಕಡಿಮೆ ದರಕ್ಕೆ ಮನೆಬಾಗಿಲಿಗೆ ತಂದು ಪೂರೈಸುವ ಕೆಲಸವೂ ನಡೆಯುತ್ತಿದ್ದು, ಈ ಬಗ್ಗೆಯೂ ಪೊಲೀಸರು ಕಣ್ಗಾವಲು ಇರಿಸಲು ನಿರ್ಧರಿಸಿದ್ದಾರೆ. ಅಂತಹ ಸಂದೇಶಗಳಿದ್ದರೆ ಇಲಾಖೆಗೆ ಸೂಚನೆ ನೀಡುವಂತೆಯೂ ಪೊಲೀಸರು ತಿಳಿಸಿದ್ದಾರೆ.

ಪರಿಶೀಲನೆ ಬಳಿಕ ಅನುಮತಿ
ಪಟಾಕಿ ಮಾರಾಟಕ್ಕೆ ಅನುಮತಿ ಬಯಸುವವರಿಗೆ ಅ. 23ರ ವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿದ ಬಳಿಕವೇ ಅನುಮತಿ ನೀಡಲಾಗುವುದು.
-ಡಾ| ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ

ನಿಯಮ ಏನೇನು?
ರಾತ್ರಿ ವೇಳೆ ಪಟಾಕಿ ಮಾರುವಂತಿಲ್ಲ

  • ಮೈದಾನ ಇಲ್ಲವೇ ತೆರೆದ ಪ್ರದೇಶದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ.
  • ಮಳಿಗೆಗಳಲ್ಲಿ ಎರಡೂ ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು.
  • ಮಳಿಗೆ ನಿರ್ಮಿಸಲು ಬಳಸುವ ಸಾಮಗ್ರಿಗಳು ಸುಲಭವಾಗಿ ಬೆಂಕಿ ಹತ್ತಿಸಿಕೊಳ್ಳುವಂತೆ ಇರಬಾರದು.
  • ಬೆಂಕಿ ತಡೆಗಟ್ಟಬಲ್ಲ ಸಾಮಗ್ರಿಗಳನ್ನು ಮಾತ್ರ ಮಳಿಗೆ ನಿರ್ಮಾಣಕ್ಕೆ ಉಪಯೋಗಿಸಬೇಕು.
  • ಪ್ರತಿಯೊಂದು ಮಳಿಗೆಗೆ ಮುಂದಿನಿಂದ, ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು.
  • ಮಳಿಗೆಗಳ ಗಾತ್ರ 10×10 ಚದರ ಅಡಿಗೆ ಸೀಮಿತಗೊಳಿಸಬೇಕು
  • ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಮಾರಾಟಕ್ಕೆ ಅವಕಾಶ. ರಾತ್ರಿ ವೇಳೆ ಪಟಾಕಿ ಮಾರುವಂತಿಲ್ಲ.
  • ಮಳಿಗೆಯೊಳಗೆ ರಾತ್ರಿ ವೇಳೆ ಯಾರು ಕೂಡ ಮಲಗದಂತೆ ಸೂಚನೆ ನೀಡಲಾಗಿದೆ.
  • ಪ್ರತಿಯೊಂದು ಮಳಿಗೆಗಳಲ್ಲಿ 9 ಲೀ. ಸಾಮರ್ಥ್ಯದ ಅಗ್ನಿನಂದಕ ಹಾಗೂ 2 ಬಕೆಟ್‌ಗಳಲ್ಲಿ ನೀರು ಇಡಬೇಕು.
  • ಪ್ರತೀ ಮಳಿಗೆ ಪಕ್ಕದಲ್ಲಿ ಕನಿಷ್ಠ 400 ಲೀ.ನಷ್ಟು ನೀರು ಶೇಖರಿಸಬೇಕು.
Advertisement

Udayavani is now on Telegram. Click here to join our channel and stay updated with the latest news.

Next